Pailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾ
''ಬಲ ಇದೆ ಅಂತ ಹೊಡೆದಾಡುವವನು ರೌಡಿ. ಆದ್ರೆ, ಬಲವಾದ ಕಾರಣಕ್ಕೆ ಹೊಡೆದಾಡುವನು ಈ ಪೈಲ್ವಾನ''
Recommended Video
'ಪೈಲ್ವಾನ್' ಕ್ರೀಡಾ ಹಿನ್ನಲೆಯಲ್ಲಿ ಬಂದ ಪಕ್ಕಾ ಕಮರ್ಷಿಯಲ್ ಸಿನಿಮಾ. ಮನರಂಜನೆ ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವವರಿಗೆ ಸಿನಿಮಾ ಇಷ್ಟ ಆಗುತ್ತದೆ. ಸುದೀಪ್ ಅಭಿಮಾನಿಗಳಿಗೆ ಪೈಲ್ವಾನ್ ಹಬ್ಬದಂತೆ ಇದೆ. ಕೃಷ್ಣ ಎಂಬ ಕುಸ್ತಿ ಪೈಲ್ವಾನನ ಸಾಧನೆಯ ಕಥೆಯೇ ಈ ಚಿತ್ರ. ಅದ್ದೂರಿಯಾಗಿ ನಿರ್ಮಾಣವಾದ ಶ್ರೀಮಂತಿಕೆಯ ಸಿನಿಮಾ. ಇಲ್ಲಿ ಸಾಹಸವೂ ಇದೆ. ಸಂಬಂಧದ ಮಹತ್ವವೂ ಇದೆ.
ಸಣ್ಣ ವಯಸ್ಸಿನಲ್ಲಿ ಅಖಾಡಕ್ಕೆ ಇಳಿಯುವ ಕೃಷ್ಣ
ಸಣ್ಣ ವಯಸ್ಸಿನಲ್ಲಿಯೇ ಅನಾಥನಾಗಿರುವ ಕೃಷ್ಣ (ಸುದೀಪ್)ನನ್ನು ಸರ್ಕಾರ್ (ಸುನೀಲ್ ಶೆಟ್ಟಿ) ಮಗನ ರೀತಿ ಬೆಳೆಸುತ್ತಾನೆ. ಸಣ್ಣ ವಯಸ್ಸಿನಲ್ಲಿಯೇ ಗರಡಿ ಮನೆ ಪ್ರವೇಶ ಮಾಡುವ ಕೃಷ್ಣ ರಾಷ್ಟ್ರೀಯ ಮಟ್ಟದ ಬಾಕ್ಸರ್ ಸ್ಪರ್ಧೆ ಗೆದ್ದು ಚಾಂಪಿಯನ್ ಆಗಬೇಕು ಎನ್ನುವುದು ಇವರಿಬ್ಬರ ಆಸೆ. ಹೀಗೆ ಶುರುವಾಗುವ ಕಥೆಗೆ ಒಂದು ತಿರುವು ಸಿಗುತ್ತದೆ.
ಇನ್ಮುಂದೆ ಕುಸ್ತಿ ಮಾಡಬಾರದು
''ಏನಾದ್ರೂ ಮಾಡಲಿ ಆದ್ರೆ, ಇನ್ಮುಂದೆ ಕುಸ್ತಿ ಮಾಡಬಾರದು.'' ಇದು ಕುಸ್ತಿ ಕಲಿಸಿಕೊಟ್ಟ ಸರ್ಕಾರ್ ಮಗನಿಗೆ ಹೇಳುವ ಮಾತು. ಸರ್ಕಾರ್ ಹಾಗೂ ಕುಸ್ತಿ ಎರಡು ಕೃಷ್ಣನ ಕಣ್ಣುಗಳು ಇದ್ದಂತೆ. ಈಗ ಸರ್ಕಾರ್ ಮಾತಿಗಾಗಿ ಕೃಷ್ಣ ಕುಸ್ತಿ ಬಿಡಬೇಕಾಗುತ್ತದೆ. ಹೀಗಿರುವಾಗ, ಕೃಷ್ಣ ನ್ಯಾಷನಲ್ ಚಾಂಪಿಯನ್ ಆಗ್ತಾನಾ? ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶ.
ಕೃಷ್ಣನ ಸೇರುವ ರುಕ್ಮಿಣಿ
ಕೃಷ್ಣ ಎಂದ ಮೇಲೆ ರುಕ್ಮಿಣಿ ಇರಲೆಬೇಕು. ಇಲ್ಲಿಯೂ ಕೃಷ್ಣನ ಬದುಕಿಗೆ ರುಕ್ಮಿಣಿ ಬರುತ್ತಾಳೆ. ಸೀತಾ ಮಾತೆ ಅವತಾರದಲ್ಲಿ ನೇರ ಪೈಲ್ವಾನನ ಹೃದಯಕ್ಕೆ ಲಗ್ಗೆ ಇಡುತ್ತಾಳೆ. ಸುದೀಪ್ ಮತ್ತು ಆಕಾಂಕ್ಷ ಸಿಂಗ್ ಕಾಂಬಿನೇಶನ್ ತುಂಬ ಚೆನ್ನಾಗಿ ಕಾಣುತ್ತದೆ. ಇಬ್ಬರು ತೆರೆ ಮೇಲೆ ಸುಂದರವಾಗಿ ಕಾಣುತ್ತಾರೆ. ಎರಡೂ ಪಾತ್ರಗಳಿಗೆ ಎರಡ್ಮೂರು ಶೇಡ್ ಇದೆ.
ಮೂರು ಶೈಲಿಯ ಪಾತ್ರದಲ್ಲಿ ಸುದೀಪ್
ಒಬ್ಬ ಕುಸ್ತಿಪಟುವಾಗಿ, ನಂತರ ತಂದೆಯಾಗಿ, ಕೊನೆಗೆ ಬಾಕ್ಸರ್ ಆಗಿ ಸುದೀಪ್ ಮೂರು ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ದೃಶ್ಯಗಳು, ಭಾವನಾತ್ಮಕ ದೃಶ್ಯಗಳು, ಪ್ರಣಯದ ದೃಶ್ಯಗಳು, ಕುಸ್ತಿ, ಬಾಕ್ಸಿಂಗ್ ದೃಶ್ಯಗಳು ಹೀಗೆ ಎಲ್ಲ ಕಡೆಯೂ ಸುದೀಪ್ ತಮ್ಮ ತಾಕತ್ತು ಪ್ರದರ್ಶನ ಮಾಡಿದ್ದಾರೆ. ಸುದೀಪ್ ಪಾತ್ರದ ತಯಾರಿ, ಅವರ ಶ್ರಮ ಮೆಚ್ಚಬೇಕಾದ್ದದು.
ಸರ್ಕಾರ್ ಪಾತ್ರಕ್ಕೆ ತೂಕ ಇದೆ
ನಟ ಸುನೀಲ್ ಶೆಟ್ಟಿ ನಿರ್ವಹಿಸಿರುವ ಸರ್ಕಾರ್ ಪಾತ್ರಕ್ಕೆ ತೂಕ ಇದೆ. ಸುನೀಲ್ ಶೆಟ್ಟಿ ಪಾತ್ರ ಜನರಿಗೂ ಇಷ್ಟ ಆಗುತ್ತದೆ. ಆದರೆ, ಸುನೀಲ್ ಶೆಟ್ಟಿ ತಮ್ಮ ನಟನೆಯಲ್ಲಿ ವಯಸ್ಸಿನ ಬದಲಾವಣೆ ತೋರಿಸಬೇಕಾಗಿತ್ತು. ಸುನೀಲ್ ಶೆಟ್ಟಿ ಮತ್ತು ಸುದೀಪ್ ಕಾಂಬಿನೇಶನ್ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು.
ಪ್ಲಸ್ ಪಾಯಿಂಟ್ ಗಳು
ಸುದೀಪ್ ಹಾಗೂ ಆಕಾಂಕ್ಷ ನಟನೆ
ಚಿತ್ರಕಥೆ
ಅರ್ಜುನ್ ಜನ್ಯ ಹಾಡುಗಳು
ಭಾವನಾತ್ಮಕ ದೃಶ್ಯಗಳು
ಮೈನಸ್ ಪಾಯಿಂಟ್ ಗಳು
ಅಪ್ಪಣ್ಣ ನಟನೆ ಚೆನ್ನಾಗಿದೆ ಆದ್ರೆ, ಕಾಮಿಡಿ ಪಂಚ್ ಆಗಿಲ್ಲ..
ದೊರೆಸಾನಿ ಹಾಡು ಚಿತ್ರದಲ್ಲಿ ಪೂರ್ತಿ ಇಲ್ಲ
ಫಸ್ಟ್ ಹಾಫ್ ಗಿಂತ ಸೆಕೆಂಡ್ ಹಾಫ್ ಚೆನ್ನಾಗಿದೆ
ಎಲ್ಲ ಪಾತ್ರಗಳ ನಟನೆ ಚೆನ್ನಾಗಿದೆ
ಸುದೀಪ್, ಆಕಾಂಕ್ಷ, ಸುನೀಲ್ ಶೆಟ್ಟಿ ಬಿಟ್ಟು ಅನೇಕ ಪಾತ್ರಗಳು ಸಿನಿಮಾದಲ್ಲಿ ಇವೆ. ಅಪ್ಪಣ್ಣ ನಗಿಸದೆ ಇದ್ದರೂ, ಪಾತ್ರದ ನಿರ್ವಹಣೆ ಚೆನ್ನಾಗಿ ಮಾಡಿದ್ದಾರೆ. ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್, ಸುಶಾತ್ ಸಿಂಗ್, ಅವಿನಾಶ್ ಪಾತ್ರಗಳು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ.
ಸುದೀಪ್ ಶ್ರಮ, ನಿರ್ದೇಶಕರ ಪರಿಶ್ರಮಕ್ಕೆ ಚಪ್ಪಾಳೆ
ಸುದೀಪ್ ಶ್ರಮ, ನಿರ್ದೇಶಕರ ಪರಿಶ್ರಮಕ್ಕೆ ಚಪ್ಪಾಳೆ ಹೊಡೆಯಲೇ ಬೇಕು. ಇಂತಹ ದೊಡ್ಡ ಸಿನಿಮಾವನ್ನು ನಿರ್ದೇಶನ ಹಾಗೂ ನಿರ್ಮಾಣವನ್ನು ತುಂಬ ಜವಾಬ್ದಾರಿಯುತವಾಗಿ ಕೃಷ್ಣ ಮಾಡಿದ್ದಾರೆ. ಕ್ರೀಡಾ ಸ್ಫೂರ್ತಿ, ಭಾವನಾತ್ಮಕ ಏಳೆ, ಒಳ್ಳೆಯ ಹಾಡುಗಳು, ಒಳ್ಳೆಯ ಫೈಟ್ ಗಳು ಇರುವ ಚಿತ್ರ ಟಿಕೆಟ್ ಪಡೆದು ಹೋದ ಪ್ರೇಕ್ಷಕನಿಗೆ ಮೋಸ ಮಾಡುವುದಿಲ್ಲ.


Click it and Unblock the Notifications











