ವಿಮರ್ಶೆ: ಪ್ರೀತಿಗೆ ನೆಂಟ, ದುಷ್ಟರಿಗೆ ಒರಟ ಈ ಕಾಮನ್ ಮ್ಯಾನ್ 'ಶ್ರೀಕಂಠ'
ದೇವತೆಗಳನ್ನು ಕಾಪಾಡಲು 'ಆ' ಶ್ರೀಕಂಠ ವಿಷವನ್ನು ನುಂಗಿ 'ವಿಷಕಂಠ'ನಾದ್ರೆ, ಜನರನ್ನು ಕಾಪಾಡಲು ಹೆಂಡತಿಯನ್ನು ಕಳೆದುಕೊಂಡು 'ಈ' ಶ್ರೀಕಂಠ 'ಅನಾಥ'ನಾಗುತ್ತಾನೆ.
- ಇದು 'ಶ್ರೀಕಂಠ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಡೈಲಾಗ್ ಹೌದು. ಇಡೀ ಸಿನಿಮಾದ ಸಾರಾಂಶವೂ ಹೌದು.
'ಶ್ರೀಕಂಠ'ನ ಪೂರ್ವಾಪರ
ಈಸ್ಕೊಂಡ ಕಾಸಿಗೆ.. ಕೊಟ್ಟ ಮಾತಿಗೆ.. ನಿಯತ್ತಾಗಿ ಕೆಲಸ ಮಾಡುವ ಯುವಕ ಶ್ರೀಕಂಠ (ಶಿವರಾಜ್ ಕುಮಾರ್). ಚುನಾವಣೆ ಪ್ರಚಾರಕ್ಕೆ, ಪ್ರತಿಭಟನೆಗೆ ಜನ ಸೇರಿಸುವ ಶ್ರೀಕಂಠ, ಹೊಟ್ಟೆ ಪಾಡಿಗಾಗಿ ಏನ್ ಬೇಕಾದರೂ ಮಾಡುವ ಬಡವ. ಅನಾಥನಾದರೂ, ತನ್ನ ಜೊತೆಗಿದ್ದವರಿಗೆ ಆಪತ್ತು ಎದುರಾದಾಗ ಇಡೀ ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಡಿದೇಳುವ ಜನ ಸಾಮಾನ್ಯ 'ಶ್ರೀಕಂಠ'.
ವಾಸ್ತವಕ್ಕೆ ತೀರಾ ಹತ್ತಿರ
ದುಬಾರಿ ವಾಚ್ ಉಡುಗೊರೆ ಪ್ರಕರಣ, ಸಚಿವರ ರಾಸಲೀಲೆ, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಪ್ರಸಕ್ತ ರಾಜಕಾರಣದ ಕೆಲ ವಿವಾದಗಳ ಉಲ್ಲೇಖ 'ಶ್ರೀಕಂಠ' ಚಿತ್ರದಲ್ಲಿದೆ. ಅದನ್ನ ನೋಡುವ ತವಕ ಇದ್ದರೆ ಚಿತ್ರಮಂದಿರಕ್ಕೆ ಭೇಟಿ ಕೊಡಿ.
ಜನ ಸಾಮಾನ್ಯ ಶಿವಣ್ಣ
ಓರ್ವ ಜನ ಸಾಮಾನ್ಯ, ಬಡ ಯುವಕನ ಪಾತ್ರದಲ್ಲಿ ಶಿವರಾಜ್ ಕುಮಾರ್ ರವರ ನಟನೆ ನೈಜವಾಗಿದೆ. ಬರಿಗಾಲಿನಲ್ಲಿ ಎತ್ತರದ ಕಟೌಟ್ ಹತ್ತುವುದರಿಂದ ಹಿಡಿದು ಚಲಿಸುವ ರೈಲಿನ ಕೆಳಗೆ ಮಲಗುವ ಮೈನವಿರೇಳಿಸುವ ಸ್ಟಂಟ್ ವರೆಗೂ ಶಿವಣ್ಣ 'ಶ್ರೀಕಂಠ'ನಾಗಿ ಪ್ರೇಕ್ಷಕರ ಮನಮುಟ್ಟುತ್ತಾರೆ.
ಹೀರೋಯಿನ್ ನಟನೆ ಹೇಗಿದೆ.?
ತನ್ನ ಸ್ನೇಹಿತೆಯ ಮಾನ ಉಳಿಸಿದ 'ಶ್ರೀಕಂಠ'ನ ಹಿಂದೆ ಬಿದ್ದು ಹಠ ಹಿಡಿದು ಮದುವೆ ಆಗುವ ಹುಡುಗಿ ಶಶಿ ಪಾತ್ರದಲ್ಲಿ ಮಿಂಚಿರುವ ಚಾಂದಿನಿ ಶ್ರೀಧರನ್ ಅಭಿನಯ ಸೊಗಸಾಗಿದೆ. ಇತರೆ ಸಿನಿಮಾಗಳಂತೆ ಹಾಡುಗಳಲ್ಲಿ ಮಾತ್ರ ಪ್ರತ್ಯಕ್ಷವಾಗುವ ನಾಯಕಿ ಆಗಿರದೆ, ಸಿನಿಮಾ ಮುಗಿಯುವವರೆಗೂ ಚಾಂದಿನಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.
ಉಳಿದವರು....
ಕೊಟ್ಟ ಪಾತ್ರಗಳಿಗೆ ವಿಜಯ್ ರಾಘವೇಂದ್ರ, 'ಸ್ಪರ್ಶ' ರೇಖಾ, ಅಚ್ಯುತ್ ಕುಮಾರ್, ದತ್ತಾತ್ರೇಯ, ಬುಲೆಟ್ ಪ್ರಕಾಶ್, ಚಿ.ಗುರುದತ್, ಸಂಪತ್, ಅನಿಲ್ ನ್ಯಾಯ ಒದಗಿಸಿದ್ದಾರೆ.
ಪ್ರೇಮ, ರಾಜಕಾರಣ ಮತ್ತು ಮಾಧ್ಯಮ
ಒಂದು ನವಿರಾದ ಪ್ರೇಮ ಕಥೆ, ಬೆಂಗಳೂರು ಟು ಆಗುಂಬೆ ಪಯಣ, ದ್ವೇಷ ರಾಜಕಾರಣ, ಭ್ರಷ್ಟ ವ್ಯವಸ್ಥೆ, ಚುನಾವಣೆ ಪ್ರಚಾರ ತಂತ್ರ, ಮಾಧ್ಯಮಗಳ ಸುದ್ದಿ ಹಸಿವು, ರಹಸ್ಯ ಕಾರ್ಯಚರಣೆ... ಇವುಗಳನ್ನೆಲ್ಲ ಮಿಶ್ರಣ ಮಾಡಿ ಮಂಜು ಸ್ವರಾಜ್ 'ಶ್ರೀಕಂಠ' ಸಿನಿಮಾ ಮಾಡಿದ್ದಾರೆ.
ಇವೆಲ್ಲ ಇದಿದ್ರೆ....
ಇಡೀ ಚಿತ್ರದ ವೇಗ ಕಡಿಮೆ. ಸಂಕಲನ ಇನ್ನೂ ಚುರುಕಾಗಿರಬೇಕಿತ್ತು. ಚಿತ್ರಕಥೆಯಲ್ಲಿ ಇನ್ನೂ ತಿರುವುಗಳ ಅಗತ್ಯ ಇತ್ತು. ಕಥೆಯಲ್ಲಿ ಗಟ್ಟಿತನ ಬೇಕಿತ್ತು. ಹಾಡುಗಳಲ್ಲಿ ಮಾಧುರ್ಯದ ಅವಶ್ಯಕತೆ ಇತ್ತು. 'ಸಿಂಹದ ಮರಿ'ಯ ಘರ್ಜನೆಗೆ ಎದುರಾಳಿಗಳು ಅವಿತು ಕೂರಬೇಕಿತ್ತು. ಇವೆಲ್ಲದರ ಬಗ್ಗೆ ಮಂಜು ಸ್ವರಾಜ್ ಕೊಂಚ ಗಮನ ಹರಿಸಿದಿದ್ರೆ 'ಶ್ರೀಕಂಠ' ಇನ್ನೂ ಅದ್ಭುತವಾಗಿರ್ತಿತ್ತು.
ಕಾಮನ್ ಮ್ಯಾನ್ ಕೊಂಚ ಮಂಕು
'ಶ್ರೀಕಂಠ' ಚಿತ್ರದಲ್ಲಿ ಗಂಡನನ್ನು ತಿದ್ದುವ ಹೆಂಡತಿ ಕಥೆಗೆ ಹೆಚ್ಚು ಒತ್ತು ನೀಡಿರುವುದರಿಂದ ಸಮಾಜಕ್ಕೆ ಒಳಿತು ಮಾಡುವ, ಭ್ರಷ್ಟಾಚಾರ ವಿರುದ್ಧ ಸಿಡಿದೇಳುವ 'ಕಾಮನ್ ಮ್ಯಾನ್' ಕೊಂಚ ಮಂಕಾಗಿರುವಂತಿದೆ.
ಎಲ್ಲರೂ ನೋಡಬಹುದಾದ ಚಿತ್ರ
'ನೇತ್ರದಾನ ಮಹಾದಾನ' ಎಂಬ ಸಂದೇಶ ಸೇರಿದಂತೆ ಉತ್ತಮ ಸಮಾಜಕ್ಕೆ ಪೂರಕವಾಗುವ ಅನೇಕ ಸಂದೇಶಗಳು ಚಿತ್ರದಲ್ಲಿ ಇವೆ. 'ಶ್ರೀಕಂಠ' ಚಿತ್ರವನ್ನ ಕ್ಲಾಸ್, ಮಾಸ್ ಎಂಬ ಭೇದಭಾವ ಇಲ್ಲದೆ ಇಡೀ ಫ್ಯಾಮಿಲಿ ಕೂತು ಆರಾಮಾಗಿ ನೋಡಬಹುದು.
ಫೈನಲ್ ಸ್ಟೇಟ್ಮೆಂಟ್
ನೀವು ಅಪ್ಪಟ 'ಶಿವ'ನ ಭಕ್ತರಾಗಿದ್ದರೆ 'ಶ್ರೀಕಂಠ' ಚಿತ್ರವನ್ನ ಮಿಸ್ ಮಾಡ್ಬೇಡಿ. ಆದ್ರೆ, ಅತಿಯಾದ ನಿರೀಕ್ಷೆ ಹೊತ್ತು ಚಿತ್ರಮಂದಿರದ ಒಳಗೆ ಹೋಗಬೇಡಿ. ಮುಕ್ತ ಮನಸ್ಸಿನಿಂದ ಸಿನಿಮಾ ನೋಡಿ ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸಿ....


Click it and Unblock the Notifications











