ವಿಮರ್ಶೆ: 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ.!
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ, ಜಾತಿ-ಧರ್ಮದ ಹೆಸರಿನಲ್ಲಿ ದಿನನಿತ್ಯ ಬಡಿದಾಡಿಕೊಳ್ಳುವವರು ತಪ್ಪದೇ ನೋಡಲೇಬೇಕಾದ ಸಿನಿಮಾ ಇದು. ಯಾಕಂದ್ರೆ, ಜಾತಿ-ಧರ್ಮಗಳಿಗೂ ಮೀರಿದ ಮಾನವೀಯತೆ, ಸಹಬಾಳ್ವೆಯ ಪಾಠವನ್ನ 'ಒಂದಲ್ಲಾ ಎರಡಲ್ಲಾ' ಚಿತ್ರ ಕಲಿಸುತ್ತದೆ.
ಪ್ರಸ್ತುತ ಸಮಾಜಕ್ಕೆ ಇಂತಹ ಒಂದು ಸಿನಿಮಾ ಬೇಕಿತ್ತು. ಸ್ವಾರ್ಥ, ದುರಾಸೆಗಿಂತ ಪರರ ನೋವಿಗೆ ಸ್ಪಂದಿಸುವ ಗುಣ ಮನುಷ್ಯನಲ್ಲಿ ಅತ್ಯಗತ್ಯ ಎಂಬುದನ್ನ ಸಾಂಕೇತಿಕವಾಗಿ ನಿರ್ದೇಶಕ ಡಿ.ಸತ್ಯಪ್ರಕಾಶ್ ತೆರೆಮೇಲೆ ತಂದಿರುವ ರೀತಿಯೇ ಅದ್ಭುತ.
ಚಿತ್ರ: ಒಂದಲ್ಲಾ ಎರಡಲ್ಲಾ
ನಿರ್ಮಾಣ: ಸ್ಮಿತಾ ಉಮಾಪತಿ
ನಿರ್ದೇಶಕ: ಡಿ.ಸತ್ಯ ಪ್ರಕಾಶ್
ಕಥೆ-ಚಿತ್ರಕಥೆ: ಡಿ.ಸತ್ಯ ಪ್ರಕಾಶ್, ಎಚ್.ಎಸ್.ನಾಗೇಂದ್ರ, ಧನಂಜಯ್ ರಂಜನ್
ಸಂಗೀತ: ವಾಸುಕಿ ವೈಭವ್, ನೋಬಿನ್ ಪೌಲ್
ಛಾಯಾಗ್ರಹಣ: ಲವಿತ್
ತಾರಾಗಣ: ರೋಹಿತ್ ಪಾಂಡವಪುರ, ನಾಗಭೂಷಣ್, ಸಾಯಿ ಕೃಷ್ಣ ಕುಡ್ಲ, ಆನಂದ್ ನೀನಾಸಂ, ರಂಜಾನ್ ಸಾಬ್ ಉಳ್ಳಾಗಡ್ಡಿ, ಪ್ರಭುದೇವ ಹೊಸದುರ್ಗ ಮತ್ತು ಇತರರು.
ಬಿಡುಗಡೆ: ಆಗಸ್ಟ್ 24, 2018
'ಒಂದಲ್ಲಾ ಎರಡಲ್ಲಾ' ಕಥೆ
ಸಮೀರ (ರೋಹಿತ್ ಪಾಂಡವಪುರ) ಪುಟ್ಟ ಬಾಲಕ. ಆತನಿಗೆ ಭಾನು (ಹಸು) ಕಂಡ್ರೆ ಪ್ರಾಣ. ಸದಾ ಭಾನು ಜೊತೆಗೆ ಸಮೀರನ ಆಟ. ಒಂದಿನ ಭಾನು ಕಳೆದುಹೋಗ್ತಾಳೆ. ಭಾನು ನ ಹುಡುಕಿಕೊಂಡು ಮುಗ್ಧ ಸಮೀರ ಪೇಟೆಗೆ ಬರ್ತಾನೆ. ಅಲ್ಲಿ ಸಮೀರ ಎದುರಿಸುವ ಸನ್ನಿವೇಶಗಳೇ 'ಒಂದಲ್ಲಾ ಎರಡಲ್ಲಾ' ಚಿತ್ರದ ಹೂರಣ.
ಸಮೀರ-ಭಾನು ಒಂದಾಗುತ್ತಾರಾ.?
ಭಾನು ಮೇಲೆ ಪ್ರಾಣವನ್ನೇ ಇಟ್ಟಿರುವ ಸಮೀರ, ತಂದೆ ಹಾಗೂ ಅಕ್ಕನಿಗೆ ಹೇಳದೆ, ಏಕಾಏಕಿ ಮನೆ ಬಿಟ್ಟು, ಭಾನು ನ ಹುಡುಕಲು ಮುಂದಾಗುತ್ತಾನೆ. ಸಮೀರನಿಗೆ ಭಾನು ಸಿಗ್ತಾಳಾ.? ಅನ್ನೋದೇ ಕ್ಲೈಮ್ಯಾಕ್ಸ್. ಅದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿ ಖುಷಿ ಪಡಿ.
ಏನಿದು 'ಒಂದಲ್ಲಾ ಎರಡಲ್ಲಾ'.?
ಸಮೀರ ಸಿಕ್ಕಾಪಟ್ಟೆ ತುಂಟ. ಆತ ಮಾಡುವ ತರ್ಲೆಗಳು 'ಒಂದಲ್ಲಾ ಎರಡಲ್ಲಾ'. ಬೇಡ ಬೇಡ ಅಂದರೂ ಐಸ್ ಪೈಸ್ ಆಡುವ ಸಮೀರ, ಕುಟುಂಬಕ್ಕೆ ಕೊಡುವ ಕಿರಿಕಿರಿ 'ಒಂದಲ್ಲಾ ಎರಡಲ್ಲಾ'. ಭಾನು ಜೊತೆಗೆ ಕಣ್ಣಾಮುಚ್ಚಾಲೆ ಆಡಲು ಹೋಗಿ ಸಮೀರ ಸೃಷ್ಟಿಸುವ ಅವಾಂತರಗಳು 'ಒಂದಲ್ಲಾ ಎರಡಲ್ಲಾ'. ಮುಗ್ಧ ಸಮೀರನಿಂದ ಆಗುವ ಒಳ್ಳೆಯ ಕೆಲಸಗಳೂ 'ಒಂದಲ್ಲಾ ಎರಡಲ್ಲಾ'.
ಪರ್ಫಾಮೆನ್ಸ್ ಹೇಗಿದೆ.?
'ಸಮೀರ'ನ ಪಾತ್ರಕ್ಕೆ ಮಾಸ್ಟರ್ ರೋಹಿತ್ ಪಾಂಡವಪುರ ಅಕ್ಷರಶಃ ಜೀವ ತುಂಬಿದ್ದಾನೆ. ಆತನ ಮುಖದಲ್ಲಿರುವ ಮುಗ್ಧತೆ, ಕಣ್ಣಲ್ಲಿ ಕಾಣುವ ಪ್ರಾಣಿ ಪ್ರೀತಿ ಪ್ರೇಕ್ಷಕರ ಮನಸ್ಸಿಗೆ ನಾಟುತ್ತೆ.
ರಂಗಭೂಮಿ ಕಲಾವಿದರ ದಂಡು
ನಾಗಭೂಷಣ್, ಸಾಯಿ ಕೃಷ್ಣ ಕುಡ್ಲ, ಆನಂದ್ ನೀನಾಸಂ, ರಂಜಾನ್ ಸಾಬ್ ಉಳ್ಳಾಗಡ್ಡಿ, ಪ್ರಭುದೇವ ಹೊಸದುರ್ಗ ಸೇರಿದಂತೆ ರಂಗಭೂಮಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕಥೆಯೇ 'ಸೂಪರ್ ಸ್ಟಾರ್'
ಸ್ಟಾರ್ ಗಳು ಇಲ್ಲದ 'ಒಂದಲ್ಲಾ ಎರಡಲ್ಲಾ' ಸಿನಿಮಾದಲ್ಲಿ 'ಕಥೆ'ಯೇ ಸೂಪರ್ ಸ್ಟಾರ್. ಪ್ರೇಕ್ಷಕರನ್ನು ಒಂದು ಕ್ಷಣವೂ ಅತ್ತಿತ್ತ ಕದಲದಂತೆ ಚಿತ್ರಕಥೆ ರಚಿಸಿ, ಅದನ್ನ ಅಷ್ಟೇ ಚೆಂದವಾಗಿ ತೆರೆಮೇಲೆ ಕಟ್ಟಿಕೊಡುವಲ್ಲಿ ನಿರ್ದೇಶಕ ಸತ್ಯಪ್ರಕಾಶ್ ಯಶಸ್ವಿ ಆಗಿದ್ದಾರೆ.
ನಿರ್ದೇಶಕರ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್
'ಒಂದಲ್ಲಾ ಎರಡಲ್ಲಾ' ಸಿನಿಮಾದಲ್ಲಿ ಮನಮುಟ್ಟುವ ಸಂಭಾಷಣೆ ಇದೆ. ಒಂದೊಂದು ದೃಶ್ಯವೂ ಅರ್ಥ ಪೂರ್ಣವಾಗಿದೆ. ಕಥೆಗೆ ಪೂರಕವಾಗಿ ಹಾಡುಗಳಿವೆ. ಎಷ್ಟು ಬೇಕೋ ಅಷ್ಟು ಕಾಮಿಡಿ ಇದೆ. ಯಾವುದನ್ನೂ ಅತಿಯಾಗಿ ತೋರಿಸದೆ, ಕೆಲವನ್ನ ಸಾಂಕೇತಿಕವಾಗಿ ಬಿಂಬಿಸಿ 'ಒಂದಲ್ಲಾ ಎರಡಲ್ಲಾ' ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿರುವ ನಿರ್ದೇಶಕ ಡಿ.ಸತ್ಯಪ್ರಕಾಶ್ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು.
ಮಕ್ಕಳ ಸಿನಿಮಾ ಅಲ್ಲ.!
'ಒಂದಲ್ಲಾ ಎರಡಲ್ಲಾ' ಚಿತ್ರದ ಪ್ರಮುಖ ಪಾತ್ರಧಾರಿ ಮಾಸ್ಟರ್ ರೋಹಿತ್ ಎಂದ ಮಾತ್ರಕ್ಕೆ ಇದು ಬರೀ ಮಕ್ಕಳ ಸಿನಿಮಾ ಅಲ್ಲ. ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಿದು. ಈ ಚಿತ್ರದಿಂದ 'ನಾಗರಿಕ'ರು ಕಲಿಯಬೇಕಾಗಿರುವುದು ಬಹಳಷ್ಟಿದೆ.
ಯಾವುದಕ್ಕೂ ಕೊರತೆ ಇಲ್ಲ
ವಾಸುಕಿ ವೈಭವ್ ಹಾಗೂ ನೋಬಿನ್ ಪೌಲ್ ಸಂಗೀತ ಸಂಯೋಜಿಸಿರುವ ಹಾಡುಗಳು ಇಂಪಾಗಿವೆ. ಡಿ.ಸತ್ಯ ಪ್ರಕಾಶ್ ಸಾಹಿತ್ಯ ಅರ್ಥಗರ್ಭಿತವಾಗಿದೆ. ಬಹುತೇಕ ಹಳ್ಳಿಯಲ್ಲಿಯೇ ಈ ಚಿತ್ರ ತಯಾರಾಗಿದ್ದರೂ, ಯಾವುದಕ್ಕೂ ನಿರ್ಮಾಪಕರು ಕೊರತೆ ಮಾಡಿಲ್ಲ.
ಫೈನಲ್ ಸ್ಟೇಟ್ ಮೆಂಟ್
'ಒಂದಲ್ಲಾ ಎರಡಲ್ಲಾ' ಚಿತ್ರದಲ್ಲಿ ಮನರಂಜನೆ ಜೊತೆಗೆ ಭಾವುಕತೆ ಹಾಸು ಹೊಕ್ಕಾಗಿದೆ. ಪ್ರಾಣಿ ಪ್ರಿಯರ ಮನ ಗೆಲ್ಲುವ ಈ ಸಿನಿಮಾಗೆ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇದೆ. ಇಡೀ ಕುಟುಂಬ ಕೂತು 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ ಇದು.


Click it and Unblock the Notifications