ಕೋಣದ ಕೊಂಬಿನ ಆಣೆಗೂ ಅಂಬಿ ನಟನೆ ಬೊಂಬಾಟ್

ಯಮಧರ್ಮ: ಚಿತ್ರಗುಪ್ತ! ಉದ್ಧಟದಿಂದ ನಾಲಿಗೆ ಉದ್ದ ಮಾಡಬೇಡ. ಏನು ಮಾತನಾಡುತ್ತಿರುವೆ?
ಚಿತ್ರಗುಪ್ತ: ನಿಜ ಹೇಳುತ್ತಿರುವೆ ಮಹಾಪ್ರಭು. ನಿಮ್ಮ ಕೋಣದ ಕೊಂಬಿನ ಆಣೆಗೂ ಆ ಚಿತ್ರದಲ್ಲಿ ನಿಮ್ಮ ಖುರ್ಚಿಗೇ ಸಂಚಕಾರ ಬರುತ್ತದೆ. ನಿರ್ಮಾಪಕ ಮುನಿರತ್ನ ಅವರೇ ಹೆಣೆದಿರುವ ಕಥೆಯದು.
ಯಮಧರ್ಮ: ಅಂದರೆ, ನನ್ನನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆಯೇ?
ಚಿತ್ರಗುಪ್ತ: ಅಯ್ಯೋ.. ಅಷ್ಟಕ್ಕೇ ಕೋಪ ಮಾಡಿಕೊಂಡರೆ ಹೇಗೆ ಮಹಾಪ್ರಭು? ತೆಲುಗಿನಲ್ಲಿ ನಿಮ್ಮನ್ನು ಯಮಧೊಂಗಾ ಎಂಬ ಹೆಸರಿನಲ್ಲಿ ಹಾಸ್ಯ ಮಾಡಿದಾಗ ಸುಮ್ಮನಿದ್ದಿರಿ? ಕನ್ನಡ ಕಠಾರಿವೀರರಾದ ಎ.ಆರ್.ಬಾಬು, ಕಾಶಿನಾಥು ಎಲ್ಲರೂ ಕಾಲೆಳೆದಾಗ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಿರಿ? ಇದು ಯಾವ ನ್ಯಾಯ?
ಯಮಧರ್ಮ: ಅದಿರಲಿ.. ಕಥೆ ಏನು ಹೇಳು ಮೊದಲು.. ಆಮೇಲೆ ಅವರೆಲ್ಲರನ್ನೂ ವಿಚಾರಿಸಿಕೊಳ್ಳುತ್ತೇನೆ...
ಚಿತ್ರಗುಪ್ತ: ಬಹಳ ಸರಳ ಕಥೆ ಯಮಧರ್ಮ. ಒಬ್ಬ ವಿಚಿತ್ರ ರೂಪದ ಮಾನವ ತಾನು ಸತ್ತು ಯಮಲೋಕಕ್ಕೆ ಬರುತ್ತಾನೆ. ಅಲ್ಲಿ ಬಂದು ಯಮನ ಕುರ್ಚಿಗೇ ಕಲ್ಲು ಎಸೆಯುತ್ತಾನೆ. ಚಿತ್ರಗುಪ್ತನನ್ನು ಗೋಳು ಹೊಯ್ದುಕೊಳ್ಳುತ್ತಾನೆ. ಅಲ್ಲೇ ಪಕ್ಕದಲ್ಲಿದ್ದ ಸ್ವರ್ಗಲೋಕಕ್ಕೂ ಇಣುಕುತ್ತಾನೆ. ಅಲ್ಲಿರುವ ಇಂದ್ರನ ಮಗಳು ಇಂದ್ರಜೆಗೆ ಕಾಳು ಹಾಕುತ್ತಾನೆ. ಅವಳನ್ನು ಪಟಾಯಿಸುತ್ತಾನೆ. ಅವಳ ಅಪ್ಪನನ್ನು ಸತಾಯಿಸುತ್ತಾನೆ. ಮಾತಿನಲ್ಲೇ ಎಲ್ಲವನ್ನೂ ಗೆಲ್ಲುತ್ತಾನೆ. ಕೊಲ್ಲುತ್ತಾನೆ. ಹಾರುತ್ತಾನೆ. ಜಿಗಿಯುತ್ತಾನೆ. ಕಿವಿ ಕಚ್ಚುತ್ತಾನೆ. ಕಣ್ಣು ಕುಕ್ಕುತ್ತಾನೆ! ಅಲ್ಲಿಂದ ಶುರುವಾಗುತ್ತದೆ ಯಮಲೋಕದ ಸುರಸುಂದರಾಂಗನ ಸಂಸಾರ ಸಾಗರ-ಶಿವಮೊಗ್ಗ-ಬೀರೂರು-ಕಡೂರು ಕಥೆ..
ಯಮಧರ್ಮ: ಓಹೋ.. ಇಷ್ಟೆಲ್ಲಾ ಇದೆಯೋ ಸಿನಿಮಾದಲ್ಲಿ? ಆ ಉಪೇಂದ್ರನಿಗೆ ಅಷ್ಟೊಂದು ಮಾರುಕಟ್ಟೆ(ಮಾರ್ಕೆಟ್) ಪ್ರಚಾರ(ಪಬ್ಲಿಸಿಡಿ) ಇದೆಯೇ?
ಚಿತ್ರಗುಪ್ತ: ಅದು ಏನೂ ಅಂತ ಹೇಳಲಿ ಪ್ರಭು? ಆತ ಮಾತನಾಡುತ್ತಿದ್ದರೆ ಜನ ಚಪ್ಪಾಳೆಯಲ್ಲೇ ಚಪ್ಪರ ಹಾಕುತ್ತಾರೆ. ಎದ್ದೂ ಬಿದ್ದೂ ನಗುತ್ತಾರೆ. ಬೀಡಿ ಸೇದುವ ಮುದುಕರೂ ತ್ರೀಡಿ ಕನ್ನಡಕ ಹಾಕಿಕೊಂಡು ಪಲ್ಟಿ ಹೊಡೆದು ಸವಿಯುತ್ತಾರೆ. ಆತ ನಿಮ್ಮ ಗಧೆಗಿಂತ ಉದ್ದವಾದ ಸಂಭಾಷಣೆ ಒಗಾಯಿಸುತ್ತಿದ್ದರೆ ನನ್ನ ಕರುಳಿನ ಕೊನೇ ತಿರುಳೂ ಕಿಲಕಿಲ ಕಿಲಕಿಲ ಎನ್ನುತ್ತದೆ!


Click it and Unblock the Notifications











