Kavacha Review : ಅಂಧನ ಜೀವನದ ಅಂದವಾದ ಸಿನಿಮಾ
'ಕವಚ' ಚಿತ್ರದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ ಇದು ಅಂಧನ ಅಂದವಾದ ಸಿನಿಮಾ. ಮಲೆಯಾಳಂ 'ಒಪ್ಪಂ' ಸಿನಿಮಾವನ್ನು ಕನ್ನಡಿಗರು ಒಪ್ಪುವ ಹಾಗೆ ಮಾಡಿದ್ದಾರೆ. ಶಿವಣ್ಣ ನಟನ ಸಾಮರ್ಥ್ಯ ತೋರಿಸುವ ಅದ್ಭುತ ಸಿನಿಮಾ ಇದು. ಕ್ರೌರ್ಯ ಹಾಗೂ ಕರುಣೆಯ ಮಿಶ್ರಣವೇ 'ಕವಚ'.
ಶಿವಣ್ಣನ ಬೆಸ್ಟ್ ಕ್ಯಾರೆಕ್ಟರ್
ಸಿನಿಮಾದ ಬಗ್ಗೆ, ಕಥೆ ಬಗ್ಗೆ ಹೇಳುವ ಮುನ್ನವೇ ಶಿವಣ್ಣ ನಟನೆ ಬಗ್ಗೆ ಹೇಳಲೇಬೇಕು. ಶಿವರಾಜ್ ಕುಮಾರ್ ತಮ್ಮ ಚಿತ್ರ ಜೀವನದಲ್ಲಿ ಮಾಡಿರುವ ಅತ್ಯುತ್ತಮ ಪಾತ್ರಗಳಲ್ಲಿ ಇದು ಪ್ರಮುಖವಾದದ್ದು. ಸಿನಿಮಾಗೆ ಕರುನಾಡ ಚಕ್ರವರ್ತಿಯೇ 'ಕವಚ'. ಜಯರಾಮ ಎಂಬ ಅಂಧನ ಪಾತ್ರವನ್ನು ಅವರು ನಿರ್ವಹಿಸಿರುವ ರೀತಿ ಅದ್ಭುತ. ಶಿವಣ್ಣನ ಪ್ರಬುದ್ಧ ನಟನೆಗೆ ದೊಡ್ಡ ಚಪ್ಪಾಳೆ.
'ಕವಚ'ದಂತೆ ಇರುವ ಜಯರಾಮ
ಜಯರಾಮ (ಶಿವರಾಜ್ ಕುಮಾರ್) ಒಬ್ಬ ಅಂಧ ಹುಡುಗ. ತಂಗಿ ಮದುವೆಗೆ ಹಣ ಹೊಂದಿಸಲು ಸಾಕಷ್ಟು ಕಷ್ಟ ಪಡುತ್ತಿರುತ್ತಾನೆ. ಬೆಂಗಳೂರಿನ ಅಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಜಯರಾಮ ಅದೇ ಅಪಾರ್ಟ್ ಮೆಂಟಿನ ಒಬ್ಬ ಜಡ್ಜ್ ಪ್ರಾಣಕ್ಕೆ ಆಪತ್ತು ಬಂದಾಗ ಕಾಪಾಡಲು ಮುಂದಾಗುತ್ತಾನೆ. ಜಡ್ಜ್ ಮಗಳಿಗೆ 'ಕವಚ' ರೀತಿ ಇರುತ್ತಾನೆ.
ಐ ಯಾಮ್ ಬ್ಲೈಂಡ್, ನಾಟ್ ವೀಕ್
'ಐ ಯಾಮ್ ಬ್ಲೈಂಡ್, ನಾಟ್ ವೀಕ್' ಎಂದು ಡೈಲಾಗ್ ಹೇಳುವ ಹಾಗೆಯೇ ಜಯರಾಮ ಅಂಧನಾಗಿದ್ದರೂ ವಿಶೇಷ ಗ್ರಹಣ ಶಕ್ತಿ ಹೊಂದಿರುತ್ತಾನೆ. ವಾಸನೆ, ಶಬ್ಧದ ಮೂಲಕ ಎದುರುಗಡೆ ಇರುವ ವ್ಯಕ್ತಿಯನ್ನು ಗುರುತಿಸುತ್ತಾನೆ. ಹೀಗಿರುವಾಗ, ಜಯರಾಮ ಹೇಗೆ ಒಬ್ಬ ಸೀರಿಯಲ್ ಕಿಲ್ಲರ್ ನಿಂದ ಜಡ್ಜ್ ಮಗಳನ್ನು ಕಾಪಾಡುತ್ತಾನೆ ಎನ್ನುವುದೇ ಚಿತ್ರದ ಕಥೆ.
ಕರುಣೆ ಹಾಗೂ ಕ್ರೌರ್ಯ
ಒಂದು ಕಡೆ ಜಯರಾಮನ ಕರುಣೆ ಇದ್ದರೆ, ಮತ್ತೊಂದು ಕಡೆ ವಾಸುದೇವನ (ವಸಿಷ್ಟ) ಕ್ರೌರ್ಯ ಚಿತ್ರದಲ್ಲಿ ತುಂಬಿದೆ. ಈ ಎರಡರಲ್ಲಿ ಯಾವುದು ಗೆಲ್ಲುತ್ತದೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಇಡೀ ಚಿತ್ರಕ್ಕೆ ಕೊನೆಯ ಭಾಗ ಹೈಲೈಟ್ ಆಗಿದ್ದು, ಅಲ್ಲಿ ಪ್ರೇಕ್ಷಕರಿಗೆ ಒಂದು ಟ್ವಿಸ್ಟ್ ಸಿಗುತ್ತದೆ. ಚಿತ್ರದ ಕೊನೆಯ ಪ್ರೇಕ್ಷಕನಿಗೆ ಪೂರ್ಣ ಖುಷಿ ಸಿಗುತ್ತದೆ.
ವಾಸುದೇವ ಹಾಗೂ ನಂದಿನಿ ಪಾತ್ರಗಳು
ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರ ಬಿಟ್ಟರೆ ಇಷ್ಟ ಆಗುವುದು ವಾಸುದೇವ ಹಾಗೂ ನಂದಿನಿ ಪಾತ್ರಗಳು. ಈ ಎರಡೂ ಪಾತ್ರಗಳು ಸುಂದರವಾಗಿ ಮೂಡಿಬಂದಿದೆ. ವಾಸುದೇವ ಪಾತ್ರ ಮಾಡಿರುವ ವಸಿಷ್ಟ ಖದರ್ ಬಹಳ ಜೋರಾಗಿದೆ. ನಂದಿನಿ ಪಾತ್ರ ಮಾಡಿರುವ ಪುಟ್ಟ ಹುಡುಗಿ ಮಿನಾಕ್ಷಿ ಅಭಿನಯ ಚಿತ್ರದ ಪ್ಲಾಸ್ ಪಾಯಿಂಟ್. 'ಒಪ್ಪಂ' ಸಿನಿಮಾದ ಈ ಪಾತ್ರವನ್ನು ಇದೇ ಹುಡುಗಿ ನಿರ್ವಹಿಸಿದ್ದಳು. ಇಶಾ ಕೊಪ್ಪಿಕರ್ ಸಹ ಗಮನ ಸೆಳೆಯುತ್ತಾರೆ.
ಮ್ಯೂಸಿಕ್, ಕ್ಯಾಮರಾ, ಡೈಲಾಗ್, ಡೈರೆಕ್ಷನ್
ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನಲೆ ಸಂಗೀತ ಸಿನಿಮಾವನ್ನು ಮತ್ತಷ್ಟು ಅಂದಗೊಳಿಸಿದೆ. ಎಮ್ ಎಸ್ ರಮೇಶ್ ಸಂಭಾಷಣೆಗಳಲ್ಲಿ ಅರ್ಥ ಇದೆ. ರಾಹುಲ್ ಶ್ರೀವತ್ಸವ್ ಕ್ಯಾಮರಾ ವರ್ಕ್ ಸೂಪರ್. ಎಲ್ಲ ವಿಭಾಗವನ್ನು ಕಚ್ಚುಕಟ್ಟಾಗಿ ನಿರ್ದೇಶಕ ಜಿ ವಿ ಆರ್ ವಾಸು ನಿರ್ವಹಿಸಿದ್ದಾರೆ. ಸುಂದರ ಕಥೆಗೆ ಸುಂದರ ರೂಪ ನೀಡಿದ್ದಾರೆ.
ನೋಡಿ, ಗೆಲ್ಲಿಸಿ
ಒಬ್ಬ ಸ್ಟಾರ್ ಹೀರೋ ಆಗಿ ಒಂದು ಒಳ್ಳೆಯ ಸಿನಿಮಾ ಮಾಡುವುದು ಶಿವರಾಜ್ ಕುಮಾರ್ ಕರ್ತವ್ಯ. ಅದೇ ರೀತಿ ಒಳ್ಳೆಯ ಸಿನಿಮಾವನ್ನು ಗೆಲ್ಲಿಸುವುದು ಅವರ ಅಭಿಮಾನಿಗಳ ಕರ್ತವ್ಯ. ಲಾಂಗು, ಲವ್ವು ಎಲ್ಲರದಿಂದ ಹೊರಬಂದು ಮಾಡಿರುವ ಸುಂದರ ಸಿನಿಮಾ ಇದು. ಕಮರ್ಷಿಯಲ್ ಅಂಶಗಳನ್ನು ಕಟ್ಟಿಟ್ಟು ಚಿತ್ರವನ್ನು ನೋಡಬೇಕಿದೆ.


Click it and Unblock the Notifications











