Shivaji Surathkal Review: ಕ್ರೈಂ ಹಾಗೂ ಸೆಂಟಿಮೆಂಟ್ ನಡುವೆ ಜೀಕುವ ಕುತೂಹಲಕಾರಿ ಕಹಾನಿ
ಕನ್ನಡದಲ್ಲಿ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಕಮ್ಮಿ. ಆದರೆ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುತ್ತದೆ. 3 ವರ್ಷಗಳ ಹಿಂದೆ ಇದೇ ಜಾನರ್ನಲ್ಲಿ ಬಂದಿದ್ದ ಶಿವಾಜಿ ಸುರತ್ಕಲ್ ಸಿನಿಮಾ ಸಕ್ಸಸ್ ಕಂಡಿತ್ತು. ಆ ಸಿನಿಮಾ ಸೀಕ್ವೆಲ್ ಅಂದಾಗ ಸಹಜವಾಗಿಯೇ ಕುತೂಹಲ ಕೆರಳಿತ್ತು. ಕೊನೆಗೂ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ.
ಪೊಲೀಸ್ ಇಲಾಖೆಯ ಶೆರ್ಲಾಕ್ ಹೋಮ್ಸ್ ಅಂತ್ಲೇ ಕರೆಸಿಕೊಂಡಿರೋ ಶಿವಾಜಿ ಸುರತ್ಕಲ್ಗೆ ಈ ಬಾರಿ ಹೊಸ ಕೇಸ್ ಸಿಕ್ಕಿದೆ. ಈ ಕೇಸ್ನ ಮೂಲ ಕೆದಕುತ್ತಾ ಹೋದವನಿಗೆ ಕೊನೆಗೆ ತಾನು ಈ ಸೀರಿಯಲ್ ಕಿಲ್ಲರ್ಗೆ ಬಲಿಪಶುವಾಗುವಂತಹ ಸಂದರ್ಭ ಎದುರಾಗುತ್ತದೆ. ಅದನ್ನೆಲ್ಲಾ ಭೇದಿಸಿ ಶಿವಾಜಿ ನಿಜವಾದ ಕೊಲೆಗಾರನನ್ನು ಹಿಡಿಯುತ್ತಾನಾ? ಇಲ್ವಾ ಅನ್ನೋದನ್ನು ಬಹಳ ರೋಚಕವಾಗಿ ಕಟ್ಟಿಕೊಡಲಾಗಿದೆ. ಸಾಕಷ್ಟು ಟ್ವಿಸ್ಟ್ಗಳು, ಟರ್ನ್ಗಳನ್ನು ಇಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ.

'ಶಿವಾಜಿ ಸುರತ್ಕಲ್ - 2' ಕಥೆಯೇನು?
ಪತ್ನಿಯನ್ನು ಕಳೆದುಕೊಂಡ ಶಿವಾಜಿ ಸುರತ್ಕಲ್ ಆಕೆಯ ನೆನಪುಗಳಿಂದ ಇನ್ನು ಹೊರಬಂದಿಲ್ಲ. ಇಂತಹ ಹೊತ್ತಲ್ಲಿ ಕಣ್ಣೆದುರೇ ಒಂದು ಕೊಲೆ ಆಗುತ್ತೆ. ಅದರ ಬೆನ್ನಲ್ಲೇ ಅವನ ಜೀವನಕ್ಕೆ ಮಗಳ ಆಗಮನವಾಗಿದೆ. ಆಕೆಯೇ ತನ್ನ ಸರ್ವಸ್ವ ಎಂದುಕೊಂಡಿರುತ್ತಾನೆ. ಆದರೆ ಆಕೆ ಶಿವಾಜಿ ಬಾಳಿಗೆ ಎಂಟ್ರಿ ಕೊಡುವುದರ ಹಿಂದೆ ಒಂದು ಘೋರ ಕಥೆಯಿದೆ. ಆ ಕಥೆಯ ನಾಯಕ ಹಾಗೂ ಖಳನಾಯಕ ರುದ್ರ. ಸುಟ್ಟ ಬೆಂಕಿಯಿಂದ ಎದ್ದು ಬಂದ ಮಾಯಾವಿ ಯಾರು? ಆತ ಸರಣಿ ಹತ್ಯೆಗಳನ್ನು ಮಾಡುವುದು ಯಾಕೆ? ಆ ಹತ್ಯೆಗಳ ರಹಸ್ಯ ಭೇದಿಸಲು ಹೊರಟ ಶಿವಾಜಿ ಅದೇ ಸುಳಿಯಲ್ಲಿ ಯಾಕೆ ಸಿಲುಕಿಕೊಂಡಿರುತ್ತಾನೆ? ಇದಕ್ಕೆಲ್ಲಾ ಉತ್ತರ ಬೇಕು ಅಂದ್ರೆ ಸಿನಿಮಾ ನೋಡ್ಬೇಕು.
ಉಡುಪಿಯಲ್ಲಿ ನಡೆಯುವ ಒಂದು ಹತ್ಯೆಯಿಂದ ಶಿವಾಜಿ ಮಾಯಾವಿ ಕೇಸ್ನ ಹಿಂದೆ ಬೀಳ್ತಾನೆ. ಅಲ್ಲಿಂದ ಮುಂದೆ ಮತ್ತೆ 3 ಕೊಲೆಗಳು ನಡೆಯುತ್ತವೆ. ಪ್ರತಿ ಕೊಲೆಯನ್ನು ಹಂತಕ ಸುಳಿವು ಕೊಡುತ್ತಾ ಹೋಗುತ್ತಾನೆ, ಜೊತೆಗೆ ಶಿವಾಜಿ ಸುರತ್ಕಲ್ಗೆ ಸವಾಲಾಗುತ್ತಾ ಸಾಗುತ್ತಾನೆ. ಶಿವಾಜಿ ಕೊಲೆಗಾರನ ಸಮೀಪಕ್ಕೆ ಹೋಗುತ್ತಿದ್ದಂತೆ ಆತ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ ಕಳ್ಳ ಪೊಲೀಸ್ ಆಟದಲ್ಲಿ 5ನೇ ಕೊಲೆ ಆಗುವುದಕ್ಕು ಮುನ್ನ ಶಿವಾಜಿ ಹಂತಕನ ಮುಂದೆ ನಿಂತಿರುತ್ತಾನೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅಂದ್ರೆ, ಪ್ರೇಕ್ಷಕರನ್ನು ಮೋಹಕವಾಗಿ ನಂಬಿಸಿ ಮೋಸ ಮಾಡಬೇಕು. ಇದಕ್ಕೆ ಜಾಣ್ಮೆಯ ನಿರೂಪಣೆ ಬಹಳ ಅಗತ್ಯ. ಕಥೆಯಲ್ಲಿರುವ ಎಲ್ಲಾ ಪಾತ್ರಗಳ ಮೇಲೂ ಅನುಮಾನ ಮೂಡಬೇಕು, ಹಾಗೆ ಮಾಡಬೇಕು. ಅದಕ್ಕೆ ತಲೆಗೆ ಹೆಚ್ಚು ಕೆಲಸ ಕೊಡಬೇಕು. ಆ ವಿಚಾರದಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಶಿವಾಜಿಗೆ ತಾನೇ ಕೊಲೆಗಳು ಮಾಡಿದಂತೆ ಕನಸು ಬೀಳುವುದು, ಜೊತೆಗೆ ನನ್ನನ್ನೇ ಕೊಲೆಗಾರ ಎಂದುಕೊಳ್ಳಿ ಅಂತ ಒಂದು ಸನ್ನಿವೇಶದಲ್ಲಿ ಹೇಳಿ ಪ್ರೇಕ್ಷಕರ ತಲೆಗೂ ಕೆಲಸ ಕೊಟ್ಟಿದ್ದಾರೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೇ ಅಂದ್ರೆ ಕೊನೆಗೆ ಶಿವಾಜಿನೇ ಅಪರಾಧಿ ಎನ್ನುವ ಮಟ್ಟಕ್ಕೆ ಹೋಗುತ್ತೆ.

ಅಲ್ಲಲ್ಲಿ ಫ್ಯಾಶ್ಬ್ಯಾಕ್ನಲ್ಲಿ ಶಿವಾಜಿಯ ಸುರತ್ಕಲ್ ಹಿನ್ನಲೆ, ಮದುವೆಯನ್ನು ಸನ್ನಿವೇಶಗಳನ್ನೆಲ್ಲಾ ತರಲಾಗಿದೆ. ಇದು ಕೆಲವೊಮ್ಮೆ ಪ್ರೇಕ್ಷಕರ ಕುತೂಹಲಕ್ಕೆ ಅಲ್ಲಲ್ಲಿ ಬ್ರೇಕ್ ಹಾಕಿದಂತಾಗಿದೆ. ಆದರೆ ಕಥೆ ಬಿಟ್ಟು ಎಲ್ಲೂ ಹೋಗುವುದಿಲ್ಲ ಅನ್ನೋದು ಕೂಡ ಮೆಚ್ಚುವಂತದ್ದು. ಇನ್ನು ಇದು ಬರೀ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾತ್ರವಲ್ಲ. ಸಂಬಂಧಗಳನ್ನು ಬೆಸೆಯುವಂತಹ ಸಂಭ್ರಮಿಸುವಂತಹ ಸಿನಿಮಾ ಕೂಡ ಹೌದು. ಇಲ್ಲಿ ತಂದೆ ಮಗಳ ಬಾಂಧವ್ಯ, ತಂದೆ ಮಗನ ಬಾಂಧವ್ಯ, ತಾಯಿ ಮಗಳ ಬಾಂಧವ್ಯ ಎಲ್ಲವೂ ಇದೆ.
ಕಲಾವಿದರ ಅಭಿನಯ ಹೇಗಿದೆ?
ಶಿವಾಜಿ ಸುರತ್ಕಲ್ ಪಾತ್ರದಲ್ಲಿ ರಮೇಶ್ ಅರವಿಂದ್ ಮತ್ತೊಮ್ಮೆ ಅದ್ಭುತ ಅಭಿನಯ ಪ್ರದರ್ಶಿಸಿದ್ದಾರೆ. ಒಬ್ಬ ತಂದೆಯಾಗಿ, ತನಿಖಾಧಿಕಾರಿಯಾಗಿ ಅವರದ್ದು ಪರಿಪೂರ್ಣ ಅಭಿನಯ. ಇನ್ನು ಶಿವಾಜಿ ತಂದೆ ವಿಜಯೇಂದ್ರ ಸುರತ್ಕಲ್ ಆಗಿ ತಮಿಳು ನಟ ನಾಸರ್ ಮಾಗಿದ ಅಭಿನಯವಿದೆ. ಶಿವಾಜಿಯ ಹಿರಿಯ ಅಧಿಕಾರಿ ದೀಪಿಕಾ ಕಾಮತ್ ಆಗಿ ಪಾತ್ರದಲ್ಲಿ ಮೇಘನಾ ಗಾಂವ್ಕರ್, ಬಾಲನಟಿ ಆರಾಧ್ಯ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ ಹೇಗಿದೆ?
ಚಿತ್ರದ ಬರವಣಿಗೆ ಬಹಳ ಚೆನ್ನಾಗಿದೆ. ಅದನ್ನು ಅಷ್ಟೇ ಸೊಗಸಾಗಿ ತೆರೆಮೇಲೆ ತಂದಿದ್ದಾರೆ ಕೂಡ. ಗುರುಪ್ರಸಾದ್ ಮತ್ತು ಮಧು ಅಂಬಟ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿದೆ. ಜ್ಯುಡಾ ಸ್ಯಾಂಡಿ ಸಂಗೀತ ಕೂಡ ಪರವಾಗಿಲ್ಲ. ನಿರ್ದೇಶನದ ಜೊತೆಗೆ ಆಕಾಶ್ ಶ್ರೀವತ್ಸ ಎಡಿಟಿಂಗ್ ಚೆನ್ನಾಗಿದೆ. ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಸುತ್ತಾ ಬಹಳ ಸೊಗಸಾಗಿ ಸಿನಿಮಾ ಕಟ್ಟಿಕೊಡಲಾಗಿದೆ.
ಕೊನೆ ಮಾತು
ಒಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಸೆಂಟಿಮೆಂಟ್ ಸೇರಿಸಿ ನಿರ್ದೇಶಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಪ್ರಯತ್ನ ಉತ್ತಮವಾಗಿದೆ ಆದರೆ ಫಲಿತಾಂಶ? ಅದನ್ನು ಬಿಟ್ಟು ನಿರ್ದೇಶಕರು ಬರೀ ಕೊಲೆ ರಹಸ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದರೆ ಶಿವಾಜಿ ಸುರತ್ಕಲ್ ಚಿತ್ರವನ್ನು ಮತ್ತಷ್ಟು ಚೆಂದಗಾಣಿಸುವ ಅವಕಾಶ ಇತ್ತು.


Click it and Unblock the Notifications











