Thaai Kizhavi Review: ಬಾಕ್ಸಾಫೀಸ್ ಶೇಕ್ ಮಾಡ್ತಿರೋ 'ಥಾಯ್ ಕಿಳವಿ' ಕಥೆಯೇನು? ಸಿನಿಮಾ ಹೇಗಿದೆ?
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನುವ ಮಾತಿದೆ. ಈ ಪ್ರಪಂಚವೇ ಹಣದ ಮೇಲೆ ನಿಂತಿದೆ. ಹಣ ಇದ್ದರೆ ಬಂಧು ಬಳಗ ಎಲ್ಲಾ. ಹಣಕ್ಕಾಗಿ ಜನ ಏನು ಮಾಡಲು ಹೇಸುವುದಿಲ್ಲ. ಪೋಷಕರಿಗೆ ವಯಸ್ಸಾಯ್ತು. ಅವರ ಬಳಿ ಹಣ ಇರಲ್ಲ, ಅವರನ್ನು ಯಾಕೆ ನೋಡಿಕೊಳ್ಳಬೇಕು ಎಂದು ಆಲೋಚಿಸುವ ಪ್ರಪಂಚ ಇದು.
ಪೋಷಕರು ಹಣ ಇಲ್ಲ ಎನ್ನುವ ಕಾರಣಕ್ಕೆ ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೇ ಬಿಡಲ್ಲ. ಹೇಗಾದರೂ ಕಷ್ಟಪಟ್ಟು ಮಕ್ಕಳನ್ನು ನೋಡಿಕೊಳ್ತಾರೆ. ಆದರೆ ವಯಸ್ಸಾದ ಹಿರಿಜೀವಗಳು ಮಕ್ಕಳ ಸಮಾನ ಅಲ್ಲವೇ. ಅವರನ್ನು ಯಾಕೆ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎನ್ನುವ ವಿಚಾರದ ಸುತ್ತಾ ತಮಿಳಿನ 'ಥಾಯ್ ಕಿಳವಿ' ಸಿನಿಮಾ ಕಟ್ಟಿಕೊಡಲಾಗಿದೆ.

ಯಾವುದೇ ದೊಡ್ಡ ಸಿನಿಮಾಗಳು ಇಲ್ಲ ಎನ್ನುವ ಕಾರಣಕ್ಕೆ ಜನ 'ಥಾಯ್ ಕಿಳವಿ' ಸಿನಿಮಾ ನೋಡಲು ಮುಂದಾಗಿದ್ದಾರೆ. ಆದರೆ ಸಿನಿಮಾ ನೋಡಿದ ಮೇಲೆ ಮೆಚ್ಚಿಕೊಂಡಾಡುತ್ತಿದ್ದಾರೆ. ಒಂದಷ್ಟು ತಪ್ಪುಗಳ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತದೆ, ಆಲೋಚನೆಗೆ ಹಚ್ಚುತ್ತದೆ.
'ಥಾಯ್ ಕಿಳವಿ' ಕಥೆ
ಪವುನುತಾಯಿ(ರಾಧಿಕಾ ಶರತ್ಕುಮಾರ್) ಊರಿನ ಹಿರಿಯ ಜೀವ. ಗಂಡು ದಿಕ್ಕಿಲ್ಲದ ಮನೆಯ ಲೇಡಿ ಡಾನ್. ಊರಿನ ಜನರಿಗೆ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡುವುದೇ ಆಕೆಯ ಕಾಯಕ. ಆಕೆಯನ್ನು ಕಂಡರೆ ಊರಿನ ಜನರಿಗೆಲ್ಲಾ ಭಯ. ಒಂದ್ಕಡೆ ಬಡ್ಡಿ ಕೊಡೊಕ್ಕಾಗದೇ ಒದ್ದಾಟ, ಮತ್ತೊಂದು ಕಡೆ ಆಕೆಯ ಕ್ವಾಟ್ಲೆ.

ಮೂವರು ಗಂಡು ಮಕ್ಕಳು ಮದುವೆ ಮಾಡಿಕೊಂಡು ತಾಯಿಯನ್ನು ಬಿಟ್ಟು ದೂರ ಹೋಗಿದ್ದಾರೆ. ಗಂಡನಿಂದ ದೂರಾದ ಮಗಳನ್ನು ಆಕೆಯ ಮಗನನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಮುದುಕಿ ಸಾಕುತ್ತಿರುತ್ತಾಳೆ. ಇದ್ದಕ್ಕಿದ್ದಂತೆ ಒಮ್ಮೆ ಪಾರ್ಶ್ವವಾಯು ಪೀಡಿತಳಾಗಿ ಪವುನುತಾಯಿ ಹಾಸಿಗೆ ಹಿಡೀತ್ತಾಳೆ. ಆಗಾಗ್ಗೆ ಎಡಗೈಯಲ್ಲಿ ಏನೋ ಸನ್ನೆ ಮಾಡುತ್ತಿರುತ್ತಾಳೆ. ಅದರ ಅರ್ಥ ಏನು? ಆಕೆಯ 150 ಸವರನ್ ಚಿನ್ನಾಭರಣದ ಸೀಕ್ರೆಟ್ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
'ಥಾಯ್ ಕಿಳವಿ' ಮಾಮೂಲಿ ಕಮರ್ಷಿಯಲ್ ಸಿನಿಮಾ ಕಂಡಿತ ಅಲ್ಲ. ಮಹಿಳಾ ಪ್ರಧಾನ ಸಿನಿಮಾ ಆಗಿದ್ದರೂ ಯಾವುದೇ ಗ್ಲಾಮರ್ ಇಲ್ಲಿಲ್ಲ. ವಯಸ್ಸಾದ ಮುದುಕಿ ಪಾತ್ರವನ್ನಿಟ್ಟುಕೊಂಡು ಕಥೆ ಹೇಳುತ್ತಾ ಹೋಗಿದ್ದಾರೆ. ಆರಂಭದ 20 ನಿಮಿಷದಲ್ಲೇ ಆ ಮುದುಕಿ ಕೂಡ ಹಾಸಿಗೆ ಹಿಡಿದುಬಿಡುತ್ತಾಳೆ. ಮುಂದೆ ಕಥೆಯನ್ನು ಎಳೆದುಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಅಲ್ಲಲ್ಲಿ ಕೊಂಚ ಲ್ಯಾಗ್ ಅನ್ನಿಸಿದ್ರು, ಕ್ಲೈಮ್ಯಾಕ್ಸ್ವರೆಗೆ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ತಮಾಷೆಯಾಗಿಯೇ ಆರಂಭವಾಗುವ ಕಥೆ ಆಗೊಮ್ಮೆ ಈಗೊಮ್ಮೆ ಭಾವನಾತ್ಮಕವಾಗಿ ನೋಡುಗರಿಗೆ ಹತ್ತಿರವಾಗಿಬಿಡುತ್ತದೆ. ಹಣಕ್ಕಿಂತ ಮನುಷತ್ವ ಮುಖ್ಯ ಎನ್ನುವ ಪಾಠ ಹೇಳುತ್ತದೆ. ಸಮಯ ಸಂದರ್ಭಗಳು ಮನುಷ್ಯನನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಮಹಿಳಾ ಆರ್ಥಿಕ ಸ್ವಾತಂತ್ರ್ಯ, ಸಬಲೀಕರಣ
ಮೇಲ್ನೋಟಕ್ಕೆ 'ಥಾಯ್ ಕಿಳವಿ' ಕಾಮಿಡಿ ಸಿನಿಮಾ ಅನಿಸಿದರೂ ಕೊನೆ ಕೊನೆಗೆ ಗಂಭೀರವಾಗುತ್ತಾ ಹೋಗುತ್ತದೆ. ಮಹಿಳಾ ಸಬಲೀಕರಣ ಆರ್ಥಿಕ ಸ್ವಾತಂತ್ರ್ಯ ಬಗ್ಗೆ ನಿರ್ದೇಶಕರು ಮಾತನಾಡಿದ್ಧಾರೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು. ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು. ಪುರುಷನ ಅಧೀನದಲ್ಲಿ ಇರಬಾರದು. ಒಂದು ವೇಳೆ ಪುರುಷನ ಆಶ್ರಯ ಇಲ್ಲದಿದ್ದರೂ ಏಕಾಂಗಿಯಾಗಿ ಬದುಕಲು ಶಕ್ತರಾಗಿರಬೇಕು ಎನ್ನುವ ವಿಚಾರಗಳನ್ನು ಹೇಳಲಾಗಿದೆ. ಒಟ್ಟಾರೆ ಮಹಿಳೆಯರ ಆತ್ಮಗೌರವದ ಬಗ್ಗೆ ಮಾತನಾಡುವ ಸಿನಿಮಾ ಇಷ್ಟವಾಗುತ್ತದೆ.
ಕಲಾವಿದರು, ತಂತ್ರಜ್ಞರು
ನಟನೆ ವಿಚಾರಕ್ಕೆ ಬಂದರೆ ಇಡೀ ಸಿನಿಮಾ ರಾಧಿಕಾ ಶರತ್ಕುಮಾರ್ ಆವರಿಸಿಕೊಂಡಿದ್ದಾರೆ. ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದೇ ಇದ್ದರೂ ಇದ್ದಷ್ಟು ಹೊತ್ತು ಪಾತ್ರವೇ ತಾವಾಗಿಬಿಟ್ಟಿದ್ದಾರೆ. ಸುಕ್ಕುಕಟ್ಟಿದ ಚರ್ಮ, ಜೋತುಬಿದ್ದ ಕಿವಿಯೋಲೆ, ನಾಲ್ಕೈದು ಗಂಟೆ ಪ್ರಾಸ್ಥೆಟಿಕ್ ಮೇಕಪ್ ಹಾಕಿಕೊಂಡು ನಟಿಸಿ ಗೆದ್ದಿದ್ದಾರೆ.
ಇನ್ನುಳಿದಂತೆ ಪವುನುತಾಯಿ ಮಕ್ಕಳ ಪಾತ್ರಗಳಲ್ಲಿ ಸಿಂಗಂಪುಲಿ, ಅರುಳ್ ದಾಸ್, ಬಾಲ ಶರವಣನ್ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮುನೀಶ್ಕಾಂತ್ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ, ಸಂಗೀತ ಎಲ್ಲವೂ ಚಿತ್ರಕ್ಕೆ ಬಲ ತುಂಬಿದೆ.
ಕೊನೆ ಮಾತು
ರಾಧಿಕಾ ನಟನೆ, ಹಳ್ಳಿಯ ಹಿನ್ನಲೆ, ಮಹಿಳಾ ಸಬಲೀಕರಣದ ವಿಚಾರಗಳು ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಆದರೆ ಅಲ್ಲಲ್ಲಿ ಸಿನಿಮಾ ಲ್ಯಾಗ್ ಅನಿಸುತ್ತದೆ. ಅದೇ ಚಿತ್ರದ ದೊಡ್ಡ ಮೈನಸ್. ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಮತ್ತಷ್ಟು ನೋಡುಗರಿಗೆ ಹತ್ತಿರವಾಗುತ್ತಿತ್ತು. ಶೀಘ್ರದಲ್ಲೇ ಸಿನಿಮಾ ಜಿಯೋ ಹಾಟ್ಸ್ಟರ್ ಓಟಿಟಿಗೆ ಬರಲಿದೆ.


Click it and Unblock the Notifications











