Panchatantra Review : ಅತ್ಲಾಗೆ ಹುಡುಗರು.. ಇತ್ಲಾಗೆ ಮುದುಕರು..
'ಪಂಚತಂತ್ರ' ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇಟ್ಟು ಚಿತ್ರಮಂದಿರಕ್ಕೆ ಹೋದರೆ ಕೊಂಚ ನಿರಾಸೆ ಆಗಬಹುದು. ಇಲ್ಲಿ ಸಿಂಪಲ್ ಕಥೆಯನ್ನು, ಅಷ್ಟೇ ಸಿಂಪಲ್ ಆಗಿ ಭಟ್ಟರು ಹೇಳಿದ್ದಾರೆ. ಆಮೆ, ಮೊಲದ ದಾರಿಯಲ್ಲಿ ಚೂರು ಬೋರಾಗಬಹುದು. ಆದರೆ, ಎಂದಿನಂತೆ ಭಟ್ಟರು ಮನರಂಜನೆಗೆ ಮೋಸ ಮಾಡಿಲ್ಲ. ಕಾಮಿಡಿ ಹಾಗೂ ಡೈಲಾಗ್ ಗಳು ಸಿನಿಮಾದ ದೊಡ್ಡ ಪ್ಲಾಸ್ ಪಾಯಿಂಟ್.
ಆಮೆ ಮೊಲದ ಒನ್ ಲೈನ್ ಸ್ಟೋರಿ
ಭಟ್ಟರು ಈ ಸಿನಿಮಾದಲ್ಲಿ ಮೊದಲೇ ಕಥೆ ಹೇಳಿ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆದಿದ್ದರು. ಆ ಕಾರಣಕ್ಕೋ ಏನೋ ಕಥೆಯಲ್ಲಿ ಅಂತಹ ವಿಶೇಷತೆ ಏನು ಇಲ್ಲ. ಪಂಚತಂತ್ರದ ಆಮೆ ಮೊಲದ ಕಥೆಗೆ ಸಿನಿಮಾ ರೂಪ ನೀಡಿದ್ದಾರೆ. ಒಂದು ಜಾಗಕ್ಕಾಗಿ ಮುದುಕರು ಮತ್ತು ಹುಡುಗರ ನಡುವೆ ನಡೆಯುವ ರೋಚಕ ಕದನವೇ ಸಿನಿಮಾದ ಕಥೆ. ಈ ಕದನ ಕಾರ್ ರೇಸ್ ರೂಪದಲ್ಲಿದೆ.
ಮುದುಕರು V/S ಹುಡುಗರು
ಒಬ್ಬ ಡಾನ್ ಗೆ ಸೇರಿದ ಒಂದು ಜಾಗ ಇರುತ್ತದೆ. ಆ ಜಾಗದಲ್ಲಿ ಒಂದು ಕಡೆ ವಯಸ್ಸಾದವರ ಗುಂಪು ಮತ್ತೊಂದು ಕಡೆ ಹುಡುಗರ ಗ್ಯಾಂಗ್ ವಾಸ ಮಾಡುತ್ತಿರುತ್ತಾರೆ. ಆ ಜಾಗ ಈ ಇಬ್ಬರಲ್ಲಿ ಯಾರಿಗೆ ಸೇರಬೇಕು ಎನ್ನುವುದು ಕೋರ್ಟ್ ನಲ್ಲಿ ತೀರ್ಮಾನ ಆಗುವುದೇ ಇಲ್ಲ. ಕಾರ್ ರೇಸ್ ಮೂಲಕ ತಮ್ಮ ಜಾಗದ ಸಮಸ್ಯೆ ಬಗೆ ಹರಿಕೊಳ್ಳುವ ನಿರ್ಧಾರ ಆಗುತ್ತದೆ. ಸಿನಿಮಾದ ಮಧ್ಯಂತರಕ್ಕೆ ಸರಿಯಾಗಿ ಕಾರ್ ರೇಸ್ ಶುರು ಆಗುತ್ತದೆ. ಇದರಲ್ಲಿ ಪಾದರಸದಂತಹ ಹುಡುಗರು ಗೆಲ್ಲುತ್ತಾರೋ ಅಥವಾ ಜೀವನರಸ ಹೊಂದಿರುವ ಮುದಕರು ಗೆಲ್ಲುತ್ತಾರೋ ಎನ್ನುವುದಕ್ಕೆ ಉತ್ತರ ಸಿನಿಮಾದಲ್ಲಿದೆ.
ಎಮೋಷನ್ ದೃಶ್ಯಗಳ ಕೊರತೆ
ಇಂದಿನ ಕಾಲದಲ್ಲಿ ದೊಡ್ಡ ಯುದ್ಧ ಅಂದರೆ ಅದು ಜನರೇಶನ್ ಯುದ್ಧ ಎಂದು ಹೇಳುವ ಭಟ್ಟರು, ಅದೇ ವಿಷಯದ ಮೇಲೆ ಸಿನಿಮಾ ಮಾಡಿದ್ದಾರೆ. ಕಾರ್ ರೇಸ್ ಓಟದ ಮೂಲಕ ಬದುಕಿನ ಪಾಠ ಮಾಡಿದ್ದಾರೆ. ಸಿನಿಮಾದಲ್ಲಿ ಒಂದಷ್ಟು ಎಮೋಷನ್ಸ್ ಇದ್ದಿದ್ದರೆ ಸಿನಿಮಾ ಇನ್ನಷ್ಟು ಆಪ್ತ ಆಗುತ್ತಿತ್ತು. ಕೆಲವು ಭಾವನಾತ್ಮಕ ದೃಶ್ಯಗಳು ಇದ್ದರೂ ಅದರ ತೀವ್ರತೆ ಕಾಣುವುದಿಲ್ಲ.
ತುಂಟ ಭಟ್ಟರ, ತುಂಟ ಸಿನಿಮಾ
ಈ ಸಿನಿಮಾ ಯೋಗರಾಜ್ ಭಟ್ಟರ ಸ್ಟೈಲ್ ನಲ್ಲಿ ಇದೆ. ತುಂಟ ಭಟ್ಟರು ತಮ್ಮ ತುಂಟ ತನದಲ್ಲಿಯೇ ಸಿನಿಮಾವನ್ನು ಮಾಡಿದ್ದಾರೆ. ಡೈಲಾಗ್ ಹಾಗೂ ಕಾಮಿಡಿಯಲ್ಲಿ ಅವರ ಶೈಲಿ ಹೆಚ್ಚು ಇಷ್ಟ ಆಗುತ್ತದೆ. ಇಡೀ ಸಿನಿಮಾದ ಪಲಿತಾಂಶ ಓಕೆ ಓಕೆ ಅನಿಸಿಕೊಳ್ಳುತ್ತದೆಯೇ ಹೊರತು ಫುಲ್ ಮಾರ್ಕ್ ಪಡೆಯುವುದಿಲ್ಲ.
ರಂಗಾಯಣ ರಘು ಒನ್ ಮ್ಯಾನ್ ಶೋ
ಸಿನಿಮಾದ ನಿಜವಾದ ಹೀರೋ ರಂಗಾಯಣ ರಘು. ಅವರು ತಮ್ಮ ಪ್ರತಿ ಡೈಲಾಗ್ ನಲ್ಲಿ ಕೂಡ ನಗಿಸುತ್ತಾರೆ. ಅವರ ನಟನೆ, ಮ್ಯಾನರಿಸಮ್, ಡೈಲಾಗ್ ಹೇಳುವ ಶೈಲಿ ಅವರ ಅನುಭವ ಸಿನಿಮಾಗೆ ದೊಡ್ಡ ಶಕ್ತಿ ತುಂಬಿದೆ. ಕಾಂಪ್ಲೆಕ್ಸ್ ರಂಗಣ್ಣ ಸಿನಿಮಾದ ತುಂಬ ಮಿಂಚಿದ್ದಾರೆ.
ಕಾರ್ತಿಕ್, ಸಾಹಿತ್ಯ, ಅರ್ಥ
ಸಿನಿಮಾದ ಪ್ರಮುಖ ಪಾತ್ರಗಳಾದ ಕಾರ್ತಿಕ್, ಸಾಹಿತ್ಯ, ಅರ್ಥ ಮೂರು ಪಾತ್ರಗಳು ಚೆನ್ನಾಗಿವೆ. ಮೂರೂ ಕಲಾವಿದರು ತಮ್ಮ ತಮ್ಮ ಶೈಲಿಯಲ್ಲಿ ಗಮನ ಸೆಳೆಯುತ್ತಾರೆ. ಕಾರ್ತಿಕ್ ಲವಲವಿಕೆ ನೋಡುಗರ ಮೆಚ್ಚುಗೆ ಪಡೆಯುತ್ತದೆ. ಸಾಹಿತ್ಯ ತಮ್ಮ ಸೌಂದರ್ಯ ಹಾಗೂ ನಟನೆಯಿಂದ ಇಷ್ಟ ಆಗುತ್ತಾರೆ. ಅರ್ಥ ಗ್ಲಾಮರ್ ಗೆ ಅರ್ಥ ನೀಡಿದ್ದಾರೆ. ಉಳಿದ ಎಲ್ಲ ಪಾತ್ರಗಳು ಚಿಕ್ಕದಾಗಿ ಚೊಕ್ಕದಾಗಿವೆ.
ಸಂಗೀತ, ಸಂಭಾಷಣೆ, ಕ್ಯಾಮರಾ, ಎಡಿಟಿಂಗ್
ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಂಭಾಷಣೆ, ಸುಜ್ಞಾನ್ ಕ್ಯಾಮರಾ ವರ್ಕ್, ಎಡಿಟಿರ್ ಮಧು ಚುರುಕುತನದ ಕೆಲಸ ಸಿನಿಮಾ ಗೆಲುವಿಗೆ ಕಾರಣ ಆಗುವ ಅಂಶಗಳು. ಉಳಿದಂತೆ, ಎಲ್ಲ ಹಾಡುಗಳು ಇಷ್ಟ ಆಗುತ್ತದೆ. ಭಟ್ಟರು ಮತ್ತೆ ಡೈಲಾಗ್ ಮೂಲಕ ಕಿಕ್ ನೀಡಿದ್ದಾರೆ. ಕಾರ್ ರೇಸ್ ಅನ್ನು ರೋಚಕವಾಗಿ ಸುಜ್ಞಾನ್ ಸೆರೆ ಹಿಡಿದಿದ್ದಾರೆ.
ಒಂದು ಬಾರಿ ನೋಡಬಹುದು
'ಪಂಚತಂತ್ರ' ಅಡ್ಡಿ ಇಲ್ಲದೆ ಒಂದು ಬಾರಿ ನೋಡಬಹುದಾದ ಸಿನಿಮಾ. ಚಿತ್ರದ ಕಥೆ ಹಾಗೂ ನಿರೂಪಣೆಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ, ನೋಡಿದರೆ ಇಷ್ಟ ಆಗುತ್ತದೆ. ಕಾಮಿಡಿ ಹಾಗೂ ಡೈಲಾಗ್ ಗಳೇ ಇಲ್ಲಿ ಪ್ರಧಾನವಾಗಿವೆ. ಈ ಎರಡು ಕಾರಣಕ್ಕೆ ಸಿನಿಮಾವನ್ನು ಒಪ್ಪಿಕೊಳ್ಳಬಹದು, ಹೆಚ್ಚು ಇಷ್ಟ ಆದರೆ ಅಪ್ಪಿಕೊಳ್ಳಬಹುದು.


Click it and Unblock the Notifications











