'ಕಿಚ್ಚು' ವಿಮರ್ಶೆ: ಕಾನನದ ಉಳಿವಿಗಾಗಿ ಕಿಚ್ಚಿನ ಕದನ
ದುಡ್ಡಿಗಾಗಿ ಕಾಡಿನ ನಾಶ, ಕೆಲಸಗಾರರ ಮೇಲೆ ಕಾಫಿ ಎಸ್ಟೇಟ್ ಮಾಲೀಕರ ದೌರ್ಜನ್ಯ, ಸಾಲದ ಬಾಧೆ ತಾಳದ ರೈತರ ಗೋಳು, ಪೊಲೀಸ್ ಇಲಾಖೆಯಲ್ಲಿನ ಒಳ ರಾಜಕೀಯ, ನಕ್ಸಲೀಯರ ಹೋರಾಟ, ಅಮಾಯಕರ ದುರ್ಮರಣ... ಈ ಎಲ್ಲ ಅಂಶಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಚಿತ್ರ 'ಕಿಚ್ಚು'.
'ಕಿಚ್ಚು' ಚಿತ್ರ ಕಥಾಹಂದರ
ಹಣದ ಆಸೆಗಾಗಿ ಮರ ಕಡಿದು, ಕಾಡಿನ ನಾಶ ಮಾಡುವವರ ವಿರುದ್ಧ ಹೋರಾಡುವ ಮುಗ್ಧ ಹುಡುಗನ ಕಿಚ್ಚಿನ ಕಥೆಯೇ ಈ 'ಕಿಚ್ಚು' ಸಿನಿಮಾ. ಮಾತು ಬಾರದ, ಕಿವಿ ಕೇಳದ ಸೂರಿ (ಧ್ರುವ್ ಶರ್ಮಾ) ಪರಿಸರ ಸಂರಕ್ಷಿಸಲು ಆಯ್ಕೆ ಮಾಡಿಕೊಳ್ಳುವ ದಾರಿ ಹಾಗೂ ಅದರ ಸಾಧಕಬಾಧಕಗಳ ಪರಾಮರ್ಶೆಯೇ ಈ ಚಿತ್ರ.
ಎಲ್ಲರ ಮನ ಗೆಲ್ಲುವ ಧ್ರುವ್ 'ಅಭಿನಯ'
ನಿಜ ಜೀವನದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ನಟ ಧ್ರುವ್ ಶರ್ಮಾ ಹಾಗೂ ಅಭಿನಯ ತೆರೆಮೇಲೂ ಹಾಗೇ ಕಾಣಿಸಿಕೊಂಡಿದ್ದಾರೆ. ಆಂಗಿಕ ಹಾವಭಾವ ಹಾಗೂ ಮೂಕಾಭಿನಯದ ಮೂಲಕವೇ ಧ್ರುವ್ ಶರ್ಮಾ ಹಾಗೂ ಅಭಿನಯ ಪ್ರೇಕ್ಷಕರ ಮನ ಗೆಲ್ಲುತ್ತಾರೆ.
'ಡೀಗ್ಲಾಮರಸ್' ರಾಗಿಣಿ
ಗ್ಲಾಮರ್ ಗೊಂಬೆ ರಾಗಿಣಿ ಮೊಟ್ಟಮೊದಲ ಬಾರಿಗೆ 'ಕಿಚ್ಚು' ಚಿತ್ರದಲ್ಲಿ ಡೀಗ್ಲಾಮರಸ್ ಪಾತ್ರ ನಿರ್ವಹಿಸಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಹುಡುಗಿಯಾಗಿ, ಊರಿಗೆ ಬುದ್ಧಿ ಹೇಳುವ ವಿದ್ಯಾವಂತೆಯಾಗಿ, ದಿಟ್ಟ ಹೆಣ್ಮಗಳ ಪಾತ್ರದಲ್ಲಿ ರಾಗಿಣಿ ಅಭಿನಯ ಚೆನ್ನಾಗಿದೆ.
ಸರಿ-ತಪ್ಪು ವಿಮರ್ಶೆ ಮಾಡುವ ಸುದೀಪ್
'ಕಿಚ್ಚು' ಚಿತ್ರದಲ್ಲಿ ಡಾಕ್ಟರ್ ಆಗಿ ಬರುವ ಸುದೀಪ್ ಒಂದು ಸೀನ್ ಗೆ ಮಾತ್ರ ಸೀಮಿತ. ಒಂದೇ ಸೀನ್ ನಲ್ಲಿ ಕಾಣಿಸಿಕೊಂಡರೂ, ಸುದೀಪ್ ನ ನಟನೆ ಮತ್ತು ಆಡುವ ಮಾತುಗಳು ಪರಿಣಾಮಕಾರಿಯಾಗಿದೆ. ಸಾಯಿ ಕುಮಾರ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ.
ಕಣ್ಮನ ಸೆಳೆಯುವ ಲೊಕೇಶನ್ ಗಳು
ಭದ್ರ ಅರಣ್ಯ ಪ್ರದೇಶದ ಹಸಿರ ಸಿರಿ 'ಕಿಚ್ಚು' ಚಿತ್ರದಲ್ಲಿ ಪ್ರೇಕ್ಷಕರ ಕಣ್ಣು ಕುಕ್ಕುತ್ತದೆ. ಕ್ಯಾಮರಾ ವರ್ಕ್ ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಹಾಡುಗಳು ಸುಮಾರಾಗಿವೆ.
ಸಂದೇಶ ಸಾರುವ ಸಿನಿಮಾ
ಅರಣ್ಯ ನಾಶ ಆದರೆ ಮನುಕುಲವೇ ಸರ್ವನಾಶ, ಸಮಾಜವನ್ನ ಉದ್ಧಾರ ಮಾಡ್ತೀವಿ ಅಂತ ಹೇಳುವವರು ಮೊದಲು ಸಮಾಜಕ್ಕೆ ಉದಾಹರಣೆ ಆಗಿರಬೇಕು ಎಂಬ ಸಂದೇಶ ಸಾರುವ ಸಿನಿಮಾ 'ಕಿಚ್ಚು'.
ಫೈನಲ್ ಸ್ಟೇಟ್ ಮೆಂಟ್
ನಿಧಾನಗತಿಯಲ್ಲಿ ಸಾಗುವ 'ಕಿಚ್ಚು' ಚಿತ್ರದಲ್ಲಿ ಕೆಲ ಸನ್ನಿವೇಶಗಳು ಪರಿಣಾಮ ಬೀರುವುದಿಲ್ಲ ಅನ್ನೋದು ಬಿಟ್ಟರೆ, ಸಿನಿಮಾದ ಆಶಯ ಉತ್ತಮವಾಗಿದೆ. ಮಾಸ್ ಸಿನಿಮಾಗಳನ್ನ ನೋಡಿ ನೋಡಿ ಬೇಸರ ಪಟ್ಟುಕೊಂಡಿರುವವರು ಒಮ್ಮೆ 'ಕಿಚ್ಚು' ಚಿತ್ರವನ್ನ ನೋಡಬಹುದು.


Click it and Unblock the Notifications











