'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ
ನಿರೀಕ್ಷೆ ಇಟ್ಟುಕೊಂಡು 'ಕೆಜಿಎಫ್' ಸಿನಿಮಾ ನೋಡಿದರೆ, ಈ ಚಿತ್ರ ನಿರಾಸೆ ಮಾಡುವುದಿಲ್ಲ. ಮಾಸ್ ಪ್ರೇಕ್ಷಕರಿಗಂತೂ ಈ ಸಿನಿಮಾ ಹಬ್ಬ. ರಾಕಿಯ ಜೀವನದ ಕಥೆ ನೋಡುಗರಲ್ಲಿ ರೋಮಾಂಚನ ನೀಡುತ್ತದೆ. ಇಷ್ಟ ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು ಎಂಬ ಸಮಾಧಾನದಲ್ಲಿ ಚಿತ್ರಮಂದಿರದಿಂದ ಆಚೆ ಬರಬಹುದು.
ಅನಂತ್ ನಾಗ್ ರಿಂದ ಆರಂಭ
'ಕೆಜಿಎಫ್' ಸಿನಿಮಾ ಶುರು ಆಗುವುದು ನಟ ಅನಂತ್ ನಾಗ್ ಅವರ ನಿರೂಪಣೆಯಲ್ಲಿ. 'ಕೆಜಿಎಫ್' ಬಗ್ಗೆ ಪುಸ್ತಕ ಬರೆದಿದ್ದ ಅವರು ಆ ಕಥೆಯನ್ನು ಹೇಳುತ್ತ ಹೊರಡುತ್ತಾರೆ. ಅವರ ಧ್ವನಿ ಕೇಳಿದಾಗಲೇ ಪ್ರೇಕ್ಷಕರ ಕಿವಿ ನೆಟ್ಟಗಾಗುತ್ತದೆ. ಸಿನಿಮಾದ ಪ್ರಾರಂಭದಿಂದ ಅಂತ್ಯದವರೆಗೆ ಅವರ ನಿರೂಪಣೆಯಲ್ಲಿಯೇ ಸಿನಿಮಾ ಸಾಗುತ್ತದೆ. ಸಿನಿಮಾದ ಕಥೆ 70 - 80 ರ ದಶಕದಲ್ಲಿ ನಡೆಯುತ್ತದೆ.
ಶ್ರೀಮಂತನಾಗು, ಪ್ರಬಲನಾಗು
ತಾಯಿ ಸಾಯುವ ಮುನ್ನ ಮಗನಿಗೆ ಹೇಳುವ ಒಂದೇ ಮಾತು 'ನೀನು ಶ್ರೀಮಂತನಾಗು, ಪ್ರಬಲನಾಗು' ಅಂತ. ಆ ಗುರಿ ಹಿಂದೆ ಹೊರಟ ಅವನಿಗೆ ದಾರಿ ಗೊತ್ತಿರುವುದಿಲ್ಲ. ಪವರ್ ಬೇಕು ಅಂತ ನಿರ್ಧಾರ ಮಾಡುವ ಆ ಹುಡುಗ ಮುಂಬೈಗೆ ಹೊರಡುತ್ತಾನೆ. ಅಲ್ಲಿ ಬೂಟ್ ಪಾಲಿಶ್ ಮಾಡುತ್ತಲೇ ಪ್ರಪಂಚ ಗೆಲ್ಲುವ ಕನಸು ಕಾಣುತ್ತಾನೆ.
ಮುಂಬೈ ಟು ಬೆಂಗಳೂರು
ಮುಂಬೈನಲ್ಲಿ ಬೆಳೆಯುವ ಆ ಹುಡುಗ ತನ್ನ ಬ್ರಾಂಡ್ ನೇಮ್ 'ರಾಕಿ' ಎಂದು ತನಗೆ ತಾನೇ ನಾಮಕರಣ ಮಾಡಿಕೊಳ್ಳುತ್ತಾನೆ. ಚಿಕ್ಕ ವಯಸ್ಸಿನಲ್ಲಿಯೇ ಬೆಂಕಿಯಂತೆ ಇರುವ ರಾಕಿಯನ್ನು ಹಿಡಿಯಲು ಯಾರ ಕೈನಿಂದ ಆಗುವುದಿಲ್ಲ. ಡಾನ್ ಆಗಲು ಹೊರಟ ರಾಕಿಗೆ ಬೆಂಗಳೂರಿನಲ್ಲಿ ಒಂದು ಸುಪಾರಿ ಸಿಗುತ್ತದೆ. ಇಲ್ಲಿಂದ ಕಥೆಯ ದಿಕ್ಕು ಬದಲಾಗುತ್ತದೆ.
'ಕೆಜಿಎಫ್' ಕಂದ ರಾಕಿ
ಸುಪಾರಿ ವಾಸನೆ ಹಿಡಿದು ಹೊರಟ ರಾಕಿ 'ಕೆಜಿಎಫ್' ತಲುಪಬೇಕಾಗುತ್ತದೆ. ಇಲ್ಲಿಂದ ಕಥೆ ಹಾಗೂ ರಾಕಿ ಪಾತ್ರದ ಘನತೆ ಹೆಚ್ಚಾಗುತ್ತದೆ. ಅಲ್ಲಿ ಕೆಲಸ ಮಾಡುವ ಜನರ ನೋವು ರಾಕಿ ಮನಸ್ಸು ಮಿಡಿಯುತ್ತದೆ. ಅವರಿಗಾಗಿ ಹೋರಾಡಲು ಶುರು ಮಾಡುತ್ತಾನೆ. ರಾಕಿ ಆ ಜನರ ರಕ್ಷಣೆಗೆ ನಿಲ್ಲುತ್ತಾನೆ. ಆ ಜನರ ರಕ್ಷಣೆಗೆ ನಿಲ್ಲುವ ಆ ಹುಡುಗ ಭಯವನ್ನ ಸಾಯಿಸುತ್ತಾನೆ. ಮುಂಬೈ ಭಾಯ್ ಇಲ್ಲಿಂದ ಕೆಜಿಎಫ್ ಕಂದ ಆಗುತ್ತಾನೆ.
ಯಶ್ ತಾಂಡವ
ಯಶ್ ಇಲ್ಲಿ ನಟಿಸಿದ್ದಾರೆ ಎನ್ನುವುದಕ್ಕಿಂತ ತೆರೆ ಮೇಲೆ ತಾಂಡವ ಆಡಿದ್ದಾರೆ ಎಂದು ಹೇಳಬಹುದು. ಇಡೀ ಸಿನಿಮಾದ ತುಂಬ ಅವರ ಎನರ್ಜಿ, ಸ್ಟೈಲ್, ಆಕ್ಷನ್ ಅದ್ಭುತ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಯಶ್ ರಾಕಿ ಪಾತ್ರದ ಮೂಲಕ ಡಬಲ್ ಇಷ್ಟ ಆಗುತ್ತಾರೆ. ಸಿನಿಮಾದಲ್ಲಿ ಮೆಚ್ಚಿಕೊಳ್ಳುವ ಅಂಶಗಳಲ್ಲಿ ಅವರು ಪ್ರಮುಖರಾಗಿದ್ದಾರೆ.
ಮೇಕಿಂಗ್ ಸಿನಿಮಾದ ಜೀವ
ನಿರ್ದೇಶಕ ಪ್ರಶಾಂತ್ ನೀಲ್ ಮತ್ತೆ ತಮ್ಮ ಸಾಮರ್ಥ್ಯವನ್ನು ತೆರೆ ಮೇಲೆ ತೋರಿಸಿದ್ದಾರೆ. ಅವರ ಮೇಕಿಂಗ್ ಸ್ಟೈಲ್ ನಿಜಕ್ಕೂ ಅದ್ಭುತ. ಅವರ ಕಲ್ಪನೆಯಿಂದ ಪ್ರತಿ ದೃಶ್ಯ ಕೂಡ ಹೊಸ ರೀತಿ ಕಾಣುತ್ತದೆ. ಆಕ್ಷನ್ ಸೀನ್ ಗಳನ್ನು ಅವರು ಚಿತ್ರೀಕರಣ ಮಾಡಿರುವ ರೀತಿ, ಇಡೀ ಸಿನಿಮಾವನ್ನ ತೊರಿಸಿರುವ ಶೈಲಿಗೆ ದೊಡ್ಡ ಚಪ್ಪಾಳೆ.
ನಾಯಕಿ ಹಾಗೂ ಉಳಿದವರ ಪಾತ್ರ
ಯಶ್ ಬಿಟ್ಟರೆ ಸಿನಿಮಾದಲ್ಲಿ ಹೆಚ್ಚು ಬೇರೆ ಯಾರೂ ಕಾಣುವುದಿಲ್ಲ. ನಟಿ ಶ್ರೀನಿಧಿ ಶೆಟ್ಟಿ, ಬಿ ಸುರೇಶ್, ಅಚ್ಯುತ್ ಕುಮಾರ್, ವಸಿಷ್ಟ, ಅಯ್ಯಪ್ಪ ಹಾಗೂ ಉಳಿದ ವಿಲನ್ ಗಳು ಇದ್ದರೂ ಆ ಮಟ್ಟಿಗೆ ಗಮನ ಸೆಳೆಯುವುದಿಲ್ಲ. ಏನೇ ಹೇಳಿ ಈ ಸಿನಿಮಾದಲ್ಲಿ ಯಶ್ ತೆರೆ ಮೇಲೆ ಇದ್ದರೂ, ಇರದೆ ಇದ್ದರೂ ಅವರದ್ದೇ ಹವಾ.
ಡೈಲಾಗು, ಮ್ಯೂಸಿಕ್, ಕ್ಯಾಮರಾ
'ಕೆಜಿಎಫ್' ಚಿತ್ರವನ್ನ ಜನರಿಗೆ ತಲುಪುವ ಹಾಗೆ ಮಾಡುವ ಅಂಶಗಳಲ್ಲಿ ಡೈಲಾಗ್, ಮ್ಯೂಸಿಕ್, ಕ್ಯಾಮರಾ ಪ್ರಮುಖವಾಗಿವೆ. ಯಶ್ ಬಾಯಿಂದ ಬರುವ ಬಹುತೇಕ ಡೈಲಾಗ್ ಗಳು ಶಿಳ್ಳೆ ಗಿಟ್ಟಿಸುತ್ತವೆ. ಹಿನ್ನಲೆ ಸಂಗೀತ ಮೈ ಜುಮ್ ಎನಿಸುತ್ತದೆ. ಕ್ಯಾಮರಾ ವರ್ಕ್ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ.
ಚಾಪ್ಟರ್ 2
'ಕೆಜಿಎಫ್'ಗೆ ಬಂದು ತಲುಪಿ ಅಲ್ಲಿನ ಜನರ ಪರವಾಗಿ ಹೋರಾಡುವ ರಾಕಿ ಕಥೆ ಮುಂದೆ ಏನಾಗುತ್ತದೆ ಎನ್ನುವುದು ಚಾಪ್ಟರ್ 2 ನ ಕುತೂಹಲಕಾರಿ ಅಂಶ. ಮೊದಲ ಅಧ್ಯಾಯದ ಕಥೆಯನ್ನು ಸುಂದರವಾಗಿ ಹೇಳಿರುವ ನಿರ್ದೇಶಕರು ಮುಂದಿನ ಅಧ್ಯಾಯದಲ್ಲಿ ಪೂರ್ಣ ಕಥೆ ಹೇಳಲಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ನಂಬಿಕೆ ಉಳಿಸಿಕೊಂಡಿದೆ.


Click it and Unblock the Notifications











