Shaakuntalam Twitter Review: ಸಮಂತಾ ಐತಿಹಾಸಿಕ ಸಿನಿಮಾ ಸಾಹಸಕ್ಕೆ ಪ್ರೇಕ್ಷಕರು ಏನಂದ್ರು?
ಪೌರಾಣಿಕ ಕಥಾಹಂದರದ ತೆಲುಗಿನ 'ಶಾಕುಂತಲಂ' ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಗುಣಶೇಖರ್ ನಿರ್ದೇಶನದ ಸಿನಿಮಾ ತೆಲುಗು ಸೇರಿದಂತೆ ಹಿಂದಿ ಹಾಗೂ ತಮಿಳಿ ಭಾಷೆಗಳಲ್ಲಿ ರಿಲೀಸ್ ಆಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದ್ದು ಕಾಳಿದಾಸನ ಕಾವ್ಯದ 'ಶಾಕುಂತಲೆ'ಯಾಗಿ ಸಮಂತಾ ಮಿಂಚಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಮಹಾಭಾರತದ ದುಷ್ಯಂತ, ಶಾಕುಂತಲ ಪ್ರೇಮಕಾವ್ಯವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಯಾವುದೇ ಸಿನಿಮಾ ಬಂದಿರಲಿಲ್ಲ. ನಿರ್ದೇಶಕ, ನಿರ್ಮಾಪಕ ಗುಣಶೇಖರ್ ಆ ಪ್ರಯತ್ನ ಮಾಡಿದ್ದಾರೆ. ಶಾಕುಂತಲೆಯ ಹುಟ್ಟು, ಬಾಲ್ಯ ಹೀಗೆ ಎಲ್ಲವನ್ನು ಎಳೆಎಳೆಯಾಗಿ ತೆರೆಗೆ ತರಲಾಗಿದೆ. ಪ್ರೀತಿ ಪ್ರೇಮ, ನಂತರ ಎದುರಾಗುವ ಸಮಸ್ಯೆಗಳು, ಆಕೆಯ ನೋವು ಎಲ್ಲವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಪ್ರಕಾಶ್ ರಾಜ್, ಮೋಹನ್, ಮಧೂ, ದೇವ್ ಮೋಹನ್, ಗೌತಮಿ, ಕಬೀರ್ ಬೇಡಿ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದುಷ್ಯಂತನಾಗಿ ಮಲಯಾಳಂ ನಟ ದೇವ್ ಮೋಹನ್ ಕಾಣಿಸಿಕೊಂಡಿದ್ದಾರೆ. ಬಾಲ ಭರತನಾಗಿ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಬಣ್ಣ ಹಚ್ಚಿರುವುದು ವಿಶೇಷ. ಶೇಖರ್ ಜೋಸೆಫ್ ಛಾಯಾಗ್ರಹಣ, ಮಣಿಶರ್ಮಾ ಸಂಗೀತ 'ಶಾಕುಂತಲಂ' ಚಿತ್ರಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಏನು ಹೇಳಿದ್ದಾರೆ ಮುಂದೆ ಓದಿ.
ಶ್ರೀನಿವಾಸ್ ಕಲ್ಯಾಣ್ ಎಂಬುವವರು ಟ್ವೀಟ್ ಮಾಡಿ "ಶಾಕುಂತಲಂ ಅಷ್ಟೇನು ಚೆನ್ನಾಗಿಲ್ಲ. ಮೊದಲಾರ್ಧ ಬೋರಿಂಗ್, ದ್ವಿತಿಯಾರ್ಧ ಓಕೆ. ಗುಣಶೇಖರ್ ಬರವಣಿಗೆ ಚೆನ್ನಾಗಿಲ್ಲ, ಸ್ಲೋ ಸ್ಕ್ರೀನ್ಪ್ಲೇ, ನೋಡಬೇಕು ಎಂದು ಕೂತುಹಲ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಬರೀ ಸಮಂತಾ ಲುಕ್, ಕಣ್ಣುಗಳು ಹಾಗೂ ಆಕೆಯ ನಟನೆ ಚೆನ್ನಾಗಿದೆ. ಅಲ್ಲು ಅರ್ಹಾ ಕ್ಯೂಟ್ ಸರ್ಪ್ರೈಸ್ ಚಿತ್ರವನ್ನು ಕೊನೆಗೆ ಚೆಂದಗಾಣಿಸಿದೆ" ಎಂದು ಬರೆದುಕೊಂಡಿದ್ದಾರೆ.
"ಈಗಷ್ಟೆ 'ಶಾಕುಂತಲಂ' ಸಿನಿಮಾ ನೋಡಿದೆ. ಬಹಳ ಸ್ಲೋ ಆಗಿದೆ. ಸಮಂತಾ ಗೆದ್ದಿದ್ದಾರೆ. ಆಕೆ ಶಾಕುಂತಲೆ ಪಾತ್ರಕ್ಕೆ ಸರಿಯಾಗಿ ಹೊಂದಿಕೆಯಾಗಿದ್ದಾರೆ. ಗ್ರಾಫಿಕ್ಸ್ ಅರ್ಧ ಬೆಂದಂತಿದೆ. ಒಟ್ಟಾರೆಯಾಗಿ ಪರವಾಗಿಲ್ಲ. ಸಮಂತಾಗೋಸ್ಕರ ಒಮ್ಮೆ ನೋಡಬಹುದು ಎಂದು ಜೀವನ್ ಸಂತೋಷ್ ಎಂಬುವವರು ಟ್ವೀಟ್ ಮಾಡಿದ್ದಾರೆ.

"ಮಾರ್ನಿಂಗ್ ಶೋಗಳೆಲ್ಲಾ ಫುಲ್ ಆಗಿದೆ. ರಾಣಿ ಸಮಂತಾ, ಕಮಾಲ್ ಮಾಡಿದ್ದಾರೆ. ದೇವ್ ಮೋಹನ್ ನೋಡುತ್ತಿದ್ದರೆ ಬೇರೆಡೆ ಗಮನ ಹೋಗಲಿಲ್ಲ. ದೇವ್ ನಿಜಕ್ಕೂ ಯುವರಾಜನಂತೆ ಮಿಂಚಿದ್ದಾರೆ. ಕೊನೆ 18 ನಿಮಿಷ ಅಲ್ಲು ಅರ್ಹಾ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಕೊಂಚ ಬೋರಿಂಗ್ ಆಗಿದೆ. ಒಟ್ಟಾರೆಯಾಗಿ ಒಳ್ಳೆ ಸ್ಟೋರಿ ಎಂದು ಸಮಂತಾ ಅಭಿಮಾನಿ ಒಬ್ಬರು ಬರೆದುಕೊಂಡಿದ್ದಾರೆ.
"ಗುಣಶೇಖರ್ ಅದ್ಭುತ ನಿರ್ದೇಶಕರು. ಆದರೆ ಅವರ ಥ್ರಿಡಿ ಹಾಗೂ ಗ್ರಾಫಿಕ್ಸ್ ಗೀಳು, ಕಡಿಮೆ ಬಜೆಟ್ ಅವರ ಒಳ್ಳೆ ಕಥೆ ಹೇಳುವ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡಿದೆ. ಗುಣಶೇಖರ್ ಅವರು ಥ್ರಿಡಿ ಹಾಗೂ ಗ್ರಾಫಿಕ್ಸ್ಗಾಗಿ ಸಿನಿಮಾ ಮಾಡುವುದನ್ನು ನಿಲ್ಲಿಸಲು ತಂಡದವರು ಹೇಳಿ. ಅದೇ ಅವರು ಒಳ್ಳೆ ಕತೆ ಹೇಳುವುದನ್ನು ಕೊಲ್ಲುತ್ತಿದೆ" ಎಂದು ಅಜಯ್ ರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧವ ಎಂಬುವವರು "ಶಾಕುಂತಲಂ ಚಿತ್ರಕ್ಕೆ ನನ್ನ ರೇಟಿಂಗ್ 1.5. ಬೋರಿಂಗ್ ಸಿನಿಮಾ. ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಬಹಳ ಲ್ಯಾಗ್ ಆಗಿದೆ. ಥ್ರೀಡಿ ಕೆಟ್ಟದಾಗಿದೆ. ಸಂಗೀತ ಕೂಡ ಚೆನ್ನಾಗಿಲ್ಲ. ಥಿಯೇಟರ್ನಲ್ಲಿ ಮಾತ್ರವಲ್ಲ ಓಟಿಟಿಯಲ್ಲೂ ನೋಡೋಕೆ ಹೋಗಬೇಡಿ" ಎಂದು ಟ್ವೀಟ್ ಮಾಡಿದ್ದಾರೆ.
"ಕೆಟ್ಟದಾದ, ಬಹಳ ಬೋರಿಂಗ್ ಆದ ಪೌರಾಣಿಕ ಡ್ರಾಮಾ ಶಾಕುಂತಲಂ. ಒಳ್ಳೆ ಸಂಗೀತ ಹಾಗೂ ಓಕೆ ಎನ್ನಬಹುದಾದಾ ಒಂದಷ್ಟು ಸನ್ನಿವೇಶಗಳನ್ನು ಬಿಟ್ಟರೆ ಪಾಸಿಟಿವ್ ಹೇಳಲು ನಿಜಕ್ಕೂ ಏನು ಇಲ್ಲ. ಯುದ್ಧ ಸನ್ನಿವೇಶಗಳು ತಮಾಷೆಯಾಗಿದೆ. ನಿರೂಪಣೆ ಬಹಳ ಮಂದಗತಿಯಲ್ಲಿದ್ದು ವಿಷ್ಯುವಲ್ಸ್ ಯಾವುದೋ ಕಾರ್ಟೂನ್ ತರ ಕಾಣುತ್ತದೆ. ನಿಜಕ್ಕೂ ಕೆಟ್ಟ ಸಿನಿಮಾ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.


Click it and Unblock the Notifications











