Shivaji Surathkal Review: ಬೇಕಾದಷ್ಟು ಸಸ್ಪೆನ್ಸ್.. ಬೇಕಿದ್ದಷ್ಟು ಎಮೋಷನ್
'ಶಿವಾಜಿ ಸುರತ್ಕಲ್' ಒಂದು ಪಕ್ಕಾ ಸಸ್ಪೆನ್ಸ್ ಥಿಲ್ಲರ್ ಸಿನಿಮಾ. ಒಂದು ಸಸ್ಪೆನ್ಸ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳು ಸಿನಿಮಾದಲ್ಲಿದೆ. ಪ್ರೇಕ್ಷಕರಿಗೆ ಥ್ರಿಲ್ ನೀಡುವುದರ ಜೊತೆಗೆ ಸಿನಿಮಾದ ಭಾವುಕ ದೃಶ್ಯಗಳು ಮನಸ್ಸಿಗೆ ಹತ್ತಿರ ಆಗುತ್ತದೆ. ಕೆಲವು ಹಾರರ್ ಎನಿಸುವ ದೃಶ್ಯಗಳು ನೋಡುಗರಿಗೆ ಭಯ ಬೀಳಿಸುತ್ತದೆ.
ಒಂದು ಕೊಲೆಯಿಂದ ಕಥೆ ಶುರು
ರಣಗಿರಿಯ ರೆಸಾರ್ಟ್ ನಲ್ಲಿ ಮಂತ್ರಿ ಮಗನ ಕೊಲೆಯೊಂದು ನಡೆಯುತ್ತಿದೆ. ಆ ಕೊಲೆಯನ್ನು ತನಿಖೆ ಮಾಡಲು ಅಧಿಕಾರಿಯ ಆಗಮನ ಆಗುತ್ತದೆ ಆತನೇ ಶಿವಾಜಿ ಸುರತ್ಕಲ್. ಹೀಗೆ ಸಿನಿಮಾದ ಕಥೆ ಶುರು ಆಗುತ್ತದೆ. ಕಥೆ ಪ್ರಾರಂಭವಾದ ಶೈಲಿ ನೋಡಿ, ಇದು ಎಲ್ಲ ಚಿತ್ರಗಳ ರೀತಿಯೇ ಒಂದು ಸಾಮಾನ್ಯ ಕೊಲೆ ಹಿಂದೆ ಓಡುವ ಸಿನಿಮಾ ಇರಬೇಕು ಅನಿಸುತ್ತದೆ. ಆದರೆ, ಮುಂದೆ ಹೋಗುತ್ತಾ ಪ್ರೇಕ್ಷಕರಿಗೆ ಸಿನಿಮಾ ಥ್ರಿಲ್ ನೀಡುತ್ತದೆ.
ಶಿವಾಜಿ ಸುರತ್ಕಲ್ ಪಾತ್ರದ ಏರಿಳಿತ
ಕೊಲೆಯ ತನಿಖೆ ಮಾಡಲು ಬರುವ ಶಿವಾಜಿ ಸುರತ್ಕಲ್ ಪಾತ್ರ ಸಿನಿಮಾಗೆ ಬೇರೆಯೇ ರೂಪ ನೀಡಿದೆ. ರಮೇಶ್ ತುಂಬ ಕೂಲ್ ಆಗಿರುವ ಹೀರೋ. ಆದರೆ, ಇಲ್ಲಿ ರಮೇಶ್ ಮಾಡಿರುವ ಪಾತ್ರ ತುಂಬ ವಿಚಿತ್ರವಾಗಿದೆ. ಕೋಪ, ಬುದ್ದಿವಂತಿಕೆ, ಅವಸರ, ಚಾಣಾಕ್ಷತೆ ಪಾತ್ರದ ಪ್ರಮುಖ ಅಂಶಗಳು. ಆ ಪಾತ್ರದಲ್ಲಿ ಬಹಳ ಏರಿಳಿತ ಇದೆ. ಅದನ್ನು ತುಂಬ ಚೆನ್ನಾಗಿ ರಮೇಶ್ ನಿರ್ವಹಿಸಿದ್ದಾರೆ.
ಕೊನೆಯವರೆಗೂ ಉಳಿಯುವ ಸಸ್ಪೆನ್ಸ್
ಶಿವಾಜಿ ಸುರತ್ಕಲ್ ಒಬ್ಬ ಚಾಣಕ್ಷ ತನಿಖಾಧಿಕಾರಿ. ಆತನ 101ನೇ ಕೇಸ್ ಮಂತ್ರಿ ಮಗನ ಸಾವು. ಆತನ ಕೆರಿಯರ್ ನಲ್ಲಿಯೇ ಇಂತಹ ಕೇಸ್ ನೋಡಿರುವುದಿಲ್ಲ. ಈ ಕೇಸ್ ಹಿಂದೆ ಬೀಳುವ ಶಿವಾಜಿ ಹೇಗೆ ಅದನ್ನು ನಿಭಾಹಿಸುತ್ತಾನೆ ಎನ್ನುವುದು ಸಿನಿಮಾದ ನಿರೂಪಣೆಯಾಗಿದೆ. ಸಿನಿಮಾದಲ್ಲಿ ಅನೇಕ ಟ್ವಿಸ್ಟ್ ಗಳು ಇವೆ. ಸಿನಿಮಾದ ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಂಡು ಹೋಗಿರುವ ನಿರ್ದೇಶಕರು ಅಲ್ಲಿಯೇ ಗೆದ್ದಿದ್ದಾರೆ.
ಸಸ್ಪೆನ್ಸ್ ಜೊತೆಗೆ ಹಾರರ್, ಎಮೋಷನ್ಸ್
ಬರೀ ಒಂದು ಕೊಲೆಯ ಸುತ್ತ ತಿರುಗುವ ಕಥೆಯಾಗಿದ್ದರೆ, ಸಿನಿಮಾ ಬೋರ್ ಹೊಡೆಸುತ್ತಿತ್ತೇನೋ. ಆದರೆ, ತಮ್ಮ ಸಸ್ಪೆನ್ಸ್ ಕಥೆಗೆ ನಿರ್ದೇಶಕ ಆಕಾಶ್ ಕೊಂಚ ಹಾರರ್ ಹಾಗೂ ಕೊಂಚ ಎಮೋಷನ್ಸ್ ಸೇರಿಸಿದ್ದಾರೆ. ಇದು ನೋಡುಗರನ್ನು ಕುರ್ಚಿಯಲ್ಲಿ ಗಟ್ಟಿಯಾಗಿ ಕೂರುದಂತೆ ಮಾಡುತ್ತದೆ. ಅಗತ್ಯವಾದ ಜಾಗಗಳಲ್ಲಿ ಅಗತ್ಯಕ್ಕೆ ತಕ್ಕ ರೀತಿಯ ದೃಶ್ಯಗಳು ಇವೆ.
ಚಿತ್ರಕಥೆಯೇ ಎರಡನೇ ಹೀರೋ
ಎಲ್ಲ ಸಿನಿಮಾಗಳಿಗೂ ಚಿತ್ರಕಥೆ ಎನ್ನುವುದು ಬಹಳ ಮುಖ್ಯ. ಕೆಲವು ಬಾರಿ ಕಥೆ ಪ್ರೇಕ್ಷಕರಿಗೆ ಸಾಮಾನ್ಯ ಎನಿಸದರೂ, ಚಿತ್ರಕಥೆ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಇಲ್ಲಿಯೂ ಸ್ಕ್ರೀನ್ ಪ್ಲೇ ತುಂಬ ಚೆನ್ನಾಗಿದೆ. ದೃಶ್ಯಗಳ ಜೋಡಣೆ ಹೊಸ ಅನುಭವ ನೀಡುತ್ತದೆ. ಸ್ಕ್ರಿಪ್ಟ್ ಪ್ಲಾನಿಂಗ್ ತುಂಬ ಚೆನ್ನಾಗಿ ಆಗಿದೆ.
ಸಣ್ಣ ಪಾತ್ರಗಳ ದೊಡ್ಡ ಪ್ರಭಾವ
ರಮೇಶ್ ಬಿಟ್ಟರೆ ಸಿನಿಮಾದ ಉಳಿದ ಪಾತ್ರಗಳ ಪ್ರಭಾವ ಕಡಿಮೆ. ಆದರೆ, ಎಲ್ಲ ಪಾತ್ರಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿವೆ. ನಟಿ ರಾಧಿಕಾ ನಾರಾಯಣ್ ತೆರೆ ಮೇಲೆ ಚೆಂದವಾಗಿ ಕಾಣುತ್ತಾರೆ. ಎಂದಿನಂತೆ ತಮ್ಮ ಪಾತ್ರವನ್ನು ಸರಳವಾಗಿ, ಸುಂದರವಾಗಿ ನಿರ್ವಹಿಸಿದ್ದಾರೆ. ಉಳಿದಂತೆ, ಆರೋಹಿ ನಾರಾಯಣ್, ರಘು ರಾಮನಕೊಪ್ಪ, ಪಿಡಿ ಸತೀಶ್, ರೋಹಿತ್ ಭಾನುಪ್ರಕಾಶ್, ನಮ್ರತಾ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ.
ಸಂಗೀತ, ದೃಶ್ಯ
ಇಡೀ ಸಿನಿಮಾ ಮಡಿಕೇರಿಯಲ್ಲಿ ನಡೆಯುತ್ತದೆ. ಅಲ್ಲಿನ ಸ್ಥಳವನ್ನು ಸುಂದರವಾಗಿ ಗುರುಪ್ರಸಾದ್ ಸೆರೆ ಹಿಡಿದಿದ್ದಾರೆ. ಸಿನಿಮಾದ ಮೇಕಿಂಗ್ ಚೆನ್ನಾಗಿದೆ. ಇಂಪಾದ ಹಾಡುಗಳನ್ನು ಜೂಡಾ ಸ್ಯಾಂಡಿ ನೀಡಿದ್ದಾರೆ. ಹಿನ್ನಲೆ ಸಂಗೀತ ಸಿನಿಮಾಗೆ ಶಕ್ತಿ ತುಂಬಿದೆ. ಟೆಕ್ಲಿಕಲಿ ಸಿನಿಮಾ ಪವರ್ ಫುಲ್ ಆಗಿದೆ.
ಕೊಟ್ಟ ಕಾಸಿಗೆ, ಸಮಯಕ್ಕೆ ಮೋಸ ಇಲ್ಲ
'ಶಿವಾಜಿ ಸುರತ್ಕಲ್' ಒಂದು ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕೊಟ್ಟ ಕಾಸಿಗೆ, ಸಮಯಕ್ಕೆ ಎರಡಕ್ಕೂ ಸಿನಿಮಾ ಮೋಸ ಮಾಡುವುದಿಲ್ಲ. ಚಿತ್ರಮಂದಿರಕ್ಕೆ ಬಂದರೆ, ಹೊಸ ರೀತಿ ರಮೇಶ್ ಹಾಗೂ ಥ್ರಿಲ್ ನೀಡುವ ಕಥೆ ಸಿಗುವುದಂತೂ ಪಕ್ಕಾ.


Click it and Unblock the Notifications











