twitter
    For Quick Alerts
    ALLOW NOTIFICATIONS  
    For Daily Alerts

    ಸೌಜನ್ಯ ಮತ್ತು ಸಾಮಾಜಿಕ ರೀತಿ ನೀತಿಗಳು ಬೋರು ಹೊಡೆಸತೊಡಗಿದಾಗ ಇಂಥ ಅತಿರೇಕಗಳು ಇಷ್ಟವಾಗುವುದುಂಟು. ಚಿತ್ರದಲ್ಲಿ ಪ್ರಾಸಬದ್ಧ ಸಂಭಾಷಣೆ ಇದೆ. ಸಂಭಾಷಣೆಯನ್ನು ಮೀರಿಸುವಂಥ ಗೀತೆಗಳಿವೆ. ಗೀತೆಗಳಿಗೆ ತಕ್ಕ ಸಂಗೀತವಿದೆ.

    By Staff
    |

    ಚಿತ್ರ : ಲಂಕೇಶನಿರ್ದೇಶನ: ಬಿ.ಸಿ. ಪಾಟೀಲ್‌ತಾರಾಗಣ : ಬಿ. ಸಿ. ಪಾಟೀಲ್‌, ಭಾವನಾ, ಶೀತಲ್‌, ಶೋಭರಾಜ್‌
    *ಸುಂದರ್‌

    ಹಿಂಸೆ, ವೈಭವೀಕರಣ, ಅಬ್ಬರ ಎಲ್ಲವೂ ತೀರ ಹಸಿ ಹಸಿಯಾಗಿರುವ ಚಿತ್ರಗಳೂ ಒಮ್ಮೊಮ್ಮೆ ಮೆಚ್ಚುಗೆಯಾಗುವುದುಂಟು. ರುದ್ರ ಭಯಂಕರ ಸಂಗತಿಗಳ ಹಾಗೆ ! ಸೌಜನ್ಯ ಮತ್ತು ಸಾಮಾಜಿಕ ರೀತಿ ನೀತಿಗಳು ಬೋರು ಹೊಡೆಸತೊಡಗಿದಾಗ ಇಂಥ ಅತಿರೇಕಗಳು ನಾನಾ ಕಾರಣಕ್ಕೆ ಇಷ್ಟವಾಗುವುದುಂಟು. ಉದಾಹರಣೆಗೆ ಜಗ್ಗೇಶ್‌, ಉಪೇಂದ್ರ ಮುಂತಾದವರ ಚಿತ್ರಗಳನ್ನೇ ನೋಡಬಹುದು.

    ಬಿ.ಸಿ. ಪಾಟೀಲ್‌ ನಿರ್ದೇಶಿಸಿ , ನಿರ್ಮಿಸಿ, ನಟಿಸಿದ ಲಂಕೇಶ ಕೂಡ ಅಂಥದ್ದೇ ಒಂದು ಚಿತ್ರ. ತನ್ನ ಎಲ್ಲ rawness ಜೊತೆಗೇ ನಿಮಗೆ ಇಷ್ಟವಾಗುವ ಚಿತ್ರ ಇದು. ಲಂಕೇಶ ಒರಟ , ರೌಡಿ. ಅವನ ಕಟಕಟೆಯಲ್ಲಿ ನಿಂತ ಅಪರಾಧಿಗಳಿಗೆ ಅವನೇ ನ್ಯಾಯಾಧೀಶ. a tooth for a tooth and an eye for an eye -ಇದಕ್ಕೆ ಪೂರಕವಾಗಿ ಒಂದರ ಹಿಂದೊಂದರಂತೆ ಘಟನೆಗಳು ನಡೆಯುತ್ತಾ ಹೋಗುತ್ತವೆ.

    ಲಂಕೇಶ ಕದ್ದವನ ಕೈ ಕತ್ತರಿಸುತ್ತಾನೆ. ರೇಪ್‌ ಮಾಡಿದವನ ಹತ್ಯಾರಕ್ಕೇ ಕತ್ತರಿ ಹಾಕುತ್ತಾನೆ. ಮೂವರನ್ನು ರಸ್ತೆಯಲ್ಲಿ ‘ಲಂಕಾದಹನ’ ಮಾಡಿ ಸಂತೋಷ ಪಡುತ್ತಾನೆ. ಈ ಚಾಳಿ ಅವನಿಗೆ ಬಾಲ್ಯದಿಂದ ಬೆಳೆದುಬಂದದ್ದು. ಅದು ಕೊನೆಗೂ ಬದಲಾಗುವುದು ಆತ ಪ್ರೇಯಸಿಯಾಬ್ಬಳನ್ನು ಕಟ್ಟಿಕೊಂಡಾಗ.

    ಲಂಕೇಶನಿಗೆ ಮದುವೆಯಾಗಿದೆ. ಹಾಗಿದ್ದರೂ ಆತ ಮತ್ತೊಬ್ಬಳನ್ನು ಮೋಹಿಸುತ್ತಾನೆ. ಆಕೆಗೆ ಮದುವೆಯಾಗಿಲ್ಲ. ಇಂಥದ್ದೊಂದು ವಿಚಿತ್ರ ಪ್ರಸಂಗದಿಂದ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಇಲ್ಲಿಯೇ ಸೀತಾಪಹರಣ, ಅಶೋಕ ವನ, ರಾವಣ ಸನ್ಯಾಸಿ, ಪಕ್ಷಾಂತರ ಪಕ್ಷಿ ವಿಭೀಷಣ ಮುಂತಾದವರು ಬರುತ್ತಾರೆ.

    ಲಂಕೇಶ ಪಕ್ಕಾ ಪಡ್ಡೆ ಹುಡುಗರ ಚಿತ್ರ ಅನ್ನುವುದಂತೂ ನಿಜ. ಅವರ ಕಣ್ತಣಿಸುವುದಕ್ಕೆ ಬೊಗಸೆ ಚೆಲುವೆ ಶೀತಲ್‌ ಇದ್ದಾಳೆ. ಆಕೆ ಕೆಲವು ದೃಶ್ಯಗಳಲ್ಲಿ ತುಂಬಿ ತುಳುಕುತ್ತಾ ಹರೆಯದ ಜೀವಗಳಿಗೆ ಹುಚ್ಚು ಹಚ್ಚುತ್ತಾಳೆ.

    ಆದರೆ ಲಂಕೇಶ ಚಿತ್ರದ ಯಶಸ್ಸು ಯಾರ ಪಾಲಾಗಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಕತೆ-ಚಿತ್ರಕತೆ ಎಂಬ ಜೋಡಿ ಕಂಬಗಳ ಮೇಲೆ ಲಂಕೇಶ ನಿಂತಿದ್ದಾನೆ. ಆತನನ್ನು ಸರಾಗವಾಗಿ ಒಯ್ಯುವುದಕ್ಕೆ ಪ್ರಾಸಬದ್ಧ ಸಂಭಾಷಣೆ ಇದೆ. ಸಂಭಾಷಣೆಯನ್ನು ಮೀರಿಸುವಂಥ ಗೀತೆಗಳಿವೆ. ಗೀತೆಗಳಿಗೆ ತಕ್ಕ ಸಂಗೀತವಿದೆ. ಸಂಗೀತದ ಅಲೆಗಳಿಗೆ ಬೆಳದಿಂಗಳ ಬಾಲೆಯ ನಡು ಮತ್ತು ನಡಿಗೆ ಕನಿಷ್ಠ ಉಡುಗೆಯಲ್ಲಿ ತೇಲುತ್ತದೆ.

    ಚಿತ್ರದ ನಿರ್ದೇಶಕರೂ ಪಾಟೀಲರೇ. ಹಾಗಂತ ಅವರು ಗೆದ್ದಿದ್ದಾರೆ ಎಂದು ಅರ್ಥವಲ್ಲ. ಛಾಯಾಗ್ರಾಹಕ ಅಶೋಕ್‌ ಕಶ್ಯಪ್‌ ಹಾಗೂ ಸಂಕಲನಕಾರ ಶಶಿಕುಮಾರ್‌ ಇಬ್ಬರೂ ಸೇರಿ ಚಿತ್ರವನ್ನು ತಾಂತ್ರಿಕ ಕಲಾಕೃತಿಯನ್ನಾಗಿಸಿದ್ದಾರೆ. ನಿರ್ದೇಶಕರ ದೋಷಗಳನ್ನು ಮುಚ್ಚಿ ಹಾಕಿದ್ದಾರೆ.

    ಅಭಿನಯದ ಪೈಕಿ ಭಾವನಾ ನಂಬರ್‌ ವನ್‌. ನಂತರದ ಸ್ಥಾನ ಪಾಟೀಲರಿಗೆ. ಶೀತಲ್‌ ಅಭಿನಯಕ್ಕೆ ಅವಕಾಶವೇ ಇಲ್ಲ. ಆಕೆ ಹಂಸಲೇಖಾರ ರಾಗದಲೆಗಳ ಮೇಲೆ ಉಯ್ಯಾಲೆಯಾಡುವ ಬಾಲೆ ಅಷ್ಟೇ. ಶೋಭಾ ರಾಜ್‌ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವಿನಾಶ್‌ ಬಂದು ಹೋಗುತ್ತಾರೆ.

    ಇಡೀ ಚಿತ್ರದಲ್ಲಿ ಕಾಮಿಡಿ ಇಲ್ಲ. ಆದರೆ ಅದು ಬೇಕಿತ್ತು ಅಂತ ಅನಿಸುವುದೂ ಇಲ್ಲ. ಹಿಂಸೆ ಅತಿಯಾಯಿತು ಅನ್ನುವ ಹೊತ್ತಿಗೆ ಚಿತ್ರ ಸೆಂಟಿಮೆಂಟಿನತ್ತ ಹೊರಳುತ್ತದೆ. ಹೀಗಾಗಿ ಇಷ್ಟವಾಗುತ್ತದೆ. ನಾಯಕನ್‌ ಚಿತ್ರದ ಹೈಲೈಟ್‌: ಒಂದು ದೃಶ್ಯದಲ್ಲಿ ಮಗು ಕೇಳುತ್ತದೆ. ಅಪ್ಪಾ ನೀನು ಒಳ್ಳೆಯವನಾ, ಕೆಟ್ಟವನಾ ? ಲಂಕೇಶ ಗೊತ್ತಿಲ್ಲ ಎನ್ನುತ್ತಾನೆ.

    ನಾಯಕನ್‌ ಚಿತ್ರದ ಕೊನೆಯ ದೃಶ್ಯದಲ್ಲೂ ಈ ಮಾತು ಬರುತ್ತದೆ. ಆದರೆ ಅಲ್ಲಿ ಅದು ಸ್ಫುರಿಸುವ ಅರ್ಥವೇ ಬೇರೆ !

    ಮುಖಪುಟ / ಸ್ಯಾಂಡಲ್‌ವುಡ್‌

    Saturday, April 20, 2024, 3:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X