Review: ಖುಷಿ ಖುಷಿಯಾಗಿ ನೋಡಬಹುದು 'ಕಪಟ ನಾಟಕ ಪಾತ್ರಧಾರಿ'
'ಕಪಟ ನಾಟಕ ಪಾತ್ರಧಾರಿ'...ಇದು ಮೇಲ್ನೋಟಕ್ಕೆ ಆಟೋ ಡ್ರೈವರ್ ಒಬ್ಬರ ರೆಗ್ಯುಲರ್ ಕಥೆ. ಫ್ಯಾಮಿಲಿ, ಲವ್, ವಿಲನ್ ಎಂದು ಊಹಿಸಿದ್ದರೆ ಆ ಊಹೆ ತಪ್ಪು. ಇದು ಕಂಪ್ಲೀಟ್ ಮನರಂಜನೆ ತುಂಬಿದ ರೋಚಕ ಕಥೆ. ಪೂರ್ತಿ ವಿಮರ್ಶೆ ಮುಂದೆ ಓದಿ.....
ಚಿತ್ರ: ಕಪಟ ನಾಟಕ ಪಾತ್ರಧಾರಿ
ನಿರ್ದೇಶಕ: ಕ್ರಿಶ್
ಕಲಾವಿದರು: ಬಾಲು ನಾಗೇಂದ್ರ, ಸಂಗೀತಾ ಭಟ್, ಕರಿ ಸುಬ್ಬು ಮತ್ತು ಇತರರು
ಬಿಡುಗಡೆ: 8 ನವೆಂಬರ್
ಮನರಂಜನೆ ತುಂಬಿದ ಮೊದಲಾರ್ಧ
ಸಿನಿಮಾ ಆರಂಭವಾಗುತ್ತಿದ್ದಂತೆ ಆಟೋ ಡ್ರೈವರ್ ಕೃಷ್ಣನನ್ನು (ಬಾಲು ನಾಗೇಂದ್ರ) ಪೊಲೀಸರು ಕರೆದುಕೊಂಡು ಹೋಗಿ, ''ಎಲ್ಲೋ ಆ ಮೂವರು, ಏನು ಮಾಡಿದೆ'' ಎಂದು ಪ್ರಶ್ನಿಸುತ್ತಾರೆ. 'ಯಾವ ಮೂವರು, ಏನಾಯ್ತು, ನನ್ನ ಯಾಕೆ ಕರೆದುಕೊಂಡು ಬಂದ್ರಿ' ಎಂದು ಗೊತ್ತಾಗದ ಕೃಷ್ಣ ತನ್ನದೇ ಜೀವನ ಕಥೆಯನ್ನ ಪೊಲೀಸರ ಮುಂದೆ ಹೇಳುತ್ತಾನೆ. ಕೃಷ್ಣನನ್ನು ಪೊಲೀಸರು ಯಾಕೆ ಕರೆದುಕೊಂಡು ಬಂದಿದ್ದಾರೆ ಎಂಬ ಕುತೂಹಲದೊಂದಿಗೆ ಆರಂಭವಾಗುವ 'ಕಪಟ ನಾಟಕ ಪಾತ್ರಧಾರಿ' ರೋಚಕತೆಯಿಂದ ಕೂಡಿದ ಮನರಂಜನೆ ಸಿನಿಮಾ.
ಕೃಷ್ಣನ ಲೈಫ್ ಮತ್ತು ಲವ್ ಸ್ಟೋರಿ
ಮಧ್ಯಮ ಕುಟುಂಬದ ಯುವಕ ಕೃಷ್ಣನ ಲೈಫ್ ಸ್ಟೋರಿ ಮತ್ತು ಲವ್ ಸ್ಟೋರಿ ಮೊದಲಾರ್ಧದಲ್ಲಿ ಕಾಣಬಹುದು. ನಾಯಕ ಮತ್ತು ಆತನ ಸ್ನೇಹಿತರಿಬ್ಬರ ಕಾಮಿಡಿ ಜುಗಲ್ ಬಂದಿ, ಕೃಷ್ಣನ ತಂದೆ-ತಾಯಿಯ ಬೈಗುಳದ ಕಾಮಿಡಿ, ರುಕ್ಮಿಣಿ (ಸಂಗೀತಾ ಭಟ್) ಹಿಂದೆ ಬೀಳುವ ಕೃಷ್ಣ.... ಈ ಅಂಶಗಳ ಸುತ್ತ ನಡೆಯುವ ಮೊದಲಾರ್ಧವನ್ನ ಎಂಜಾಯ್ ಮಾಡಬಹುದು. ಇದರಲ್ಲಿ ಸಂಭಾಷಣೆಗೆ ಹೆಚ್ಚು ಕ್ರೆಡಿಟ್ ಸಲ್ಲಬೇಕು. ಯಾಕಂದ್ರೆ, ಡೈಲಾಗ್ಸ್ ಆಡಿಯೆನ್ಸ್ ಗೆ ಖುಷಿ ಕೊಡುತ್ತೆ.
ಸಸ್ಪೆನ್ಸ್, ಥ್ರಿಲ್ಲಿಂಗ್, ಟ್ವಿಸ್ಟ್
ಅಸಲಿ ಕತೆ ಶುರುವಾಗುವುದೇ ಸೆಕೆಂಡ್ ಹಾಫ್ ನಲ್ಲಿ. ಕೃಷ್ಣನಿಗೆ ಗೊತ್ತಿಲ್ಲದೇ ಆತನ ಜೀವನದಲ್ಲಿ ಬೇರೆಯೇನೋ ನಡೆಯುತ್ತಿರುತ್ತೆ. ಕೃಷ್ಣ ಒಬ್ಬ ಪಾತ್ರಧಾರಿ ಅಷ್ಟೇ. ಪೊಲೀಸರು ಕೃಷ್ಣನನ್ನು ಯಾಕೆ ಕರೆದುಕೊಂಡು ಹೋದರು. ಆತನಿಗೂ ನಡೆದ ಘಟನೆಗಳಿಗೂ ಏನು ಸಂಬಂಧ ಎಂದು ಗೊತ್ತಾಗುತ್ತಾ ಹೋಗುತ್ತೆ. ಅಲ್ಲಿ ಪ್ರೇಕ್ಷಕನೂ ನಿರೀಕ್ಷೆ ಮಾಡದ ಟ್ವಿಸ್ಟ್, ಸಸ್ಪೆನ್ಸ್ ಬಯಲಾಗುತ್ತೆ. ಏನು ಸಸ್ಪೆನ್ಸ್, ಏನು ಟ್ವಿಸ್ಟ್ ಎಂದು ಚಿತ್ರಮಂದಿರದಲ್ಲಿ ನೋಡಿದರೆ ಒಳ್ಳೆಯ ಅನುಭವ.
ಕೃಷ್ಣ-ರುಕ್ಮಣಿ ಜೋಡಿಯ ನಟನೆ
ಮಧ್ಯಮ ಕುಟುಂಬದ ಹುಡುಗನಾಗಿ, ಒಬ್ಬ ಪ್ರೇಮಿಯಾಗಿ, ಆಟೋ ಡ್ರೈವರ್ ಆಗಿ, ಬಾಲು ನಾಗೇಂದ್ರ ಒಳ್ಳೆಯ ಪರ್ಫಾಮೆನ್ಸ್ ನೀಡಿದ್ದಾರೆ. ಪಾತ್ರಕ್ಕೆ ತಕ್ಕ ನಟನೆ ಮತ್ತು ಮ್ಯಾನರಿಸಂ ಕಾಣಬಹುದು. ರುಕ್ಮಿಣಿ ಪಾತ್ರದಲ್ಲಿ ಸಂಗೀತಾ ಭಟ್ ಸೂಕ್ತ ಆಯ್ಕೆ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೃಷ್ಣನ ತಂದೆ ಪಾತ್ರದಲ್ಲಿ ಕರಿ ಸುಬ್ಬು ಇದ್ದಾರೆ. ಉಗ್ರಂ ಮಂಜು, ಪ್ರಕಾಶ್ ತುಮಿನಾಡು, ಜೈದೇವ್ ನಟನೆಯೂ ನೋಡಬಹುದು.
ಅಂತಿಮವಾಗಿ ಹೇಳುವುದೇನಂದರೆ
ಸರಳವಾದ ಕಥೆಗೆ ಕುತೂಹಲಕಾರಿ ಚಿತ್ರಕಥೆ ಮಾಡಿ, ಅದಕ್ಕೆ ಹೋಲುವ ಸಂಭಾಷಣೆ ಬರೆದು, ಪ್ರೇಕ್ಷಕರನ್ನ ನಿರಾಸೆ ಮಾಡದೆ ನಿರ್ದೇಶಕ ಕ್ರಿಶ್ ಗಮನ ಸೆಳೆದಿದ್ದಾರೆ. ಸಂಗೀತ (ಅದಿಲ್ ನಡಫ್) ಮತ್ತು ಛಾಯಾಗ್ರಹಣ (ಗೋಕುಲ್), ಸಂಕಲನ (ಶಿವಕಾಂತ್) ಕೆಲಸವು ಇದಕ್ಕೆ ಉತ್ತಮ ಸಾಥ್ ನೀಡಿದೆ. ಕೊನೆಯದಾಗಿ ಹೇಳುವುದೇನಂದರೆ, ನಮ್ಮ ಪಕ್ಕದಲ್ಲೇ ನಡೆಯುವ ಕತೆ ಎನ್ನುವಷ್ಟು ವಾಸ್ತವವಾಗಿ ಸಿನಿಮಾ ಬಂದಿದ್ದು, ಅದರಲ್ಲೊಂದು ಸಂದೇಶವೂ ಇದೆ. ಮನರಂಜನೆ ಇದೆ, ಬೋರ್ ಆಗಲ್ಲ. ನೋಡಬಹುದಾದ ಚಿತ್ರ.


Click it and Unblock the Notifications











