ವಿಮರ್ಶೆ: ಉಗ್ರರನ್ನು ಬೇಟೆ ಆಡುವ ವ್ಯಾಘ್ರ ಈ 'ಮಾಸ್ ಲೀಡರ್'
ವೋಟಿಗಾಗಿ ನೋಟು ಕೊಟ್ಟು ರಾಜಕೀಯ ಮಾಡುವವನು 'ಲೀಡರ್' ಅಲ್ಲ. ಗಡಿಯಲ್ಲಿ ನಿಂತು ದೇಶ ಕಾಯುವ ಪ್ರತಿಯೊಬ್ಬ ಯೋಧನೂ 'ಲೀಡರ್' ಅಂತ ತೋರಿಸುವ ಸಿನಿಮಾ 'ಮಾಸ್ ಲೀಡರ್'.
ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಬಿಡುಗಡೆಗೊಂಡಿರುವ 'ಮಾಸ್ ಲೀಡರ್' ಸಿನಿಮಾ ಭಯೋತ್ಪಾದನೆಯನ್ನ ಮಟ್ಟ ಹಾಕಿ ದೇಶಭಕ್ತಿ ಸಾರುವ ಸಿನಿಮಾ.
ಕಥಾಹಂದರ
ಭಾರತೀಯ ಸೇನಾ ಪಡೆಯ ಕ್ಯಾಪ್ಟನ್ ಶಿವರಾಜ್ (ಶಿವರಾಜ್ ಕುಮಾರ್) ಕಾಶ್ಮೀರದಿಂದ ಕರ್ನಾಟಕದವರೆಗೆ ಭಯೋತ್ಪಾದಕರನ್ನು ಬೇಟೆ ಆಡುವ ಕಥೆಯೇ 'ಮಾಸ್ ಲೀಡರ್'.
ಪ್ರಚಲಿತ ವಿದ್ಯಮಾನ
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳುವ ವಲಸಿಗರು, ಅದಕ್ಕೆ ರಾಜಕೀಯ ಕುಮ್ಮಕ್ಕು... ಚುನಾವಣೆ ವೇಳೆಯಲ್ಲಿ ನಡೆಯಬಹುದಾದ ಅಕ್ರಮಗಳು... ಲವ್ ಜಿಹಾದ್ ಹಾಗೂ ಭಯೋತ್ಪಾದನೆ... ಹೀಗೆ ದೇಶದ ಗಂಭೀರ ಸಮಸ್ಯೆಗಳ ಸುತ್ತ 'ಮಾಸ್ ಲೀಡರ್' ಕಥೆ ಹೆಣೆಯಲಾಗಿದೆ.
ಒಂದಕ್ಕೊಂದು ಲಿಂಕ್ ಹೇಗೆ.?
ರಾಜಕೀಯ... ಚುನಾವಣೆ... ಯೋಧ... ಭಯೋತ್ಪಾದನೆ... ಇವೆಲ್ಲದಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಅಂತ ನೀವು ಯೋಚಿಸಬಹುದು. ಚಿತ್ರದ ಕಥಾಹಂದರ ಅಡಗಿರುವುದು ಇದರಲ್ಲಿಯೇ. ಹೀಗಾಗಿ ಚಿತ್ರಕಥೆಯ ಗುಟ್ಟನ್ನ ನಾವು ಬಿಟ್ಟುಕೊಡುವುದಿಲ್ಲ. ಚಿತ್ರಮಂದಿರದಲ್ಲಿಯೇ ನೀವು 'ಮಾಸ್ ಲೀಡರ್' ಅಬ್ಬರವನ್ನ ಕಣ್ತುಂಬಿಕೊಳ್ಳಿ...
ಶಿವಣ್ಣನಿಗೆ ಶಿಳ್ಳೆ ಹೊಡೆಯಬೇಕು
'ಕ್ಯಾಪ್ಟನ್' ಶಿವರಾಜ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯ ಸೂಪರ್. ವಯಸ್ಸು ಐವತ್ತು ದಾಟಿದ್ರೂ, ತೆರೆಮೇಲೆ ಶಿವಣ್ಣನ ಎನರ್ಜಿ ಕೊಂಚ ಕೂಡ ಕಮ್ಮಿ ಆಗಿಲ್ಲ. ಯೋಧನಾಗಿ ಶಿವಣ್ಣ ಎಂಟ್ರಿಕೊಡ್ತಿದ್ರೆ, ಪರದೆ ಮೇಲೆ ಕಾಸಿನ ಸುರಿಮಳೆ. ಅಷ್ಟರಮಟ್ಟಿಗೆ, ಶಿವಣ್ಣನ ಪಾತ್ರ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.
ಯೋಧರಾಗಿ ವಿಜಯ್ ರಾಘವೇಂದ್ರ, ಗುರುರಾಜ್
ಸಿನಿಮಾದ ಉದ್ದಕ್ಕೂ ಕ್ಯಾಪ್ಟನ್ ಶಿವರಾಜ್ ಅಕ್ಕಪಕ್ಕ ಕಾಣಿಸಿಕೊಳ್ಳುವ ವಿಜಯ್ ರಾಘವೇಂದ್ರ ಹಾಗೂ ಗುರುರಾಜ್ ಗೆ ಹೆಚ್ಚು ಡೈಲಾಗ್ಸ್ ಇಲ್ಲ.
ಅಚ್ಚರಿ ಮೂಡಿಸುವ ಯೋಗೇಶ್
ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುವ ಲೂಸ್ ಮಾದ ಯೋಗೇಶ್ ನಟನೆ ಅಚ್ಚರಿ ಮೂಡಿಸುತ್ತದೆ.
ಪ್ರಣೀತಾ-ಆಶಿಕಾ ನಟನೆ ಹೇಗಿದೆ.?
ಶಿವರಾಜ್ ಪತ್ನಿ ಪಾತ್ರಧಾರಿ ನಾಯಕಿ ಪ್ರಣೀತಾಗೆ ಹೆಚ್ಚು ಕೆಲಸ ಇಲ್ಲ. ಒಂದೆರಡು ದೃಶ್ಯ ಹಾಗೂ ಒಂದು ಹಾಡಿಗೆ ಮಾತ್ರ ಸೀಮಿತ. ಸೆಕೆಂಡ್ ಹಾಫ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಆಶಿಕಾ ಮುಗ್ದ ನಟನೆಯಿಂದ ಗಮನ ಸೆಳೆಯುತ್ತಾರೆ.
ಉಳಿದವರ ಕಥೆ...
ಉಳಿದಂತೆ ವಂಶಿ ಕೃಷ್ಣ, ಶರ್ಮಿಳಾ ಮಾಂಡ್ರೆ, ಪ್ರಕಾಶ್ ಬೆಳವಾಡಿ, ಚಿ.ಗುರುದತ್ ಅಭಿನಯ ಅಚ್ಚುಕಟ್ಟಾಗಿದೆ. ಇನ್ನೂ ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಸೆಕೆಂಡ್ ಹಾಫ್ ಸ್ವಲ್ಪ ಸ್ಲೋ
ಫಸ್ಟ್ ಹಾಫ್ ಫುಲ್ ಸ್ಪೀಡ್ ಆಗಿ ಸಾಗುವ 'ಮಾಸ್ ಲೀಡರ್' ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಹಾಡುಗಳೇ ಸ್ಪೀಡ್ ಬ್ರೇಕರ್. ಅಷ್ಟು ಬಿಟ್ಟರೆ, ಕೆ.ಎಂ.ಪ್ರಕಾಶ್ ರವರ ಎಡಿಟಿಂಗ್ ಚುರುಕಾಗಿದೆ.
ಎಲ್ಲೂ ಬೋರ್ ಆಗಲ್ಲ
ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕ ನರಸಿಂಹ ಯಶಸ್ವಿ ಆಗಿದ್ದಾರೆ. ವೀರ್ ಸಮರ್ಥ್ ರವರ ಸಂಗೀತ ಸಂಯೋಜನೆಯಲ್ಲಿ 'ದೀಪವೇ ನಿನ್ನ ಕಣ್ಣು...' ಹಾಡು ಮತ್ತೆ ಮತ್ತೆ ಗುನುಗುವಂತಿದೆ.
ತಪ್ಪದೇ ನೋಡಿರಿ...
ರೌಡಿಸಂ, ಕ್ರೈಂ, ಲವ್ ಸ್ಟೋರಿ ಸಿನಿಮಾಗಳ ಮಧ್ಯೆ ವಿಭಿನ್ನವಾಗಿ ನಿಲ್ಲುವ ಮತ್ತು ದೇಶಭಕ್ತಿ ಸಾರುವ ಸಿನಿಮಾ 'ಮಾಸ್ ಲೀಡರ್'. 'ಮಾಸ್ ಲೀಡರ್' ಚಿತ್ರವನ್ನ ಪ್ರತಿಯೊಬ್ಬರೂ ನೋಡಬಹುದು.


Click it and Unblock the Notifications











