Ustaad Bhagat Singh Review: ಹಳಸಿದ ಕಥೆಗೆ ಅದೇ ಮಸಾಲೆ.. ಹೊಸ ಒಗ್ಗರಣೆ
ಆಂಧ್ರ ಡಿಸಿಎಂ ಪಟ್ಟಕ್ಕೇರಿದ ಪವನ್ ಕಲ್ಯಾಣ್ ಸಿನಿಮಾಗಳಿಂದ ಅಂತರ ಹಾಯ್ದುಕೊಂಡಿದ್ದಾರೆ. ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಅಭಿಮಾನಿಗಳನ್ನು ತೃಪ್ತಿಪಡಿಸಲು ಹಿಂದೆ ಶುರು ಮಾಡಿ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕೆ ಕೊನೆ ಸೇರ್ಪಣೆ 'ಉಸ್ತಾದ್ ಭಗತ್ ಸಿಂಗ್'.
'ಗಬ್ಬರ್ ಸಿಂಗ್' ಸಿನಿಮಾ ನಿರ್ದೇಶಿಸಿ ಗೆದ್ದಿ ಹರೀಶ್ ಶಂಕರ್ ಮತ್ತೊಮ್ಮೆ ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡಿದಾಗಲೇ ಕುತೂಹಲ ಮೂಡಿತ್ತು. ಅದು ತಣಿಯಲು ನಾಲ್ಕೈದು ವರ್ಷ ಕಾಯಬೇಕಾಯಿತು. ಅಂತೂ ಇಂತೂ ಈ ವಾರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತೆರೆಗಪ್ಪಳಿಸಿದೆ. ಅಭಿಮಾನಿಗಳು ಅದ್ಧೂರಿಯಾಗಿ ಸಿನಿಮಾ ಬರಮಾಡಿ ಕೊಂಡಿದ್ದಾರೆ. ಹಳೇ ಕಥೆಗೆ ಮತ್ತದೇ ರೆಗ್ಯುಲರ್ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಸಿನಿಮಾ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಪವನ್ ಕಲ್ಯಾಣ್ ರೀತಿಯ ಮಾಸ್ ಹೀರೊನ ತೆರೆಮೇಲೆ ಅಭಿಮಾನಿಗಳು ಇಷ್ಟಪಡುವಂತೆ ತೋರಿಸುವುದು ಬಹಳ ಕಷ್ಟ. ಕೊಂಚ ಹೆಚ್ಚು ಕಮ್ಮಿ ಆದರೂ ಎಡವಟ್ಟಾಗುತ್ತದೆ. ಪವನ್ ಕಲ್ಯಾಣ್ಗೋಸ್ಕರ ಮಾಡಿರುವ ಸಿನಿಮಾ ಇದು ಎಂದು ಹರೀಶ್ ಶಂಕರ್ ಪದೇ ಪದೆ ಹೇಳ್ತಾ ಬಂದಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಜಮಾನದಲ್ಲಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚುತ್ತಲೇ ಇದೆ. ಆ ನಿರೀಕ್ಷೆ ತಲುಪಲು ಹರೀಶ್ ಶಂಕರ್ ಮತ್ತಷ್ಟು ಶ್ರಮ ವಹಿಸಬೇಕಿತ್ತು.
ಸಿನಿಮಾ ಕಥೆ
ಅದೊಂದು ಬುಡಕಟ್ಟು ಹಳ್ಳಿ.. ತಮ್ಮ ಜೀವನವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಾಗಿಟ್ಟ ಶಿಕ್ಷಕ ಚಂದ್ರಶೇಖರ್ ರಾವ್(ಕೆ. ಎಸ್ ರವಿಕುಮಾರ್).. ಒಬ್ಬ ಅನಾಥ ಹುಡುಗನನ್ನು ಸಾಕಿ ಸಲಹುತ್ತಾರೆ. ಅವನೇ 'ಭಗತ್ ಸಿಂಗ್'(ಪವನ್ ಕಲ್ಯಾಣ್). ಮುಂದೆ ರಾಜಕೀಯ ಪ್ರವೇಶಿಸಿ ಗುರುಗಳು ಮುಖ್ಯಮಂತ್ರಿ ಪಟ್ಟಕ್ಕೇರುತ್ತಾರೆ. ಇತ್ತ ಭಗತ್ ಸಿಂಗ್ ಪೊಲೀಸ್ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗುತ್ತಾನೆ.

ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಾಕ್ಕಿದ ನಲ್ಲ ನಾಗಪ್ಪ(ಪಾರ್ತಿಬನ್) ಹಾಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹತ್ಯೆಗೆ ಯತ್ನಿಸುತ್ತಾನೆ. ಅದಕ್ಕಾಗಿ ಭಯೋತ್ಪಾದಕರ ಜೊತೆ ಕೈ ಜೋಡಿಸುತ್ತಾನೆ. ನಲ್ಲ ನಾಗಪ್ಪನಿಗೆ ಭಗತ್ ಸಿಂಗ್ ಹಾಕುವ ಸವಾಲು ಏನು? ಇಬ್ಬರ ನಡುವಿನ ತಿಕ್ಕಾಟಕ್ಕೆ ಕಾರಣ ಏನು? ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರಕ್ಷಣೆಗೆ ಆತನ ಹೋರಾಟ ಹೇಗಿರುತ್ತೆ? ಎನ್ನುವುದು ಇನ್ನುಳಿದ ಸಿನಿಮಾ.
ಸಿನಿಮಾ ಹೇಗಿದೆ?
ಕಥೆ, ಚಿತ್ರಕಥೆ ಎರಡರಲ್ಲೂ ಹೊಸತನ ಇಲ್ಲ. ಪವರ್ ಸ್ಟಾರ್ ಅಭಿಮಾನಿಗಳನ್ನು ರಂಜಿಸಬೇಕು ಎನ್ನುವ ಒಂದೇ ಕಾರಣಕ್ಕೆ ಸಿನಿಮಾ ಮಾಡಿರುವುದು ಗೊತ್ತಾಗುತ್ತದೆ. ಆದರೆ ಗಟ್ಟಿ ಕಥೆ ಇಲ್ಲದೇ ಸಿನಿಮಾ ನೀರಸ ಎನಿಸಿಬಿಡುತ್ತದೆ. ಆಕ್ಷನ್, ಪಾಲಿಟಿಕ್ಸ್, ದೇಶಭಕ್ತಿ ಹೀಗೆ ಎಲ್ಲವನ್ನು ಒಂದೇ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೂ ಕೂಡ ಅಷ್ಟಾಗಿ ಪರಿಣಾಮ ಬೀರುವಂತಿಲ್ಲ. ಹಳೇ ಕಮರ್ಷಿಯಲ್ ಅಂಶಗಳನ್ನೇ ಸೇರಿಸಿ ಮತ್ತೊಮ್ಮೆ ಕಥೆ ಹೇಳಲು ನಿರ್ದೇಶಕ ಪ್ರಯತ್ನಿಸಿದ್ದಾರೆ. ಹೊಸತನ್ನು ಬಯಸುವವರಿಗೆ ಸಿನಿಮಾ ಬೇಸರ ಮೂಡಿಸುತ್ತದೆ.
ಪವನ್ ಎಂಟ್ರಿ ಫೈಟ್, ಕಾಲರ್ ಎತ್ತರಾ ಸಾಂಗ್ ಹಾಗೂ ಪವನ್ ಕಾಮಿಡಿ ಟೈಮಿಂಗ್ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಇಂಟರ್ವಲ್ ಬ್ಯಾಂಗ್ ಚೆನ್ನಾಗಿದೆ. ಸೆಕೆಂಡ್ ಹಾಫ್ಗಿಂತ ಫಸ್ಟ್ ಹಾಫ್ ಸೂಪರ್ ಎನಿಸುತ್ತದೆ. ಸೆಕೆಂಡ್ ಹಾಫ್ನಲ್ಲಿ ಶ್ರೀಲೀಲಾ ಎಂಟ್ರಿ ಬಳಿಕ ಸಿನಿಮಾ ಮತ್ತಷ್ಟು ಮಜಾ ಕೊಡುತ್ತದೆ. ಇತ್ತೀಚೆಗೆ ಹೆಚ್ಚು ಗಂಭೀರ ಪಾತ್ರಗಳಲ್ಲೇ ಪವನ್ ಕಲ್ಯಾಣ್ ನಟಿಸುತ್ತಿದ್ದರು. ಬಹಳ ವರ್ಷಗಳ ಬಳಿಕ ಸಿಕ್ಕಾಪಟ್ಟೆ ಎನರ್ಜಿ ಜೊತೆಗೆ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇನ್ನು ಪವನ್ ಸ್ಟಾರ್ ಸ್ಟೈಲ್, ಸ್ವ್ಯಾಗ್ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.
ಕಲಾವಿದರ ನಟನೆ
ಅಷ್ಟೇನು ಹೊಸತನ ಇಲ್ಲದ ಕಥೆ, ಚಿತ್ರಕಥೆಯಲ್ಲಿ ಪವನ್ ಕಲ್ಯಾಣ್ ಪರ್ಫಾರ್ಮನ್ಸ್ ಮಾತ್ರವೇ ರಿಲೀಫ್ ಎನಿಸುತ್ತದೆ. ವಿಂಟೇಜ್ ಪವನ್ ಕಲ್ಯಾಣ್ ಖದರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಶ್ಲೋಕ ಆಗಿ ರಾಶಿ ಖನ್ನಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಇಷ್ಟು ದಿನ ಶ್ರೀಲೀಲಾ ಅಂದ್ರೆ ಡ್ಯಾನ್ಸ್ ಮಾತ್ರ ಎನ್ನುವ ಮಾತಿತ್ತು. ಈ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿದೆ. ಗೀತಾ ಆಗಿ ಬೆಂಗಳೂರು ಬೆಡಗಿ ಮೋಡಿ ಮಾಡ್ತಾರೆ. ಇನ್ನುಳಿದಂತೆ ಕೆ. ಎಸ್ ರವಿಕುಮಾರ್, ಪಾರ್ತಿಬನ್, ಗೌತಮಿ ಎಲ್ಲವೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಮಾಸ್ ಪ್ರೇಕ್ಷಕರನ್ನು ರಂಜಿಸಲು ಬೇಕಾದ ಅಂಶಗಳನ್ನು ಸೇರಿಸಿ 'ಉಸ್ತಾದ್ ಭಗತ್ ಸಿಂಗ್' ಚಿತ್ರವನ್ನು ಹರೀಶ್ ಶಂಕರ್ ತಿದ್ದಿ ತೀಡಿದ್ದಾರೆ. ಅಲ್ಲಲ್ಲಿ ಹರೀಶ್ ಸಂಭಾಷಣೆ ಕಿಕ್ ಕೊಡುವಂತಿದೆ. ಅಯನಂಕ ಬೋಸ್ ಛಾಯಾಗ್ರಹಣ ಚೆನ್ನಾಗಿದೆ. ದೇವಿ ಶ್ರೀ ಪ್ರಸಾದ್ ಹಾಡುಗಳಿಗೆ ಟ್ಯೂನ್ ಹಾಕಿ ಗೆದ್ದಿದ್ದಾರೆ. ಇನ್ನು ತಮನ್ ತಮ್ಮ ಬಿಜಿಎಂ ಮೂಲಕ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ನಿರ್ದೇಶಕರು ಕೇಳಿದ್ದನ್ನೆಲ್ಲಾ ಕೊಟ್ಟು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ.
ಕೊನೆ ಮಾತು
ಪ್ಯಾನ್ ಇಂಡಿಯಾ ಸಿನಿಮಾಗಳನ್ನು ತಲೆಯಿಂದ ತೆಗೆದು ಹಾಕಿ 10 ವರ್ಷಗಳ ಹಿಂದಿನ ಕಮರ್ಷಿಯಲ್ ಸಿನಿಮಾಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೋದರೆ 'ಉಸ್ತಾದ್ ಭಗತ್ ಸಿಂಗ್' ಇಷ್ಟವಾಗುತ್ತದೆ. ಪವನ್ ಕಲ್ಯಾಣ್ ಕಾರಣಕ್ಕೆ ಸಿನಿಮಾ ಒಮ್ಮೆ ನೋಡಬಹುದು. ಹೊಸದನ್ನು ಬಯಸುವವರಿಗೆ ನಿರಾಸೆ ಆಗಬಹುದು. ಅಭಿಮಾನಿಗಳಿಗೆ ಭಗತ್ ಸಿಂಗ್ ಆರ್ಭಟ ಭರ್ಜರಿ ಬಾಡೂಟ ಎನಿಸಬಹುದು.


Click it and Unblock the Notifications











