Don't Miss!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಲ್ ಬಾಟಮ್ ಹ್ಯಾಂಗ್ ಓವರ್ ಬಹಳ ದಿನ ಮುಂದುವರೆಯಲಿದೆ
ಗೆಳೆಯ ಟಿ.ಕೆ.ದಯಾನಂದ್ ನಾಲ್ಕು ವರ್ಷಗಳ ಕೆಳಗೆ ಬೆಲ್ ಬಾಟಮ್ ಕಥೆಯನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಮೊದಲು ರೀಡಿಂಗು ನನಗೇ ಸಿಕ್ಕಿತ್ತು. ಇದು ನೂರಕ್ಕೆ ನೂರು ಗೆಲ್ಲುವ ಕಥೆ ಅನಿಸಿತ್ತು. ಒಂದಿಬ್ಬರು ಹೀರೋಗಳು ಇದರಲ್ಲಿ ಹೀರೋಯಿಸಂ ಅಂಶಗಳಿಲ್ಲ ಎಂದು ನಟಿಸಲು ಹಿಂದೇಟು ಹಾಕಿದ್ದರು. ಈಗ ಅವರು ಕೈಕೈ ಹಿಸುಕಿಕೊಳ್ಳುತ್ತಿರಬಹುದು. ಬೆಲ್ ಬಾಟಮ್ ಎಲ್ಲೆಡೆ ಅಬ್ಬರಿಸುತ್ತಿದೆ. ರಿಷಬ್ ಶೆಟ್ಟಿ ರೂಪದಲ್ಲಿ ಕನ್ನಡಕ್ಕೆ ಮತ್ತೊಬ್ಬ ಅದ್ಭುತ ನಟ ಆವಿರ್ಭವಿಸಿದ್ದಾರೆ. A star is born definitely...
ನಿಸ್ಸಂಶಯವಾಗಿ ರಿಷಬ್ ಶೆಟ್ಟಿ ಬೆಲ್ ಬಾಟಮ್ ನ ಸರ್ಪ್ರೈಜ್ ಪ್ಯಾಕೇಜ್. ರಿಷಬ್ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇಂಥ ಅಭಿನಯ ಚತುರತೆ ಅವರಿಗೆ ಇರಬಹುದೆಂಬ ಅಂದಾಜು ಯಾರಿಗೂ ಇದ್ದಿರಲು ಸಾಧ್ಯವಿಲ್ಲ. ಕಥೆ-ಚಿತ್ರಕಥೆ ಎಷ್ಟೇ ಚೆನ್ನಾಗಿರಲಿ, ಅದನ್ನು ಸಿನಿಮಾ ಪೂರ್ತಿ ತನ್ನ ಹೆಗಲ ಮೇಲೆ ಹೊತ್ತೊಯ್ಯಬೇಕಿರುವುದು ಹೀರೋ.
ರಿಷಬ್ ಈ ಕಾರ್ಯದಲ್ಲಿ ತುಸುವೂ ಎಡವಿಲ್ಲ. ಡಿಟೆಕ್ಟಿವ್ ದಿವಾಕರನ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಡಿಟೆಕ್ಟಿವ್ ದಿವಾಕರ ನಮ್ಮ ಹಳೆಯ ಕಾಮಿಕ್ಸ್ ಗಳ ಫ್ಯಾಂಟಮ್, ಮಾಂಡ್ರೇಕ್, ಏಜೆಂಟ್ ವಿಕ್ರಮ್ ಗಳ ಹಾಗೆ ಪದೇಪದೇ ಕಾಡುತ್ತಾನೆ. ಬೆಲ್ ಬಾಟಮ್ ಇನ್ನೂ ಹಲವಾರು ಕಂತುಗಳಲ್ಲಿ ನೋಡುವ ಅಪೇಕ್ಷೆಯನ್ನು ಹುಟ್ಟಿಸಿಬಿಟ್ಟಿದೆ. ಅದಕ್ಕಾಗಿ ರಿಷಬ್ ಗೆ ಅಭಿನಂದನೆ ಹೇಳಲೇಬೇಕು.
Bell Bottom Review : ಕಿಲಾಡಿ ದಿವಾಕರನ ಕಳ್ಳ, ಪೊಲೀಸ್ ಆಟ
ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಲಿದ್ದಾರೆ ಎಂದು ಗೊತ್ತಾದಾಗಲೇ ಥ್ರಿಲ್ ಆಗಿತ್ತು. ಅವರ ಕಸುಬುದಾರಿಕೆ ಏನೆಂಬುದು ಅವರ ಹಿಂದಿನ ಸಿನಿಮಾಗಳೇ ಹೇಳುತ್ತವೆ. ಜಯತೀರ್ಥ ಸಾವಿರಾರು ಬೀದಿನಾಟಕಗಳನ್ನು ಆಡಿಸಿದವರು. ಬೆಲ್ ಬಾಟಮ್ ನಲ್ಲಿ ಅವರ ಕಲಾವಂತಿಕೆ, ಅನುಭವ ಕುಸುರಿಯಾಗಿ ಕಾಣುತ್ತದೆ. ಇದು ಮಾಮೂಲಿ ಆಕ್ಷನ್-ಥ್ರಿಲ್ಲರ್ ಸಿನಿಮಾ ಅಲ್ಲ. ಒಂದು ಪತ್ತೇದಾರಿ ಸಿನಿಮಾಗೆ ಕಾಮಿಡಿ ಹೊಂದಿಸುವುದು ಅಷ್ಟು ಸುಲಭವಲ್ಲ. ಜಯತೀರ್ಥ ಇದನ್ನು ನೀರು ಕುಡಿದಂತೆ ನಿಭಾಯಿಸಿದ್ದಾರೆ.
ಎಲ್ಲೂ ಒಂದು ಲಿಂಕು ತಪ್ಪದಂತೆ, ಲಾಜಿಕ್ ಮಿಸ್ ಹೊಡೆಯದಂತೆ ಚಿತ್ರಕಥೆಯನ್ನು ಹೊಲೆದಿದ್ದಾರೆ. ಎಲ್ಲ ನಟರಿಂದ ಅವರವರ ಸಾಮರ್ಥ್ಯಕ್ಕೆ ತಕ್ಕ ಅಭಿನಯವನ್ನು ಹೊರತೆಗೆಸಿದ್ದಾರೆ. ಸಿನಿಮಾ ನಿರ್ದೇಶಕನ ಹೊಣೆ ತುಂಬ ದೊಡ್ಡದು. ಇಪ್ಪತ್ತೆಂಟು ಡಿಪಾರ್ಟ್ ಮೆಂಟುಗಳನ್ನು ತಲೆಮೇಲೆ ಹೊತ್ತು ನಿಭಾಯಿಸಬೇಕು. ಅದಕ್ಕೆ ಬೇಕಿರುವುದು ಒಂದು ಅಪ್ಪಟ ತಾಯ್ತನ.
ಟೆಕ್ನಿಷನ್ನುಗಳೂ ಎಷ್ಟು ಪ್ರೀತಿಯಿಂದ ಕೆಲಸ ಮಾಡಿದ್ದಾರೆ ಎಂಬುದು ಪ್ರತಿ ಫ್ರೇಮುಗಳಲ್ಲೂ ಗೊತ್ತಾಗುತ್ತದೆ
ಜಯತೀರ್ಥ ಅವರಿಗೆ ಇದು ಸಿದ್ಧಿಸಿದೆ, ಎಲ್ಲ ಟೆಕ್ನಿಷನ್ನುಗಳೂ ಎಷ್ಟು ಪ್ರೀತಿಯಿಂದ ಕೆಲಸ ಮಾಡಿದ್ದಾರೆ ಎಂಬುದು ಪ್ರತಿ ಫ್ರೇಮುಗಳಲ್ಲೂ ಗೊತ್ತಾಗುತ್ತದೆ. ಜಯತೀರ್ಥ ಮತ್ತೆ ಗೆದ್ದಿದ್ದಾರೆ. ಬೆಲ್ ಬಾಟಮ್ ಸಿನಿಮಾದ ದೊಡ್ಡ ಶಕ್ತಿ ಕ್ಲೈಮ್ಯಾಕ್ಸ್. ಒಂದು ಅಪರಾಧ ಪ್ರಕರಣವನ್ನು ಭೇದಿಸಲು ಡಿಟೆಕ್ಟಿವ್ ದಿವಾಕರ ಹೊರಡುತ್ತಾನೆ. ತಮಾಶೆಯೆಂದರೆ ಸಿನಿಮಾ ತಂಡ ನಿಮ್ಮನ್ನು ಪದೇಪದೇ ಯಾಮಾರಿಸುತ್ತಲೇ ಇರುತ್ತದೆ.
'ಬೆಲ್ ಬಾಟಮ್' ನೋಡಲು ಈ 10 ಕಾರಣಗಳು ಸಾಕು
ವಿಲನ್ ಯಾರು ಅನ್ನುವುದು ಗೊತ್ತಾಗುವ ಹಂತದಲ್ಲಿ ಅಚ್ಚರಿಯ ತಿರುವುಗಳು ಎದುರಾಗಿಬಿಡುತ್ತವೆ
ಅಪರಾಧಿ ಯಾರು ಎಂಬ ಅನುಮಾನ ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಶಿಫ್ಟ್ ಆಗುತ್ತಲೇ ಇರುತ್ತದೆ. ಕೊನೆಗೆ ವಿಲನ್ ಯಾರು ಅನ್ನುವುದು ಗೊತ್ತಾಗುವ ಹಂತದಲ್ಲಿ ಅಚ್ಚರಿಯ ತಿರುವುಗಳು ಎದುರಾಗಿಬಿಡುತ್ತವೆ. ಅಷ್ಟು ಹೊತ್ತು ಹೀರೋ ಕೈಹಿಡಿದು ಸಾಗುವ ಪ್ರೇಕ್ಷಕ ಮಹಾಪ್ರಭು ಇದ್ದಕ್ಕಿಂತೆ ಕೈ ಕೊಸರಿಕೊಂಡು ವಿಲನ್ ಗಳ ಜತೆ ಹೋಗಿ ನಿಂತುಬಿಡುತ್ತಾನೆ. ಇದೇ ಬೆಲ್ ಬಾಟಮ್ ನ ಅಸಲಿ ಶಕ್ತಿ. ಇದೇನೆಂಬುದನ್ನು ನೀವು ಸಿನಿಮಾ ನೋಡಿಯೇ ಅನುಭವಿಸಬೇಕು.
ಸಿನಿಮಾದಲ್ಲಿ ನನಗೆ ತುಂಬ ಇಷ್ಟವಾದ ದೃಶ್ಯ ಪೊಲೀಸ್ ಸ್ಟೇಷನ್ ರಾಬರಿ
ಸಿನಿಮಾದಲ್ಲಿ ನನಗೆ ತುಂಬ ಇಷ್ಟವಾದ ದೃಶ್ಯ ಪೊಲೀಸ್ ಸ್ಟೇಷನ್ ರಾಬರಿ. ಆ ಎರಡು ಮೂರು ನಿಮಿಷ ಮೈ ಜುಂ ಅನಿಸಿಬಿಡುತ್ತದೆ. ಆದಿಜ್ಯೋತಿ ಬನ್ಯೋಂ ಎಂಬ ಮಂಟೆಸ್ವಾಮಿ ಪದ ನಿಮ್ಮನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿಬಿಡುತ್ತದೆ. ಇಡೀ ಸಿನಿಮಾ ನಕ್ಕು ನಲಿದ ಪ್ರೇಕ್ಷಕ ಈ ಮೂರು ನಿಮಿಷ ಉಸಿರುಗಟ್ಟಿ ನೋಡುತ್ತಾನೆ. ಮಂಟೇಸ್ವಾಮಿ ಪದಕ್ಕೆ ಇನ್ನೊಂದು ಚರಣ ಸೇರಿಸಬೇಕಿತ್ತು ಎಂದು ಅನಿಸುವಷ್ಟು ಈ ದೃಶ್ಯ ಪರಿಣಾಮಕಾರಿಯಾಗಿದೆ. ಬೆಲ್ ಬಾಟಮ್ ನ ಮತ್ತೊಂದು ದೊಡ್ಡ ಶಕ್ತಿಯೆಂದರೆ ಅಲ್ಲಿನ ಚಿತ್ರವಿಚಿತ್ರ ಪಾತ್ರಗಳು. ಒಂದೊಂದೂ ವಿಭಿನ್ನ. ಎಲ್ಲಕ್ಕೂ ತನ್ನದೇ ಆದ ಅಸ್ಮಿತೆ. ಇವೆಲ್ಲವೂ ಕಥೆಗಾರ ದಯಾನಂದ್ ಕುಸುರಿಯ ರಸ್ತೆನಕ್ಷತ್ರಗಳು.
ಮೋಡಿ ನಂಜಪ್ಪ, ಮರಕುಟುಕ, ಸೆಗಣಿ ಪಿಂಟೋ, ಗೂಬೆರಾಮ
ಮೋಡಿ ನಂಜಪ್ಪ, ಮರಕುಟುಕ, ಸೆಗಣಿ ಪಿಂಟೋ, ಗೂಬೆರಾಮ, ಕಾನ್ಸ್ ಟೇಬಲ್ ಖುರೇಷಿ, ಸ್ಟೇಷನ್ ರೈಟರ್ ಅಣ್ಣಪ್ಪ, ರೇಡಿಯೋ ರಾಜ, ಸ್ಟುಡಿಯೋ ಗುರುಪಾದ, ಟಾಕೀಸ್ ಸೇಟು ಕೊನೆಗೆ ಹೀರೋಯಿನ್ ಕಳ್ಳಭಟ್ಟಿ ಕುಸುಮ.... ಅಬ್ಬಬ್ಬಾ ಒಂದೆರಡಲ್ಲ. ನೀವು ದಯಾನಂದ್ ಅವರ ಕಥೆಗಳ ಓದುಗರಾಗಿದ್ದರೆ ಇಂಥ ಪಾತ್ರಗಳನ್ನು ಓದಿ ಖುಷಿಪಟ್ಟಿರುತ್ತೀರಿ. ಈಗ ಬೆಲ್ ಬಾಟಮ್ ನಲ್ಲಿ ಅವುಗಳು ಜೀವತಳೆದು ಕುಣಿದಿವೆ. ಜತೆಜತೆಗೆ ಎಂಥ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸುವ ಪ್ರಮೋದ್ ಶೆಟ್ಟಿ ಮುಂಚೂಣಿಯಲ್ಲಿರುವ ಸಬ್ ಇನ್ಸ್ ಪೆಕ್ಟರ್ ಗಳ ದಂಡೇ ಇಲ್ಲಿದೆ.
ಭಾಸ್ಕರ್ ಪ್ರಸಾದ್ ಮತ್ತು ಸಂತೋಷ್ ನೋಡುವುದೇ ನನಗೊಂದು ಹಬ್ಬ
ಅವರ ಪೈಕಿ ಭಾಸ್ಕರ್ ಪ್ರಸಾದ್ ಮತ್ತು ಸಂತೋಷ್ ನೋಡುವುದೇ ನನಗೊಂದು ಹಬ್ಬ. ಯಾಕೆಂದರೆ ಇವರಿಬ್ಬರು ನನ್ನ ಅಚ್ಚುಮೆಚ್ಚಿನ ಗೆಳೆಯರು! (ಕೊಂಚ ಪಾರ್ಶಿಯಲ್ ಆಗಿದ್ದಕ್ಕೆ ಕ್ಷಮೆ ಇರಲಿ) ನನಗೆ ವೈಯಕ್ತಿಕವಾಗಿ ಹೆಚ್ಚು ಇಷ್ಟವಾಗಿದ್ದು ಸೆಗಣಿಪಿಂಟೋ ಪಾತ್ರ. ಸುಜಯ್ ಶಾಸ್ತ್ರಿಗೆ ಈ ಪಾತ್ರದ ಒಳಗೆ ಹೋಗುವ ತಾದಾತ್ಮ್ಯ ನೋಡಿ ಅಚ್ಚರಿಗೊಂಡೆ. ಅವರಿಗೆ ನೂರಕ್ಕೆ ನೂರು ಮಾರ್ಕ್ಸ್. ಅವರ ಡೈಲಾಗ್ ಡೆಲಿವರಿ ಶೈಲಿ, ಟೈಮಿಂಗ್ ಅಪರೂಪದ್ದು. ಕಾಮಿಡಿ ಪಾತ್ರಗಳೆಂದರೆ ಮುಖವನ್ನು ಸೊಟ್ಟಪಟ್ಟ ಮಾಡಿಕೊಂಡು ಕಿರುಚುವುದಲ್ಲ. ಸುಜಯ್ ಕನ್ನಡ ಚಿತ್ರರಂಗದ ಹೊಸ ಭರವಸೆಯ ಹಾಗೆ ನನಗೆ ಕಂಡರು.
ಮರಕುಟುಕನಾಗಿ ಯೋಗರಾಜ ಭಟ್ಟರ ಸ್ಟೈಲು
ಇನ್ನು ಮೋಡಿ ನಂಜಪ್ಪನಾಗಿ ಶಿವಮಣಿಯವರ ಗತ್ತು, ಮರಕುಟುಕನಾಗಿ ಯೋಗರಾಜ ಭಟ್ಟರ ಸ್ಟೈಲು ಇಷ್ಟವಾಯಿತು. ಈ ಎಲ್ಲ ಪಾತ್ರಗಳು ಒಂದಕ್ಕೊಂದು ಕಾಂಪ್ಲಿಮೆಂಟ್ ಮಾಡಿಕೊಂಡು ಚಿತ್ರಕಥೆಯನ್ನು ಪೊರೆಯುತ್ತವೆ. ಕಾನ್ಸ್ ಟೇಬಲ್ ಆಗಿ ಖೈದಿಯ ಉಚ್ಚೆ ಬಳಿಯುವ ಹೀರೋ, ಕಳ್ಳಭಟ್ಟಿ ಕಾಯಿಸುವ ಹೀರೋಯಿನ್ನು ಹೀರೋ ಹೀರೋಯಿನ್ನುಗಳನ್ನು ನೀವು ಈ ಅವತಾರಗಳಲ್ಲಿ ಹಿಂದೆಂದೂ ನೋಡಿರಲಾರಿರಿ. ಹೀರೋ ಹೀರೋಯಿನ್ನುಗಳು ಅತಿಮಾನುಷರಾಗಿಯೇ ಇರಬೇಕಿಲ್ಲ. ಅಪ್ಪಟ ಮನುಷ್ಯರಾಗಿಯೂ ಕಾಣಬಹುದು. ಕನ್ನಡದ ಚಿತ್ರಪ್ರಪಂಚಕ್ಕೆ ಇದು ಹೊಸಬಗೆಯ ಕಾಣ್ಕೆ. ಈ ಸವಾಲನ್ನು ರಿಷಬ್ ಮತ್ತು ಹರಿಪ್ರಿಯ ಧೈರ್ಯವಾಗಿ ಎದುರಿಸಿ ಗೆದ್ದಿದ್ದಾರೆ.
ನೋಡಕ್ಕೂ ಚಂದ ಕಾಣುವ ಹರಿಪ್ರಿಯ ಅಭಿನಯದಲ್ಲೂ ಕಾಡುತ್ತಾರೆ
ಹರಿಪ್ರಿಯ ಇಲ್ಲಿ ಪ್ರೇಮಿ ಮಾತ್ರವಲ್ಲದೆ ಕಥೆಯ ಪ್ರಮುಖ ತಿರುವು ನೀಡುವ ಕಲಾವಿದೆ. ನೋಡಕ್ಕೂ ಚಂದ ಕಾಣುವ ಹರಿಪ್ರಿಯ ಅಭಿನಯದಲ್ಲೂ ಕಾಡುತ್ತಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್. ಕೆಲವು ಸನ್ನಿವೇಶಗಳನ್ನು ಸಂಗೀತದ ಮೂಲಕವೇ ಕಟ್ಟಿಕೊಡುವುದರಲ್ಲಿ ಅಜನೀಶ್ ಗೆ ಅಜನೀಶೇ ಸಾಟಿ. ಏತಕೇ ಮತ್ತು ಆದಿಜ್ಯೋತಿ ಹಾಡುಗಳು ಸಿನಿಮಾದ ಅಂತಃಶಕ್ತಿಯನ್ನು ಹೆಚ್ಚಿಸಿವೆ. ಆದಿಜ್ಯೋತಿ ಹಾಡಿನ ಏಕತಾರಿ ನಿನಾದ ನಿಮ್ಮೊಳಗೆ ಪ್ರತಿಧ್ವನಿಸುತ್ತಲೇ ಇರುತ್ತದೆ ಸಿನಿಮಾ ಮುಗಿದ ಮೇಲೂ..
ಹಲವು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಬೆಲ್ ಬಾಟಮ್ ನಲ್ಲೂ ತಮ್ಮ ಕೈಚಳಕ ತೋರಿದ್ದಾರೆ.
ಸಿನಿಮಾ ಉದ್ದಕ್ಕೂ ಕಚಗುಳಿ ಡೈಲಾಗುಗಳು
ಸಿನಿಮಾ ಉದ್ದಕ್ಕೂ ಅವರ ಕಚಗುಳಿ ಡೈಲಾಗುಗಳು ನಿಮ್ಮನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸೆಗಣಿ ಪಿಂಟೋಗೆ ಬರೆದಿರುವ ಸಂಭಾಷಣೆಯೇ ರಘು ಅವರ ಕಸುವನ್ನು ತೋರಿಸುತ್ತದೆ. ಈ ಹುಡುಗನಿಗೆ ದೊಡ್ಡ ಭವಿಷ್ಯವಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಕಾಶ್ ಅವರ ಎಡಿಟಿಂಗ್ ಅಚ್ಚುಕಟ್ಟು. ಇಂಥ ಪತ್ತೇದಾರಿ ಸಿನಿಮಾ ಎಡಿಟಿಂಗು ಕಷ್ಟದ ಕೆಲಸ. ಒಂದು ಗುಲಗಂಜಿಯಷ್ಟೂ ತಪ್ಪಾಗುವಂತಿಲ್ಲ. 80ರ ದಶಕದ ಕಥೆ ಇದಾದ್ದರಿಂದ ಜವಾಬ್ದಾರಿ ಇನ್ನೂ ಹೆಚ್ಚು. ಪ್ರಕಾಶ್ ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದೇ ಮಾತು ಸಿನಿಮ್ಯಾಟೋಗ್ರಾಫರ್ ಅರವಿಂದ ಕಶ್ಯಪ್ ಅವರಿಗೂ ಸಲ್ಲುತ್ತದೆ. ನೆರಳು-ಬೆಳಕಿನೊಂದಿಗೆ ಅವರು ಸಲಿಗೆಯಿಂದ ಆಟವಾಡಿದ್ದಾರೆ. ಕಣ್ಣಿಗೆ ಹಾರ್ಷ್ ಅನ್ನಿಸುವ ಒಂದೂ ದೃಶ್ಯ ಇಲ್ಲಿಲ್ಲ. ಕಣ್ಣುತಂಪು ಮಾಡಿಕೊಳ್ಳೋದು ಅಂತಾರಲ್ಲ,
ಕಲಾ ನಿರ್ದೇಶಕ ಧರಣಿ ಇಷ್ಟವಾಗದೇ ಇರುವುದಿಲ್ಲ
ಅಂಥ ಅನುಭವ ಕೊಡುತ್ತಾರೆ ಅರವಿಂದ ಕಶ್ಯಪ್. ರೆಟ್ರೋ ಶೈಲಿಯ ಸಿನಿಮಾಗೆ ಬೇಕಾದ ಪರಿಕರಗಳು, ಸೆಟ್ ಗಳನ್ನು ಹೊಂದಿಸುವಲ್ಲಿ ಕಲಾ ನಿರ್ದೇಶಕ ಧರಣಿ ಇಷ್ಟವಾಗದೇ ಇರುವುದಿಲ್ಲ. ವಸ್ತ್ರವಿನ್ಯಾಸಕಿಯಾಗಿರುವ ಪ್ರಗತಿ ರಿಷಬ್ ಶೆಟ್ಟಿ ಚಾಚೂ ತಪ್ಪದಂತೆ ಪಾತ್ರಗಳಿಗೆ ಉಡುಗೆ ತೊಡಿಸಿದ್ದಾರೆ. ಅವರ ಕೈಚಳಕದಲ್ಲಿ ರೆಟ್ರೋ ಶೈಲಿಯ ಬಟ್ಟೆಗಳು ಕಣ್ಣುತುಂಬಿಸುತ್ತವೆ. ಇಷ್ಟೆಲ್ಲ ಸಾಧ್ಯವಾಗಿಸಿರೋದು ನಿರ್ಮಾಪಕ ಸಂತೋಷ್ ಕುಮಾರ್. ಅವರು ಇಂಥದ್ದೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದೇ ಒಂದು ದೊಡ್ಡ ಸಾಹಸ. ದೊಡ್ಡಮಟ್ಟದ ದುಡ್ಡಿನ ಥೈಲಿ ಇಟ್ಟುಕೊಂಡು ಅವರು ಇಲ್ಲಿಗೆ ಬಂದಿಲ್ಲ. ಆದರೆ ಅವರು ಪ್ರತಿ ರುಪಾಯಿ ಹಣವನ್ನು ಪ್ರೀತಿಯಿಂದ ಖರ್ಚು ಮಾಡಿದ್ದಾರೆ. ಸಂತೋಷ್ ಜತೆಗೆ ಅವರ ಅವಳಿ ಸೋದರ ಸಂದೀಪ್ ಕುಮಾರ್ ಸೇರಿದಂತೆ ಇಡೀ ಕುಟುಂಬವೇ ಸಿನಿಮಾ ಸಂಭ್ರಮದಲ್ಲಿ ತೊಡಗಿಕೊಂಡಿದೆ.
ಬೆಲ್ ಬಾಟಮ್ ಗಾಗಿಯೇ ತಮ್ಮ ಇಡೀ ಸಮಯ, ಕ್ರಿಯಾಶೀಲತೆಯನ್ನು ಖರ್ಚು ಮಾಡಿದ್ದಾರೆ
ಕೊನೆಯದಾಗಿ ಹೇಳಲೇಬೇಕಾದ ಮಾತು: ಕಥೆಗಾರ ದಯಾನಂದ್ ಕಳೆದ ಒಂದು-ಒಂದೂವರೆ ವರ್ಷ ಬೆಲ್ ಬಾಟಮ್ ಗಾಗಿಯೇ ತಮ್ಮ ಇಡೀ ಸಮಯ, ಕ್ರಿಯಾಶೀಲತೆಯನ್ನು ಖರ್ಚು ಮಾಡಿದ್ದಾರೆ. ಅವರನ್ನು ಕೇವಲ ಈ ಸಿನಿಮಾದ ಕಥೆಗಾರ ಎನ್ನಲಾಗದು. ಕಲಾ ನಿರ್ದೇಶನ, ಸಂಗೀತ, ಸಂಭಾಷಣೆ, ಪ್ರಮೋಷನ್, ಪ್ರೊಡಕ್ಷನ್ ಡಿಸೈನಿಂಗ್ ಸೇರಿದಂತೆ ಹಲವು ವಿಭಾಗಗಳಿಗೆ ತಮ್ಮ ಶಕ್ತಿಯನ್ನು ಧಾರೆಯೆರೆದು ತೆರೆಮರೆಯಲ್ಲಿ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸದೇನನ್ನೋ ಕೊಡಬೇಕು ಎಂಬುದನ್ನು ಅವರ ತಪನೆ ಕೊನೆಗೂ ಸಫಲವಾಗಿದೆ. ಅವರಿಗೊಂದು ದೊಡ್ಡ ಗೆಲುವು ಬೇಕು ಎಂಬುದು ನನ್ನಂಥ ನೂರಾರು ಗೆಳೆಯರ ಅಭಿಲಾಶೆಯಾಗಿತ್ತು. ಅದು ಆಗಿದೆ. ಸದ್ಯಕ್ಕಂತೂ ಎಲ್ಲರೂ ಖುಷ್. ಬೆಲ್ ಬಾಟಮ್ ಹ್ಯಾಂಗ್ ಓವರ್ ಬಹಳ ದಿನ ಮುಂದುವರೆಯಲಿದೆ.