ಮಧ್ಯಂತರದವರೆಗೆ ಮುಗ್ಧನ ಅಭಿನಯದಲ್ಲೂ, ನಂತರ ಮಾರಾಮಾರಿ ಪಾತ್ರದಲ್ಲೂ ಮಿಂಚಿರುವ ವಿಷ್ಣು, ತಾವು ಸಾಹಸಸಿಂಹ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಕ್ಷಣಕಾಲ ಬಂದು ಹೋಗುವ ದೇವರಾಜ್ ಪೋಷಕ ಪಾತ್ರದಲ್ಲಿ ಮಿಂಚಿದ್ದರೆ, ಚಿತ್ರದುದ್ದಕ್ಕೂ ರಮೇಶ್ಭಟ್, ಶ್ವೇತಾ, ಅವಿನಾಶ್, ಟೆನ್ನಿಸ್ ಕೃಷ್ಣ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ವಿಷ್ಣು ಅಭಿಮಾನಿಗಳ ಪ್ರೀತ್ಯರ್ಥವಾಗಿ ಚಿತ್ರದಲ್ಲಿ ವಿಷ್ಣುವರ್ಧನ್ ಸ್ತುತಿಯನ್ನೂ ಅಳವಡಿಸಲಾಗಿದೆ. ನಾಯಕಿ ಪ್ರಿಯಾಂಕಾ ‘ವರ್ಧನಾ...ವರ್ಧನಾ... ವಿಷ್ಣುವರ್ಧನಾ’ ಎಂದು ಹಾಡಿದರೆ, ನಾಯಕ ವಿಷ್ಣು: ‘ಭಾರತಿ... ಭಾರಥಿ ನನ್ನ ಮುದ್ದು ಭಾರತಿ’ ಎಂದು ಹಾಡುತ್ತಾರೆ.
ವಿಷ್ಣು ಎಂಟ್ರಿ ಇರುವ ಎಲ್ಲ ಸನ್ನಿವೇಶಗಳಲ್ಲಿ (ಕೊಂಚ ಅತಿಯಾಗಿಯೇ) ಸಿಂಹಗರ್ಜನೆಯ ಹಿನ್ನೆಲೆ ನೀಡಿರುವ ಸಂಗೀತ ನಿರ್ದೇಶಕ ದೇವಾ, ಕಲ್ಯಾಣ್ ಸಾಹಿತ್ಯದ ಮೇಲೆ ಸಂಗೀತದ ಆರ್ಭಟವನ್ನು ಮಾತ್ರ ಮೆರೆದಿಲ್ಲ ಎಂಬುದು ಸಮಾಧಾನಕರ ಅಂಶ.
‘ಈ ಜಯಸಿಂಹ ಏನು ಹೇಳ್ತಾನೋ ಅದನ್ನೇ ಮಾಡ್ತಾನೆ. ಏನು ಮಾಡ್ತಾನೋ ಅದನ್ನು ಹೇಳೇ ಹೇಳ್ತಾನೆ’ ಎಂಬ ರಿಪೀಟ್ ಡೈಲಾಗ್ ಕೆಲವರಿಗೆ ಇಷ್ಟವಾದರೆ, ಹಲವರಿಗೆ ಅತಿಯಾಯಿತು ಎನಿಸಿದರೆ ಅಚ್ಚರಿಯಿಲ್ಲ.
ಕ್ಲೈಮ್ಯಾಕ್ಸ್: ಮನೆಗೆ ಮಾರಿಯಾಗದೆ, ಊರಿಗೂ ಮನೆಗೂ ಉಪಕಾರಿಯಾಗಿ ಕೋಟಿಗೊಬ್ಬನೆನ್ನಿಸಿಕೊಂಡಿದ್ದ ನಾಯಕನ ತಂಗಿಯ ಮೇಲೆ ರೌಡಿಯಾಬ್ಬ ಅತ್ಯಾಚಾರ ಮಾಡಲು ಯತ್ನಿಸುತ್ತಾನೆ. ವಿಷಯ ತಿಳಿದ ಸಹೃದಯೀ ನಾಯಕ, ಕೆರಳಿದ ಸಿಂಹವಾಗುತ್ತಾನೆ. ಗೂಂಡಾಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ಈ ಪೈಟ್ನಲ್ಲಿ ವೀರಾಧಿವೀರಕಣೆ... ಸಾಹಸಸಿಂಹ ಕಣೆ... ಎಂಬ ಹಾಡನ್ನು ನೆನಪಿಸುವಂತೆ ವಿಷ್ಣು ನಟಿಸಿದ್ದಾರೆ.
‘ಕೋಟಿಗೊಬ್ಬ’ ನಾಯಕ ಪ್ರಧಾನ ಹಾಗೂ ಸಾಹಸ ಪ್ರಧಾನ ಚಿತ್ರ. ಇದು ಹಂಡ್ರೆಡ್ ಪರ್ಸೆಂಟ್ ವಿಷ್ಣು ಚಿತ್ರ. ಪರೋಪಕಾರಿ ನಂಜುಂಡ- ಭೂಗತಲೋಕದ ಜಯಸಿಂಹನ ನಡುವೆ ಹಲವು ಫ್ಲಾಷ್ಬ್ಯಾಕ್ಕಂತೆಗಳು ಬಿಚ್ಚಿಕೊಳ್ಳುತ್ತವೆ. ರಮೇಶ್ಬಾಬು ಛಾಯಾಗ್ರಹಣ ಕಣ್ಣಿಗೆ ಹಿತವಾಗಿಯೂ, ಮನಸ್ಸಿಗೆ ಮುದನೀಡುವಂತೆಯೂ ಇದೆ.
ಖಳನಾಯಕನ ಪಾತ್ರದಲ್ಲಿ ಆಶೀಷ್ ವಿಧ್ಯಾರ್ಥಿ ಅಮೋಘ ಅಭಿನಯ ನೀಡಿದ್ದಾರೆ. ಸಿಂಹ....ಜಯಸಿಂಹ... ಸಾಹಸಸಿಂಹ ಜಯಘೋಷಗಳ ನಡುವೆ ಬೆಂಕಿಯ ಜ್ವಾಲೆಯ ನಡುವೆ ಪ್ರತ್ಯಕ್ಷವಾಗುವ ಸಿಂಹ, ವಿಷ್ಣುವಾಗುವ ಗ್ರಾಫಿಕ್ ತಂತ್ರ ವಿಷ್ಣು ಅಭಿಮಾನಿಗಳನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ. ನಿರ್ದೇಶಕರು ಚಿತ್ರದುದ್ದಕ್ಕೂ ವೇಗ ಉಳಿಸಿಕೊಂಡಿದ್ದರೂ, ಕೊನೆಯಲ್ಲಿ ಪ್ರೇಕ್ಷಕನ ಮನದಲ್ಲಿ ಗಟ್ಟಿಯಾಗಿ ಉಳಿಯುವುದು ವಿಷ್ಣು ಅಭಿನಯ ಮಾತ್ರ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











