'ನಾಗರಹಾವು' ಇದು ವಿಮರ್ಶೆಗಳನ್ನು ಮೀರಿದ ಅದ್ಬುತ ಅನುಭವ
Recommended Video

ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ, ಅವುಗಳಲ್ಲಿ ಬಹುತೇಕ ಸಿನಿಮಾಗಳ ಫಸ್ಟ್ ಡೇ ಫಸ್ಟ್ ಶೋ ಗೆನೇ ಚಿತ್ರಮಂದಿರದಲ್ಲಿ ಜನ ಇರುವುದಿಲ್ಲ. ಆದರೆ, ಇಂದು ನರ್ತಕಿ ಚಿತ್ರಮಂದಿರದ ಮುಂದೆ ಹಬ್ಬ ನಡೆಯುತ್ತಿದೆ. ಅದಕ್ಕೆ ಕಾರಣ 45 ವರ್ಷಗಳ ಹಿಂದಿನ ಸಿನಿಮಾ 'ನಾಗರಹಾವು'.
ಕೆಲವು ಸಿನಿಮಾಗಳು ವಿಮರ್ಶೆಗಳನ್ನು ಮೀರಿ ನಿಂತಿರುತ್ತದೆ. ಆ ರೀತಿ ಇರುವ ಸಿನಿಮಾ 'ನಾಗರಹಾವು'. ಇಲ್ಲಿ ಅದು ಸರಿ ಇದೆ.. ಇದು ಸರಿ ಇಲ್ಲ.. ಎಂದು ಹೇಳುವುದು ಬಹಳ ಕಷ್ಟ. ರಿಯಲ್ ಸ್ಟಾರ್ ಉಪೇಂದ್ರ ಅವರೇ ಹೇಳುವ ಹಾಗೆ ಚಂದ್ರನಲ್ಲಿ ಬೇಕಾದರೂ ಕಪ್ಪು ಕಲೆ ಇರಬಹುದೇನೋ ಆದರೆ, 'ನಾಗರಹಾವು' ಸಿನಿಮಾದಲ್ಲಿ ಒಂದು ತಪ್ಪುಗಳು ಇಲ್ಲ.
ಈಶ್ವರಿ ಸಂಸ್ಥೆಯ ತಮ್ಮ ಬ್ಯಾನರ್ ನಲ್ಲಿ ಬಂದ ಈ ಹೆಮ್ಮೆಯ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಿದೆ. ಇಂತಹ ಶ್ರೇಷ್ಟ ಸಿನಿಮಾವನ್ನು ಮತ್ತೆ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದೆ. ಅದೇ ರೀತಿ ಹೊಸ ತಂತ್ರಜ್ಙಾನದಲ್ಲಿ ಬಂದ ಸಿನಿಮಾವನ್ನು ಅಭಿಮಾನಿಗಳು ಅಪ್ಪಿಕೊಂಡಿದ್ದಾರೆ. ''ಇದು ಬರೀ ಹಾವಲ್ಲ... ನಾಗರಹಾವು'' ಎಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಮುಂದೆ ಓದಿ...
ಹೊಸ ತಂತ್ರಜ್ಙಾನದಲ್ಲಿ ರಾಮಾಚಾರಿ ಅಬ್ಬರ
'ನಾಗರಹಾವು' ಸಿನಿಮಾ ಹೊಸ ತಂತ್ರಜ್ಙಾನದಲ್ಲಿ ಇಂದು ಮರು ಬಿಡುಗಡೆಯಾಗಿದೆ. 7.1 ಸಿನಿಮಾ ಸೋಪ್ಕ್ ನಲ್ಲಿ ರಾಮಾಚಾರಿಯ ಅಬ್ಬರ ಬಲು ಜೋರಾಗಿದೆ. ವಿಡಿಯೋ ಹಾಗೂ ಆಡಿಯೋ ಕ್ವಾಲಿಟಿ ಸಿನಿಮಾಗೆ ಹೊಸ ಮೆರುಗು ನೀಡಿದೆ. ಚಿತ್ರದ ಯಾವ ದೃಶ್ಯವಾಗಲಿ ಬದಲಾಗಿಲ್ಲ. ಟೈಟಲ್ ಕಾರ್ಡ್ ನಿಂದ ಶುಭಂ ವರೆಗೆ ಹಳೆ ಸಿನಿಮಾದಲ್ಲಿ ಇರುವ ಯಾವ ಅಂಶಗಳು ಇವೆ. ಚಿತ್ರದ ಪ್ರತಿ ಫ್ರೇಮ್ ಗೆ ಯಾವುದೇ ಲೋಪ ಬಾರದಂತೆ ನೋಡಿಕೊಳ್ಳಲಾಗಿದೆ.
ಹಾಡುಗಳು ಇನ್ನಷ್ಟು ಇಂಪಾಗಿವೆ
'ನಾಗರಹಾವು' ಸಿನಿಮಾದ ಎಲ್ಲ ಹಾಡುಗಳು ಅಂದಿಗೂ ಹಿಟ್, ಇಂದಿಗೂ ಹಿಟ್. ಈ ರೀತಿಯ ಹಾಡುಗಳು ಈಗ ಇನ್ನಷ್ಟು ಇಂಪಾಗಿ ಕೇಳಿಸುತ್ತದೆ. ಗೌತಮ್ ಶ್ರೀವತ್ಸ ಮತ್ತು ಅವರ ತಂಡದ ಶ್ರಮಕ್ಕೆ ಬೆಲೆ ಸಿಕ್ಕಿದೆ. ಸಂಗೀತ, ಹಾಗೂ ಹಿನ್ನಲೆ ಸಂಗೀತ ಸಿನಿಮಾದ ಅತಿ ದೊಡ್ಡ ಶಕ್ತಿಯಾಗಿದೆ. ಅದರಲ್ಲಿಯೂ 'ಹಾವಿನ ದ್ವೇಶ..' ಹಾಡು ಬಂದಾಗ ಎಲ್ಲರಲ್ಲಿಯೂ ರೋಮಾಂಚನ ಉಂಟಾಗುತ್ತದೆ.
ಮತ್ತಷ್ಟು ಸುಂದರವಾದ ಪಾತ್ರಗಳು
45 ವರ್ಷದ ಹಿಂದೆ ಬಿಡುಗಡೆಯಾಗಿದ್ದುರೂ 'ನಾಗರಹಾವು' ಇಂದಿಗೂ ತನ್ನ ಘನತೆಯನ್ನು ಉಳಿಸಿಕೊಂಡಿದೆ. ಇಡೀ ಸಿನಿಮಾ ಈಗ ನೋಡಿದರೂ ಹೊಸ ಅನುಭವ ನೀಡುತ್ತಿದೆ. ರಾಮಾಚಾರಿ, ಅಲಮೇಲು, ಚಾಮಯ್ಯ ಮೇಷ್ಟ್ರು, ಜಲೀಲ, ಮಾರ್ಗರೇಟ್ ಹೀಗೆ ಪ್ರತಿ ಪಾತ್ರಗಳು ಮತ್ತಷ್ಟು ಸುಂದರವಾಗಿ ತೆರೆ ಮೇಲೆ ಕಾಣುತ್ತಿವೆ.
ಎಲ್ಲಿ ನೋಡಿದರು ಅಭಿಮಾನ
ಸಿನಿಮಾ ನೋಡಲು ಚಿತ್ರಮಂದಿಕ್ಕೆ ಹೋದವರಿಗೆ ಕಂಡಿದ್ದು 'ಅಭಿಮಾನ'. ಇಡೀ ಚಿತ್ರಮಂದಿರದ ತುಂಬ ಅಭಿಮಾನ ತುಂಬಿತ್ತು. ವಿಷ್ಣುವರ್ಧನ್ ಅಭಿಮಾನಿಗಳ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಪರದೆ ಮೇಲೆ ರಾಮಾಚಾರಿ ಮೂಡುವ ಮುಂಚೆಯಿಂದ ಶುರುವಾದ ಜೈಕಾರ ಸಿನಿಮಾ ಮುಗಿದರು ನಿಲ್ಲಲಿಲ್ಲ. ಕೆಲವರು ಸೀಟ್ ಇಲ್ಲದೆ ಮೆಟ್ಟಿಲ ಮೇಲೆ ಕೂತು ಸಿನಿಮಾ ನೋಡಿದರೆ, ಇನ್ನೂ ಕೆಲವರು ನಿಂತೇ ಇಡೀ ಸಿನಿಮಾವನ್ನು ಕಣ್ಣು ತುಂಬಿಕೊಂಡರು.
ಸಿನಿಮಾ ನೋಡಲು ಬಂದ ಚಿತ್ರರಂಗ ಗಣ್ಯರು
ಸಿನಿಮಾವನ್ನು ನೋಡಲು ಬರೀ ಅಭಿಮಾನಿಗಳು ಮಾತ್ರವಲ್ಲ ಚಿತ್ರರಂಗದ ಅನೇಕರು ಬಂದಿದ್ದರು. ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ಸೂರಪ್ಪ ಬಾಬು, ನೃತ್ಯ ನಿರ್ದೇಶಕ ಇಮ್ರಾನ್, ನಿರ್ದೇಶಕ ರಘುರಾಮ್ ಸೇರಿದಂತೆ ಅನೇಕರು ಸಿನಿಮಾವನ್ನು ವೀಕ್ಷಿಸಿದರು.
ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಶುರುವಾಗಿತ್ತು
'ನಾಗರಹಾವು' ಸಿನಿಮಾದ ಕ್ರೇಜ್ ಇಂದಿಗೂ ಕರಗಿಲ್ಲ. ಇಂದು ಕರ್ನಾಟಕದ ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಶುರು ಆಗಿತ್ತು. ನರ್ತಕಿ ಚಿತ್ರಮಂದಿರದಲ್ಲಿ ಹಿಂದಿನ ದಿನವೇ ಮೊದಲ ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು.
ಸಂದೇಶಗಳ ಸರಮಾಲೆ
'ನಾಗರಹಾವು' ಮನರಂಜನೆಗೆ ಸೀಮಿತವಾಗದೆ ಅನೇಕ ಸಂದೇಶಗಳು ಇದ್ದ ಸಿನಿಮಾ. ಅದರಲ್ಲಿ ಬರುವ ಒಂದು ಸಂಭಾಷಣೆ ಹೀಗಿದೆ. ''ಎರಡು ಹೃದಯ ಒಂದಾಗುತ್ತದೆ ಅಂದರೆ ಎರಡು ಧರ್ಮ ಒಂದಾಗಬೇಕು. ಎರಡು ದೇಶ ಒಂದಾಗುತ್ತಿದೆ ಅಂದರೆ, ಎರಡು ದೇಶದ ಜನ ಒಂದಾಗಬೇಕು.''. ಈ ರೀತಿ ಅನೇಕ ಒಳ್ಳೆ ಒಳ್ಳೆಯ ವಿಷಯಗಳು ಸಿನಿಮಾದ ಶ್ರೇಷ್ಟತೆಯನ್ನು ಎತ್ತಿ ಹಿಡಿದಿದೆ.
ಪುಟ್ಟಣ್ಣನ ಕಲಾಕೃತಿ
'ನಾಗರಹಾವು' ಎಂಬುದು ಪುಟ್ಟಣ್ಣ ಕಣಗಾಲ್ ಅವರ ಸೃಷ್ಟಿ ಮಾಡಿದ ಅದ್ಬುತ ಕಲಾಕೃತಿ. ಗುರು - ಶಿಷ್ಯನ ಸಂಬಂಧ, ಜಾತಿ, ಧರ್ಮ, ಪ್ರೀತಿ, ಪ್ರೇಮ, ಹಠ, ದ್ವೇಶ, ವೇಷ್ಯೆ ಹೀಗೆ ಸಾಕಷ್ಟು ಅಂಶಗಳನ್ನು ಹೊಂದಿರುವ ಈ ಸಿನಿಮಾ ತುಂಬಿದ ಕೊಡ.
ಮತ್ತೆ ಮತ್ತೆ ನೋಡಿ
ಇದು ಒಂದು ಬಾರಿ ನೋಡಿ ಬಿಡುವ ಸಿನಿಮಾ ಅಲ್ಲ. ಮತ್ತೊಮ್ಮೆ, ಇನ್ನೊಮ್ಮೆ, ಮಗದೊಮ್ಮೆ ನೋಡುವ ಸಿನಿಮಾ. ಈ ಹಿಂದೆ ಅನೇಕ ಬಾರಿ 'ನಾಗರಹಾವು' ಸಿನಿಮಾ ನೋಡಿದ್ದರು, ಈಗ ಬಂದ ಹೊಸ ತಂತ್ರಜ್ಙಾನದ ಚಿತ್ರವನ್ನು ನೋಡಿ. ಏಕೆಂದರೆ, 'ನಾಗರಹಾವು' ಒಂದು ಸಿನಿಮಾ ಎನ್ನುವುದಕ್ಕಿಂತ ಇದೊಂದು ಅನುಭವ. ಅದನ್ನು ಅನುಭವಿಸಿದವರಿಗೆ ಮಾತ್ರ ಅವರ ರುಚಿ ಗೊತ್ತಾಗುತ್ತದೆ.


Click it and Unblock the Notifications











