ನಾ ನೋಡಿದ ಸಿನಿಮಾ ಶಿವಾಜಿ ಸುರತ್ಕಲ್: ಜೀ.. ನನ್ನ ಮದುವೆ ಆಗ್ತೀಯಾ..
Recommended Video
ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಕನ್ನಡದಲ್ಲಿ ಬಹಳಷ್ಟು ಬಂದು ಹೋಗಿದೆ. ಆದರೆ, 'ಶಿವಾಜಿ ಸುರತ್ಕಲ್'ಸಿನಿಮಾ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ನಿಲ್ಲುವುದು, ಅಚ್ಚುಕಟ್ಟಾಗಿ ಚಿತ್ರಕಥೆ ಹಣೆದಿರುವ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಂದ.
ಶೆರ್ಲಾಕ್ ಹೋಮ್ಸ್ ಶೈಲಿಯಲ್ಲಿ ಸಾಗುವ ಇಂತಹ ಸಿನಿಮಾಗಳಲ್ಲಿ ಚಿತ್ರಕಥೆ ವೇಗವಾಗಿ ಸಾಗುತ್ತಿರಬೇಕು. ಹಾಗಿದ್ದರೇನೇ ಚಿತ್ರ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸಲು ಸಾಧ್ಯ. ಇಲ್ಲಿ, ಸಸ್ಪೆನ್ಸ್ ಜೊತೆ, ಭಾವನಾತ್ಮಕ ಸನ್ನಿವೇಶಗಳನ್ನೂ ನಿರ್ದೇಶಕರು ಹದವಾಗಿ ಬೆರೆಸಿದ್ದಾರೆ.
ಶಿವಾಜಿ ಸುರತ್ಕಲ್, 'ದಿ ಕೇಸ್ ಆಫ್ ರಣಗಿರಿ ರಹಸ್ಯ' ಎನ್ನುವ ಟ್ಯಾಗ್ ಲೈನ್ ನಲ್ಲಿರುವ ಈ ಚಿತ್ರ ರಮೇಶ್ ಅರವಿಂದ್ ಅವರ 101ನೇ ಸಿನಿಮಾ. ಪ್ರೀತಿ, ಹಾಸ್ಯ, ಕೌಟುಂಬಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಮೇಶ್, ಇಲ್ಲಿ ಬೇರೆ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಮಾಜದ ಗಣ್ಯವ್ಯಕ್ತಿಯ ಮಗನ ಕೊಲೆ ಪ್ರಕರಣ ಬೇಧಿಸುವ ಪತ್ತೇದಾರಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್, ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಚಿತ್ರ ಇಷ್ಟವಾಗುವುದು ಈ ಕಾರಣಕ್ಕಾಗಿ, ಮುಂದೆ ಓದಿ..
ಎಲ್ಲಾ ವರ್ಗದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಿವಾಜಿ
ಶಿವಾಜಿ ಸುರತ್ಕಲ್ ಸಿನಿಮಾ ಇಷ್ಟವಾಗುವುದು ಇದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಶಕ್ತವಾಗಿರುವುದಕ್ಕೆ. ಸಸ್ಪೆನ್ಸ್ ಸಿನಿಮಾ ಆಗಿದ್ದರೂ, ದೆವ್ವ, ವಾಮಾಚಾರ ಮುಂತಾದ ಹಾರರ್ ಸನ್ನಿವೇಶಗಳನ್ನು ಎಷ್ಟುಬೇಕೋ, ಆಷ್ಟೇ ಬೆರೆಸಿ, ಎಲ್ಲೂ, ಚಿತ್ರದ ವೇಗಕ್ಕೆ ಕಡಿವಾಣ ಬೀಳದಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು.
ಹಿನ್ನಲೆ ಸಂಗೀತ ನೀಡಿದ ಜ್ಯೂಡಾ ಸ್ಯಾಂಡಿ
ಚಿತ್ರದಲ್ಲಿ ಹೇಳಲೇ ಬೇಕಾದ ಎರಡು ಅಂಶವೆಂದರೆ ಒಂದು ಹಿನ್ನಲೆ ಸಂಗೀತ ನೀಡಿದ ಜ್ಯೂಡಾ ಸ್ಯಾಂಡಿ. ಥ್ರಿಲ್ಲರ್ ಸಿನಿಮಾಗಳಿಗೆ ಸಂಗೀತ ಮತ್ತು ಹಿನ್ನಲೆ ಸಂಗಿತ ನೀಡುವುದು ಸುಲಭದ ಮಾತಲ್ಲ. ಚಿತ್ರಮಂದಿರದಿಂದ ಹೊರಬಂದ ಮೇಲೂ, ನೆನಪಿನಲ್ಲಿ ಉಳಿಯುವಂತಹ ಬ್ಯಾಕ್ ಗ್ರೌಂಡ್ ಟ್ರ್ಯಾಕ್ ಅನ್ನು ಸ್ಯಾಂಡಿ ನೀಡಿದ್ದಾರೆ. ಅದೇ ರೀತಿ, ಚಿತ್ರದ ಸಿನಿಮಾಟೋಗ್ರಾಫಿ ಕೂಡಾ. ಇಡೀ ಚಿತ್ರ ಕೆಲವು ಲೊಕೇಶನ್ ಗಳಿಗೆ ಸೀಮಿತವಾಗಿದ್ದರೂ, ಗುರುಪ್ರಸಾದ್ ಕ್ಯಾಮರಾ ವರ್ಕ್ ಇಲ್ಲಿ ಅದ್ಭುತವಾಗಿ ಕೆಲಸ ಮಾಡಿದೆ. ಅದೇ ರೀತಿ ಚಿತ್ರದ ಸಂಕಲನಕಾರರಲ್ಲಿ ಒಬ್ಬರಾಗಿರುವ ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಕತ್ತರಿ ಪ್ರಯೋಗ ಸರಿಯಾಗಿ ವರ್ಕೌಟ್ ಆಗಿದೆ. (ಚಿತ್ರದಲ್ಲಿ: ಜ್ಯೂಡಾ ಸ್ಯಾಂಡಿ)
ಚಿತ್ರದ ನಾಯಕಿ ರಾಧಿಕಾ
ಇನ್ನು ಚಿತ್ರದ ಪಾತ್ರವರ್ಗದಲ್ಲಿ ಇಡೀ ಚಿತ್ರದಲ್ಲಿ ರಮೇಶ್ ಅವರಿಗೆ ಅಸಿಸ್ಟೆಂಟ್ ಆಗಿ ನಟಿಸಿರುವ ರಘು ರಾಮನಕೊಪ್ಪ ಅವರ ನಟನೆ ನೆನಪಿನಲ್ಲಿ ಉಳಿಯುತ್ತದೆ. ಚಿತ್ರದ ನಾಯಕಿಯರಾದ ರಾಧಿಕಾ ಮತ್ತು ಆರೋಹಿ ನಾರಾಯಣ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಬರುವ ಹನ್ನೊಂದು ಕಲಾವಿದರು, ಅವಿನಾಶ್ ಮುಂತಾದವರ ನಟನೆ ಪಾತ್ರಕ್ಕೆ ಪೂರಕವಾಗಿದೆ.
ರಮೇಶ್ ಅರವಿಂದ್ ಪರಕಾಯ ಪ್ರವೇಶ
ವಿಚಿತ್ರ ಮನೋಭಾವದ ಪತ್ತೇದಾರಿ ಪಾತ್ರದಲ್ಲಿ ರಮೇಶ್ ಅರವಿಂದ್ ನಟನೆ ಪರ್ಫೆಕ್ಟ್. ಎರಡು ಟ್ರ್ಯಾಕ್ ನಲ್ಲಿ ಸಾಗುವ ಚಿತ್ರದಲ್ಲಿ ಎರಡೂ ಶೇಡ್ ನಲ್ಲಿ ರಮೇಶ್ ಪ್ರಬುದ್ದತೆಯನ್ನು ತೋರಿದ್ದಾರೆ. ಅದರಲ್ಲೂ, ಇಂಟರ್ವಲ್ ನಂತರ ಬರುವ ಕೆಲವೊಂದು ಪಾತ್ರದಲ್ಲಂತೂ ರಮೇಶ್ ಅಕ್ಷರಸಃ ಪರಕಾಯ ಪ್ರವೇಶ ಮಾಡಿದ್ದಾರೆ. ಯಾವ ಪಾತ್ರ ಕೊಟ್ಟರು ಅದಕ್ಕೆ ರಮೇಶ್ ಜೀವ ತುಂಬುತ್ತಾರೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಾಗಬಲ್ಲದು,
ಒಂದೊಳ್ಳೆ ಸಿನಿಮಾ.. ಸಾಧ್ಯವಾದರೆ ನೋಡಿ
ಚಿತ್ರ ನೋಡಿ ಬರುವ ಪ್ರೇಕ್ಷಕರಿಗೆ ಒಂದೆರಡು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಅದನ್ನು ಪ್ರೇಕ್ಷಕರ ವಿವೇಚನೆಗೆ ಬಿಡಲಾಗಿದೆಯೋ ಅಥವಾ ನಿರ್ದೇಶಕರಿಗೆ ಅದಕ್ಕೊಂದು ತಾರ್ಕಿಕ ಅಂತ್ಯ ಕೊಡಲು ವಿಫಲರಾದರೋ ಗೊತ್ತಿಲ್ಲ ಜೊತೆಗೆ, ಮಾಧ್ಯಮದವರನ್ನು ವಿಲನ್ ಆಗಿ ಯಾಕೆ ತೋರಿಸಿದ್ದಾರೋ? ಎನಿ ವೇ.. ಒಂದೊಳ್ಳೆ ಸಿನಿಮಾ.. ಬೆನ್ನು ತಟ್ಟಬೇಕಾಗಿರುವಂತಹ ಸಿನಿಮಾ.. ಸಾಧ್ಯವಾದರೆ ನೋಡಿ..


Click it and Unblock the Notifications











