ವಿಮರ್ಶೆ : ಪಿ ಶೇಷಾದ್ರಿ ನಿರ್ದೇಶನದ 'ಮೂಕಜ್ಜಿ ಕನಸುಗಳು'
ಬಹುಶಃ ಮೂಕಜ್ಜಿಯ ಕಥೆಯನ್ನು ಡಾ. ಕೆ ಶಿವರಾಮ ಕಾರಂತರು ಅಂದಿನ ಕಾಲಘಟ್ಟಕ್ಕೆ ಮಾತ್ರ ಸರಿಹೊಂದುವಂತೆ ಬರೆದಿದ್ದು ಎಂದರೆ ತಪ್ಪಾಗುತ್ತದೆ. ಮೂಕಜ್ಜಿಯ ವಿಸ್ಮಯ ಕಥಾಹಂದರವನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿ ತೋರಿಸುವುದು ಕಷ್ಟದ ಕೆಲಸವೇ ಸರಿ. ಆದರೆ, ಇಂಥದ್ದೊಂದು ಪ್ರಯತ್ನವನ್ನು ಎಂಟು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಅವರು ಮಾಡಿದ್ದಾರೆ.
ಮೂಕಜ್ಜಿ ಮಾತನಾಡುವ ಪ್ರತಿ ವಿಷಯವೂ ನಮ್ಮ ಮನಸ್ಸಿನ ಎಂದಾದರೂ ಹಾದು ಹೋದ ಪ್ರಶ್ನೆಗಳೇ ಎಂದು ಅನಿಸಿಬಿಡುತ್ತವೆ. ಹೀಗಾಗಿ, ಇದು ಪ್ರತಿ ವೀಕ್ಷಕನನ್ನು ಸ್ವವಿಮರ್ಶೆಯ ಒಳಪಡಿಸುವ ಚಿತ್ರ ಎನ್ನಬಹುದು.
ವಿವಿಧ ಯುಗಗಳ ನಾಗರೀಕತೆಯ ಸ್ಥೂಲ ಪರಿಚಯ, ಸೃಷ್ಟಿ, ಸ್ಥಿತಿ, ಲಯಗಳ ಅರ್ಥ, ಅವತಾರ, ಪುನರ್ಜನ್ಮ, ಜೀವನ ನಿರ್ವಹಣೆ, ಸಂಬಂಧಗಳು, ಬೆಸುಗೆ, ಅಗಲಿಕೆ, ನೋವು ನಲಿವು, ನಿರಂತರ ಹುಡುಕಾಟದ ಫಲವೇ ಕನಸುಗಳು, ಅಜ್ಜಿಯ ಬಾಯಲ್ಲಿ ಆಡಿದ ಮಾತುಗಳು. ಚಿತ್ರದ ಬಗ್ಗೆ ಇನ್ನಷ್ಟು ಮುಂದೆ ಓದಿ...
ಗಂಭೀರ ಕಥನವನ್ನು ತೆರೆಯ ಮೇಲೆ ನೋಡುವ ಸುಖ
ಸಾಮಾನ್ಯವಾಗಿ ಚರಿತ್ರೆ, ದೇವರ ಇರುವಿಕೆ, ನಾವೇಕೆ ಜೀವಿಸುತ್ತಿದ್ದೀವಿ, ಪುನರ್ಜನ್ಮ ಈ ತರಹದ ವಿಷಯಗಳು ಬಂದಾಗ ಎಷ್ಟೋ ಜನ ಅಲ್ಲಿಂದ ನುಣಚಿಕೊಳ್ಳುತ್ತಾರೆ. ಕೆಲ ಆಸಕ್ತರು ಮಾತ್ರ ತಮಗೆ ಅರ್ಥವಾಗಲಿ ಬಿಡಲಿ ಕಿವಿಯ ಮೇಲೆ ಹಾಕಿಕೊಳ್ಳುತ್ತಾರೆ. ಈ ರೀತಿಯ ವಿಷಯಗಳನ್ನು ಚಲನಚಿತ್ರ ರೂಪಕ್ಕೆ ಇಳಿಸಿದಾಗ ವಿಷಯವನ್ನು ಸ್ಥೂಲವಾಗಿ, ಸೂಕ್ಷ್ಮವಾಗಿ ಹೇಳುವ ಜಾಣ್ಮೆ ಅಗತ್ಯ. ಇಲ್ಲವಾದಲ್ಲಿ ಗಮನಾರ್ಹವಾದ ಅಜ್ಜಿಯ ಮಾತುಗಳು ಬರೀಯ ಉಡಾಫೆಯಂತೆ ತೋರುವ ಸಾಧ್ಯತೆಯೇ ಹೆಚ್ಚು
ಕಥಾ ವಸ್ತುವನ್ನು ಎಚ್ಚರಿಕೆಯಿಂದ ಪ್ರಸ್ತುತಪಡಿಸುವ ಶೇಷಾದ್ರಿ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂಕಜ್ಜಿಯ ಕನಸು ಕಾಣಲು ಬಂದವರ ಸಂಖ್ಯೆ ಬಹಳಷ್ಟಿತ್ತು. ಈ ಮುಂಚೆ ಕೃತಿಯನ್ನು ಓದಿಕೊಂಡು ಬಂದವರಿಗೆ ಎಲ್ಲೋ ಕೆಲವು ಅಂಶಗಳು ದೊಡ್ಡ ಪರದೆ ಮೇಲೆ ಕಾಣುತ್ತಿಲ್ಲವಲ್ಲ ಎಂದು ಅನಿಸಿರಬಹುದು. ಇದು ನಿರ್ದೇಶಕರ ಜಾಣ್ಮೆಯೂ ಇರಬಹುದು ಅಥವಾ ಆ ಭಾಗ ಅನಗತ್ಯ, ವಿವಾದಕ್ಕೆ ದಾರಿ ಮಾಡಿಕೊಡಬಹುದು ಎಂಬ ಎಚ್ಚರಿಕೆಯೂ ಇರಬಹುದು. ಚಿತ್ರದ ಕಥಾ ವಸ್ತುವೆ ಆ ರೀತಿ ಇದೆ. ದೇವರು ದಿಂಡರು ಮೂಲ ನಂಬಿಕೆಯನ್ನೇ ಅಲ್ಲಾಡಿಸಿಬಿಟ್ಟರೆ ಯಾರು ತಾನೆ ವಿಚಲಿತರಾಗುವುದಿಲ್ಲ.
ಕಾರಂತಜ್ಜನ ಕೃತಿ ನೀಡುವ ಆಪ್ತತೆ ಚಿತ್ರ ನೀಡಲಾರದು
ಕಾರಂತಜ್ಜನ ಕೃತಿ ನೀಡುವ ಆಪ್ತತೆ ಚಿತ್ರ ನೀಡಲಾರದು. ನನಗೆ ಈ ಸಿನಿಮಾದಲ್ಲಿ ಕೆಲವು ಅಂಶಗಳು ಮರೆಯಾಗಿದ್ದು ಯಾಕೆ ಎಂಬುದು ಪ್ರಶ್ನೆ.. ಇದಕ್ಕೆ ಮುಂದೆ ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾದ ಬಳಿಕ ನಿರ್ದೇಶಕರು ಉತ್ತರಿಸಬಹುದು ಎಂಬ ನಿರೀಕ್ಷೆಯಿದೆ.
* ಸೃಷ್ಟಿ ಮೂಲ ತತ್ವದ ಪ್ರತಿರೂಪದಂತಿರುವ ಕೊಲ್ಲೂರಿನ ಲಿಂಗರೂಪಿ ಅಂಬಿಕೆಯ ಕುರಿತು ಉಲ್ಲೇಖವೇ ಇಲ್ಲ.ಹಿಂಡುಗಾನದ ಅಮ್ಮ ದೇವಿ ಮೂರ್ತಿಯ ಸ್ವರೂಪದ ಬಗ್ಗೆಯೂ ಇಲ್ಲ. ಬಾಲ್ಯದಲ್ಲಿ ಹಿಂಡುಗಾನದಮ್ಮನ ಮುಂದೆ ಬಾಲ ವಿಧವೆ ಮೂಕಿ ಮಾಡುವ ರಂಪಾಟ ಇನ್ನಷ್ಟು ಗಾಢವಾಗಿ ಮೂಡಿಸಬಹುದಾಗಿತ್ತು.
* ಕಾಪಾಲಿಕರು ಹೇಗೆ ಬಂದರು, ಜೈನರು ಹೇಗೆ ಪರ ಮತ ಅವಲಂಬಿಸಿದರು, ಆ ಕಾಲದ ಜನರು ಮಾಡುತ್ತಿದ್ದ ಶಿವಪೂಜೆ, ಆಚರಣೆಗಳ ವಿವಿಧ ಚಿತ್ರಗಳನ್ನು ಅಜ್ಜಿ ಹೇಳುತ್ತಾಳೆ. ಈ ಬಗ್ಗೆ ಹೆಚ್ಚಿನ ದೃಶ್ಯಗಳು ಕಾಣಿಸಿಲ್ಲ.
ಕೆಲವು ದೃಶ್ಯಗಳು ಆಭಾಸವಾಗಿ ತೋರುತ್ತದೆ
* ನಾಗಬನದಲ್ಲಿ ಸುಂದರ ಜೈನಮೂರ್ತಿ ದೊರೆಯುತ್ತದೆ. ಅಜ್ಜಿಯಿಂದ ಅದಕ್ಕೆ ತಕ್ಕಂತೆ ಜೈನಯುಗದ ಚಿತ್ರಣವನ್ನು ಅವರ ಅಹಿಂಸಾ ಪ್ರವೃತ್ತಿಯ ಬಗ್ಗೆ, ಆಚರಣೆ ಬಗ್ಗೆ ವಿವರಣೆ ದೊರೆಯುತ್ತದೆ. ಈ ಬಗ್ಗೆಯೂ ಯಾವ ದೃಶ್ಯವೂ ಇಲ್ಲ.
* ಚಿತ್ರಕ್ಕೆ ಸಂಗೀತ ಪೂರಕವಾಗಿದ್ದರೂ, ಹೆಚ್ಚು ಕಾಡುವಂತಿಲ್ಲ, ಅನಾದಿ ಕಾಲದ ಗುಹೆಗೆ ಒಬ್ಬಂಟಿಯಾಗಿ ಮೂಕಜ್ಜಿಯ ಮೊಮ್ಮಗ ಹೋದಾಗ ದೃಶ್ಯ -ಹಿನ್ನಲೆ ಸಂಗೀತ ನಿರ್ವಹಣೆ ಉತ್ತಮ.
* ಆ ಕಾಲದ ಸೆಟ್ ಹಾಕದೆ, ಉಡುಪಿ ಜಿಲ್ಲೆಯಲ್ಲೆ ಹಳೆ ಮನೆ ಹುಡುಕಿ, ಚಿತ್ರೀಕರಿಸಿದ್ದು ಸರಿ ಆದರೆ, ಸೀನಪ್ಪನ ತೋಟದ ಮನೆ ಯಾಕೋ ಇತ್ತೀಚಿಗೆ ಕಟ್ಟಿದ ಮನೆಯಂತೆ ಇದೆ. ಒಂದು ದೃಶ್ಯದಲ್ಲಿ ಮೂಕಜ್ಜಿ ಹಿಂಬದಿಯಲ್ಲಿ ದ್ವಿಚಕ್ರವಾಹನ ಓಡಾಟ ಕಾಣಿಸುತ್ತದೆ. ಮೂಕಜ್ಜಿ ಹಲ್ಲಿನ ಕ್ಲಿಪ್ ಕೆಲವೊಮ್ಮೆ ಆಭಾಸವಾಗಿ ತೋರುತ್ತದೆ.
ಮೂಕಜ್ಜಿ ಹಾಗೂ ತಿಪ್ಪಜ್ಜಿಯ ನಡುವಿನ ದೃಶ್ಯ ಆಪ್ತವಾಗಿವೆ
* ಮೂಕಜ್ಜಿ ಹಾಗೂ ತಿಪ್ಪಜ್ಜಿಯ ನಡುವಿನ ಅವಿನಾಭಾವ ಸಂಬಂಧ ಹಾಗೂ ಮಾತುಕತೆ ಆಪ್ತವಾಗಿ ಮೂಡಿ ಬಂದಿದೆ. ಬಿ ಜಯಶ್ರೀ ಹಾಗೂ ರಾಜೇಶ್ವರಿ ವರ್ಮಾ ಅವರ ಈ ದೃಶ್ಯದ ತಲ್ಲೀನತೆ ಚಿತ್ರ ಹೈಲೈಟ್ ಎನ್ನಬಹುದು.
* ನಟನೆ ಮಟ್ಟಿಗೆ ಬಿ ಜಯಶ್ರೀ, ಮೊಮ್ಮಗನಾಗಿ ಅರವಿಂದ್ ಕುಪ್ಳಿಕರ್ ಗಮನ ಸೆಳೆಯುತ್ತಾರೆ. ಪಾತ್ರಕ್ಕೆ ತಕ್ಕ ಆಯ್ಕೆ ಎನ್ನಬಹುದು. ಕಾರಂತರ ಕೃತಿಯಲ್ಲಿರುವ ಸಂಭಾಷಣೆಗಳಲ್ಲಿ ಎಷ್ಟು ಬೇಕೋ ಅಷ್ಟು ಸೂಚ್ಯವಾಗಿ ಹಾಗೆ ಬಳಸಿಕೊಳ್ಳಲಾಗಿದೆ.
* ಕಾಲಮಿತಿಯಲ್ಲಿ ಎಲ್ಲವನ್ನೂ ತುರುಕಿ ಜನರ ಮನಸ್ಸಿನಲ್ಲಿ ಯಾವ ಅಂಶವೂ ಉಳಿಯದಂತೆ ಮಾಡುವ ಬದಲು ಸ್ಥೂಲವಾಗಿ ಸೂಕ್ಷ್ಮವಾಗಿ ಹೇಳಬೇಕಾದ್ದನ್ನು ಹೇಳಿ ಮುಗಿಸುವುದು ಜಾಣ್ಮೆಯ ವಿಷಯವಲ್ಲವೇ. ಪ್ರೇಕ್ಷಕರ ತಾಳ್ಮೆ ಕೆದಕದಂತೆ ಆಸಕ್ತಿ ಉಳಿಸಿಕೊಂಡು ಹೋಗುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ.
ನಾಗಿ ಪಾತ್ರ ಹಾಗೂ ಸಂಚಿ ಬಳಕೆ
ನಿರ್ದೇಶಕರ ಅಗತ್ಯಕ್ಕೆ ತಕ್ಕಂತೆ ಸಂಕಲನಕಾರ ಕೆಂಪರಾಜು ಅವರು ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಕೃತಿಯನ್ನು ಓದುವಾಗ ಸಿಗುವ ಕಂಟ್ಯೂನಿಟಿ, ಸಿನಿಮಾದಲ್ಲಿ ಅಲ್ಲಲ್ಲಿ ಮಿಸ್ ಆಗಿದೆ.
* ಸಂಕೀರ್ಣ ಕಥಾಹಂದರವನ್ನು ಸಿನಿಮಾ ಚೌಕಟ್ಟಿಗೆ ಅಳವಡಿಸಿ ಅದನ್ನು ಜನರಿಗೆ ಮುಟ್ಟಿಸುವ ಕೆಲಸ ಅಷ್ಟು ಸುಲಭವಲ್ಲ. ಈ ಮಟ್ಟಿಗೆ ನವ್ಯಚಿತ್ರ ಗೆದ್ದಿದೆ.
* ಮೂಡೂರು, ಪಡೂರು, ನಡೂರುಗಳಲ್ಲಿ ಹಿಂದೆಂದೂ ಕಾಣದಂಥ ಮಳೆಯನ್ನು(ಮಂಜುನಾಥನ ದೇಗುಲದ ಸಂಭ್ರಮದ ಸಂದರ್ಭ) ಜಿ.ಎಸ್ ಭಾಸ್ಕರ್ ಅವರ ಕೆಮೆರಾ ಕಣ್ಣಿನಲ್ಲಿ ಇನ್ನಷ್ಟು ಚೆಂದಗಾಣಿಸಬಹುದಾಗಿತ್ತು.
* ನಾಗಿಯನ್ನು ಅವಳ ಮನೆಗೆ ಸೇರಿಸಲು ಹೋಗುವ ಮೂಕಜ್ಜಿಯ ಮೊಮ್ಮಗಳು ಎಲ್ಲರ ಮನೆ ಗೆಲ್ಲುತ್ತಾಳೆ. ನಾಗಿ ಪಾತ್ರಧಾರಿ, ಆಕೆಯ ಸಂಚಿ ಬಳಕೆ ಸೂಕ್ತವಾಗಿವೆ


Click it and Unblock the Notifications











