Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ಸತ್ಯಾಗ್ರಹ ಕೆಲವರ್ಗಕ್ಕೆ ಮಾತ್ರ
ಸಾಮಾಜಿಕ ಸಮಸ್ಯೆಗಳು, ರಾಜಕೀಯ ತಲ್ಲಣಗಳನ್ನು ಹತ್ತಿರದಿಂದ ಕಂಡಿರುವ ಪ್ರಕಾಶ್ ಝಾ ಅವರು 'ಗಂಗಾಜಲ್','ರಾಜ್ ನೀತಿ' ಹಾಗೂ 'ಆರಕ್ಷಣ್' ನಂತರ ಮತ್ತೊಂದು ಸಶಕ್ತ ಚಿತ್ರವನ್ನು ಮುಂದಿಟ್ಟಿದ್ದಾರೆ. ದೇಶದ ಸಾಮಾಜಿಕ -ರಾಜಕೀಯ ಪರಿಸ್ಥಿತಿಯ ಚಿತ್ರಣ ನೀಡುತ್ತಾ ಭ್ರಷ್ಟಾಚಾರದ ವಿರುದ್ಧ ಹೋರಾಟದ ಕಥೆಯನ್ನು ಝಾ ಸಮರ್ಥವಾಗಿ ನೀಡಿದ್ದಾರೆ.
ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಕರೀನಾ ಕಪೂರ್, ಅರ್ಜುನ್ ರಾಂಪಾಲ್, ಅಮೃತಾ ರಾವ್ ಹಾಗೂ ಮನೋಜ್ ಬಾಜಪೇಯಿ ತಾರಾಗಣದ ಈ ಚಿತ್ರ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ 'ಭ್ರಷ್ಟಾಚಾರ ವಿರೋಧಿ ಆಂದೋಲನ' ವನ್ನು ನೆನಪಿಸುತ್ತದೆ.
ಪ್ರಕಾಶ್ ಅವರ ಚಿತ್ರದಲ್ಲಿ ಕಥೆ, ನಟನೆ ಹಾಗೂ ನಿರ್ದೇಶನ ಚಿತ್ರದ ಬಂಡವಾಳವಾಗಿದೆ.ಅಮಿತಾಬ್ ಬಚ್ಚನ್, ಮನೋಜ್ ಬಾಜಪೇಯಿ ಹಾಗೂ ಅಜಯ್ ದೇವಗನ್ ಗಾಗಿ ಚಿತ್ರ ನೋಡಲಡ್ಡಿಯಿಲ್ಲ. ಚಿತ್ರಕ್ಕೂ ಮುನ್ನ ಪ್ರಚಾರ ಗಿಟ್ಟಿಸಿಕೊಂಡ ಕರೀನಾ, ಚಿತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿಲ್ಲ. ಝಾ ಅವರ ನೆಚ್ಚಿನ ನಟರಲ್ಲಿ ಒಬ್ಬರಾದ ಅರ್ಜುನ್ ರಾಂಪಾಲ್ ಅವರ ಪಾತ್ರಕ್ಕೂ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿಲ್ಲ. ಒಟ್ಟಾರೆ' ಸತ್ಯಾಗ್ರಹ' ಎಂಬ ಶಕ್ತಿಯುತ ಅಸ್ತ್ರ ಇಟ್ಟುಕೊಂಡಿದ್ದರೂ ಬಾಕ್ಸಾಫೀಸ್ ಯುದ್ಧದಲ್ಲಿ ಸೋಲುವ ಭೀತಿ ಎದುರಿಸುವ ಸಾಧ್ಯತೆ ನಿಚ್ಚಳವಾಗಿದೆ. ಚಿತ್ರದ ಬಗ್ಗೆ ಇನ್ನಷ್ಟು ಅಂಶಗಳನ್ನು ಇಲ್ಲಿ ಓದಿ...
ನಟನೆ ಜೀವಾಳ
ಮೊದಲೇ ಹೇಳಿದಂತೆ ದ್ವಾರಕಾ ಆನಂದ್ ಪಾತ್ರದಲ್ಲಿ ಬಿಗ್ ಬಿ, ಮಾನವ್ ರಾಘವೇಂದ್ರ ಆಗಿ ದೇವಗನ್, ಖಳನಾಗಿ ಮನೋಜ್ ಬಾಜಪೇಯಿ ಅದ್ಭುತ ನಟನೆ ನೀಡಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ಅರ್ಜುನ್ ರಾಂಪಾಲ್, ಟಿವಿ ರಿಪೋರ್ಟರ್ ಯಾಸ್ಮೀನ್ ಖಾನ್ ಪಾತ್ರದಲ್ಲಿ ಕರೀನಾ ಕಪೂರ್ ನಟನೆ ಉತ್ತಮವಾಗಿದೆ. ಆದರೆ, ಕರೀನಾ ಪಾತ್ರ ಚಿತ್ರದ ಕಥೆಯನ್ನು ಹಲವೆಡೆ ನುಂಗಿ ಹಾಕುತ್ತದೆ.
ಝಾ ಕಥೆಯಲ್ಲಿ ಏನಿದೆ?
ಇಂಜಿನಿಯರ್ ಸತ್ಯೇಂದ್ರ ದುಭೆ ಹತ್ಯೆ, ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ,ಜನ ಲೋಕಪಾಲ್ ಮಸೂದೆ, ಅರವಿಂದ್ ಕೇಜ್ರಿವಾಲ ಆಮ್ ಆದ್ಮಿ ಪಾರ್ಟಿ, ಗಾಂಧಿಜೀ ಅವರ ಕೊನೆ ದಿನಗಳು, ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮಹತ್ವ, ಇದರ ಜತೆಗೆ ಪ್ರೀತಿ ಪ್ರೇಮ, ಮಾಧ್ಯಮಗಳ ವರದಿಗಾರಿಕೆ, ಮೆಲೋಡ್ರಾಮ ಇದೆ. ಆದರೆ, ಎಲ್ಲವೂ ಕಿಚಡಿಯಾಗಿ ಪ್ರೇಕ್ಷಕನಿಗೆ ಮನರಂಜನೆ ಅಥವಾ ನೈಜತೆ ಚಿತ್ರಣ ನೀಡುವಲ್ಲಿ ವಿಫಲವಾಗಿದೆ.
ಪೇಲವವಾದ ಚಿತ್ರ
ಚಿತ್ರಕ್ಕೆ ಸಮರ್ಥವಾದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಅವಶ್ಯವಾಗಿತ್ತು. ಇದರಿಂದ ಪ್ರೇಕ್ಷಕರಿಗೆ ರಿಲೀಫ್ ಸಿಗುತ್ತಿತ್ತು. ಆದರೆ, ಸಲೀಂ ಸುಲೈಮಾನ್, ಆದೇಶ್ ಶ್ರೀವಾಸ್ತವ, ಅಂಜನ್ ಅವರ ಸಂಗೀತ ಕೈ ಕೊಟ್ಟಿದೆ.
ಪ್ರಸೂನ್ ಜೋಶಿ ಕೂಡಾ ಉತ್ತಮ ಸಾಹಿತ್ಯ ನೀಡುವಲ್ಲಿ ವಿಫಲವಾಗಿದ್ದಾರೆ. ಚಿತ್ರದ ಪ್ರಮುಖ ಭಾಗಗಳು ನಿರಾಶೆ ಮೂಡಿಸುವುದರಿಂದ ಝಾ ನಿರ್ದೇಶನದ ಚಿತ್ರ ಎಂದು ಚಿತ್ರಮಂದಿರಕ್ಕೆ ನುಗ್ಗಲು ಸಾಧ್ಯವಾಗುವುದಿಲ್ಲ. ಸ್ಟಾರ್ ಗಳ ನಟನೆ ನೋಡಲು ಹೋಗಿಚಿತ್ರ ನೋಡಬಹುದೇ?
ನಟನೆಗಾಗಿ ನೋಡಬಹುದು. ಚಿತ್ರದ ಸಬ್ಜೆಕ್ಟ್ ಕೆಲಕಾಲ ಚಿಂತನೆ ದೂಡುತ್ತದೆ. ಆದರೆ, ಪ್ರಕಾಶ್ ಝಾ 'ಪಂಚ್' ಮಾಯವಾಗಿದೆ. ಬಾಸ್ಮತಿ ಬ್ರಾಂಡ್ ಕಾಣಿಸಿಕೊಳ್ಳುವುದು, ಅನಗತ್ಯ ಐಟಂ ನಂಬರ್, ಸಾಮಾಜಿಕ-ರಾಜಕೀಯ ತಲ್ಲಣವಿರುವ ಚಿತ್ರದಲಿ ಪ್ರಣಯ ಗೀತೆ, ಪ್ರತಿ ಚಿತ್ರದಲ್ಲೂ ಸಂದೇಶ ಸಾರುವ ಝಾ ಈ ಚಿತ್ರದಲ್ಲಿ ಹಾಡು, ಕುಣಿತಕ್ಕೆ ಬ್ರೇಕ್ ಹಾಕಿದ್ದರೆ ಚಿತ್ರ ಚೆನ್ನಾಗಿ ಮೂಡಿ ಬರುತ್ತಿತ್ತು.
ಝಾ ಅವರು ಆಯ್ದುಕೊಳ್ಳುವ ವಿಷಯ ಹಾಗೂ ಅದರ ಸುತ್ತ ಹೆಣೆಯುವ ಕಥೆ ಜನ ಸಾಮಾನ್ಯರಿಗೆ ಹತ್ತಿರವಾಗಿರುವುದರಿಂದ ಚಿತ್ರ ನೋಡಲು ಕೆಲವು ವರ್ಗ ಮುನ್ನುಗ್ಗಬಹುದು. ಮನರಂಜನೆ ಬಯಸುವ ಬಹು ಸಂಖ್ಯಾತರಿಗೆ ಈ ಚಿತ್ರ ಹೇಳಿ ಮಾಡಿಸಿದ್ದಲ್ಲ.ಚಿತ್ರದ ಭವಿಷ್ಯ
ಪ್ರಕಾಶ್ ಅವರ ಈ ಹಿಂದಿನ ಹಿಟ್ ಚಿತ್ರಗಳಂತೆ ಈ ಚಿತ್ರ ಕೂಡಾ ಜನರಿಂದಲೇ ಗಳಿಕೆಯತ್ತ ಮುನ್ನುಗ್ಗಬೇಕು. ಚಿತ್ರ ನೋಡಿದ ಜನ ನಾಲ್ಕು ಒಳ್ಳೆ ಮಾತು ಆಡಿದರೆ ಮಾತ್ರ ಚಿತ್ರಕ್ಕೆ ಭವಿಷ್ಯವಿದೆ. ವಿಮರ್ಶಕರಿಂದ ತಿರಸ್ಕರಿಸಲ್ಪಟ್ಟ ಚಿತ್ರವಾಗಿ 'ಸತ್ಯಾಗ್ರಹ' ಗುರುತಿಸಿಕೊಳ್ಳುತ್ತಿದ್ದು, ಹೈಟೆಕ್ ಮಾಧ್ಯಮಗಳ ಬಗ್ಗೆ ಕಥೆ ಹೇಳಿರುವ ಝಾ ಚಿತ್ರದ ಓಟದ ವೇಗ ಹೇಗೆ ಹೆಚ್ಚಿಸುತ್ತಾರೆ ಕಾದು ನೋಡಬೇಕಿದೆ.