Kothalavadi Review: 'ಕೊತ್ತಲವಾಡಿ'ಯಲ್ಲಿ ಅನುಭವದ ಕೊರತೆ ಅಷ್ಟೇ.. ಮುಂದೇನಿಲ್ಲ!
ಕನ್ನಡ ಚಿತ್ರರಂಗಕ್ಕೆ ಮತ್ತೆ ಮರುಜೀವ ಬಂದ ಬೆನ್ನಲ್ಲೇ ಮತ್ತೊಂದು ಸಿನಿಮಾ 'ಕೊತ್ತಲವಾಡಿ' ಅದ್ಧೂರಿಯಾಗಿ ರಿಲೀಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕನ್ನಡ ಸಿನಿಮಾವನ್ನು ನೋಡುವುದಕ್ಕೆ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿರುವ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಈ ಸಿನಿಮಾ ಕೂಡ ಅಖಾಡಕ್ಕೆ ಇಳಿದಿದೆ.
'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ನಟಿ ಕಾವ್ಯಾ ಶೈವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಇನ್ನು ಖಳನಾಯಕನಾಗಿ ಗೋಪಾಲಕೃಷ್ಣ ದೇಶಪಾಂಡೆ ಜೊತೆ ಪ್ರಮುಖ ಪಾತ್ರಗಳಲ್ಲಿ ರಾಜೇಶ್ ನಟರಂಗ, ಅವಿನಾಶ್, ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾವನ್ನು ಶ್ರೀರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಟ್ರೈಲರ್ ಹಾಗೂ ಟೀಸರ್ ಮಾಸ್ ಪ್ರಿಯರನ್ನು ಸೆಳೆದಿದ್ದವು.

ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಚೊಚ್ಚಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಇಳಿದು ಗೆದ್ದರೇ? 'ಕೊತ್ತಲವಾಡಿ' ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಈ ಸಿನಿಮಾದ ಕಥೆಯೇನು? ಸಿನಿಮಾದ ಪ್ಲಸ್ ಏನು? ಸಿನಿಮಾ ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಕೊತ್ತಲವಾಡಿ' ಕಥೆಯೇನು?
ಪೃಥ್ವಿ ಅಂಬಾರ್ ನೈಟ್ ಎಫೆಕ್ಟ್ನಲ್ಲಿ ಹೆಣಗಳ ರಾಶಿಗಳ ಮೇಲೆ ಕೂತಿರುವ ಸೀನ್ನಿಂದ ಈ ಸಿನಿಮಾ ಆರಂಭ ಆಗುತ್ತೆ. ಸೀನ್ ಕಟ್ ಮಾಡಿದರೆ, ಊರಿನ ಜನ ಮರಳು ಅಗೆಯುವ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಪೊಲೀಸರಿಗೆ ಗೊತ್ತಾಗಿ ಅವರನ್ನು ಅರೆಸ್ಟ್ ಮಾಡಬೇಕು ಅಂತ ಹೋದಾಗ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಪೊಲೀಸ್ ಪಾತ್ರದಲ್ಲಿ ಅವಿನಾಶ್ ಮತ್ತು ರಾಜೇಶ್ ನಟರಂಗ ನಟಿಸಿದ್ದು, ಇವರಿಬ್ಬರೇ ಮೊದಲಾರ್ಧದ ಸ್ಟೋರಿ ಹೇಳಿಕೊಂಡು ಹೋಗುತ್ತಾರೆ. ಕೊತ್ತಲವಾಡಿಯಲ್ಲಿ ಇರುವ ಜನರು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಈ ವೇಳೆ ಗುಜುರಿ ಕೆಲಸ ಮಾಡಿಕೊಂಡಿದ್ದ ಗುಜುರಿ ಬಾಬು (ಗೋಪಾಲಕೃಷ್ಣ ದೇಶಪಾಂಡೆ) ಜನರಿಗೆ ಮರುಳು ಗಣಿಗಾರಿಕೆಯಿಂದ ಹಣ ಸಂಪಾದನೆಯ ಆಸೆ ತೋರಿಸುತ್ತಾನೆ. ಇನ್ನೊಂದು ಕಡೆ ಸಿನಿಮಾ ಹೀರೋ ಮೋಹನನಿಗೆ (ಪೃಥ್ವಿ ಅಂಬಾರ್) ಅದೇ ಊರಿನ ಮಂಜಿ (ಕಾವ್ಯಾ ಶೈವ) ಮೇಲೆ ಲವ್ ಆಗಿರುತ್ತೆ. ಇನ್ನೇನು ಮದುವೆ ಆಗಿ ಸುಂದರ ಸಂಸಾರ ಕಟ್ಟಿಕೊಳ್ಳಬೇಕು ಅಂದುಕೊಳ್ಳುವಾಗ ಗುಜುರಿ ಬಾಬು ಜೊತೆ ಸೇರಿಕೊಳ್ಳುತ್ತಾನೆ. ಇಲ್ಲಿಂದ ಮೋಹನ, ಆತನ ಲವ್ ಸ್ಟೋರಿ ಹಾಗೂ ಊರಿನವರು ಹೇಗೆ ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ ಎನ್ನುವುದೇ ಈ ಸಿನಿಮಾದ ಕಥೆ.
'ಕೊತ್ತಲವಾಡಿ' ಪ್ಲಸ್ ಪಾಯಿಂಟ್ ಏನು?
'ಕೊತ್ತಲವಾಡಿ' ಸಿನಿಮಾಗೆ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ತುಂಬಾನೇ ಖರ್ಚು ಮಾಡಿದ್ದಾರೆ. ತಾಂತ್ರಿಕವಾಗಿ ಸಿನಿಮಾ ಚೆನ್ನಾಗಿದೆ. ಕಾರ್ತಿಕ್ ಅವರ ಛಾಯಾಗ್ರಹಣ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಹಿನ್ನೆಲೆ ಸಂಗೀತ ಕೆಲವು ಸನ್ನಿವೇಶಗಳಲ್ಲಿ ಇಷ್ಟ ಆಗುತ್ತೆ. ಎಲ್ಲಕ್ಕಿಂತ ಹೈಲೈಟ್ ಅಂದರೆ, ರಘು ನಿಡುವಳ್ಳಿ ಅವರ ಸಂಭಾಷಣೆ. ಇದು ಪ್ರೇಕ್ಷಕರನ್ನು ತಟ್ಟುತ್ತೆ.

'ಕೊತ್ತಲವಾಡಿ' ಮೈನಸ್ ಪಾಯಿಂಟ್ ಏನು?
ನಿರ್ದೇಶಕ ಶ್ರೀರಾಜ್ ಕಥೆ ಹಾಗೂ ಚಿತ್ರಕಥೆಗೆ ಇನ್ನಷ್ಟು ಒತ್ತುಕೊಡಬೇಕಿತ್ತು. ಕೆಲವು ಸೀನ್ಗಳಿಗೆ ಕನೆಕ್ಷನ್ ಇಲ್ಲ ಅಂತ ಅನಿಸುತ್ತವೆ. ಕೆಲವು ದೃಶ್ಯಗಳು ಯಾಕೆ ಬಂತು? ಯಾಕೆ ಹೋಯ್ತು? ಆ ಪಾತ್ರಗಳು ಏನಾದ್ವು? ಅನ್ನೋದೇ ಗೊತ್ತಾಗಲ್ಲ. ಯಾವುದೇ ಹಾಡು ಮನಸ್ಸಿನಲ್ಲಿ ಉಳಿಯಲಿಲ್ಲ. ಆರಂಭದಿಂದ ಅಂತ್ಯದವರೆಗೂ ಸಿನಿಮಾ ಗಂಭೀರವಾಗಿಯೇ ಇರುತ್ತೆ. ಮಧ್ಯೆದಲ್ಲಿ ಕಾಮಿಡಿ ಸನ್ನಿವೇಶಗಳು ಇದ್ದಿದ್ದರೆ ಪ್ರೇಕ್ಷಕರಿಗೆ ಸ್ವಲ್ಪ ರಿಲೀಫ್ ಇರುತ್ತಿತ್ತು.
ಕೊನೆಯಲ್ಲಿ ಏನು?
'ಕೊತ್ತಲವಾಡಿ' ಸಿನಿಮಾವನ್ನು ಪ್ರೇಕ್ಷಕರು ಒಮ್ಮೆ ನೋಡಬಹುದು. ಗಂಭೀರವಾದ ವಿಷಯವನ್ನು ಇಲ್ಲಿ ಮಾಡಿದ್ದಾರೆ. ಆದರೆ, ಅದನ್ನು ಪ್ರೇಕ್ಷಕರಿಗೆ ಎಫೆಕ್ಟಿವ್ ಆಗಿ ಮುಟ್ಟಿಸುವಲ್ಲಿ ನಿರ್ದೇಶಕರು ಹಿಂದೆ ಬಿದ್ದಿದ್ದಾರೆ ಎನ್ನಬಹುದು. ಗ್ರಾಮೀಣ ಸೊಗಡಿನ ಈ ಕಥೆ ಕೆಲವರಿಗೆ ಖಂಡಿತಾ ಇಷ್ಟ ಆಗುತ್ತೆ. ಹಾಗೇ ನಿರ್ಮಾಪಕರು ತಮ್ಮ ಮೊದಲ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸಮಯದಲ್ಲಿ ಅನುಭವ ಇರುವವರನ್ನು ಕೂರಿಸಿಕೊಂಡು ಒಂದಿಷ್ಟು ಸಲಹೆ ತೆಗೆದುಕೊಂಡಿದ್ದರೆ, ಒಂದೊಳ್ಳೆ ಪ್ರಾಜೆಕ್ಟ್ ಆಗುತ್ತಿತ್ತು.


Click it and Unblock the Notifications











