Petta review: ಅಭಿಮಾನಿಗಳು ನಿರೀಕ್ಷೆ ಮಾಡಿದ್ದು ಇದನ್ನೇ
ಕಾರ್ತಿಕ್ ಸುಬ್ಬರಾಜು ಚಿತ್ರಕ್ಕೆ ರಜನಿಕಾಂತ್ ಓಕೆ ಅಂದಾಗಲೇ ಪೇಟಾ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿತ್ತು. ಇದೀಗ, ಸಿನಿಮಾ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಸೂಪರ್ ಮತ್ತು ಕಾರ್ತಿಕ್ ಸುಬ್ಬರಾಜು ಅಭಿಮಾನಿಗಳನ್ನ ರಂಜಿಸುವಲ್ಲಿ ಸಕ್ಸಸ್ ಕಂಡಿದ್ದಾರೆ. ಪೂರ್ತಿ ವಿಮರ್ಶೆ ಮುಂದೆ ಓದಿ....
ಚಿತ್ರ: ಪೇಟಾ
ನಿರ್ದೇಶನ: ಕಾರ್ತಿಕ್ ಸುಬ್ಬರಾಜು
ಕಲಾವಿದರು: ರಜನಿಕಾಂತ್, ಸಿಮ್ರಾನ್, ತ್ರಿಷಾ, ವಿಜಯ್ ಸೇತುಪತಿ ಮತ್ತು ಇತರರು
ಬಿಡುಗಡೆ: ಜನವರಿ 10, 2018
'ಪೇಟಾ' ಚಿತ್ರದ ಕಥೆಯೇನು?
ರಜನಿಕಾಂತ್ 'ಪೇಟಾ' ಚಿತ್ರದಲ್ಲಿ ಕಾಳಿ ಪಾತ್ರವನ್ನ ನಿರ್ವಹಿಸಿದ್ದಾರೆ. ಡೆಹ್ರಾಡೂನ್ ಹಾಸ್ಟೆಲ್ ವೊಂದರಲ್ಲಿ ವಾರ್ಡನ್ ಆಗಿ ಕೆಲಸ ಮಾಡ್ತಿರ್ತಾರೆ. ಉತ್ತರ ಭಾರತದಲ್ಲಿ ಕಾಳಿ ಕೆಲಸ ಮಾಡ್ತಿರೋದರ ಹಿಂದೆ ಒಂದು ಬಲವಾದ ಕಾರಣವಿದೆ. ಅದಕ್ಕೆ ರಾಜಕಾರಣಿಗಳ ನಂಟಿದೆ. ಅದು ಏನು ಎಂಬುದು ಸಿನಿಮಾದಲ್ಲಿಯೇ ನೋಡಬೇಕಿದೆ.
ಬಾಸ್ ಈಸ್ ಬ್ಯಾಕ್
90ರ ದಶಕದಲ್ಲಿ ನೋಡುತ್ತಿದ್ದ ರಜನಿಕಾಂತ್ ಮತ್ತೆ ತೆರೆಮೇಲೆ ಬಂದಿದ್ದಾರೆ. ಅದೇ ಸ್ಟೈಲ್ ಅದೇ ಖದರ್ ಮೂಲಕ ಕಂಬ್ಯಾಕ್ ಆಗಿದ್ದಾರೆ. ಹಳೇ ತಲೈವಾರನ್ನ ತೆರೆಮೇಲೆ ನೋಡೋದು ಒಂಥರಾ ಖುಷಿ ಕೊಡುತ್ತೆ. ಹಾಗಾಗಿ, ರಜನಿಕಾಂತ್ ಅಭಿಮಾನಿಗಳಿಗೆ ಇದು ಹಬ್ಬದೂಟವಾಗಿದೆ.
ತಲೈವಾ ಜೊತೆ ವಿಜಯ್ ಗುದ್ದಾಟ
ವಿಜಯ್ ಸೇತುಪತಿ ಮತ್ತು ರಜನಿಕಾಂತ್ ನಡುವಿನ ಕಾದಾಟ ಪ್ರತಿಯೊಬ್ಬರು ನೋಡಬೇಕು ಕನಸು ಎನ್ನಬಹುದು. ಈ ಪಾತ್ರ ವಿಜಯ್ ಆಯ್ಕೆಯಾಗಿದ್ದು ಪ್ಲಸ್ ಪಾಯಿಂಟ್ ಆಗಿದೆ. ಮೊದಲ ಸಲ ತಮಿಳು ಚಿತ್ರದಲ್ಲಿ ಅಭಿನಯಿಸಿರುವ ನವಾಜ್ಜುದ್ದೀನ್ ಸಿದ್ದಿಕಿ ತಮ್ಮದೇ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.
ಸಿಮ್ರಾನ್ ಮತ್ತು ತ್ರಿಷಾ
ರಜನಿಕಾಂತ್ ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಸಿಮ್ರಾನ್ ಎಂದಿನಂತೆ ಹೊಸ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ತುಂಬಾ ವರ್ಷದ ನಂತರ ಕಾಣಿಸಿಕೊಂಡರು ತುಂಬಾ ಫ್ರೆಶ್ ಆಗಿ ಮಿಂಚಿದ್ದಾರೆ. ತ್ರಿಷಾ ಅವರದ್ದು ಸಣ್ಣ ಪಾತ್ರವಾಗಿದ್ದರೂ, ಚಿತ್ರದಲ್ಲಿ ಮುಖ್ಯವಾದ ಪಾತ್ರ ಅದು. ಅದನ್ನ ಉತ್ತಮವಾಗಿ ನಿಭಾಯಿಸಿದ್ದಾರೆ.
ಪ್ಲಸ್ ಪಾಯಿಂಟ್ ಯಾವುದು
ಕಳೆದ ಎರಡ್ಮೂರು ಚಿತ್ರಗಳಿಗೆ ಹೋಲಿಸಿಕೊಂಡರೇ ರಜನಿಕಾಂತ್ ತುಂಬಾ ಹೊಸದಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಹಳೆ ಖದರ್, ಹಳೆ ಗೆಟಪ್ ಗಳಲ್ಲಿ ಮಿಂಚಿರುವುದು ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಪೇಟಾ ಚಿತ್ರಕ್ಕೆ ಬೇಕಾಗಿರುವ ಬೂಸ್ಟ್ ಕೊಡುವಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಯಶಸ್ಸು ಕಂಡಿದ್ದಾರೆ. ನಾಯಕಿಯರಿಗೆ ಪ್ರಾಮುಖ್ಯತೆ ನೀಡಿರುವುದು. ಅನಿರುದ್ಧ ರವಿಚಂದ್ರನ್ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ಜೋಶ್ ನೀಡಿದೆ.
ಕೊನೆಯದಾಗಿ ಹೇಳುವುದಾದರೇ?
ಚಿತ್ರದ ಕ್ಲೈಮ್ಯಾಕ್ಸ್ ಇನ್ನು ಗಟ್ಟಿಯಾಗಿರಬಹುದಾಗಿತ್ತು. ಕ್ಲೈಮ್ಯಾಕ್ಸ್ ನಲ್ಲಿ ಅಷ್ಟೊಂದು ಧಮ್ ಇಲ್ಲದೇ ಇರುವುದು ಪೇಟಾಗೆ ಸ್ವಲ್ಪ ಹಿನ್ನಡೆಯಾಗಬಹುದು. ಅಂತಿಮವಾಗಿ ಹೇಳುವುದಾರೇ, ರಜನಿಕಾಂತ್ ಅಭಿಮಾನಿಯೊಬ್ಬ ನಿರ್ದೇಶಕನಾಗಿ ಅವರ ಸಿನಿಮಾವನ್ನೇ ಮಾಡಿದಾಗ, ಆತನಿಗೆ ಗೊತ್ತಿರುತ್ತೆ. ತಲೈವಾ ಫ್ಯಾನ್ಸ್ ಏನು ನಿರೀಕ್ಷೆ ಮಾಡ್ತಾರೆ ಅಂತ. ಅದನ್ನ ಗಮನದಲ್ಲಿಟ್ಟುಕೊಂಡು ಕಾರ್ತಿಕ್ ಮ್ಯಾನೇಜ್ ಮಾಡಿದ್ದಾರೆ. ಅಭಿಮಾನಿಗಳಿಗೆ ನಿರಾಸೆಯಾಗದಂತೆ ಪೇಟಾ ತಂದಿದ್ದಾರೆ.


Click it and Unblock the Notifications











