ಚಿತ್ರ ವಿಮರ್ಶೆ: ಮೂರು ಕೊಲೆಗಳ ಸುತ್ತ ಕಟ್ಟಿದ 'ಕಟ್ಟುಕಥೆ'
'ಕಟ್ಟುಕಥೆ' ಒಂದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ. ಸಿನಿಮಾದಲ್ಲಿ ಪ್ರಮುಖವಾಗಿ ಮೂರು ಕೊಲೆಗಳು ನಡೆಯುತ್ತದೆ. ಅದನ್ನು ಯಾರು ಮಾಡಿದರು? ಯಾಕೆ ಮಾಡಿದರು? ಎನ್ನುವ ಹುಡುಕಾಟವೇ ಚಿತ್ರದ ಕಥಾಹಂದರ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರುವ ಈ ಚಿತ್ರ ನೋಡುಗರಿಗೆ ಥ್ರಿಲ್ ನೀಡುತ್ತದೆ. ಕೊಲೆ, ಅನೈತಿಕ ಸಂಬಂಧದ ಜೊತೆಗೆ ಪ್ರೀತಿ, ಪ್ರೇಮ, ಹಾಸ್ಯ ಚಿತ್ರದಲ್ಲಿದೆ.
ಚಿತ್ರ : ಕಟ್ಟುಕಥೆ
ನಿರ್ಮಾಣ: ಅನಘ ಪ್ರೊಡಕ್ಷನ್ಸ್
ಕಥೆ, ನಿರ್ದೇಶನ: ರಾಜ್ ಪ್ರವೀಣ್
ಸಂಗೀತ: ವಿಕ್ರಂ ಸುಬ್ರಮಣ್ಯ
ಛಾಯಾಗ್ರಹಣ: ಮನು ಬಿ.ಕೆ
ತಾರಗಣ: ಸೂರ್ಯ, ಸ್ವಾತಿ ಕೊಂಡೆ, ಮಿತ್ರ, ರಾಜೇಶ್ ನಟರಂಗ, ಕೆಂಪೇಗೌಡ ಮತ್ತು ಇತರರು
ಬಿಡುಗಡೆ ದಿನಾಂಕ: ಜೂನ್ 15
ಮೂರು ಕೊಲೆಗಳ ಸುತ್ತ - ಮುತ್ತ
'ಕಟ್ಟುಕಥೆ' ಸಿನಿಮಾದ ಕಥೆ, ಚಿತ್ರಕಥೆ ಸಾಗುವುದು ಮೂರು ಕೊಲೆಗಳ ಸುತ್ತ. ಸಿನಿಮಾದಲ್ಲಿ ಮೂರು ಕೊಲೆಗಳೆ ಪ್ರಮುಖ ಅಂಶ. ಮೂರು ಹುಡುಗಿಯರು ಪ್ರಾಜೆಕ್ಟ್ ವರ್ಕ್ ಮಾಡಲೆಂದು ಸ್ನೇಹಿತೆಯ ದೂರದ ಫಾರ್ಮ್ ಹೌಸ್ ಗೆ ಬರುತ್ತಾರೆ. ಅಲ್ಲಿ ಮೊದಲು ಮನೆ ಕೆಲಸದವಳ ಕೊಲೆ ಆಗುತ್ತದೆ. ನಂತರ ಮೂರು ಹುಡುಗಿಯರ ಪೈಕಿ ಒಬ್ಬಳ ಕೊಲೆ ಆಗುತ್ತದೆ. ಮೂರನೇ ಕೊಲೆ ಯಾರದ್ದು ಎಂಬುದನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಬೇಕಾಗುತ್ತದೆ.
ಸಾವು ನೋವು ನಡುವೆ ಪ್ರೀತಿ ಪ್ರೇಮ
ಒಂದು ಕಡೆ ಪ್ರಾಜೆಕ್ಟ್ ವರ್ಕ್ ಗಾಗಿ ಮನೆಯಿಂದ ಸ್ನೇಹಿತೆಯ ಫಾರ್ಮ್ ಹೌಸ್ ಗೆ ಮೂರು ಹುಡುಗಿಯರು ಬರುತ್ತಾರೆ. ಇನ್ನೊಂದು ಕಡೆ ಇಬ್ಬರು ಹುಡುಗರು ಅದೇ ಫಾರ್ಮ್ ಹೌಸ್ ನಲ್ಲಿ ಇರುತ್ತಾರೆ. ಚಿತ್ರದ ಕೊಲೆಗಳ ಮಧ್ಯೆ ನಾಯಕ ಪ್ರೀತಿಯ ಕನಸು ಕಾಣುತ್ತಾನೆ. ಇಲ್ಲಿ ಎರಡು ಲವ್ ಸಾಂಗ್ ಗಳು ಬಂದು ಹೋಗುತ್ತದೆ.
ಅನೈತಿಕತೆ ಅಪರಾಧಕ್ಕೆ ದಾರಿ
ಬಡವನಾಗಲಿ ಶ್ರೀಮಂತನಾಗಲಿ ಅನೈತಿಕತೆ ಅಪರಾಧಕ್ಕೆ ದಾರಿ ಎಂಬುದೇ ಸಿನಿಮಾದ ಸಂದೇಶ. ಒಂದು ಅನೈತಿಕ ಸಂಬಂಧ ಎಷ್ಟು ಕೊಲೆಗಳಿಗೆ ಕಾರಣ ಆಗುತ್ತದೆ. ಕೆಟ್ಟ ಸಂಬಂಧದಿಂದ ಆಗುವ ಪರಿಣಾಮವನ್ನು ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಹೇಳಲಾಗಿದೆ.
ತೆರೆ ಮೇಲೆ ಕಲಾವಿದರ ಕಳೆ
ನಟನೆಯ ವಿಷಯಕ್ಕೆ ಬಂದರೆ ನಟ ಸೂರ್ಯ ಕಿವುಡನಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ದೃಶ್ಯದಲ್ಲಿ ಅವರು ನಗಿಸುತ್ತಾರೆ. ಇನ್ನೊಂದು ಕಡೆ ಸ್ವಾತಿ ಸಹ ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ನಾಯಕನ ಸ್ನೇಹಿತ ಕೆಂಪೇಗೌಡ ಹಾಗೂ ನಾಯಕಿಯ ಸ್ನೇಹಿತೆಯರ ಸಾಥ್ ಸೂಕ್ತವಾಗಿದೆ. ಪೊಲೀಸ್ ಪಾತ್ರ ಮಾಡಿರುವ ರಾಜೇಶ್ ನಟರಂಗ ಚಿತ್ರದ ಎರಡನೇ ಹೀರೋ. ನಟ ಮಿತ್ರ ಕೂಡ ಗಮನ ಸೆಳೆಯುತ್ತಾರೆ.
ಕುತೂಹಲ ಹುಟ್ಟಿಸುವ ಸೆಕೆಂಡ್ ಹಾಫ್
'ಕಟ್ಟುಕಥೆ' ಸಿನಿಮಾದ ಹೈಲೈಟ್ ಸೆಕೆಂಡ್ ಹಾಫ್. ಫಸ್ಟ್ ಹಾಫ್ ಅಲ್ಲಲ್ಲಿ ಕೊಂಚ ಬೋರ್ ಎನಿಸಿದರೂ ಆ ನಂತರ ಚಿತ್ರದ ಓಟ ಚೆನ್ನಾಗಿದೆ. ಯಾರು ಕೊಲೆ ಮಾಡಿದರು ಎಂಬ ಕುತೂಹಲ ಕೊನೆಯವರೆಗೆ ಇರುತ್ತದೆ. ಆದರೆ ಸಿನಿಮಾದ ಅವಧಿ ಇನ್ನು ಸ್ವಲ್ಪ ಕಡಿಮೆ ಮಾಡಬಹುದಾಗಿತ್ತು.
ನಿರ್ದೇಶನ / ಸಂಗೀತ
ಒಂದು ಕ್ರೈಂ ಥ್ರಿಲ್ಲರ್ ಕಥೆಯನ್ನು ಅದಷ್ಟೂ ಕುತೂಹಲಕಾರಿಯಾಗಿ ಹೇಳುವಲ್ಲಿ ನಿರ್ದೇಶಕ ರಾಜ್ ಪ್ರವೀಣ್ ಯಶಸ್ವಿ ಆಗಿದ್ದಾರೆ. ಚಿಕ್ಕ ಪುಟ್ಟ ತಪ್ಪು ಬಿಟ್ಟರೆ ಅವರು ತಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಚಿತ್ರದ ಸಂಗೀತ ತುಂಬ ಇಷ್ಟ ಆಗುತ್ತದೆ.
ಥ್ರಿಲ್ ನೀಡುತ್ತದೆ
ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು 'ಕಟ್ಟುಕಥೆ'ಯಲ್ಲಿ ಇವೆ. ಪ್ರಮುಖವಾಗಿ ಕ್ಲೈಮ್ಯಾಕ್ಸ್ ನಲ್ಲಿ ಇರುವ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಹಾಗಾಗಿ ಸಿನಿಮಾವನ್ನು ಕಾಸು ಕೊಟ್ಟು ಅಡ್ಡಿ ಇಲ್ಲದೆ ನೋಡಬಹುದು.


Click it and Unblock the Notifications











