Agnyathavasi Review: ತಾಳ್ಮೆ ಬೇಡುವ 'ಅಜ್ಞಾತವಾಸಿ'; ಹೆಚ್ಚು ನಿರೀಕ್ಷೆ ಇಲ್ದೆ ನೋಡೋದು ವಾಸಿ
ಹೇಮಂತ್ ರಾವ್ ನಿರ್ಮಾಣದ 'ಅಜ್ಞಾತವಾಸಿ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ದೊಡ್ಡಮಟ್ಟದಲ್ಲಿ ಚಿತ್ರಕ್ಕೆ ಪ್ರಚಾರ ಮಾಡಿಲ್ಲ. ಮೌತ್ ಟಾಕ್ನಿಂದಲೇ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂದು ಚಿತ್ರತಂಡ ನಂಬಿದೆ. ಇಂತಹ ಸಿನಿಮಾಗಳಿಗೆ ಆಹಾ ಓಹೋ ಅಂತೆಲ್ಲಾ ಹೆಚ್ಚು ಪ್ರಚಾರ ಮಾಡಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚು ಮಾಡದಿರುವುದು ಉತ್ತಮ.
ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಕಮ್ಮಿ. ಕುತೂಹಲಭರಿತವಾಗಿ ಅಂತಹ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭವಲ್ಲ. 'ಶಾಖಾಹಾರಿ' ಬಳಿಕ ರಂಗಾಯಣ ರಘು ನಟನೆಯ ಮತ್ತೊಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದಾಕ್ಷಣ ಕೆಲವರಲ್ಲಿ ನಿರೀಕ್ಷೆ ಇತ್ತು. ಸೊಗಸಾಗಿ ಕಟ್ ಮಾಡಿದ್ದ ಟ್ರೈಲರ್ ಆ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿತ್ತು. ಇದೀಗ ಸಿನಿಮಾ ರಾಜ್ಯಾದ್ಯಂತ ಕೆಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

'ಅಜ್ಞಾತವಾಸಿ' ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅಷ್ಟಕ್ಕೂ 'ಅಜ್ಞಾತವಾಸಿ' ಕಥೆಯೇನು? ಸಿನಿಮಾ ಹೇಗಿದೆ? ಮುಂದೆ ಓದಿ.
'ಅಜ್ಞಾತವಾಸಿ' ಕಥೆ
ಮಲೆನಾಡಿನ ಭಾಗದ ನಾಲ್ಕೇರಿ ಎಂಬ ಊರು. ಅಲ್ಲಿ ಪೊಲೀಸ್ ಠಾಣೆ ಇದ್ದರೂ 25 ವರ್ಷಗಳಿಂದ ಯಾವುದೇ ಕೇಸ್ ದಾಖಲಾಗಿರುವುದಿಲ್ಲ. ಸಣ್ಣ ತಪ್ಪು ಮಾಡುವವರು ಆ ಊರಿನಲ್ಲಿ ಇರುವುದಿಲ್ಲ. ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್(ರಂಗಾಯಣ ರಘು) ತಮ್ಮ ತಾಯಿಯ 25ನೇ ವರ್ಷದ ತಿಥಿ ಮಾಡುವುದರೊಂದಿಗೆ ಕಥೆ ಶುರುವಾಗುತ್ತದೆ. ಇದ್ದಕ್ಕಿದ್ದಂತೆ ಊರಿನ ಎಸ್ಟೇಟ್ ಮಾಲೀಕ ಶ್ರೀನಿವಾಸ್ ಗೌಡ(ಶರತ್ ಲೋಹಿತಾಶ್ವ) ಕೊನೆಯುಸಿರೆಳೆಯುತ್ತಾನೆ.
ಮೇಲ್ನೋಟಕ್ಕೆ ಗೌಡರದ್ದು ಸಹಜ ಸಾವು ಅನಿಸಿದರೂ ಪೊಲೀಸ್ ಇನ್ಸ್ಪೆಕ್ಟರ್ಗೆ ಅದು ಕೊಲೆ ಎನ್ನುವುದು ಗೊತ್ತಾಗುತ್ತದೆ. ಈ ನಡುವೆ ಆಕಸ್ಮಿಕವಾಗಿ ಮತ್ತೊಂದು ಹತ್ಯೆಯೂ ನಡೆದು ಹೋಗಿರುತ್ತದೆ. ಹಾಗಾದರೆ ಆ ಎರಡೂ ಕೊಲೆಗಳನ್ನು ಮಾಡಿದ್ದು ಯಾರು? ಇನ್ಸ್ಪೆಕ್ಟರ್ ಅಷ್ಟು ಬೇಗ ಪ್ರಕರಣವನ್ನು ಭೇದಿಸಿದ್ದು ಹೇಗೆ? ಅಷ್ಟಕ್ಕೂ 'ಅಜ್ಞಾತವಾಸಿ' ಯಾರು? ಎನ್ನುವ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕು ಅಂದರೆ ನೀವು ಸಿನಿಮಾ ನೋಡಬೇಕು.

ಸಿನಿಮಾ ಹೇಗಿದೆ?
90ರ ದಶಕದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಅದಕ್ಕೆ ಬೇಕಾದ ವಾತಾರವರಣ ಸೃಷ್ಟಿಸುವಲ್ಲಿ ಚಿತ್ರತಂಡ ಗೆದ್ದಿದೆ. ಆಗಷ್ಟೆ ಕಂಪ್ಯೂಟರ್ಗಳು ದೇಶದಲ್ಲಿ ಸದ್ದು ಮಾಡಲು ಆರಂಭಿಸಿದ್ದವು. ನಗರಗಳಿಗೆ ಹೋಲಿಸಿದರೆ ಮಲೆನಾಡಿದ ಸಣ್ಣ ಊರುಗಳಿಗೆ ಕಂಪ್ಯೂಟರ್ ಬರೋದು ದೊಡ್ಡ ವಿಷಯ. ಇನ್ನು ಇಮೇಲ್ ಮೂಲಕ ಸಂಪರ್ಕ ಸಾಧಿಸುತ್ತಿದ್ದದು ಹೀಗೆ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ದೊಡ್ಡ ಕಥೆ ಇಲ್ಲದೇ ಒಳ್ಳೆ ಚಿತ್ರಕಥೆಯೂ ಇಲ್ಲದೇ ಅಲ್ಲಲ್ಲೇ ಜಗ್ಗಾಡಿ ಸಿನಿಮಾ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅರ್ಧ ಗಂಟೆಯಲ್ಲಿ ಹೇಳಿ ಮುಗಿಸಬಹುದಾದ ಕಥೆಯನ್ನು 2 ಗಂಟೆ ತೋರಿಸುವ ಸಾಹಸ ಮಾಡಿದೆ ಚಿತ್ರತಂಡ. ಫಸ್ಟ್ ಹಾಫ್ನಲ್ಲೇ ಕಥೆ ಏನು ಎನ್ನುವುದು ಗೊತ್ತಾಗಿ ಹೋಗುತ್ತದೆ. ಬಳಿಕ ಸಿನಿಮಾ ಕುತೂಹಲ ಕಳೆದುಕೊಳ್ಳುತ್ತದೆ. ಕೊನೆಗೊಂದು ಟ್ವಿಸ್ಟ್ ಇಟ್ಟು ಭಾವನಾತ್ಮಕವಾದ ಫ್ಲಾಶ್ಬ್ಯಾಕ್ ಕಥೆ ಹೇಳಿ ಸಿನಿಮಾ ಮುಗಿಸಿದ್ದಾರೆ.
ಒಂದೇ ಸನ್ನಿವೇಶವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಕಟ್ಟಿಕೊಡಲು ಅದನ್ನೇ ರಿಪೀಟ್ ಮಾಡಿ ತೋರಿಸುವ ಪ್ರಯತ್ನ ಈಗಾಗಲೇ ಕೆಲ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಇಷ್ಟು ನಿಧಾನಗತಿಯ ಸಿನಿಮಾದಲ್ಲಿ ಆ ಪ್ರಯತ್ನ ಕಿರಿಕಿರಿ ಉಂಟುಮಾಡುತ್ತದೆ.
ಕಲಾವಿದರ ನಟನೆ
ರಂಗಾಯಣ ರಘು, ರವಿಶಂಕರ್ ಗೌಡ, ಪಾವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು ಇಷ್ಟವಾಗುತ್ತಾರೆ. ಆದರೆ ಇದಕ್ಕಿಂತಲೂ ಉತ್ತಮ ಅಭಿನಯವನ್ನು ಅವರ ಬೇರೆ ಸಿನಿಮಾಗಳಲ್ಲಿ ನಾವು ನೋಡಿಬಿಟ್ಟಿದ್ದೇವೆ.
ಸಿದ್ದು ಮೂಲಿಮನಿ ಅವರಿಗೆ ಚಿತ್ರದಲ್ಲಿ ಹೆಚ್ಚು ಅವಕಾಶ ಸಿಕ್ಕಿದೆ. ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಕೂಡ. ಇನ್ನು ಅರುಣ ಪ್ರೇಮಿಯಾಗಿ ಪಾವನಾ ಗೌಡ ಲಂಗಾ ದಾವಣಿಯಲ್ಲಿ ಗಮನ ಸೆಳೆಯುತ್ತಾರೆ. ಎಸ್ಟೇಟ್ ಮಾಲೀಕನ ಪಾತ್ರದಲ್ಲಿ ಶರತ್ ಲೋಹಿತಾಶ್ವ ಗತ್ತು ಚೆನ್ನಾಗಿದೆ. ಅರವಿಂದ್ ಕುಪ್ಲಿಕರ್ ಅವರನ್ನು ಇನ್ನು ಚೆನ್ನಾಗಿ ಬಳಸಿಕೊಳ್ಳುವ ಅವಕಾಶ ಇತ್ತು ಅನಿಸುತ್ತದೆ.
ಟೆಕ್ನಿಕಲಿ ಸಿನಿಮಾ
'ಅಜ್ಞಾತವಾಸಿ' ಚಿತ್ರದ ನಿಜವಾದ ಹೀರೋ ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ ಅಂದರೆ ತಪ್ಪಾಗಲ್ಲ. 90ರ ದಶಕದ ಕಾಲಘಟ್ಟವನ್ನು ಸೊಗಸಾಗಿ ತೆರೆಮೇಲೆ ತರಲು ಅವರು ಬಹಳ ಶ್ರಮಿಸಿದ್ದಾರೆ. ಕೆಲವರು ಕಡೆ ಸಂಭಾಷಣೆ ಇಷ್ಟವಾಗುತ್ತದೆ. ಆದರೆ 'ಗುಲ್ಟು' ರೀತಿಯ ಒಂದೊಳ್ಳೆ ಸಿನಿಮಾ ಕಟ್ಟಿಕೊಟ್ಟಿದ್ದ ಜನಾರ್ಧನ್ ಚಿಕ್ಕಣ್ಣ ಈ ಬಾರಿ ನಿರಾಸೆ ಮೂಡಿಸಿದ್ದಾರೆ. ದೃಶ್ಯಕಾವ್ಯವಾಗಿ ಯಾವುದೋ ಮಲಯಾಳಂ ಸಿನಿಮಾ ನೋಡಿದ ಅನುಭವವನ್ನು 'ಅಜ್ಞಾತವಾಸಿ' ಸಿನಿಮಾ ಕೊಡುತ್ತದೆ. ಆದರೆ ಕಥೆ, ಚಿತ್ರಕಥೆ, ಸಸ್ಪೆನ್ಸ್, ಥ್ರಿಲ್ ವಿಚಾರಕ್ಕೆ ಬಂದರೆ ಸಪ್ಪೆ ಎನಿಸಿಬಿಡುತ್ತದೆ. ಸೀದಾ ಸಾದಾ ಸಿನಿಮಾ ಆಗಿರುವುದರಿಂದ ಚರಣ್ ರಾಜ್ ಅವರಿಗೆ ಹೆಚ್ಚಿನ ಕೆಲಸ ಸಿಕ್ಕಿಲ್ಲ.
ಕೊನೆ ಮಾತು
ಚಿತ್ರತಂಡ ಒಂದೊಳ್ಳೆ ಪ್ರಯತ್ನ ಮಾಡಿದೆ. ಆದರೆ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಿಲ್ಲ. ಸಿನಿಮಾ ನಿಮ್ಮನ್ನು ಸೀಟಿನ ತುದಿಗೆ ತಂದು ಕೂರಿಸುವುದು ಇಲ್ಲ. ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋದರೆ ಸಿನಿಮಾ ಒಮ್ಮೆ ನೋಡಿ ಸುಮ್ಮನಾಗಬಹುದು. ಮಾಸ್ ಮನರಂಜನೆ ಬಯಸುವವರು, ದೇಶ ವಿದೇಶದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಹಾಗೂ ವೆಬ್ ಸೀರಿಸ್ ನೋಡುವ ಪ್ರೇಕ್ಷಕರು ಸ್ವಲ್ಪ ದಿನ ಕಾಯುವುದು ವಾಸಿ.


Click it and Unblock the Notifications











