Kuberaa Twitter (X ) Review ; ಹೇಗಿದೆ ಕುಬೇರ ? ಧನುಷ್ಗೆ ಸಿಗುತ್ತಾ ಮತ್ತೊಂದು ನ್ಯಾಷನಲ್ ಅವಾರ್ಡ್ ?
ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದವರು ಧನುಷ್. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದವರು. ರಾಷ್ಟ್ರ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡವರು.
ಇಂಥಾ ಧನುಷ್ ಅಭಿನಯದ ಕುಬೇರ ಚಿತ್ರ {ಜೂನ್ 20} ಇಂದು ತೆರೆಗೆ ಬಂದಿದೆ. ಇನ್ನು ಈ ಚಿತ್ರದಲ್ಲಿ ಕೇವಲ ಧನುಷ್ ಮಾತ್ರವಲ್ಲ ನಾಗಾರ್ಜುನ ಕೂಡ ಇದ್ದಾರೆ. ಈ ಹಿನ್ನೆಲೆ ಈ ಚಿತ್ರವನ್ನು ನೋಡುವ ಕುತೂಹಲ ತೆಲುಗು ಪ್ರೇಕ್ಷಕರಲ್ಲಿ ಕೂಡ ಇದೆ. ರಶ್ಮಿಕಾ ಮಂದಣ್ಣ ಚಿತ್ರದ ಕಥಾನಾಯಕಿ. ಇವರ ಅಭಿಮಾನಿಗಳಲ್ಲಿ ಕೂಡ ಸಂಭ್ರಮ-ಸಡಗರ ಮನೆ ಮಾಡಿದೆ.

ಹಾಗಿದ್ದರೆ ಧನುಷ್ ಅಭಿನಯದ ಕುಬೇರ ಹೇಗಿದೆ.? ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ ಪ್ರೇಕ್ಷಕರು ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಚಿತ್ರದ ಅವಧಿ ಹೆಚ್ಚಾಯ್ತು. ಆದರೂ..
ಚಿತ್ರದ ಅವಧಿ ಚೂರು ಹೆಚ್ಚಿದೆ. ಆದರೂ ಕೂಡ ಧನುಷ್ ಅವರ ಅಭಿನಯ ಮತ್ತು ನಾಗಾರ್ಜುನ ಅವರ ಪಾತ್ರ ಪೋಷಣೆ ಸೊಗಸಾಗಿದೆ. ಶೇಖರ್ ಕಮ್ಮುಲ ಅವರ ಕಥೆ ಹೇಳುವ ಈ ಪ್ರಾಮಾಣಿಕ ಪ್ರಯತ್ನ ಬಹುತೇಕ ಗುರಿಯನ್ನು ತಲುಪಿದೆ ಎಂದು ವ್ಯಕ್ತಿಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಿರ್ದೇಶಕರಿಗೆ ಹ್ಯಾಟ್ಸಾಫ್
ಬೇರೆ ಬೇರೆ ಚಿತ್ರರಂಗದ ಸ್ಟಾರ್ಗಳನ್ನು ಇಟ್ಟುಕೊಂಡು ಇಷ್ಟು ಒಳ್ಳೆಯ ಚಿತ್ರವನ್ನು ಶೇಖರ್ ಕಮ್ಮುಲಾ ನಿರ್ದೇಶಿಸುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಶೇಖರ್ ಕಮ್ಮುಲಾ ಅವರ ಬರವಣಿಗೆ ಮತ್ತು ದೇವಿಶ್ರೀ ಪ್ರಸಾದ್ ಅವರ ಸಂಗೀತ ಈ ಚಿತ್ರದ ನಿಜವಾದ ಶಕ್ತಿ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ ಎಂದು ಹೇಳಿರುವ ಮತ್ತೊಬ್ಬರು ಚಿತ್ರಕ್ಕೆ 3.75 ಸ್ಟಾರ್ಗಳನ್ನು ಕೂಡ ಕೊಟ್ಟಿದ್ದಾರೆ.
ನ್ಯಾಷನಲ್ ಅವಾರ್ಡ್ ಪಕ್ಕಾ
ಈಗಷ್ಟೇ ಸಿನಿಮಾ ನೋಡ್ಕೊಂಡು ಬಂದೆ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮೆಸ್ಟ್ರೀ ಈ ಚಿತ್ರದ ಪ್ರಮುಖವಾದ ಹೈಲೆಟ್. ನಾಗಾರ್ಜುನ ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ದೈಶ್ಯಗಳನ್ನು ಅದ್ಭುತವಾಗಿ ನಿರ್ದೇಶಕ ಶೇಖರ್ ಕಮ್ಮುಲ ಬರೆದಿದ್ದಾರೆ. ಅವರ ಬರವಣಿಗೆಯನ್ನು ಮೆಚ್ಚಲೇಬೇಕು. ದೇವಿಶ್ರೀ ಪ್ರಸಾದ್ ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವ ಮತ್ತೊಬ್ಬ ಚಿತ್ರಪ್ರೇಮಿ ಧನುಷ್ಗೆ ಈ ಬಾರಿ ನ್ಯಾಷನಲ್ ಅವಾರ್ಡ್ ಸಿಗುವುದು ಖಚಿತ ಎಂದು ಹೇಳಿದ್ದಾರೆ. ಕೇವಲ ಇವರೊಬ್ಬರೇ ಅಲ್ಲ ಹಲವಾರು ಜನ ಧನುಷ್ ಅಭಿನಯಕ್ಕೆ ಮನ ಸೋತಿದ್ದು ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ ಎನ್ನುವ ಭವಿಷ್ಯವಾಣಿ ಹೇಳುತ್ತಿದ್ಧಾರೆ.
ಬ್ಲಾಕ್ಬಸ್ಟರ್ ಕುಬೇರ
ವಿಮರ್ಷಕ ರಮೇಶ್ ಬಾಲಾ ಕೂಡ ತಮ್ಮ ವಿಮರ್ಷೆಯನ್ನು ಹಂಚಿಕೊಂಡಿದ್ದು, ಬ್ಲಾಕ್ಬಸ್ಟರ್ ಚಿತ್ರವನ್ನು ನೀಡುವಲ್ಲಿ ನಿರ್ದೇಶಕ ಶೇಖರ್ ಕಮ್ಮುಲಾ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಚಿತ್ರದ ಮೊದಲಾರ್ಧ ಚೆನ್ನಾಗಿದೆ. ದ್ವೀತಿಯಾರ್ಧ ಇನ್ನು ಅದ್ಭುತವಾಗಿದೆ, ಭಾವನಾತ್ಮಕ ದೃಶ್ಯಗಳು ಪರಿಣಾಮವನ್ನು ಬೀರುತ್ತವೆ ಎಂದು ಹೇಳಿರುವ ರಮೇಶ್ ಬಾಲಾ ಭಿಕ್ಷುಕನ ಪಾತ್ರವನ್ನು ಧನುಷ್ ಅಕ್ಷರಶ ಜೀವಿಸಿದ್ದಾರೆ, ನಾಗಾರ್ಜುನ ಸೊಗಸಾಗಿ ಅಭಿನಯಿಸಿದ್ದಾರೆ ಎಂದು ಹೇಳಿದ್ದಾರೆ. ರಶ್ಮಿಕಾ ಮಂದಣ್ಣಗೆ ಇದು ಮತ್ತೊಂದು ಮರೆಯಲಾಗದ ಪಾತ್ರ ಎಂದು ಹೇಳಿದ್ದಾರೆ. ಚಿತ್ರಕ್ಕೆ 4.5 ಸ್ಟಾರ್ಗಳನ್ನು ನೀಡಿದ್ದಾರೆ.
ಹೀಗೆ ಹಲವಾರು ಜನ ಸದ್ಯ ಧನುಷ್ ಅಭಿನಯದ ಕುಬೇರ ಚಿತ್ರದ ಕುರಿತು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರ ಚೆನ್ನಾಗಿದೆ ಎಂದು ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರದ ಕುರಿತು ವಿಮರ್ಷೆಗಳನ್ನು ಬರೆದುಕೊಳ್ಳುತ್ತಿದ್ದಾರೆ.


Click it and Unblock the Notifications











