ಬದುಕಿನ ಅರ್ಥ ತಿಳಿಸುವ 'ಸೆವೆಂಟೀನ್' ಚಿತ್ರ
ಆದಿ ಶಂಕರಾಚಾರ್ಯರ 'ಭಜ ಗೋವಿಂದಂ' ನಿಂದ ಸ್ಫೂರ್ತಿ ಪಡೆದು ತ್ವರಿತ ಗತಿಯ ಬದುಕಿನಲ್ಲಿ ಕಳೆದುಕೊಳ್ಳುತ್ತಿರುವ ಜೀವನ ಮೌಲ್ಯ, ಬದುಕಿನ ಅರ್ಥ ತಿಳಿಸುವ 'ಸೆವೆಂಟೀನ್' ಎಂಬ ಹೆಸರಿನ ಕಿರುಚಿತ್ರ ಚಿತ್ರವೊಂದನ್ನು ಯುವ ಚಿತ್ರತಂಡ ನಿರ್ಮಿಸಿದೆ.
ಸಕತ್ ಫಾಸ್ಟ್ ಆಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಾವೆಲ್ಲಾ ಕಳೆದು ಹೋಗುತ್ತಿದ್ದೇವೆ. ಬದುಕಿನ ಅರ್ಥವನ್ನೆ ಅರ್ಥಮಾಡಿಕೊಳ್ಳದೆ ಹೋಗುತ್ತೇವೆ. ಅದು ಅರ್ಥವಾಗುವಷ್ಟರಲ್ಲಿ ಸಮಯಮೀರಿರುತ್ತೆ.
ಈ ಕಿರುಚಿತ್ರದಲ್ಲಿ ಹೇಗೆ ಒಬ್ಬ ವ್ಯಕ್ತಿ ಬದುಕಿನ ಮಾಯಾ ಭ್ರಮೆಯ ಪ್ರಪಂಚದಲ್ಲಿ ತನ್ನನ್ನು ತಾನು ಕಳೆದುಕೊಂಡು ಸೋತು ಹೋಗುತ್ತಾನೆ ಎನ್ನುವುದನ್ನು ಸೆರೆಹಿಡಿಯಲು ಪ್ರಯತ್ನಿಸಲಾಗಿದೆ ಎಂದು ಬೈಟು 2 ಕಾಫಿ ತಂಡದ ಸದಸ್ಯರಾದ ಅಮರನಾಥ್ ವಿ.ಬ್ಯಾಡಿಗಿ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಚಿತ್ರ ತಂಡ:
ಚಿತ್ರಕಥೆ, ನಿರ್ದೇಶನ: ಭರತ್ ಬಾಳೆಮನೆ
ನಿರ್ಮಾಣ: ಬೈಟುಕಾಫಿ ಫಿಲಂಸ್
ಸಂಗೀತ : ವಿಶ್ವೇಶ್ ಭಟ್
ಸಂಕಲನ: ಹರೀಶ್ ಮನೋಹರ್
ಸ್ಥಿರ ಚಿತ್ರ ಹಾಗೂ ಶಬ್ದ : ವಿಶ್ವನಾಥ್ ಎನ್
ಪ್ರೊಡೆಕ್ಷನ್: ಅಮರನಾಥ್ ವಿ.ಬಿ, ಗಿರೀಶ್ ಬಿಜ್ಜಾಲ್, ಪದ್ಮಪ್ರಿಯ ನಾರಾಯಣನ್
ತಾರಾಗಣ: ಪುನೀತ್ ದೇಸಾಯಿ, ತುಷಾರ್ ಗಾಂಧಿ, ಭಾನುಪ್ರಕಾಶ್ ಕೆಸಿ, ಕೀರ್ತಿ ನಟರಾಜನ್, ಸಚ್ಚಿದಾನಂದ ಟಿ.ಜಿ ಹಾಗೂ ಜೋಯಿತ ದಾಸ್
ಈ ಕಿರುಚಿತ್ರ ಹೊರ ಮನಸ್ಸು ಮತ್ತು ಸುಪ್ತ ಮನಸ್ಸುಗಳ ನಡುವಿರುವ ಒಳ್ಳೆಯ ಹಾಗೂ ಕೆಟ್ಟಗುಣಗಳ ಸಂಬಂಧವಿರುವ ಸಂಘರ್ಷವನ್ನು ತೋರ್ಪಡಿಸಿ, ಅಲ್ಲದೆ ಬದುಕಿನ ಅರ್ಥವನ್ನು ಕಂಡುಕೊಳ್ಳುವ ಏಕೈಕ ಮಾರ್ಗ "ಆಧ್ಯಾತ್ಮ"ವೆಂದು ಸಾರಲು ಪ್ರಯತ್ನಿಸಲಾಗಿದೆ. ಚಿತ್ರದಲ್ಲಿ ಮತ್ತೇನಿದೆ ಚಿತ್ರಸರಣಿಯಲ್ಲಿ ಓದಿ..
ಚಿತ್ರದ ಬಗ್ಗೆ ಅನಿಸಿಕೆ
ಚಿತ್ರದ ಆರಂಭ ಉತ್ತಮವಾಗಿದೆ. ಆಹ್ಲಾದಕರ ಮನಸ್ಥಿತಿಯಲ್ಲಿರುವ ಯುವಕನೊಬ್ಬ ಹೈವೇ ರಸ್ತೆಯಲ್ಲಿ ಸಾಗುತ್ತಿರುತ್ತಾನೆ. ಆತನಿಗೆ ಟ್ರಿಮ್ ಆಗಿ ಒಳ್ಳೆ ಸಾಫ್ಟ್ ವೇರ್ ಉದ್ಯೋಗಿ ರೀತಿ ಕಾಣೋ ವ್ಯಕ್ತಿ ಮಾರ್ಗ ಮಧ್ಯದಲ್ಲಿ ಸಿಗುತ್ತಾನೆ.
ಆತನನ್ನು ಕಾರಿಗೆ ಹತ್ತಿಸಿಕೊಳ್ಳುವ ಚಿತ್ರದ ಪ್ರಮುಖ ಪಾತ್ರಧಾರಿ (ಕಾರು ಚಾಲಕ) ಇದೇ ರೀತಿ ಮಾರ್ಗ ಮಧ್ಯದಲ್ಲಿ ಸಿಗುವ ಪೂಜಾರಿ (ಆಧ್ಯಾತ್ಮ ಸೂಚಕ), ಕುಡುಕ ಕಮ್ ಧೂಮಪಾನಿ(ವ್ಯಸನ ಸೂಚಕ) ಯಕ್ಷಗಾನ ವೇಷಧಾರಿ (ಮನಸ್ಸಿನ ಏರಿಳಿತ ಸೂಚಕ) ಹಾಗೂ ಕೊನೆಯದಾಗಿ ಬೆಲೆವೆಣ್ಣು (ನಿಷೇಧಾರ್ಥಕ ಸೂಚಕ) ಕಾರು ಹತ್ತುತ್ತಾರೆ.
ಆದರೆ, ಬೆಲೆವೆಣ್ಣು ಕೂರಲು ಸ್ಥಳ ಇರುವುದಿಲ್ಲ ಈ ಸಂದರ್ಭದಲ್ಲಿ ಕಾರು ಚಾಲಕ ಯಾರನ್ನು ಕೆಳಗಿಳಿಸುತ್ತಾನೆ ಎಂಬುದು ಮುಂದೆ ಓದಿ..
ಚಿತ್ರ ವಿಮರ್ಶೆ
ಮುಂಬದಿ ಸೀಟಿನಲ್ಲಿ ಕುಳಿತ್ತಿದ್ದು ಯಾರು ಎಂಬುದು ಚಾಲಕನಿಗೆ ಮರೆತು ಹೋಗಿರುತ್ತದೆ. ತನ್ನ ಪಕ್ಕದಲ್ಲಿದ್ದ ಮೊದಲು ಹತ್ತಿದ ಪ್ರಯಾಣಿಕನನ್ನು ಇಳಿಯುವಂತೆ ಹೇಳುತ್ತಾನೆ. ಆದರೆ, ಇದಕ್ಕೆ ಆತ ಒಪ್ಪುವುದಿಲ್ಲ.
ಹಿಂದೆ ತಿರುಗುವಷ್ಟರಲ್ಲಿ ಕುಡುಕ, ಪೂಜಾರಿಯನ್ನು ಕೆಳಗೆ ದಬ್ಬಿ ಬೆಲೆವಣ್ಣಿಗೆ ಸ್ಥಳ ಮಾಡಿಕೊಡುತ್ತಾನೆ. ಕುಡುಕ-ವೇಶ್ಯೆ ಮಧ್ಯೆ ಯಕ್ಷ ಶಾಂತ ಸ್ಥಿತಿಯಲ್ಲಿ ಕೂತಿರುತ್ತಾನೆ. ವೇಶ್ಯೆಯ ಕಣ್ ಮಿಟುಕಿಗೆ ಸೋತ ಚಾಲಕ ಕಾರಿನ ವೇಗ ಹೆಚ್ಚಿಸುತ್ತಾನೆ. ಇದು ಪಕ್ಕದ ವ್ಯಕ್ತಿಗೆ ಇರುಸು ಮುರುಸು ತರುತ್ತದೆ. ವ್ಯಥೆ ಪಡುತ್ತಾನೆ.
ಚಿತ್ರ ವಿಮರ್ಶೆ
ಕುಡುಕ-ವೇಶ್ಯೆ ನಡುವಿನ ಸಲ್ಲಾಪ ಕಂಡು ಚಾಲಕ ಮರಗುವ ವೇಳೆಯಲ್ಲಿ ಮುಂಬದಿ ಕುಳಿತ ವ್ಯಕ್ತಿ ಕಾರು ನಿಲ್ಲಿಸುವಂತೆ ಹೇಳುತ್ತಾನೆ.
ಯೌವನ ಪ್ರತಿರೂಪವಾಗಿದ್ದ ವ್ಯಕ್ತಿ ಕಾರಿನಿಂದ(ಪ್ರಯಾಣ) ಇಳಿದ ಮೇಲೆ ಚಾಲಕ ಹಿಂತಿರುಗಿ ನೋಡುತ್ತಾನೆ. ಆಗಲೇ ಸೂರ್ಯ ಅಸ್ತಂಗತನಾಗಿರುತ್ತಾನೆ. ಮುಂದಿನ ದೃಶ್ಯದಲ್ಲಿ ವಯೋವೃದ್ಧನಾದ ಚಾಲಕ ತನ್ನ ಗತಿಸಿದ ದಿನಗಳಿಗೆ ರೋಧಿಸುತ್ತಾ ಕೈ ಚಾಚಿ ಬೇಡುತ್ತಿರುತ್ತಾನೆ. ಆಧಾತ್ಮ ಸೂಚಕವಾದ ಪೂಜಾರಿ ಅಭಯ ಹಸ್ತ ಚಾಚಿ ನಾನಿದ್ದೇನೆ ಎನ್ನುತ್ತಿರುತ್ತಾನೆ
ಹಿನ್ನೆಲೆ ಸಂಗೀತ
ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವನ್ನು ಭಾವ-ಅಭಾವಗಳಿಗೆ ತಕ್ಕಂತೆ ಹತ್ತು-ಹಲವಾರು ರಾಗಗಳೊಂದಿಗೆ ಸಂಯೋಜಿಸಲಾಗಿದೆ.
ಆ ರಾಗಗಳು ಕಣದ,ಪೂರ್ಣಚಂದ್ರಿಕ, ಖಮಾಸ್, ಅಭೇರಿ, ಬಗೇಷ್ರಿ,ಶುಭಪಂತುವರಲಿ, ಮಧುವಂತಿ,ಶಿವರಂಜಿನಿ, ಕಾಮವರ್ಧಿನಿ. ಬದುಕಿನ ಅರ್ಥವನ್ನು ಅರ್ಧವಯಸ್ಸಾದ ಮೇಲೆ ತಿಳಿದುಕೊಳ್ಳುವುದಕ್ಕಿಂತ ಮುಂಚೇನೆ ತಿಳಿದುಕೊಂಡರೆ ಚಿತ್ರ ಇನ್ನೂ ಅಪ್ಯಾಯಮಾನವಾಗುತ್ತದೆ.
ಕೊನೆ ನುಡಿ
ಚಿತ್ರದ ಮೇಕಿಂಗ್, ಪಾತ್ರವರ್ಗ, ವಿವರಣೆಯನ್ನು ಬೈಟುಕಾಫಿ ವೆಬ್ ತಾಣದಲ್ಲಿ ನೀಡಲಾಗಿದೆ. ಸಂಗೀತ ಪ್ರಧಾನವಾದ ಮಾತಿನ ಅಗತ್ಯವೇ ಕಾಣದ ಭರತ್ ಬಿ ನಿರ್ದೇಶನ ಚಿತ್ರವನ್ನು ತಪ್ಪದೇ ನೋಡಿ..
ನಿಮ್ಮ ಅಭಿಪ್ರಾಯ ತಿಳಿಸಿ.. ಅಂದ ಹಾಗೆ ಇದೇ ತಂಡ ಈ ಹಿಂದೆ ಟೈಮ್ಸ್ ಸಮೂಹದ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿತ್ತು. ರಾಜ್ಯ ಮಟ್ಟದ ಕಿರು ಚಿತ್ರೋತ್ಸವ ಆಯೋಜಿಸಿತ್ತು.


Click it and Unblock the Notifications











