Ponniyin Selvan 2 Review: ಆಸೆ, ದುರಾಸೆ, ಸೇಡು, ತಂತ್ರ, ಕುತಂತ್ರ: ಮಣಿರತ್ನಂ ತಿದ್ದಿ ತೀಡಿದ ದೃಶ್ಯಕಾವ್ಯ, ಆದ್ರೆ..
Ponniyin Selvan 2 Kannada: ಐತಿಹಾಸಿಕ ಸಿನಿಮಾಗಳನ್ನು ಮಾಡೋದು ಪ್ರೇಕ್ಷಕರನ್ನು ರಂಜಿಸೋದು ಅಷ್ಟು ಸುಲಭದ ಮಾತಲ್ಲ. ಇತಿಹಾಸವನ್ನು ತಿರುಚದೇ, ಮನರಂಜನೆಯನ್ನು ಬಿಡದೇ ನೋಡುಗರು ಬೆರಗಾಗುವಂತೆ ಮಾಡೋದು ಕತ್ತಿಯ ಅಲಗಿನ ಮೇಲಿನ ನಡಿಗೆಯಿದ್ದಂತೆ. ಮಣಿರತ್ನಂರಂತಹ ಅನುಭವಿ ನಿರ್ದೇಶಕರಿಂದ ಮಾತ್ರ ಇದನ್ನು ನಿಬಾಯಿಸಲು ಸಾಧ್ಯ. 'ಪೊನ್ನಿಯಿನ್ ಸೆಲ್ವನ್'- 2 ಚಿತ್ರದಲ್ಲಿ ಅದನ್ನು ಮತ್ತೊಮ್ಮೆ ಮಣಿ ಸಾಧಿಸಿ ತೋರಿಸಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯನ್ನು 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ತಂದು ಮಣಿರತ್ನಂ ಗೆದ್ದಿದ್ದಾರೆ. ಪ್ರೀಕ್ವೆಲ್ ಕೊಂಚ ಕೊಂಚ ಗೊಂದಲ ಅನ್ನಿಸಿದ್ರು, 2 ಭಾಗ ನೋಡುಗರ ಮೆಚ್ಚುಗೆ ಗಳಿಸಿದೆ. ಸಾಮಾನ್ಯವಾಗಿ ಸೀಕ್ವೆಲ್ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಹೈಪ್ ಇರುತ್ತದೆ. ಆದರೆ ಈ ಚಿತ್ರದ ಬಗ್ಗೆ ಅಂತಹ ಹೈಪ್ ಇರಲಿಲ್ಲ. ಇದ್ದಿದ್ದರಲ್ಲಿ ತಮಿಳುನಾಡಿನಲ್ಲಿ ಸಿನಿಮಾ ಕೊಂಚಮಟ್ಟಿಗೆ ಭರವಸೆ ಮೂಡಿಸಿತ್ತು. ಸದ್ಯ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ.

'ಪೊನ್ನಿಯಿನ್ ಸೆಲ್ವನ್'- 2 ಕಥೆಯೇನು?
ಮೊದಲ ಭಾಗದಲ್ಲಿ ಸತ್ತು ಹೋಗಿದ್ದ ಎಂದುಕೊಂಡಿದ್ದ ಅರುಣ್ಮೋಳಿ(ಜಯಂ ರವಿ) ಸಾವಿನ ಕದ ತಟ್ಟಿ ಬಂದಿರುತ್ತಾನೆ. ವಲ್ಲವರಾಯ(ಕಾರ್ತಿ)ನ ಸಹಾಯದಿಂದ ಬದುಕುಳಿದ ಆತ ಬೌದ್ ದೇವಾಲಯದಲ್ಲಿ ಆಶ್ರಯ ಪಡೆದು ಚೇತರಿಸಿಕೊಳ್ಳುತ್ತಾನೆ. ಇತ್ತ ಅರುಣ್ಮೋಳಿ ಸಮುದ್ರದಲ್ಲಿ ಮುಳುಗಿ ಸತ್ತು ಹೋದ ಎಂದು ಚೋಳರು, ಪಾಂಡ್ಯರು ಎಲ್ಲರೂ ಭಾವಿಸಿರುತ್ತಾರೆ. ಮತ್ತೊಂದು ಕಡೆ ವೀರ ಪಾಂಡಿಯ್ಯನ್(ನಾಸರ್) ಸಾವಿಗೆ ಆದಿತ್ಯ ಕರಿಕಾಲನ್(ವಿಕ್ರಂ)ನ ಕೊಂದು ಪ್ರತೀಕಾರ ತೀರಿಸಿಕೊಳ್ಳಲು ನಂದಿನಿ(ಐಶ್ವರ್ಯ ರೈ) ಹಾಗೂ ಪಾಂಡ್ಯರ ಗುಂಪು ಹವಣಿಸುತ್ತಿರುತ್ತದೆ.
ಮತ್ತೊಂದು ಕಡೆ ಚೋಳ ವಂಶಸ್ಥನೇ ಆದ್ರು ಮಧುರಾಂತಕ(ರಹಮಾನ್) ಸಿಂಹಾಸನದ ಮೇಲೆ ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ಎಲ್ಲದಕ್ಕು ಸಿದ್ಧ ಎನ್ನುತ್ತಾನೆ. ಇನ್ನು ಕರಿಕಾಲನ್ ಹಾಗೂ ನಂದಿನಿ ನಡುವೆ ಏನು ನಡೆದಿತ್ತು? ಮಂದಾಕಿನಿ ಅಲಿಯಾಸ್ ಊಮೈ ರಾಣಿ(ಐಶ್ವರ್ಯ ರೈ ದ್ವಿಪಾತ್ರ) ಯಾರು? ಮಧುರಾಂತಕನಿಗೆ ಸಿಂಹಾಸನ ಸಿಕ್ತಾ? ಇಲ್ವಾ? ಚೋಳರ ವಿರುದ್ಧ ರಾಷ್ಟ್ರಕೂಟರು ಯುದ್ಧಕ್ಕೆ ನಿಂತಿದ್ದೇಕೆ? ಗೆದ್ದವರ್ಯಾರು? ಸೋತವರ್ಯಾರು? ಪಾಂಡ್ಯರ ಕಥೆ ಏನಾಯ್ತು? ಚೋಳರ ಮೇಲೆ ನಂದಿನಿ ದ್ವೇಷಕ್ಕೆ ಕಾರಣ ಏನು? ಅನ್ನುವುದನ್ನು ತೆರೆಮೇಲೆ ನೋಡಬೇಕು.

ಸಿನಿಮಾ ಹೇಗಿದೆ?
ಕರಿಕಾಲನ್ ಹಾಗೂ ನಂದಿನಿಯ ಟೀನೇಜ್ ಲವ್ಸ್ಟೋರಿ ಜೊತೆಗೆ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ಕಥೆ ಶುರುವಾಗುತ್ತದೆ. ಇನ್ನೇನು ಇಬ್ಬರ ಮದುವೆ ಆಗುತ್ತದೆ ಎನ್ನುವ ವೇಳೆಗೆ ಇಬ್ಬರೂ ದೂರಾಗುತ್ತಾರೆ. ಅರುಣ್ಮೋಳಿ ಬದುಕಿ ಅನ್ನೋದನ್ನು ತೋರಿಸಲಾಗುತ್ತದೆ. ಆದರೆ ಆತನನ್ನು ಕೊಲ್ಲಲ ಪಾಂಡ್ಯರು ನಾನಾ ಬಗೆಯಲ್ಲಿ ಪ್ರಯತ್ನಿಸುತ್ತಾರೆ. ವಲ್ಲವರಾಯನ ಸಹಾಯದಿಂದ ಅದನ್ನೆಲ್ಲಾ ಮೀರಿ ಆತ ಅರಮನೆಗೆ ವಾಪಸ್ ಬರುತ್ತಾನೆ. ಇನ್ನು ನಂದಿನಿಯ ಭೇಟಿಗೆ ಕರಿಕಾಲನ್ ತಾನಾಗಿಯೇ ಬರ್ತಾನೆ? ಅನುರಾಗ- ತ್ಯಾಗ, ನಂಬಿಕೆ, ಅಪನಂಬಿಕೆಯ ದ್ವಂದ್ವ ಯುದ್ಧದಲ್ಲಿ ಇಬ್ಬರ ಕಥೆ ಅಂತ್ಯವಾಗುತ್ತದೆ.
ಕರಿಕಾಲನ್ ನಂತರ ಅರುಣ್ಮೋಳಿ ಎದುರಾಳಿಗೆ ಸಿಂಹಸ್ವಪ್ನನಾಗುತ್ತಾನೆ. ತಪ್ಪು ಮಾಡಿದವರು ಪಶ್ಚಾತಾಪ ಪಡುತ್ತಾರೆ. ಸಾಧ್ಯ ಇದ್ದವರು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ. ಒಟ್ಟಾರೆ ಐತಿಹಾಸಿಕ ಕಥೆಗೆ ಒಂದಷ್ಟು ಕಾಲ್ಪನಿಕ ಸಂಗತಿಗಳನ್ನು ಸೇರಿಸಿ ಕಲ್ಕಿ ಕೃಷ್ಣಮೂರ್ತಿ ಸೊಗಸಾದ ಕಾದಂಬರಿ ಬರೆದಿದ್ದರು. ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತರುವಲ್ಲಿ ಮಣಿರತ್ನಂ ಗೆದ್ದಿದ್ದಾರೆ. ಪ್ರೀತಿ, ಸ್ನೇಹ, ತ್ಯಾಗ, ಆಸೆ, ದುರಾಸೆ, ನಂಬಿಕೆ, ಅಪನಂಬಿಕೆ, ತಂತ್ರ, ಕುತಂತ್ರ, ಬೆನ್ನಿಗೆ ಚೂರಿ, ಸೇಡು, ಮುಚ್ಚಿಟ್ಟ ಸತ್ಯಗಳಿಂದ ಆಗುವ ಅನಾಹುತ ಹೀಗೆ ಎಲ್ಲವೂ ಅಡಗಿರುವ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ನಿರ್ದೇಶಕರು ತಿದ್ದಿ ತೀಡಿದ್ದಾರೆ. ಯುದ್ಧ ಸನ್ನಿವೇಶಗಳಿಗಿಂತ ಡ್ರಾಮಾವನ್ನು ಸುಂದರವಾಗಿ ಚಿತ್ರಿಸಿದ್ದಾರೆ.
ಕಲಾವಿದರ ಅಭಿನಯ
ಮಣಿರತ್ನಂ ಪಾತ್ರಗಳ ಆಯ್ಕೆಯಲ್ಲಿ ಗೆದ್ದಿದ್ದಾರೆ. ನಂದಿನಿಯಾಗಿ ಐಶ್ವರ್ಯ ರೈ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಇನ್ನು ವಿಕ್ರಂ, ಕಾರ್ತಿ, ತ್ರಿಷಾ, ಜಯಂ ರವಿ ಎಲ್ಲರೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಐಶ್ವರ್ಯ ರೈ ಇದ್ದಷ್ಟು ತೆರೆಮೇಲೆ ಇದ್ದಷ್ಟು ಹೊತ್ತು ಕಣ್ಣಿದೆ ಹಬ್ಬ. ಆಕೆಗೆ ನಿಜಕ್ಕೂ 50 ವರ್ಷ ವಯಸ್ಸು ಅನ್ನಿಸುವುದೇ ಇಲ್ಲ. ಅಷ್ಟರಮಟ್ಟಿಗೆ ತಮ್ಮ ಆಕೆಯನ್ನು ತೆರೆಮೇಲೆ ತೋರಿಸಿದ್ದಾರೆ ಮಣಿರತ್ನಂ.
ಇನ್ನುಳಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಮಣಿರತ್ನಂ ಪ್ರತಿಯೊಬ್ಬರಿಂದಲೂ ಅವರ ಬೆಸ್ಟ್ ಹೊರತೆಗಿಸಿದ್ದಾರೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗದಲ್ಲಿ ಜಯಂ ರವಿ, ನಂದಿನಿ ಪಾತ್ರಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಕರಿಕಾಲನ್ ಪಾತ್ರದಲ್ಲಿ ವಿಕ್ರಂ ಸಂಪೂರ್ಣ ಅಂಕ ಗಿಟ್ಟಿಸಿದ್ದಾರೆ. ಜಯಂ ರವಿ ಒಂದೆರಡು ಭಾವನಾತ್ಮಕ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಮೊದಲ ಭಾಗದಲ್ಲಿ ಕಾರ್ತಿ ಪಾತ್ರಕ್ಕೆ ಹಾಸ್ಯದ ಲೇಪನ ಹೆಚ್ಚಿತ್ತು. ಇಲ್ಲಿ ಡ್ರಾಮಾ ಹೆಚ್ಚಾಗಿದೆ. ರವಿದಾಸನ್ ಆಗಿ ಕನ್ನಡ ನಟ ಕಿಶೋರ್ಗೂ ಹೆಚ್ಚು ಸನ್ನಿವೇಶಗಳು ಸಿಕ್ಕಿವೆ. ಇನ್ನು ಪಾಚು ಶಾಲಿನಿ ಪತಿ ಅನಿಲ್ ಕುಮಾರ್ ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾಂತ್ರಿಕವಾಗಿ ಸಿನಿಮಾ ಹೇಗಿದೆ?
ಲೈಕಾ ಹಾಗೂ ಮದ್ರಾಸ್ ಟಾಕೀಸ್ ಸಂಸ್ಥೆಗಳು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮಣಿರತ್ನಂ ಗೆದ್ದಿದ್ದಾರೆ. ಬಿ. ಜೆಯ ಮೋಹನ್ ಸಂಭಾಷಣೆ ಕಥೆಗೆ ಪೂರಕವಾಗಿದೆ. ಅಲ್ಲಲ್ಲಿ ಬರುವ ಒನ್ಲೈನರ್ಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ. ರವಿವರ್ಮನ್ ಛಾಯಾಗ್ರಹಣ ಅದ್ಬುತ. ಎ. ರಹಮಾನ್ ಬಿಜಿಎಂ ಅಷ್ಟಾಗಿ ವರ್ಕ್ ಆಗಿಲ್ಲ. ಇನ್ನು 2 ಗಂಟೆ 44ನಿಮಿಷಗಳ ಸಿನಿಮಾ ಕಾಲಾವಧಿ ಕೊಂಚ ಜಾಸ್ತಿ ಆಯಿತು.
ಚಿತ್ರದ ಪ್ಲಸ್ ಪಾಯಿಂಟ್ಸ್
ಕಥೆ, ಚಿತ್ರಕಥೆ, ನಿರ್ದೇಶನ
ಛಾಯಾಗ್ರಹಣ
ಕಲಾವಿದರ ಅಭಿನಯ
ಮೈನಸ್ ಪಾಯಿಂಟ್ಸ್
ಸ್ಲೋ ನರೇಷನ್
ಬಿಜಿಎಂ
ಎಲಿವೇಷನ್ ಸೀನ್ಸ್(ಇಲ್ಲದೇ ಇರುವುದು)
ಕೊನೆಯ ಮಾತು
ಎಲ್ಲಾ ವಿಭಾಗದಲ್ಲೂ ಅದ್ಭುತ ಅನ್ನಿಸುವ ಸಿನಿಮಾ ಇನ್ನು ಏನೋ ಬೇಕಿತ್ತು ಎನ್ನುವ ಭಾವನೆಯನ್ನು ಕೊನೆಯವರೆಗೂ ಮೂಡಿಸುತ್ತದೆ. ನಿಧಾನಗತಿಯ ನಿರೂಪಣೆ ಅದಕ್ಕೆ ಮುಖ್ಯ ಕಾರಣ ಎನ್ನಬಹುದು. ಐತಿಹಾಸಿಕ ಕಥೆ ಆಗಿರುವುದರಿಂದ ಸುಖಾಸುಮ್ಮನೆ ಎಲಿವೇಷನ್ ಸೀನ್ಸ್ ಇಡಲು ನಿರ್ದೇಶಕರಿಗೆ ಅವಕಾಶ ಸಿಕ್ಕಿಲ್ಲ. ಆದರೆ ಇದೇ ಪ್ರೇಕ್ಷಕರಿಗೆ ಬೇಸರ ತರಿಸುತ್ತದೆ. ಕಾದಂಬರಿ ಓದಿಕೊಂಡವರಿಗೆ, ಪಾತ್ರಗಳನ್ನು ತಮ್ಮದಾಗಿಸಿಕೊಂಡವರಿಗೆ ಆ ಪ್ರಪಂಚದಲ್ಲಿ ಲೀನರಾದವರಿಗೆ ಜೊತೆಗೆ ಪ್ರೀಕ್ವೆಲ್ ಇಷ್ಟಪಟ್ಟವರಿಗೆ ಸೀಕ್ವೆಲ್ ಕೂಡ ಇಷ್ಟವಾಗುತ್ತದೆ.
ತಮಿಳು ಪ್ರೇಕ್ಷಕರು 'ಪೊನ್ನಿಯಿನ್ ಸೆಲ್ವನ್'- 2 ಚಿತ್ರವನ್ನು ಮೆಚ್ಚಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಆದರೆ ಕಾದಂಬರಿ ಓದದವರಿಗೆ, ಪರಭಾಷಿಕರಿಗೆ ಮಣಿರತ್ನಂ ದೃಶ್ಯಕಾವ್ಯ ಇಷ್ಟವಾಗುವುದು ಕಷ್ಟ ಕಷ್ಟ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೀಕ್ವೆಲ್ ಕೂಡ ಸದ್ದು ಮಾಡುವುದು ಅನುಮಾನ.


Click it and Unblock the Notifications











