Review: ಇಷ್ಟವಾಗುತ್ತೆ 'ನಾನು ಮತ್ತು ಗುಂಡ'ನ ಕಥೆ
ಶಿವರಾಜ್ ಕೆ ಆರ್ ಪೇಟೆ, ಸಂಯುಕ್ತ ಹೊರನಾಡು ಮತ್ತು ಶ್ವಾನ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಾನು ಮತ್ತು ಗುಂಡ' ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ಭಾವನಾತ್ಮಕವಾಗಿ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮನಸ್ಸು ಮುಟ್ಟುವಂತಿದೆ.
ಚಿತ್ರ : ನಾನು ಮತ್ತು ಗುಂಡ
ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮತ್ತು ಸಿಂಬಾ ( ಶ್ವಾನ)
ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
ಸಂಭಾಷಣೆ: ಶರತ್ ಚಕ್ರವರ್ತಿ
ಸಂಗೀತ: ಕಾರ್ತಿಕ್ ಶರ್ಮಾ
ಛಾಯಾಗ್ರಹಣ: ಚಿದಾನಂದ ಹೆಚ್.ಕೆ
ನಿರ್ಮಾಣ: ರಘು ಹಾಸನ್ (Poem Pictures)
ರಿಲೀಸ್: 24-01-2020
ಮನುಷ್ಯನಿಗಿಂತ ನಾಯಿಗೆ ನಿಯತ್ತು ಜಾಸ್ತಿ ಎನ್ನುತ್ತಾರೆ. ಆ ಮಾತನ್ನು ನಿಜ ಎಂದು ತೋರಿಸುವ ಚಿತ್ರ 'ನಾನು ಮತ್ತು ಗುಂಡ'. ಶ್ವಾನಕ್ಕೆ ಒಂದು ಸಮಯ ಊಟ ಹಾಕಿದರೆ, ಆ ಮನೆಯನ್ನು ಮತ್ತು ಮನೆಯ ಯಜಮಾನನನ್ನು ಕಾಯುವ ಉದಾಹರಣೆಗಳು ನೋಡಿದ್ದೀವಿ. ಇಂತಹ ಕಥೆಗಳಿಗೆ ಹಿಡಿದ ಕನ್ನಡಿಯೇ ಈ ಚಿತ್ರ.

ಶಂಕರ ಮತ್ತು ಗುಂಡ (ಶ್ವಾನ) ನ ಕಥೆ ಪ್ರೇಕ್ಷಕರನ್ನು ನಗಿಸುತ್ತೆ, ಅಳಿಸುತ್ತೆ. ಸಂಬಂಧಗಳ ಬೆಲೆ ತಿಳಿಸುತ್ತೆ. ಮನುಷ್ಯ ಪ್ರೀತಿಗಿಂತ ಶ್ವಾನ ಪ್ರೀತಿ ಶ್ರೇಷ್ಠ ಎಂಬ ಮನುಷ್ಯ ಮತ್ತು ಸಾಕು ಪ್ರಾಣಿಯ ನಡುವಿನ ಬಾಂಧವ್ಯದ ಕಥೆಯೇ ನಾನು ಮತ್ತು ಗುಂಡ. ಥಿಯೇಟರ್ ನಿಂದ ಹೊರಬರುವ ವೇಳೆ ಶಂಕರ ಮತ್ತು ಗುಂಡ ಇಬ್ಬರು ಹೀರೋಗಳಾಗಿ ನಿಲ್ಲುತ್ತಾರೆ.
ಅಂದ್ಹಾಗೆ ಇದು ನೈಜ ಘಟನೆಯನ್ನಾಧರಿಸಿದ ಚಿತ್ರ. ಈ ಕಥೆಯಲ್ಲಿ ತಾಜಾತನವಿದೆ. ಸತ್ವವಿದೆ. ಎಲ್ಲಾದಕ್ಕಿಂತ ಹೆಚ್ಚಾಗಿ ಎಮೋಷಿನಲ್ ಅಂಶ ಗಾಢವಾಗಿದೆ. ವಿಶೇಷವಾಗಿ ಪ್ರಾಣಿ ಪ್ರಿಯರಿಗೆ, ಅದರಲ್ಲೂ ನಾಯಿಯನ್ನ ಸಾಕಿರುವ ವ್ಯಕ್ತಿಗಳಿಗೆ ಈ ಸಿನಿಮಾ ಹೃದಯಸ್ಪರ್ಶಿಸುತ್ತೆ.

ರಘುಹಾಸನ್ ಮತ್ತು ಶ್ರೀನಿವಾಸ್ ತಿಮ್ಮಯ್ಯರ ಕಥೆ ಚಿತ್ರಕಥೆ ವಿಶಿಷ್ಠವಾಗಿದೆ. ಶ್ರೀನಿವಾಸ್ ತಿಮ್ಮಯ್ಯ ಚೊಚ್ಚಲ ಚಿತ್ರದಲ್ಲಿ ತಮ್ಮೊಳಗಿನ ಅಷ್ಟು ಸಿನಿಮೋತ್ಸಾಹವನ್ನ ಹೊರಹಾಕಿದ್ದಾರೆ. ತೆರೆ ಮೇಲೆ ಅದು ಕಾಣುತ್ತೆ. ಚಿತ್ರದ ಮುಖ್ಯ ಹೈಲೈಟ್ ಅಂದ್ರೆ ಕಥೆ ಮತ್ತು ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಿಂಬಾ ( ಗುಂಡ) ನ ಅದ್ಭುತ ನಟನೆ. ಶಿವರಾಜ್ ಕೆ.ಆರ್ ಪೇಟೆ ಮತ್ತು ಸಿಂಬಾ ನಡುವಿನ ಸಂಬಂಧ ಅದ್ಭುತ ಅನ್ನಿಸುತ್ತೆ.
ಈ ವೀಕೆಂಡ್ ನಲ್ಲಿ ಒಂದೊಳ್ಳೆ ಕನ್ನಡ ಸಿನಿಮಾ ನೋಡಬೇಕು ಎಂದುಕೊಂಡವರಿಗೆ 'ನಾನು ಮತ್ತು ಗುಂಡ' ಉತ್ತಮ ಆಯ್ಕೆ.


Click it and Unblock the Notifications











