ವಿಮರ್ಶೆ : ಅಂಧರ ಅಂದದ ಒಲವೇ ಜೀವನ ಸಾಕ್ಷಾತ್ಕಾರ
ಅಂಧ ಪ್ರೇಮಿಗಳ ಬಗ್ಗೆ ಈಗಾಗಲೇ ಕನ್ನಡದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆದರೆ 'ಕೃಷ್ಣ ತುಳಸಿ' ಸಿನಿಮಾ ಅವೆಲ್ಲಕ್ಕಿಂತ ಕೊಂಚ ಭಿನ್ನವಾಗಿದೆ. ಕುರುಡು ಪ್ರೇಮಿಯ ಕಲ್ಮಶವಿಲ್ಲದ ಪ್ರೇಮಕಥೆ ಇರುವ ಈ ಚಿತ್ರವನ್ನ ಒಮ್ಮೆ ನೋಡಲು ಅಡ್ಡಿಯಿಲ್ಲ. ಒಲವೇ ಜೀವನ ಸಾಕ್ಷಾತ್ಕಾರ, ಪ್ರೀತಿ ಎಲ್ಲದಕ್ಕಿಂತ ದೊಡ್ಡದು ಎನ್ನುವುದು ಈ ಸಿನಿಮಾದ ಸಂದೇಶ.
ಮಡಿಕೇರಿ ಹುಡುಗ, ಮೈಸೂರು ಹುಡುಗಿ
ಮಡಿಕೇರಿಯ ಹುಡುಗ ಕೃಷ್ಣ ಕಣ್ಣಿಲ್ಲದ ಅಂಧ. ತನ್ನ ಊರಿನಲ್ಲಿ ಟ್ರಾವೆಲ್ ಗೈಡ್ ಕೆಲಸ ಮಾಡುತ್ತಿರುವ ಈ ಹುಡುಗನಿಗೆ ಮೈಸೂರಿನಲ್ಲಿ ಕೆಲಸ ಸಿಗುತ್ತದೆ. ತನ್ನ ತಾಯಿಗೆ ಮೈಸೂರಿನಲ್ಲಿ ಫೇರ್ ಅಂಡ್ ಲವ್ಲಿ ತರದ ಹುಡುಗಿಯನ್ನು ಸೊಸೆಯಾಗಿ ಕರೆದುಕೊಂಡು ಬರುತ್ತೇನೆ ಅಂತ ಕೃಷ್ಣ ಹೊರಡುತ್ತಾನೆ. ಮೈಸೂರಿನ ಸುಂದರ ತಾಣಗಳನ್ನು ಅಲ್ಲಿಗೆ ಬರುವ ಪ್ರವಾಸಿಗರಿಗೆ ತೋರಿಸುವ ಕೆಲಸ ಮಾಡುತ್ತಿರುವ ಕೃಷ್ಣನ ಜೀವನದಲ್ಲಿ ಒಂದು ಹುಡುಗಿಯ ಆಗಮನ ಆಗುತ್ತದೆ. ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಗುವ ತುಳಸಿ ಜೊತೆಗೆ ಮಾತು ಮಾತುನಲ್ಲಿಯೇ ಪ್ರೇಮ ಶುರುವಾಗುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಕೊನೆಗೆ ಈ ಇಬ್ಬರು ಪ್ರೇಮಿಗಳು ಒಂದಾಗುತ್ತಾರಾ? ಕುರುಡನಾಗಿರುವ ಕೃಷ್ಣನಿಗೆ ತುಳಸಿ ಸಿಗುತ್ತಾಳಾ ಎನ್ನುವುದೇ ಸಿನಿಮಾದ ಕಥೆ.
ಮಧ್ಯಂತರದ ತಿರುವು
ಇಡೀ ಸಿನಿಮಾದ ಹೈಲೆಟ್ ಅಂದರೆ ಮಧ್ಯಂತರದಲ್ಲಿ ಬರುವ ಒಂದು ತಿರುವು. ಪ್ರಾರಂಭದಿಂದ ಸಿನಿಮಾ ನೋಡುವ ಪ್ರೇಕ್ಷಕರು ಅದನ್ನು ಸುಲಭವಾಗಿ ಉಹಿಸಲು ಸಾಧ್ಯವಿಲ್ಲ. ಇನ್ನು ಆ ರೋಚಕ ತಿರುವನ್ನು ಇಲ್ಲಿ ಹೇಳುವುದಕ್ಕಿಂತ ಚಿತ್ರಮಂದಿರದಲ್ಲಿ ನೋಡುವುದೇ ಸೂಕ್ತ. ಇಡೀ ಸಿನಿಮಾಗೆ ದೊಡ್ಡ ಟ್ವಿಸ್ಟ್ ಸಿಗುವುದು ಮಧ್ಯಂತರದ ಬ್ರೇಕ್ ನಲ್ಲಿ.
ವಿಜಯ್ ಮಾಗಿದ ನಟನೆ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಎಂದಿನಂತೆ ತಮ್ಮ ನಟನೆಯ ಮೂಲಕ ಕೃಷ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರತಿ ಬಾರಿ ವಿಭಿನ್ನ ಪಾತ್ರಗಳನ್ನು ಮಾಡುವ ಅವರು ಈ ಸಿನಿಮಾದಲ್ಲಿ ಅಂಧನ ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿದ್ದಾರೆ. ವಿಜಯ್ ಮಾಗಿದ ಅಭಿನಯ ತೆರೆ ಮೇಲೆ ಕಾಣುತ್ತದೆ. ನಟಿ ಮೇಘ ಶ್ರೀ ಸಹ ತನ್ನ ಪಾತ್ರವನ್ನು ಚೆನ್ನಾಗಿ ಮಾಡಿದ್ದಾರೆ. ಮೇಘ ಶ್ರೀ ಪಾತ್ರದ ಬಗ್ಗೆ ಜಾಸ್ತಿ ಹೇಳುವ ಆಗಿಲ್ಲ. ಯಾಕೆಂದರೆ ಅದೇ ಪಾತ್ರ ಮೇಲೆ ಸಿನಿಮಾದ ತಿರುವು ನಿಂತಿದೆ.
ಕಾಮಿಡಿ, ಆಕ್ಷನ್ ಇಲ್ಲ, ಆದರೂ ಮನರಂಜನೆಗೆ ಕೊರತೆ ಇಲ್ಲ
'ಕೃಷ್ಣ ತುಳಸಿ'ದಲ್ಲಿ ಕಥೆಗೆ ಬೇಕಾದ ಸನ್ನಿವೇಶಗಳು ಮಾತ್ರ ಇದೆ. ಕಾಮಿಡಿ, ಆಕ್ಷನ್ ದೃಶ್ಯಗಳು ಇಲ್ಲಿ ಇಲ್ಲ. ಆದರೂ ಸಹ ಸಿನಿಮಾ ಮನರಂಜನೆಗೆ ಕೊರತೆ ಮಾಡಿಲ್ಲ. ಸಿನಿಮಾದಲ್ಲಿ ಅನೇಕ ಅಂಧ ಕಲಾವಿದರು ಸಹ ನಟಿಸಿದ್ದಾರೆ. ಕತ್ತಲೆಯ ಒಳಗೆ ಸಿನಿಮಾದಲ್ಲಿ ಒಂದು ಬೆಳಕು ಕಾಣಿಸುತ್ತದೆ.
ನಿರ್ದೇಶನ, ಸಂಗೀತ, ಕ್ಯಾಮರಾ
ಚೊಚ್ಚಲ ಸಿನಿಮಾದಲ್ಲಿಯೇ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿದ್ದ ನಿರ್ದೇಶಕ ಸುಕೇಶ್ ನಾಯಕ್ ಚೆನ್ನಾಗಿ ನಿಭಾಯಿಸಿದ್ದಾರೆ. ಅವರ ಪರಿಶ್ರಮವನ್ನು ಮೆಚ್ಚಬೇಕಾಗುತ್ತದೆ. ಕಿರಣ್ ರವೀಂದ್ರನಾಥ್ ಹಿನ್ನಲೆ ಸಂಗೀತ ಮತ್ತು ಹಾಡುಗಳು ಕಥೆಗೆ ಪೂರಕವಾಗಿದೆ. ಕ್ಯಾಮರಾ ವರ್ಕ್ ಮೈಸೂರು, ಮಡಿಕೇರಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ನೋಡಿ ಅಂದದ ಪ್ರೇಮಕಥೆಯ
ಪ್ರೇಮಕಥೆ ಅಂತ ತಕ್ಷಣ ಅದೇ ಮರ ಸುತ್ತುವ ಕಥೆ ಕಣ್ಣು ಮುಂದೆ ಬರುತ್ತದೆ. ಆದರೆ 'ಕೃಷ್ಣ ತುಳಸಿ' ಸಿನಿಮಾ ಅದಕ್ಕೂ ಮೀರಿದೆ. 'ಕೃಷ್ಣ ತುಳಸಿ' ಸಿನಿಮಾ ನಿಜವಾದ ಪ್ರೀತಿ ಏನು ಅನ್ನುವುದನ್ನು ಕೊಂಚ ಭಿನ್ನವಾದ ರೀತಿಯಲ್ಲಿ ತೋರಿಸುತ್ತದೆ.


Click it and Unblock the Notifications











