'ಹಸಿರು ರಿಬ್ಬನ್' ವಿಮರ್ಶೆ: ಸಂಬಂಧಗಳ ಪ್ರಾಮುಖ್ಯತೆ ಸಾರುವ ಚಿತ್ರ
ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಆದ್ರೆ, ಗಂಡು ದಿಕ್ಕಿಲ್ಲದ ಅಮ್ಮ-ಮಗಳಿಗೆ ಮೋಸ ಆದಾಗ ಇನ್ನೊಂದು ಹೆಣ್ಣು ನ್ಯಾಯಕ್ಕಾಗಿ ಹೋರಾಡುವ ಕಥೆ 'ಹಸಿರು ರಿಬ್ಬನ್'. ದುಡ್ಡಿಗಾಗಿ ನಂಬಿದವರಿಗೆ ಮೋಸ ಮಾಡುವ ನಯವಂಚಕನ ಸುತ್ತ ಹೆಣೆದಿರುವ ಈ ಚಿತ್ರವನ್ನ ನೈಜವಾಗಿ ಚಿತ್ರಿಸುವಲ್ಲಿ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಯಶಸ್ವಿ ಆಗಿದ್ದಾರೆ.
ಚಿತ್ರ: ಹಸಿರು ರಿಬ್ಬನ್
ನಿರ್ಮಾಪಕರು: ಆರ್.ಎಸ್.ಕುಮಾರ್
ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು, ನಿರ್ದೇಶನ: ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ: ಉಪಾಸನಾ ಮೋಹನ್
ಸಂಕಲನ: ಎಲ್.ನರಸಿಂಹ ಪ್ರಸಾದ್
ತಾರಾಗಣ: ನಿಖಿಲ್ ಮಂಜೂ, ಗಿರಿಜಾ ಲೋಕೇಶ್, ಬಿ.ಜಯಶ್ರೀ ಮತ್ತು ಇತರರು
ಬಿಡುಗಡೆ: ಜುಲೈ 13, 2018
ಕಥಾಹಂದರ
ನೀತಿಗೆರೆಯಲ್ಲಿರುವ ಅತ್ತೆ ಸೀತಮ್ಮ (ಗಿರಿಜಾ ಲೋಕೇಶ್)ನ ಮನೆಗೆ ಇದ್ದಕ್ಕಿದ್ದಂತೆ ಉದ್ದಂಡಿ (ನಿಖಿಲ್ ಮಂಜೂ)ಯ ಆಗಮನ ಆಗುತ್ತದೆ. ಸರ್ಕಾರ ಕೊಡುವ ಸೊಸೈಟಿ ಅಕ್ಕಿ ನಂಬಿಕೊಂಡು ಬದುಕಿದರೆ ಆಗಲ್ಲ, ಸ್ವಂತ ಜಮೀನು ಖರೀದಿ ಮಾಡುವಂತೆ ಸೀತಮ್ಮನಿಗೆ ಉದ್ದಂಡಿ ಉಪದೇಶ ಮಾಡುತ್ತಾನೆ. ಉದ್ದಂಡಿ ಮಾತಿಗೆ ಮರುಳಾಗಿ ಒಂದು ಲಕ್ಷ ರೂಪಾಯಿ ಮುಂಗಡ ಹಣವನ್ನ ಕೊಡಲು ಸೀತಮ್ಮ ಮನಸ್ಸು ಮಾಡುತ್ತಾರೆ.
ಮೋಸದ ಕಥೆ
ಉದ್ದಂಡಿ ಮೇಲೆ ನಂಬಿಕೆ ಇಟ್ಟು ಜಮೀನಿನ ಮೇಲೆ ದುಡ್ಡು ಸುರಿಯುವ ಸೀತಮ್ಮ ಹಾಗೂ ಮಗಳಿಗೆ ವಂಚನೆಯ ವಾಸನೆ ತಡವಾಗಿ ಅನುಭವಕ್ಕೆ ಬರುತ್ತದೆ. ಬಳಿಕ ಸೀತಮ್ಮ ಏನ್ಮಾಡ್ತಾರೆ. ಅತ್ತೆಗೆ ಮೋಸ ಮಾಡಿದ ಉದ್ದಂಡಿಗೆ ತನ್ನ ತಪ್ಪಿನ ಅರಿವು ಆಗುತ್ತಾ.? ಎಂಬುದು ಬಾಕಿ ಕಥೆ.
ಅನಾತ್ಮಕಥನ ಆಧಾರಿತ ಸಿನಿಮಾ
ತಮ್ಮ ಆತ್ಮಕಥನಾತ್ಮಕ ಪ್ರಬಂಧಗಳ ಸಂಕಲನ 'ಅನಾತ್ಮಕಥನ' ಕೃತಿಯ ಒಂದು ಅಧ್ಯಾಯವನ್ನ ಆಧರಿಸಿ 'ಹಸಿರು ರಿಬ್ಬನ್' ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ.
ಪರ್ಫಾಮೆನ್ಸ್ ಹೇಗಿದೆ.?
ನಯವಂಚಕನ ಪಾತ್ರದಲ್ಲಿ ನಿಖಿಲ್ ಮಂಜೂ ಅಭಿನಯ ಅಚ್ಚುಕಟ್ಟಾಗಿದೆ. ಗಿರಿಜಾ ಲೋಕೇಶ್ ಆಕ್ಟಿಂಗ್ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಉಳಿದವರ ನಟನೆ ಅಷ್ಟಕಷ್ಟೆ.
ಹೆಚ್.ಎಸ್.ವಿ ಸಾಹಿತ್ಯ ಚೆಂದ
ಸಿನಿಮಾದಲ್ಲಿ ಸಂದರ್ಭಕ್ಕೆ ತಕ್ಕ ಹಾಡುಗಳಿವೆ. ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ಬರೆದಿರುವ ಹಾಡುಗಳು ಕೇಳಲು ಇಂಪಾಗಿವೆ. ಎಲ್.ನರಸಿಂಹ ಪ್ರಸಾದ್ ಸಂಕಲನ ಚುರುಕಾಗಿರಬೇಕಿತ್ತು.
ಫೈನಲ್ ಸ್ಟೇಟ್ಮೆಂಟ್
ದುಡ್ಡೇ ಮುಖ್ಯ ಆಗಿರುವ ಈ ಕಾಲದಲ್ಲಿ ದುಡ್ಡಿಗಿಂತ ಸಂಬಂಧ ಮುಖ್ಯ ಎಂಬ ಸಂದೇಶ ಸಾರುವ ಚಿತ್ರ ಇದು. ಸದಾ ಕಮರ್ಶಿಯಲ್ ಸಿನಿಮಾಗಳನ್ನೇ ನೋಡಿ ನೋಡಿ ತಲೆ ನೋವು ಬಂದಿದ್ದರೆ, ಒಮ್ಮೆ 'ಹಸಿರು ರಿಬ್ಬನ್' ನೋಡಬಹುದು.


Click it and Unblock the Notifications











