ಮೊದಲ ಯತ್ನದಲ್ಲೇ ಸಿನಿಮಾ ತಂತ್ರದ ಎಲ್ಲ ಮಗ್ಗುಲುಗಳನ್ನು ತಡವುವಲ್ಲಿ ಯಶಸ್ಸು ಕಂಡಿರುವ ಅಶೋಕ್ ಪಾಟೀಲ್ ಶಾಪಗ್ರಸ್ತ ಸ್ಯಾಂಡಲ್ವುಡ್ಗೆ ಸಂಜೀವಿನಿಯಂತೆ ಕಂಡಿದ್ದಾರೆ
(ಹಿಂದಿನ ಪುಟದಿಂದ)
ಕಾವೇರಿ ನದಿ ಚಿತ್ರದುದ್ದಕ್ಕೂ ಉಪಮೆಯಾಗಿ, ಪ್ರತಿಮೆಯಾಗಿ ಬಳಕೆಯಾಗಿದೆ. ಹಾಗಿದ್ದೂ ಕಾವೇರಿ ವಿವಾದದ ಹಂಗು ಚಿತ್ರದ ಕತೆಗೆ ಬೇಕಿರಲಿಲ್ಲವೇನೋ ಎಂದು ಅನಿಸುತ್ತದೆ. ನಾಯಕಿ ಮಡಿಕೇರಿಯಿಂದ ಬೆಂಗಳೂರಿಗೆ ಹೋಗುವ ಹೊತ್ತಲ್ಲಿ, ನಾಯಕನನ್ನು ಭೇಟಿ ಮಾಡೋದಕ್ಕೆ ಸಾಧ್ಯವಾಗದೇ ಇರುವ ದೃಶ್ಯವೂ ಸ್ವಲ್ಪ ಅಸಹಜವಾಗಿದೆ.
ಮಧ್ಯಂತರದ ತನಕ ಭಾವನೆಗಳ ಪ್ರವಾಹದಲ್ಲಿ ತೇಲಾಡುವ ಚಿತ್ರ ಅನಂತರ ದ್ವೇಷದ ತೆಪ್ಪವನ್ನೇರುತ್ತದೆ. ಆಗ ಚಿತ್ರದ ಸ್ವರೂಪವೇ ಬದಲಾದರೂ, ನಿರೂಪಣೆಯಲ್ಲಿ ಕನ್ಸಿಸ್ಟೆನ್ಸಿ ಮಿಸ್ ಆಗಿಲ್ಲ . ಎಚ್ಚರಿಕೆಯಿಂದ ಸಂಯೋಜಿಸಿದ ಫ್ರೇಮ್ಗಳು, ಮಡಿಕೇರಿಯ ಬ್ಯಾಕ್ಡ್ರಾಪ್, ಮನೆಯಾಳಗೆ ನ್ಯಾಚುರಲ್ ಬೆಳಕನ್ನೇ ಬಳಸಿ ಚಿತ್ರೀಕರಿಸಿದ ದೃಶ್ಯಗಳು, ಅಂಡರ್ ವಾಟರ್ನಲ್ಲಿ ಚಿತ್ರಿಸಲಾದ ಹಾಡು, ಕಟ್ಟಡ ಮುಳುಗುವ ಶಾಟ್ನಲ್ಲಿ ಬಳಸಲಾದ ಗ್ರಾಫಿಕ್, ಇವೆಲ್ಲವೂ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ.
ನಟನೆಯಲ್ಲಿ ರಮೇಶ್ಗೆ 90 ಅಂಕಗಳು. ಡೈಲಾಗ್ ಡೆಲಿವರಿಯಲ್ಲಿ ಅವರು ತೆಗೆದುಕೊಂಡ ಕಾಳಜಿ ಮೆಚ್ಚತಕ್ಕದ್ದೇ. ಎರಡನೇ ಸ್ಥಾನ ನಾಯಕಿ ಅನು ಪ್ರಭಾಕರ್ ಅವರಿಗೆ. ಮಾತಿಗಿಂತ ನಗುವಲ್ಲೇ ಅವರು ಎಲ್ಲವನ್ನೂ ಹೇಳಿಬಿಡುತ್ತಾರೆ. ಜೈಜಗದೀಶ್ ಅಪರೂಪಕ್ಕೋ ಎಂಬಂತೆ ನಟಿಸಿದ್ದಾರೆ. ಅವರ ಮಾತೇ ಚಿತ್ರದ ಹೈಲೈಟ್ ಆಗುವುದೂ ಉಂಟು. ನೀಗ್ರೋ ಜಾನಿಯ ಆಕಾರವನ್ನು ಕಟುಕನ ಪಾತ್ರದಲ್ಲಿ ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಬಿ.ಸಿ. ಪಾಟೀಲ್ ತಮಗೊಗ್ಗದ ಪಾತ್ರದಲ್ಲಿ ಕಷ್ಟಪಟ್ಟಿದ್ದಾರೆ.
ಶಾಪಕ್ಕೆ ಅತ್ಯುತ್ತಮ ತಾಂತ್ರಿಕ ಗುಣಮಟ್ಟದ ಸ್ಪರ್ಶ
ಚಿತ್ರದ ತಾಂತ್ರಿಕ ಗುಣಮಟ್ಟದ ಬಗ್ಗೆ ಒಂದು ಸೆಮಿನಾರನ್ನೇ ಏರ್ಪಡಿಸಬಹುದು. ಉದಾಹರಣೆಗೆ ಹಂಸಲೇಖಾ ಅವರ ರೀರೆಕಾರ್ಡಿಂಗ್. ಕೊಳಲನ್ನು ಪ್ರೀತಿ ಮತ್ತು ವಿಷಾದಕ್ಕೆ ಸಂಕೇತವಾಗಿ ಬಳಸಿಕೊಂಡಿದ್ದಾರೆ. ಹಾಡುಗಳೂ ಕೂಡ ಚಿತ್ರದ ಒಟ್ಟಾರೆ ಓಘಕ್ಕೆ ಅನುಗುಣವಾಗಿವೆ. ಅಶೋಕ್ ಕಶ್ಯಪ್ ಮಟ್ಟಿಗೆ ಇದು ಅವರ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರ. ಒಳಾಂಗಣ ಮತ್ತು ಹೊರಾಂಗಣ ಎರಡರಲ್ಲೂ ಸಾಕಷ್ಟು ಹೊಸ ಪ್ರಯೋಗಗಳನ್ನು ಅವರು ನಡೆಸಿದ್ದಾರೆ. ಹಾಗಿದ್ದೂ ಕಣ್ಣಿಗೆ ಡಿಸ್ಟರ್ಬ್ ಆಗುವ ಒಂದು ಶಾಟ್ ಕೂಡ ಇಲ್ಲ.
ಚಿತ್ರ ನೋಡಿ ಹೊರ ಬಂದ ನಂತರ ಒಂದು ಗಾಢ ವಿಷಾದ ನಿಮ್ಮನ್ನು ಆವರಿಸಿದರೆ ಅಶೋಕ್ ಪಾಟೀಲ್ ಶ್ರಮ ಸಾರ್ಥಕ ಎಂದೇ ಅರ್ಥ. ಆ ಕಾರಣಕ್ಕೇ ಶಾಪ ಬರೀ ರಂಜನೆಯ ಮಟ್ಟದಲ್ಲಿ ನಿಲ್ಲುವುದಿಲ್ಲ . ಒಂದು ಅನುಭವ ಆಗಿಬಿಡುತ್ತದೆ. ನಿರ್ದೇಶಕನೊಬ್ಬ ತನ್ನ ಮೊದಲ ಪ್ರಯತ್ನದಲ್ಲೇ ಇಂಥಾ ಸಾಧನೆ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಪ್ರಥಮ. ಅಶೋಕ್ ಪಾಟೀಲ್ ತುರ್ತಾಗಿ ಅಮೆರಿಕಾದಿಂದ ವಾಪಾಸ್ ಬಂದು ಇನ್ನೊಂದಿಷ್ಟು ಚಿತ್ರಗಳನ್ನು ನಿರ್ದೇಶಿಸಿದರೆ ಕನ್ನಡ ಚಿತ್ರರಂಗ ಧನ್ಯ.
ಮುಖಪುಟ / ಸ್ಯಾಂಡಲ್ವುಡ್

Click it and Unblock the Notifications











