Raghavendra Stores Review: ಹೋಟಲ್ಗೆ ಹೋದವ್ರಿಗೆ ನಗು ಗ್ಯಾರಂಟಿ.. 'ಪರಮಾತ್ಮ'ನ ನೆನೆದರೆ ಭೋಜನ ಫಿಕ್ಸ್!
'ರಾಘವೇಂದ್ರ ಸ್ಟೋರ್ಸ್' ಈ ಸಿನಿಮಾ ಕುತೂಹಲ ಕೆರಳಿಸುವುದಕ್ಕೆ ಮೂರು ಪ್ರಮುಖ ಕಾರಣ. ನವರಸ ನಾಯಕ ಜಗ್ಗೇಶ್. ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್. ಈ ಮೂವರ ಸಂಗಮ ಈ ಮಟ್ಟಿಗಿನ ನಿರೀಕ್ಷೆಯನ್ನು ಹುಟ್ಟಾಕಿದೆ.
ಸುಮಾರು 40 ವರ್ಷಗಳ ಕಾಲ ಸಿನಿಪ್ರಿಯರನ್ನು ರಂಜಿಸುತ್ತಿರುವ ಜಗ್ಗೇಶ್ ಮತ್ತೆ ನಗಿಸೋಕೆ ಬರುತ್ತಿದ್ದಾರೆ. ಹಾಸ್ಯದ ಜೊತೆಗೆ ಒಂದಿಷ್ಟು ಭಾವುಕ ಸನ್ನಿವೇಶಗಳು, ಒಂದಿಷ್ಟು ಸಂದೇಶಗಳು ಇರುತ್ತೆ ಅನ್ನೋದು ಸಿನಿಮಾ ಆರಂಭಕ್ಕೂ ಮುನ್ನ ಇರುವ ನಿರೀಕ್ಷೆ.

ಇನ್ನು ಆಹಾರ ಪ್ರಿಯರಿಗೆ ವಿಶೇಷ ಅನುಭವ. ಸಂಗೀತ ಪ್ರಿಯರ ಕಿವಿಗಳಿಗೆ ಹಿತವಾದ ಅನುಭವ. ಡೈಲಾಗ್ ಕಚಗುಳಿ ಇಡಬೇಕು. ಸೆಂಟಿಮೆಂಟ್ ಮನಸ್ಸಿಗೆ ತಾಗಬೇಕು. ಕೊನೆಯಲ್ಲೊಂದು ಸಂದೇಶ ಎಲ್ಲರಿಗೂ ಅರ್ಥ ಆಗಬೇಕು. ಇವಿಷ್ಟು ಸಾಮಾನ್ಯ ಜನರ ನಿರೀಕ್ಷೆ. ಅದನ್ನು ರಾಘವೇಂದ್ರ ಸ್ಟೋರ್ಸ್ ಪೂರೈಸಿದೆಯೇ? ತಿಳಿಯಲು ಮುಂದೆ ಓದಿ.
'ರಾಘವೇಂದ್ರ ಸ್ಟೋರ್ಸ್' ಹಿನ್ನೆಲೆಯೇನು?
'ರಾಘವೇಂದ್ರ ಸ್ಟೋರ್ಸ್' ಸಿನಿಮಾ ನೋಡುವುದಕ್ಕೂ ಮುನ್ನ ಸಿನಿಮಾದ ಪಾತ್ರ ಪರಿಚಯ ಮಾಡಿಕೊಳ್ಳೋದು ಮುಖ್ಯ. ಸಿನಿಮಾ ನಾಯಕ ಹಯವದನ ಅರ್ಥಾತ್ ಜಗ್ಗೇಶ್. ಇವರ ತಂದೆ ಗುಂಡ ಭಟ್ರು ಅಂದ್ರೆ ದತ್ತಣ್ಣ. ಇವರು ರಾಘವೇಂದ್ರ ಸ್ಟೋರ್ಸ್ ಓನರ್. ಮದುವೆ ಮುಂಜಿಗಳಿಗೆ ಕೇಟರಿಂಗ್ ಸರ್ವಿಸ್ ಕೊಟ್ಟು ಸುತ್ತಮುತ್ತಲೂ ಫೇಮಸ್ ಆಗಿರುತ್ತಾರೆ.
ಇವರೊಂದಿಗೆ ಹಾಸ್ಯ ಮಿತ್ರ ಕೋಗಿಲೆ ಅವತಾರವೆತ್ತಿದ್ದಾರೆ. ಜಗ್ಗೇಶ್ ಪಾತ್ರ ನಾಯಕಿ ಶ್ವೇತಾ ಶ್ರೀವತ್ಸವ್. ಇವರು ಮದುವೆ, ಸಭೆ ಸಮಾರಂಭಗಳಲ್ಲಿ ಹಾಡೋದು ಇವರ ಕೆಲಸ. ಹಾಸ್ಯ ಮತ್ತಷ್ಟು ಪವರ್ ಕೊಡೋಕೆ ರವಿಶಂಕರ್ ಗೌಡ ಇದ್ದಾರೆ. ವಿಲನ್ ಆಗಿ ಅಚ್ಯುತ್ ಕುಮಾರ್ ಸಿಗ್ತಾರೆ. ಇನ್ನೂ ಹಲವು ಪಾತ್ರಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತವೆ.

ಹಯವದನನ ಕಥೆಯೇನು?
ಹಯವದನ, ವಯಸ್ಸು 40 ವರ್ಷ. ಇನ್ನು ಮದುವೆ ಆಗಿಲ್ಲ. ಸಿನಿಮಾದ ಆರಂಭದಲ್ಲಿಯೇ ಜಗ್ಗೇಶ್ ಹೆಣ್ಣು ನೋಡುವುದಕ್ಕೆ ಹೋಗುತ್ತಾರೆ. ಆ ಹುಡುಗಿ ಜಗ್ಗೇಶ್ ತಮ್ಮನನ್ನು ಇಷ್ಟಪಟ್ಟು ಮದುವೆ ಆಗುತ್ತಾರೆ. ಇಲ್ಲಿಂದ ಹಯವದನನ ಮದುವೆ ಸರ್ಕಸ್ ಶುರುವಾಗುತ್ತೆ.
ಇನ್ನೊಂದು ಕಡೆ ಶ್ವೇತಾ ಶ್ರೀವತ್ಸವ್ ಮದುವೆ ಕೂಡ ಏನೋ ಒಂದು ಕಾರಣದಿಂದ ನಿಂತು ಹೋಗಿರುತ್ತೆ. ಇವರದ್ದು ಹೆಚ್ಚು ಕಡಿಮೆ ಇದೇ ಪರಿಸ್ಥಿತಿ. ಫಸ್ಟ್ ಮುಗಿಯುವುದರೊಳಗೆ ಸಿನಿಮಾದಲ್ಲಿ ಜಗ್ಗೇಶ್ ಹಾಗೂ ಶ್ವೇತಾ ಶ್ರೀವತ್ಸವ್ ಇಬ್ಬರ ಮದುವೆ ಆಗಿರುತ್ತೆ. ಆಮೇಲೆ ಒಂದಿಷ್ಟು ಸಮಸ್ಯೆಗಳು ಎದುರಾಗುತ್ತೆ. ಇಷ್ಟು ಫಸ್ಟ್ ಹಾಫ್ನ ಒನ್ ಲೈನ್ ಸ್ಟೋರಿ. ಅಸಲಿಗೆ ಸೆಕೆಂಡ್ ಹಾಫ್ನಲ್ಲಿ ಅಸಲಿ ಕಥೆ ಆರಂಭ ಆಗುತ್ತೆ.
ಬೋರ್ ಹೊಡೆಸಲ್ಲ ಸಿನಿಮಾ
ಜಗ್ಗೇಶ್ ಸಿನಿಮಾ ಅಂದ್ಮೇಲೆ ಬೋರ್ ಹೊಡೆಸೋ ಮಾತಿಲ್ಲ. ನವರಸ ನಾಯಕನ ಡೈಲಾಗ್ ಪಂಚಿಂಗ್ ಆಗಿವೆ. ಹೀಗಾಗಿ ಸಿನಿಮಾ ಬೋರ್ ಹೊಡಿಸಲ್ಲ. ಲೇಟ್ ಆಗಿ ಮದುವೆ ಆದವರ ಸಮಸ್ಯೆಯೇನು? ಅನ್ನೋದನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿದೆ.
ಫಸ್ಟ್ ಹಾಫ್ನಲ್ಲಿ ಜಗ್ಗೇಶ್ ಹಾಗೂ ಹಾಸ್ಯ ನಟ ಮಿತ್ರ ಅವರ ಕಾಂಬಿನೇಷನ್ ಇಷ್ಟ ಆಗುತ್ತೆ. ಈ ಸಿನಿಮಾದಲ್ಲಿ ಮಿತ್ರಗೆ ಮಾತು ಬರಲ್ಲ. ಹೀಗಾಗಿ ಜಗ್ಗೇಶ್ ಹಾಗೂ ಮಿತ್ರ ಕಾಂಬಿನೇಷನ್ ಸೀನ್ಗಳು ಪ್ರೇಕ್ಷಕರಿಗೆ ಮಜಾ ಕೊಡುತ್ತವೆ.
ಹಾರ್ಟ್ ಟಚ್ಚಿಂಗ್ ಕ್ಲೈಮ್ಯಾಕ್ಸ್
ತಂದೆ (ದತ್ತಣ್ಣ) ಹಾಗೂ ಮಗ (ಜಗ್ಗೇಶ್) ನಡುವಿನ ಕ್ಲೈಮ್ಯಾಕ್ಸ್ ಸೀನ್ ಸಿನಿಮಾ ಹೈಲೈಟ್. ಊಟನ ಹಾಳು ಮಾಡಬಾರದು. ಕಷ್ಟದಲ್ಲಿ ಇರುವವರಿಗೆ ಹೇಗೆ ಸಹಾಯ ಮಾಡಬೇಕು ಅನ್ನೋ ಸಂದೇಶವಿದೆ. ಎಲ್ಲಕ್ಕ್ಕಿಂತ ಹೆಚ್ಚಾಗಿ ಹಾಸ್ಯದ ಜೊತೆ ಭಾವುಕತೆ ಚೆನ್ನಾಗಿ ಹೊಂದಿಕೊಂಡರೆ, ಆ ಸಿನಿಮಾ ಹಿಟ್ ಆದಂತೆ. ಇಲ್ಲೂ ಅದನ್ನು ಕಾಣಬಹುದು.
ಎಲೆಕ್ಷನ್ ಹತ್ತಿರ ಇರೋದ್ರಿಂದ ರೆಸಾರ್ಟ್ ರಾಜಕೀಯ, ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳೋಕೆ ರಾಜಕೀಯ ವ್ಯಕ್ತಿಗಳು ಏನೆಲ್ಲ ಮಾಡುತ್ತಾರೆ ಅನ್ನೋ ಸೀನ್ ಪ್ರೇಕ್ಷಕರಿಗೆ ಮಜಾ ಕೊಡುತ್ತೆ. ಇಡೀ ಸಿನಿಮಾ ಎಲ್ಲೂ ಬೋರ್ ಆಗಲ್ಲ. ಆದರೆ, ಅತ್ಯದ್ಬುತ ಅನ್ನೋ ಸೀನ್ ಇಲ್ಲ.
ಪ್ಲಸ್ ಏನು ಮೈನಸ್ ಏನು?
ಜಗ್ಗೇಶ್ ಸಿನಿಮಾ ಪ್ಲಸ್. ಇಡೀ ಸಿನಿಮಾ ಅವರ ಮೇಲೆ ಸಾಗುತ್ತೆ. ಕ್ಲೈಮ್ಯಾಕ್ಸ್ನಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ನೀಡಿದ ಗೌರವ ಭಾವುಕರನ್ನಾಗಿಸುತ್ತೆ. ಕ್ಯಾಮರಾ ವರ್ಕ್ ಓಕೆ. ಅಜನೀಶ್ ಲೋಕನಾಥ್ ಸಂಗೀತ 50:50. ಸಿಂಗಲ್ ಸುಂದರ ಹಾಡು ಇಷ್ಟ ಆಗುತ್ತೆ. ಡೈಲಾಗ್ ಚೆನ್ನಾಗಿದೆ.
ಇನ್ನು ಮೈನಸ್ ಏನಂದ್ರೆ, ಫಸ್ಟ್ ಹಾಫ್ನಲ್ಲಿ ಫಸ್ಟ್ ನೈಟ್ ಬಗ್ಗೆನೇ ಹೆಚ್ಚು ಸೀನ್ಗಳಿವೆ. ಅದು ಮಕ್ಕಳೊಂದಿಗೆ ಸಿನಿಮಾ ನೋಡುವುದಕ್ಕೆ ತೊಂದರೆ ಆಗಬಹುದು. ಅದು ಬಿಟ್ಟರೆ, ಇಡೀ ಸಿನಿಮಾ ಮಜವಾಗಿದೆ. ಪ್ರೇಕ್ಷಕರಿಗೆ ಮನರಂಜನೆ ನೀಡೋದ್ರಲ್ಲಿ ಡೌಟೇ ಇಲ್ಲ. 'ರಾಘವೇಂದ್ರ ಸ್ಟೋರ್ಸ್' ಉಪಹಾರ, ಲಂಚ್, ಡಿನ್ನರ್ ಎಲ್ಲವೂ ಇಷ್ಟ ಆಗುತ್ತೆ.


Click it and Unblock the Notifications











