ಹೊಸಬರ 'ಉದ್ದಿಶ್ಯ' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?
ದೈವ ಶಕ್ತಿ, ದುಷ್ಟ ಶಕ್ತಿ, ವಾಮಾಚಾರ, ಸಸ್ಪೆನ್ಸ್, ಥ್ರಿಲ್ಲರ್, ಹಾರರ್... ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ 'ಉದ್ದಿಶ್ಯ'. ಹೇಮಂತ್ ಕೃಷ್ಣಪ್ಪ ನಟಿಸಿ, ನಿರ್ದೇಶನ ಮಾಡಿರುವ 'ಉದ್ದಿಶ್ಯ' ಚಿತ್ರದಲ್ಲಿ ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು ನಟಿಸಿದ್ದಾರೆ.
ಮೊದಲ ನೋಟಕ್ಕೆ ವಿಭಿನ್ನವಾಗಿ ಕಾಣುವ 'ಉದ್ದಿಶ್ಯ' ಸಿನಿಮಾ ಕೆಲ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಾಲಿವುಡ್ ಮಾದರಿಯ ಹಾರರ್ ಚಿತ್ರದಂತೆ ಇರುವ ಕಾರಣಕ್ಕೆ ಕೆಲ ವಿಮರ್ಶಕರೂ 'ಉದ್ದಿಶ್ಯ' ಚಿತ್ರಕ್ಕೆ ಜೈ ಎಂದಿದ್ದಾರೆ.
ಆದ್ರೆ, ಹಳೆ ಕಥೆಯನ್ನ ಹೊಸದಾಗಿ ಹೇಳುವಲ್ಲಿ ನಿರ್ದೇಶಕರು ಒದ್ದಾಡಿರುವುದರಿಂದ 'ಉದ್ದಿಶ್ಯ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು 'ಉದ್ದಿಶ್ಯ' ಚಿತ್ರವನ್ನ ನೋಡಿ ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...
ಒಂದು ಒಳ್ಳೆಯ ಉದ್ದಿಶ್ಯ : ಕನ್ನಡ ಪ್ರಭ
ನಿರ್ದೇಶಕರು ಹಾಲಿವುಡ್ ಮಾದರಿಯ ಹಾರರ್ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದಾರೆ. ಅಂಥಾ ಧೈರ್ಯ ತೋರಿಸಿರುವುದೇ ಅವರ ಹೆಗ್ಗಳಿಕೆ. ಹೇಳಿ ಕೇಳಿ ಇದು ಹಾಲಿವುಡ್ ಸ್ಕ್ರಿಪ್ಟ್. ಹಾಲಿವುಡ್ ಸಿನಿಮಾಗಳಿಂದ ಪ್ರಭಾವಿತರಾದ ಅಮೆರಿಕಾ ರಿಟರ್ನ್ಡ್ ಹೇಮಂತ್ ಕೃಷ್ಣಪ್ಪ ಆ ಸ್ಕ್ರಿಪ್ಟ್ ಅನ್ನು ಕನ್ನಡಕ್ಕೆ ಹೇಗೆ ಬೇಕೋ ಹಾಗೆ ಬದಲಿಸಿಕೊಂಡು ಸಿನಿಮಾ ಮಾಡಿದ್ದಾರೆ - ರಾಜೇಶ್ ಶೆಟ್ಟಿ
ಹಳೇ ಉದ್ದೇಶ, ಹೊಸ ಉದ್ದಿಶ್ಯ : ಉದಯವಾಣಿ
"ಉದ್ದಿಶ್ಯ' ಚಿತ್ರದ ಕಥೆಯೇನು ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸುವುದಕ್ಕೆ ಕಷ್ಟ. ಏಕೆಂದರೆ, ಇಲ್ಲಿ ಹಲವು ತಿರುವುಗಳಿವೆ, ಹಲವು ವಿಚಿತ್ರಗಳಿವೆ. ಮೇಲಾಗಿ 16 ವರ್ಷಗಳ ಅಂತರದಲ್ಲಿ ಕಥೆ ನಡೆಯುತ್ತಿದೆ. ಚಿತ್ರ ಪ್ರಾರಂಭವಾಗುವುದು ವರ್ತಮಾನದಲ್ಲಾದರೂ, 16 ವರ್ಷಗಳ ಹಿಂದಿನ ಫ್ಲಾಶ್ಬ್ಯಾಕ್ಗೆ ಜಾರುತ್ತದೆ. ಅಲ್ಲಿಂದ ಮತ್ತೆ ವರ್ತಮಾನಕ್ಕೆ ಬರುತ್ತದೆ. ಹಾಗಾಗಿ ಚಿತ್ರದ ಕಥೆಯನ್ನು ಸರಳವಾಗಿ ಹೇಳುವುದಕ್ಕೆ ಕಷ್ಟ. ಹಾಗಂತ ಇದು ತೀರಾ ಹೊಸದಾದ ಕಥೆ ಎನ್ನುವುದು ತಪ್ಪಾಗುತ್ತದೆ - ಚೇತನ್ ನಾಡಿಗೇರ್
ಭೂತದಿಂದ ಬಿಡಿಸು ತಂದೆಯೇ.. ಆಮೆನ್ : ಪ್ರಜಾವಾಣಿ
ಮಾಟ, ಮಂತ್ರ, ದುಷ್ಟಶಕ್ತಿಗಳನ್ನು ಒಲಿಸಿಕೊಂಡು ಅಮರನಾಗುವ ರಕ್ಕಸಗುಣದ ಮನುಷ್ಯ, ಅದಕ್ಕಾಗಿ ಅವನು ಹಸುಗೂಸುಗಳನ್ನು ಬಲಿಕೊಡುವುದು, ಹೆಣ್ಣು ಮಕ್ಕಳನ್ನು ಕದ್ದುತಂದು ಅವರ ಮೇಲೆ ಅತ್ಯಾಚಾರ ಮಾಡುವುದು, ಕೊನೆಗೆ ತನ್ನ ಉದ್ದೇಶ ಈಡೇರದೆ ಸತ್ತು ಹೋಗಿ ಪ್ರೇತವಾಗಿ ಕಾಡುವುದು... ಹೀಗೆ ಈಗಾಗಲೇ ನೂರು ಸಾವಿರ ಸಲ ನೋಡಿರುವ ಹಳೆಯ ಮೌಢ್ಯಾಧಾರಿತ ವೃತ್ತದಿಂದ ಆಚೆ ಜಿಗಿಯುವ, ಹೊಸದೇನನ್ನೋ ಹೇಳುವ ಉದ್ದೇಶವೇ 'ಉದ್ದಿಶ್ಯ' ಚಿತ್ರಕ್ಕೆ ಇಲ್ಲ. ಹಳೆಯದ್ದನ್ನೇ ಹೊಸ ರೀತಿಯಲ್ಲಿ ಹೇಳುವ ಕೌಶಲವೂ ನಿರ್ದೇಶಕರಿಗಿಲ್ಲ - ಪದ್ಮನಾಭ ಭಟ್
ವಾಮಾಚಾರಿಯ ಆತ್ಮದ ಕಥೆ ವ್ಯಥೆ : ಹೊಸ ದಿಗಂತ
ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಕಥಾಹಂದರ ಹೊಂದಿರುವ ಚಿತ್ರ 'ಉದ್ದಿಶ್ಯ' ಈ ವಾರ ತೆರೆಕಂಡಿದೆ. ಪ್ರೇತ, ಆತ್ಮ, ವಾಮಾಚಾರ, ದೈವ ಶಕ್ತಿಯಂಥ ಹಲವಾರು ಕಂಟೆಂಟ್ ಗಳನ್ನು ಒಂದೇ ಚಿತ್ರದಲ್ಲಿ ಹೇಳಿರುವ ನಿರ್ದೇಶಕರ ಹೊಸ ಪ್ರಯತ್ನ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಪ್ರಮುಖವಾಗಿ ತನ್ನ ವಿಶೇಷವಾದ ಚಿತ್ರಕಥೆಯಿಂದ ಉದ್ದಿಶ್ಯ ಗಮನ ಸೆಳೆಯುತ್ತದೆ.


Click it and Unblock the Notifications











