'ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು
''ಹುಲಿ ಸೈಲೆಂಟಾಗಿ ಕೂತಿದೆ ಅಂದ್ರೆ, ಸುಮ್ನಿದೆ ಅಂತಲ್ಲ. ಬೇಟೆ ಆಡೋಕೆ ಹೊಂಚು ಹಾಕ್ತಿದೆ ಅಂತರ್ಥ'' - ಕ್ಲೈಮ್ಯಾಕ್ಸ್ ನಲ್ಲಿ ಈ ಡೈಲಾಗ್ ಸುದೀಪ್ ಬಾಯಲ್ಲಿ ಬರುವ ಹೊತ್ತಿಗೆ ಸಾಲು ಸಾಲು ಹೆಣಗಳು ಉರುಳಿರುತ್ತೆ... ದುಷ್ಟರ ದಮನ ಆಗಿರುತ್ತೆ... ಅಷ್ಟರಮಟ್ಟಿಗೆ 'ಹೆಬ್ಬುಲಿ' ಬೇಟೆ 'ಭರ್ಜರಿ'.!
'ಹೆಬ್ಬುಲಿ' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಫೋಟೋ ಸ್ಲೈಡ್ಸ್ ಗಳಲ್ಲಿ ಓದಿರಿ...
'ಹೆಬ್ಬುಲಿ' ಪೂರ್ವಾಪರ
ದಂಡು ಬೇಧಿಸಬಲ್ಲ.. ದಾಳಿ ಚದುರಿಸಬಲ್ಲ.. ಭಯೋತ್ಪಾದಕರ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುವ.. ಜಗವೇ ಮೆಚ್ಚುವ ವೀರ.. ಧೀರ ಯೋಧ.. ಕಣ್ಣಲ್ಲೇ ಕಿಚ್ಚಿರುವ ಆರಡಿ ಟೈಗರ್ ಈ ರಾಮ್ (ಸುದೀಪ್). ಇಂಡಿಯನ್ ಆರ್ಮಿಯಲ್ಲಿ ಪ್ಯಾರಾ ಕಮಾಂಡೋ ಆಫೀಸರ್.
ದುಷ್ಟರ ಎದೆ ಸೀಳುವ 'ಹೆಬ್ಬುಲಿ'
ಭಾರತದ ಗಡಿಯಲ್ಲಿ 'ಸರ್ಜಿಕಲ್ ಸ್ಟ್ರೈಕ್' ನಡೆಸಿ ಉಗ್ರರನ್ನು ದಮನ ಮಾಡುವ ರಾಮ್ (ಸುದೀಪ್), ಒಂದು ಕೊಲೆಯ ಜಾಡನ್ನು ಭೇದಿಸುವ ಕಥೆಯೇ 'ಹೆಬ್ಬುಲಿ'.
ಯಾರ ಕೊಲೆ.?
ಅಸಲಿಗೆ, ಆ ಕೊಲೆ ಯಾರದ್ದು.? ಕೊಲೆಯಾದ ವ್ಯಕ್ತಿಗೂ ರಾಮ್ ಗೂ ಏನು ಸಂಬಂಧ.? ಕೊಲೆಗಾರರನ್ನು ದಮನ ಮಾಡಲು ಭಾರತೀಯ ಸೇನಾ ಪಡೆ ಮಾಡುವ ಸಹಾಯವೇನು.? ಎಂಬುದೇ 'ಹೆಬ್ಬುಲಿ' ಸಸ್ಪೆನ್ಸ್. ಅದನ್ನ ನಾವು ಬಹಿರಂಗ ಪಡಿಸುವುದಿಲ್ಲ. 'ಹೆಬ್ಬುಲಿ' ಚಿತ್ರವನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿ.. ಎಂಜಾಯ್ ಮಾಡಿ...
ಗನ್ ಹಿಡಿದು ಘರ್ಜಿಸುವ 'ಹೆಬ್ಬುಲಿ' ಸುದೀಪ್
'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಲುಕ್ ಮಾತ್ರ ಸೂಪರ್ ಸ್ಟೈಲಿಶ್. ಪ್ಯಾರಾ ಕಮಾಂಡರ್ ಆಗಿ ಸುದೀಪ್ ಗತ್ತು, ಗೈರತ್ತು ಬೊಂಬಾಟ್. ಗನ್ ಹಿಡಿದು ಘರ್ಜಿಸುವ ಸುದೀಪ್ ರವರ ಸ್ಟಂಟ್ಸ್ ಕೂಡ ಮೆಚ್ಚುವಂಥದ್ದು. ಇನ್ನೂ 'ಅಭಿನಯ ಚಕ್ರವರ್ತಿ' ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗೇ ಇಲ್ಲ.
ಸ್ವಲ್ಪ ಡ್ಯಾನ್ಸ್ ಮಾಡಬಹುದಿತ್ತು.!
'ಸುಂದರಿ' ಹಾಡಲ್ಲಿ ಮಾತ್ರ ಸುದೀಪ್ ಹೆಜ್ಜೆ ಹಾಕಿದ್ದಾರೆ. ಬಾಕಿ ಹಾಡುಗಳಲ್ಲಿ ಸುದೀಪ್ ಪೋಸ್ ಕೊಡುವುದು, ನಡೆದಾಡುವುದೇ ಹೆಚ್ಚು. ಕಿಚ್ಚ ಇನ್ನೂ ಸ್ವಲ್ಪ ಡ್ಯಾನ್ಸ್ ಮಾಡಿದ್ರೆ, ಖುಷಿ.. ಅಭಿಮಾನಿಗಳಿಗೇ.!
ಅಮಲಾ ಪೌಲ್ ನಟನೆ ಹೇಗಿದೆ.?
ಧೀರ ಯೋಧನ ಹಿಂದೆ ಬೀಳುವ 'ಡಾಕ್ಟರ್' ನಂದಿನಿ ಆಗಿ ಅಮಲಾ ಪೌಲ್ ನಟನೆ ಚೆನ್ನಾಗಿದೆ. ಫಸ್ಟ್ ಹಾಫ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಮಲಾ ಪೌಲ್ ಗೆ ಸೆಕೆಂಡ್ ಹಾಫ್ ನಲ್ಲಿ ಜಾಗವಿಲ್ಲ. ಆದರೂ, ಇದ್ದಷ್ಟು ಹೊತ್ತು ಅಮಲಾ ಪಡ್ಡೆಗಳ ಕಣ್ಸೆಳೆಯುತ್ತಾರೆ.
ಮೋಡಿ ಮಾಡುವ ಕ್ರೇಜಿ ಸ್ಟಾರ್
'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಪಾತ್ರದಷ್ಟೇ ಪ್ರಮುಖ ಪಾತ್ರ ಕ್ರೇಜಿ ಸ್ಟಾರ್ ರವಿಚಂದ್ರನ್ ರವರಿಗೂ ಲಭಿಸಿದೆ. ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿರುವ ರವಿಚಂದ್ರನ್ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.
ಕಾಡುವ ವಿಲನ್ ಗಳು
ಭ್ರಷ್ಟ ರಾಜಕಾರಣಿ ಅರಸೀಕೆರೆ ಆಂಜಿನಪ್ಪ ಪಾತ್ರದಲ್ಲಿ ಪಿ.ರವಿಶಂಕರ್ ರವರದ್ದು ಅಬ್ಬರದ ಅಭಿನಯ. ಇನ್ನೂ ಕಬೀರ್ ದುಹಾನ್ ಸಿಂಗ್ ಮತ್ತು ರವಿಕಿಶನ್ ಖತರ್ನಾಕ್ ಕೇಡಿಗಳಾಗಿ ಗಮನ ಸೆಳೆಯುತ್ತಾರೆ. ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ದಿವಂಗತ ಅನಿಲ್ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.
ಚಿಕ್ಕಣ್ಣ ಕಾಮಿಡಿ ಕಿಕ್
ಚಿಕ್ಕಣ್ಣ ತೆರೆಮೇಲೆ ಕಾಣಿಸಿಕೊಂಡಾಗೆಲ್ಲ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾರೆ. ಉಳಿದಂತೆ ಅವಿನಾಶ್, ಕಲ್ಯಾಣಿ, ರವಿಕಾಳೆ ಅಭಿನಯ ಅಚ್ಚುಕಟ್ಟಾಗಿದೆ.
ಘರ್ಜಿಸಿ ಮನರಂಜನೆ ನೀಡುವ 'ಹೆಬ್ಬುಲಿ'
'ಹೆಬ್ಬುಲಿ' ಚಿತ್ರದಲ್ಲಿ ಮನರಂಜನೆಗೆ ನೋ ಕಾಂಪ್ರೊಮೈಸ್. ಸಿನಿಮಾದ ಉದ್ದಕ್ಕೂ ಕುತೂಹಲಕಾರಿ ತಿರುವುಗಳಿರುವುದರಿಂದ ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗಲ್ಲ. ಅಷ್ಟರಮಟ್ಟಿಗೆ, ಜಾಗರೂಕತೆಯಿಂದ ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕ ಕೃಷ್ಣ ಯಶಸ್ವಿ ಆಗಿದ್ದಾರೆ.
ಸ್ವಲ್ಪ ನಿರಾಸೆ ಆಗಬಹುದು
'ಹೆಬ್ಬುಲಿ' ಸಿನಿಮಾದಲ್ಲಿ ಸುದೀಪ್ ಪ್ಯಾರಾ ಕಮಾಂಡರ್ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ ಅಂತ ಈಗಾಗಲೇ ಜಗಜ್ಜಾಹೀರಾಗಿರುವುದರಿಂದ 'ಇಡೀ' ಚಿತ್ರದಲ್ಲಿ 'ಭಾರತೀಯ ಸೇನಾ ಪಡೆ'ಯನ್ನ ನಿರೀಕ್ಷೆ ಮಾಡುವ ಸಿನಿ ಪ್ರಿಯರಿಗೆ ಸ್ವಲ್ಪ ನಿರಾಸೆ ಆಗಬಹುದು. ಯಾಕಂದ್ರೆ, ಚಿತ್ರದಲ್ಲಿ ಇರುವ 'ತಿರುವು' ಬೇರೆ.
ಎಲ್ಲೋ ಕೇಳಿದಂತೆ ಭಾಸವಾಗುವ ಅರ್ಜುನ್ ಜನ್ಯ ಸಂಗೀತ
'ಹೆಬ್ಬುಲಿ' ಚಿತ್ರದ ಹಾಡುಗಳು ಚೆನ್ನಾಗಿವೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕಥೆಗೆ ಪೂರಕವಾಗಿದೆ. ಆದ್ರೆ, ಅರ್ಜುನ್ ಜನ್ಯ ಸಂಗೀತದಲ್ಲಿ ಸ್ವಂತಕ್ಕಿಂತ 'ಸ್ಫೂರ್ತಿ'ಯೇ ಹೆಚ್ಚು.
ಕ್ಯಾಮರಾ ಕೈಚಳಕ
ಕಣ್ಣು ಕೋರೈಸುವ ಲೋಕೇಷನ್ ಗಳಲ್ಲಿ ಎ.ಕರುಣಾಕರ್ ಛಾಯಾಗ್ರಹಣ ಸೊಗಸಾಗಿದೆ.
ಸುದೀಪ್ ಅಭಿಮಾನಿಗಳೇ ಮಿಸ್ ಮಾಡ್ಬೇಡಿ
'ಹೆಬ್ಬುಲಿ'ಚಿತ್ರಕ್ಕಾಗಿ ಸುದೀಪ್ ಪಟ್ಟಿರುವ ಶ್ರಮ ಮೆಚ್ಚುವಂಥದ್ದು. 'ಸಾಲಿಡ್ ಸೋಲ್ಜರ್' ರೂಪದಲ್ಲಿ, ಸೂಪರ್ ಸ್ಟೈಲಿಶ್ ಆಗಿ ಸುದೀಪ್ ಕಾಣಿಸಿಕೊಂಡಿರುವ 'ಹೆಬ್ಬುಲಿ' ಚಿತ್ರ ಕಿಚ್ಚನ ಅಭಿಮಾನಿಗಳಿಗೆ ಖಂಡಿತ ರಸದೌತಣ.
ಫೈನಲ್ ಸ್ಟೇಟ್ಮೆಂಟ್
ಬರೀ ಮನರಂಜನೆ ಮಾತ್ರ ಅಲ್ಲ... 'ಹೆಬ್ಬುಲಿ' ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಕೂಡ ಇದೆ. ಇಡೀ ಕುಟುಂಬ ಆರಾಮಾಗಿ ಕೂತು ನೋಡಬಹುದಾದ ಸಿನಿಮಾ 'ಹೆಬ್ಬುಲಿ'.


Click it and Unblock the Notifications











