ನಾ ನೋಡಿದ 'ಸೈರಾ": ಕಣ್ಮನ ಸೆಳೆಯುವ ಐತಿಹಾಸಿಕ ಮೆಗಾ ಧಾರವಾಹಿ
ಹದಿನೆಂಟನೇ ಶತಮಾನದಲ್ಲಿ ಈ ಹೆಸರಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಇದ್ದರು ಎನ್ನುವುದನ್ನು ಪ್ರೇಕ್ಷಕರ ಮುಂದೆ ತರುವುದು ತಮಾಷೆಯ ಮಾತಲ್ಲ. ಅದೇ ರೀತಿ ಐತಿಹಾಸಿಕ ಅಥವಾ ಪೌರಾಣಿಕ ಸಿನಿಮಾ ಮಾಡುವುದೂ ಸುಲಭದ ಕೆಲಸವೇನಲ್ಲ.
ಬಹುಕಾಲದ ನಂತರ ಮೆಗಾಸ್ಟಾರ್ ಚಿರಂಜೀವಿ ಪ್ರಧಾನ ಭೂಮಿಕೆಯಲ್ಲಿರುವ 'ಸೈರಾ ನರಸಿಂಹ ರೆಡ್ಡಿ' ಅಕ್ಟೋಬರ್ ಎರಡರಂದು ಮೂರುವರೆ ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಕನ್ನಡ ಪ್ರೇಕ್ಷಕರಿಗೆ ಈ ಸಿನಿಮಾ ಯಾಕೆ ಸ್ಪೆಷಲ್ ಅಂದರೆ, ಇದು ಕನ್ನಡದಲ್ಲೂ ಏಕಕಾಲದಲ್ಲಿ ರಿಲೀಸ್ ಆಗುತ್ತಿರುವುದು, ಮತ್ತೊಂದು ಕಿಚ್ಚ ಸುದೀಪ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಇರುವುದು.
ದೊಡ್ಡ ಬಜೆಟಿನ ಚಿತ್ರವೆಂದ ಮೇಲೆ, ಅಲ್ಲಲ್ಲಿ ಲೋಪದೋಷಗಳು ಇರಲೇಬೇಕಲ್ಲವೇ? ಅದೇ ರೀತಿ ಈ ಸಿನಿಮಾಕ್ಕೂ ಅಂತದ್ದೇ ಪ್ರತಿಕ್ರಿಯೆ ಬಂದಿದೆ. 1847ರ ಆಸುಪಾಸಿನಲ್ಲಿ ಅಖಂಡ ಆಂಧ್ರದ ರಾಯಲ್ ಸೀಮಾ ಭಾಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಐತಿಹಾಸಿಕ ಸಿನಿಮಾವನ್ನು ನಿರ್ದೇಶಕ ಸುರೇಂದರ್ ರೆಡ್ಡಿ ತೆರೆಗೆ ತಂದಿದ್ದಾರೆ.
ಚಿತ್ರದ ನಾಯಕ ಉಯ್ಯಲವಾಡ ನರಸಿಂಹ ರೆಡ್ಡಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ವಿರುದ್ದ ಹೋರಾಡಿ, ವೀರ ಮರಣವನ್ನಪ್ಪುವ ಕೆಚ್ಚೆದೆಯ ಗಂಡುಗಲಿ. ಇದು ಚಿತ್ರದ ಒನ್ಲೈನ್ ಕಥೆ. ವಾಸ್ತವಾಂಶದಲ್ಲಿ ರಾಜಿ ಮಾಡಿಕೊಳ್ಳದೇ, ಈಗಿನ ಟ್ರೆಂಡಿಗೆ ಬೇಕಾಗಿರುವ ಕಮರ್ಷಿಯಲ್ ಅಂಶಗಳನ್ನು, ಅಲ್ಲಲ್ಲಿ ಹದವಾಗಿ ಬೆರೆಸಿ, ನಿರ್ದೇಶಕರು, ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಹಾಗಾದರೆ, ಚಿತ್ರವನ್ನು ಪ್ರೇಕ್ಷಕ ಒಪ್ಪಿಕೊಳ್ಳುತ್ತಾನಾ? ಮುಂದೆ ಓದಿ..
ಬ್ರಿಟಿಷರ ವಿರುದ್ದ ಹೋರಾಟದ ಸಿನಿಮಾ
ಬ್ರಿಟಿಷರ ವಿರುದ್ದ ಹೋರಾಟದ ಸಿನಿಮಾ ಎಂದ ಮೇಲೆ, ಯುದ್ದದ ಸನ್ನಿವೇಶಗಳು ಇರಲೇ ಬೇಕು. ಅದರಂತೇ, ಚಿತ್ರದಲ್ಲಿ ಸಾಹಸ ದೃಶ್ಯಗಳಿಗೆ ಬರವಿಲ್ಲ. ಕಥಾನಾಯಕ ಮಾತಿಗಿಂತ ಹೆಚ್ಚಾಗಿ ಆತನ ಕತ್ತಿ ಮಾತನಾಡುತ್ತದೆ. 170 ನಿಮಿಷದ ಈ ಅದ್ದೂರಿ ಬಜೆಟಿನ ಸಿನಿಮಾವನ್ನು ನಿರ್ದೇಶಕರು, ಎಲ್ಲೂ ಬೋರ್ ಹೊಡೆಸದಂತೆ, ಚಿತ್ರಕಥೆ ಹಣೆದಿದ್ದಾರೆ ಎಂದು ಹೇಳಲಾಗುವುದಿಲ್ಲ.
ಚಿತ್ರದಲ್ಲಿ ಮೆಚ್ಚಿಕೊಳ್ಳುವಂತಹ ಅಂಶ
ಚಿತ್ರದಲ್ಲಿ ಮೆಚ್ಚಿಕೊಳ್ಳುವಂತಹ ಅಂಶವೆಂದರೆ ಯುದ್ದದ ಸನ್ನಿವೇಶಗಳು. ಬಾಹುಬಲಿ ಚಿತ್ರವನ್ನು ಮೀರಿಸುವಂತೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸಾಹಸ ನಿರ್ದೇಶಕರಾದ ಹಾಲಿವುಡ್ಡಿನ ಗ್ರೇಗ್ ಪೊವೆಲ್, ಲೀ ವಿಟ್ಟಾಕರ್, ತೆಲುಗಿನ ರಾಮ ಲಕ್ಷ್ಮಣ್, ಎ. ವಿಜಯ್ ಅವರ ಕೆಲಸಕ್ಕೆ ಬೆನ್ನುತಟ್ಟಲೇ ಬೇಕು. ಸ್ವಾತಂತ್ರ್ಯಪೂರ್ವದ ಸಿನಿಮಾ ಆಗಿರುವುದರಿಂದ ಅದಕ್ಕೆ ಪೂರಕವಾದ ಸೆಟ್ಟಿನ ಹಿಂದೆ ಕಲಾ ನಿರ್ದೇಶಕರ ಪರಿಶ್ರಮವೂ ಎದ್ದು ಕಾಣುತ್ತದೆ.
ಚಿತ್ರ ಅಲ್ಲಲ್ಲಿ ಹಳಿ ತಪ್ಪುತ್ತದೆ, ಸ್ಲೋ ಎನಿಸುತ್ತದೆ
ಇನ್ನು ರತ್ನವೇಲು ಅವರ ಸಿನಿಮಾಟೋಗ್ರಾಫಿ, ಜ್ಯೂಲಿಯಸ್ ಪಾಕಿಯಂ ಅವರ ಹಿನ್ನಲೆ ಸಂಗೀತ, ಅಮಿತ್ ತ್ರಿವೇದಿ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಚಿತ್ರ ನಿರೂಪಣೆ ಅಲ್ಲಲ್ಲಿ ನ್ಯೂನ್ಯತೆಗಳನ್ನು ಹೊಂದಿರುವುದು ಚಿತ್ರದ ವೀಕ್ ಪಾಯಿಂಟ್. ಮೊದಲಾರ್ಥದಲ್ಲಿ ಕಥೆಯಲ್ಲಿ ಬರುವ ಪಾತ್ರಧಾರಿಗಳ ಪರಿಚಯ ಮಾಡಬೇಕಾಗಿರುವುದರಿಂದ, ಚಿತ್ರ ಅಲ್ಲಲ್ಲಿ ಹಳಿ ತಪ್ಪುತ್ತದೆ, ಸ್ಲೋ ಎನಿಸುತ್ತದೆ.
ಸುದೀಪ್ ಅಕ್ಷರಸಃ ಪರಕಾಯ ಪ್ರವೇಶ ಮಾಡಿದ್ದಾರೆ.
ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಮಾಮೂಲಿ ಪಾತ್ರವನ್ನು ಮಾಡುವುದು ಒಂದು ಲೆಕ್ಕ, ಪೌರಾಣಿಕ/ಐತಿಹಾಸಿಕ ಸಿನಿಮಾಗಳಲ್ಲಿನ ಪಾತ್ರ ಇನ್ನೊಂದು ಲೆಕ್ಕ. ಕೊಟ್ಟ ಕೆಲಸವನ್ನು ಅತ್ಯಂತ ಸಮರ್ಥವಾಗಿ ಸುದೀಪ್ ನಿಭಾಯಿಸಿದ್ದಾರೆ. ಯಾವ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಕಲೆಯನ್ನು ಸುದೀಪ್ ಸಿದ್ದಿಸಿಕೊಂಡಿದ್ದಾರೆ. ಮೊದಲಾರ್ಧ, ಉತ್ತರಾರ್ಧ ಎರಡರಲ್ಲೂ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಪ್ರಮುಖವಾಗಿ, ಇಂಟರ್ವಲ್ ನಂತರದ ಕೆಲವೊಂದು ಸನ್ನಿವೇಶಗಳಲ್ಲಿ, ಸುದೀಪ್ ಅಕ್ಷರಸಃ ಪರಕಾಯ ಪ್ರವೇಶ ಮಾಡಿದ್ದಾರೆ.
ಚಿರಂಜೀವಿ ಅವರ ನಟನೆ
ಇನ್ನು ಚಿರಂಜೀವಿ ಅವರ ನಟನೆಯ ಬಗ್ಗೆ ಮಾತನಾಡುವುದಾದರೆ, ಕನ್ನಡದಲ್ಲಿ ಈ ರೀತಿಯ ಸಿನಿಮಾ ಎಂದಾಗ ಕಣ್ಮುಂದೆ ಬರುವುದು ಡಾ.ರಾಜ್, ತೂಗುದೀಪ ಶ್ರೀನಿವಾಸ್, ಶ್ರೀನಿವಾಸಮೂರ್ತಿ ಮುಂತಾದವರು. ಅದೇ ರೀತಿ, ತೆಲುಗಿನಲ್ಲಿ ಎನ್ಟಿಆರ್, ಅಕ್ಕಿನೇನಿ, ನಾಗಾರ್ಜುನ. ಇಂತಹ ಘಟಾನುಗಳಿಗೆ ಸರಿಸಾಟಿ ಎನ್ನುವಂತೆ ಚಿರಂಜೀವಿ ನಟಿಸಿದ್ದಾರೆ. ಇನ್ನು, ಇತರ ಪಾತ್ರಧಾರಿಗಳಾದ ಅಮಿತಾಬ್ ಬಚ್ಚನ್, ನಯನತಾರಾ, ತಮನ್ನಾ, ವಿಜಯ್ ಸೇತುಪತಿ, ಜಗಪತಿಬಾಬು ಮುಂತಾದವರು ತಮ್ಮತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಪ್ರೇಕ್ಷಕರನ್ನು ಎಂಗೇಜ್ ಮಾಡಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ
2 ಗಂಟೆ 50 ನಿಮಿಷದ ಸಿನಿಮಾ ಎಂದ ಮೇಲೆ, ಪ್ರೇಕ್ಷಕರನ್ನು ಎಂಗೇಜ್ ಮಾಡಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ. ಆದರೂ, ಮೊದಲಾರ್ಥದಲ್ಲಿ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಬಹುದಿತ್ತು. ಇಂತಹ ದೊಡ್ಡ ಬಜೆಟಿನ ಸಿನಿಮಾ ಎಂದ ಮೇಲೆ, ಇದರಲ್ಲಿ ಸಾವಿರಾರು ಕಲಾವಿದರ ಪರಿಶ್ರಮವಿರುತ್ತದೆ. ಇಂತಹ ಸಿನಿಮಾಗಳು ಎಲ್ಲರನ್ನೂ ತಲುಪುವಂತಾಗಬೇಕು. ಚಿತ್ರ ಬಿಡುಗಡೆಯಾಗಿ ಒಂದು ದಿನ ಆಗಿದೆಯಷ್ಟೇ.. ಚಿತ್ರತಂಡಕ್ಕೆ ಇನ್ನೂ ಸಮಯವಿದೆ. ಮೊದಲಾರ್ಥದ ಕೆಲವು ಸನ್ನಿವೇಶಗಳನ್ನು ಕಟ್ ಮಾಡಿದರೆ, ಚಿತ್ರ Magnum Opus ಸಾಲಿನಲ್ಲಿ ನಿಲ್ಲುವುದರಲ್ಲಿ ಸಂಶಯವಿಲ್ಲ.


Click it and Unblock the Notifications











