Matte Udbhava Review: 'ಮತ್ತೆ' ಅದ್ಭುತ ಮನರಂಜನೆ ನೀಡಿದ 'ಉದ್ಭವ'
1990ರ ಸೂಪರ್ ಹಿಟ್ ಚಿತ್ರ 'ಉದ್ಭವ' ಚಿತ್ರದ ಮುಂದುವರೆದ ಭಾಗ ಎಂಬ ಕಾರಣಕ್ಕೆ 'ಮತ್ತೆ ಉದ್ಭವ' ಹೆಚ್ಚು ಕುತೂಹಲ ಮೂಡಿಸಿತ್ತು. ಆ ಚಿತ್ರಕ್ಕಿಂತ ಹೆಚ್ಚು ಮನರಂಜನೆ ಸಿಗಬಹುದು ಎಂಬ ನಿರೀಕ್ಷೆಯನ್ನು ನಿರಾಸೆ ಮಾಡಲಿಲ್ಲ ಮತ್ತೆ ಉದ್ಭವ. ಆರಂಭದಿಂದಲೂ ಅಂತಿಮವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಖುಷಿಪಡಿಸುವಲ್ಲಿ ಸಿನಿಮಾ ಗೆದ್ದಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ....
ಚಿತ್ರ: ಮತ್ತೆ ಉದ್ಭವ
ನಿರ್ದೇಶಕ: ಕೊಡ್ಲು ರಾಮಕೃಷ್ಣ
ಕಲಾವಿದರು: ಪ್ರಮೋದ್, ಮಿಲನ ನಾಗರಾಜ್, ರಂಗಾಯಣ ರಘು, ಅವಿನಾಶ್ ಮತ್ತು ಇತರರು
ಬಿಡುಗಡೆ ದಿನಾಂಕ: ಫೆಬ್ರವರಿ 7, 2020
ಮುಂದುವರೆದ ಗಣೇಶನ ಪವಾಡ
'ಗಣೇಶನ ಮೂರ್ತಿ ಉದ್ಭವ ಆಯಿತು, ಇದು ದೇವರ ಪವಾಡ' ಎಂದು 'ಉದ್ಭವ' ಚಿತ್ರದಲ್ಲಿ ಕಥೆ ಮುಗಿಸಿದ್ದ ನಿರ್ದೇಶಕರು, ಮತ್ತೆ ಉದ್ಭವ ಚಿತ್ರದಲ್ಲಿ ಕಥೆ ಮುಂದುವರಿಸಿದ್ದಾರೆ. ಉದ್ಭವ ಗಣೇಶನನ್ನು ಕಥೆಯನ್ನಾಗಿಸಿ ಇಡೀ ಚಿತ್ರವನ್ನು ಮನರಂಜನೆಯಿಂದ ಕಟ್ಟಿಕೊಡಲಾಗಿದೆ. ದೇವಸ್ಥಾನದ ಧರ್ಮದರ್ಶಿ (ರಂಗಾಯಣ ರಘು) ಮತ್ತು ಮಗ (ಪ್ರಮೋದ್) ಇಬ್ಬರು ಸೇರಿ ಜನರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಹೇಗೆ ಮೂರ್ಖರನ್ನಾಗಿಸುತ್ತಾರೆ ಎನ್ನುವುದು ಚಿತ್ರದ ಕಥೆ. ರಾತ್ರೋರಾತ್ರಿ ಉದ್ಭವವಾಗಿದ್ದ ಗಣೇಶ ಉದ್ಭವ ಮೂರ್ತಿನಾ ಅಥವಾ ಮಾನವ ಹುಟ್ಟುಹಾಕಿದ್ದ ಎಂಬ ಚರ್ಚೆಯಲ್ಲಿ ಅನೇಕ ಟ್ವಿಸ್ಟ್ ಗಳಿವೆ. ಅದು ಏನು ಅಂತ ಚಿತ್ರಮಂದಿರದಲ್ಲಿ ನೋಡಿದ್ರೆ ಮಜಾ ಇದೆ.
ನೈಜ ಘಟನೆಗಳೇ ಸಿನಿಮಾದ ಕಥೆ
ರಾಜಕಾರಣಿಯೊಬ್ಬರು ಮಠದಲ್ಲಿ ದುಡ್ಡು ಬಚ್ಚಿಟ್ಟು ಮೋಸ ಹೋಗುವುದು, ಗುರೂಜಿಯೊಬ್ಬರು ರಾಸಲೀಲೆ ಮಾಡಿ ಸಿಕ್ಕಿ ಬೀಳುವುದು, ಯುವ ನಟಿಯೊಬ್ಬರು ಅಕಾಸ್ಮಾತ್ ಆಗಿ ರಾಜಕಾರಣಕ್ಕೆ ಬರುವುದು, ಮಾಜಿ ಮಂತ್ರಿಯೊಬ್ಬರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವುದು, ಮಾಲ್ ಕಟ್ಟಲು ಬಿಲ್ಡರ್ ಡೀಲ್ ಮಾಡುವುದು, ನಂಬಿಕೆ ಹೆಸರಿನಲ್ಲಿ ದೇವಸ್ಥಾನ ಮತ್ತು ದೇವರನ್ನು ಬಳಸಿಕೊಂಡು ಜನರನ್ನು ವಂಚಿಸುವುದು ಹೀಗೆ ಸಮಾಜದಲ್ಲಿ ಮತ್ತು ಸುದ್ದಿಯಾದ ಅನೇಕ ಘಟನೆಗಳ ಜೋಡಣೆ ಈ ಚಿತ್ರದಲ್ಲಿದೆ. ಇದೆಲ್ಲವೂ ಪ್ರೇಕ್ಷಕರಿಗೆ ತಿಳಿದಿರುವುದರಿಂದ ಪ್ರತಿ ದೃಶ್ಯದಲ್ಲಿ ಎಂಜಾಯ್ ಮಾಡ್ತಾರೆ.
ಪ್ರಮೋದ್ ಗಮನಾರ್ಹ
ಈ ಹಿಂದಿನ ಸಿನಿಮಾಗಳಲ್ಲಿ ಮುಗ್ದ ಹುಡುಗನಾಗಿ ಗಮನ ಸೆಳೆದಿದ್ದ ಪ್ರಮೋದ್ ಅಭಿನಯದಲ್ಲಿ ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದಾರೆ. ಒಬ್ಬ ಕಮರ್ಷಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಕಾಮಿಡಿ, ಎಕ್ಸ್ ಪ್ರೆಶನ್, ಫೈಟ್, ಡ್ಯಾನ್ಸ್ ಎಲ್ಲದರಲ್ಲೂ ತನ್ನ ಪ್ರತಿಭೆ ಹೊರಹಾಕಿದ್ದಾರೆ. ಇಡೀ ಸಿನಿಮಾವನ್ನು ಗಣೇಶ್ ಪಾತ್ರದಲ್ಲಿ ಪ್ರಮೋದ್ ಆವರಿಸಿದ್ದಾರೆ. ಅಂದು ಅನಂತ್ ನಾಗ್ ಇಂದು ಪ್ರಮೋದ್ ಈ ಪಾತ್ರಕ್ಕೆ ಸೂಕ್ತ ಎನ್ನುವಷ್ಟು ಮೋಡಿ ಮಾಡಿದ್ದಾರೆ.
ಕಲಾವಿದರು ಅದ್ಭುತ ನಟನೆ
ಈ ಚಿತ್ರದ ಸಣ್ಣ ಪಾತ್ರದಿಂದ ಹಿಡಿದು ಪ್ರತಿಯೊಂದು ಪಾತ್ರ ಇಷ್ಟ ಆಗುತ್ತೆ. ಅನಂತ್ ನಾಗ್ ಪಾತ್ರವನ್ನು ಇಲ್ಲಿ ರಂಗಾಯಣ ರಘು ಮುಂದುವರಿಸಿದ್ದು, ಧರ್ಮದರ್ಶಿ ರಾಘವೇಂದ್ರ ರಾಯರಾಗಿ ಮಿಂಚಿದ್ದಾರೆ. ಪ್ರಮೋದ್ ಗೆ ತಕ್ಕ ಸಾಥ್ ನೀಡಿದ್ದಾರೆ. ಈ ತಂದೆ ಮಗನ ಜುಗಲ್ ಬಂದಿ ಇಡೀ ಚಿತ್ರಕ್ಕೆ ಪ್ಲಸ್ ಆಗಿದೆ. ನಟಿ ಹಾಗೂ ರಾಜಕಾರಣಿ ಪಾತ್ರದಲ್ಲಿ ಮಿಲನ ನಾಗರಾಜ್ ಮೋಡಿ ಮಾಡಿದ್ದಾರೆ. ಪರೋಕ್ಷವಾಗಿ ರಮ್ಯಾ ಮತ್ತು ಸುಮಲತಾ ಅವರನ್ನು ನೆನಪಿಸಿರುವ ಪಾತ್ರ ಇದು. ರಾಜಕಾರಣಿಯಾಗಿ ಅವಿನಾಶ್, ಗಣೇಶನ ತಾಯಿ ಪಾತ್ರದಲ್ಲಿ ಸುಧಾ ಬೆಳವಾಡಿ, ಗುರೂಜಿ ಪಾತ್ರದಲ್ಲಿ ಮೋಹನ್ ಅದ್ಭುತ ಅಭಿನಯ. ವಿಶೇಷ ಅಂದ್ರೆ ಅಂದು ಉದ್ಭವ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೆಲವು ಪಾತ್ರಗಳನ್ನು ಈ ಚಿತ್ರದಲ್ಲಿ ಬಳಸಿರುವುದು ನಿರ್ದೇಶಕರ ಜಾಣ್ಮೆ ಎಚ್ಚುವಂತಹದ್ದು.
ನಿರ್ದೇಶಕರ ಕೆಲಸ ಮೆಚ್ಚುವಂತಹದ್ದು
ಹಿರಿಯ ನಿರ್ದೇಶಕ ಕೊಡ್ಲು ರಾಮಕೃಷ್ಣ ತಮ್ಮ ರೆಗ್ಯುಲರ್ ಸ್ಟೈಲ್ನಲ್ಲಿ ಮುಂದುವರಿದ್ದಾರೆ. ಉದ್ಭವದಲ್ಲಿ ಮಾಡಿದ್ದ ಮೋಡಿಯನ್ನು ಇಲ್ಲೂ ಮಾಡಿದ್ದಾರೆ. ಪ್ರೇಕ್ಷಕರನ್ನು ತಮ್ಮ ಚಿತ್ರದ ಕಥೆಯ ಜೊತೆ ಕ್ಲೈಮ್ಯಾಕ್ಸ್ ವರೆಗೂ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಗೆ ನಿರ್ದೇಶಕರು ಸಕ್ಸಸ್ ಎನ್ನಬಹುದು. ಲಾಜಿಕ್ ಇಟ್ಟು ಸಿನಿಮಾ ನೋಡಿದಾಗ ಅಲ್ಲಲ್ಲಿ ಕೆಲವು ಮಿಸ್ಟೆಕ್ ಗಳು, ಕಂಟ್ಯೂನಿಟಿ ಸಮಸ್ಯೆ ಕಂಡುಬರುತ್ತೆ. ಅದನ್ನು ಬಿಟ್ಟರೆ ಉತ್ತಮ ಸಿನಿಮಾ.
ಕೊನೆಯದಾಗಿ ಹೇಳುವುದಾದರೆ
ಮನರಂಜನೆ ಮಾತ್ರವಲ್ಲ ಉತ್ತಮ ಸಂದೇಶವೂ ಈ ಚಿತ್ರದಲ್ಲಿದೆ. ಧಾರ್ಮಿಕತೆ, ಮೂಡನಂಬಿಕೆ, ರಾಜಕಾರಣಿಗಳು, ಸ್ವಾಮೀಜಿ, ಆಶ್ರಮ, ಭ್ರಷ್ಟಾಚಾರ, ರಿಯಲ್ ಎಸ್ಟೇಟ್, ಸಿನಿಮಾ ಹೀಗೆ ಸಮಾಜದ ಪ್ರತಿ ಕ್ಷೇತ್ರವನ್ನು ಅಣುಕು ಮಾಡುವ ಮೂಲಕ ಜನರನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಲಾಗಿದೆ. ಉದ್ಭವದಂತೆ ಮತ್ತೆ ಉದ್ಭವ ಚಿತ್ರವೂ ಅತ್ಯುತ್ತಮ ಎನ್ನಬಹುದು. ಮನರಂಜನೆ ದೃಷ್ಟಿಯಿಂದ ಸಿನಿಮಾ ನೋಡುವ ವೀಕ್ಷಕರಿಗೆ ಈ ಚಿತ್ತ ಉತ್ತಮ ಆಯ್ಕೆ.


Click it and Unblock the Notifications











