'ಕೆಲವು ದಿನಗಳ ನಂತರ' ವಿಮರ್ಶೆ: ಉತ್ತಮ ಸಂದೇಶ ಸಾರುವ ಸಿನಿಮಾ
ಅಪಘಾತ ಆದಾಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಜೀವಗಳನ್ನು ಉಳಿಸಿ ಮಾನವೀಯತೆ ಮೆರೆಯರಿ ಎಂಬ ಸಂದೇಶ ಸಾರುವ ಸಿನಿಮಾ 'ಕೆಲವು ದಿನಗಳ ನಂತರ'. ಹಾರರ್-ಥ್ರಿಲ್ಲರ್ ಅಂಶಗಳ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ 'ಕೆಲವು ದಿನಗಳ ನಂತರ' ಯಶಸ್ವಿ ಆಗಿದೆ.
ಚಿತ್ರ: ಕೆಲವು ದಿನಗಳ ನಂತರ
ನಿರ್ಮಾಣ: ಮುತ್ತುರಾಜ್.ಎಚ್.ಪಿ
ನಿರ್ದೇಶಕ: ಶ್ರೀನಿ
ಸಂಗೀತ ನಿರ್ದೇಶಕ: ರಾಕಿ ಸೋನು
ತಾರಾಗಣ: ಶುಭ ಪೂಂಜಾ, 'ಕಾಮಿಡಿ ಕಿಲಾಡಿ' ಲೋಕೇಶ್, 'ಮಜಾ ಟಾಕೀಸ್' ಪವನ್, ಶರಣಯ್ಯ, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್ ಮತ್ತು ಇತರರು
ಬಿಡುಗಡೆ: ಜೂನ್ 22, 2018
'ಕೆಲವು ದಿನಗಳ ನಂತರ..' ಏನಾಗುತ್ತೆ.?
ಸ್ನೇಹಿತರೊಬ್ಬರ ವಿವಾಹ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಚಂದ್ರಾಪುರಕ್ಕೆ ಐದು ಜನರ ತಂಡ ಹೊರಡುತ್ತದೆ. ದಾರಿ ಮಧ್ಯೆ ಆ ಐದು ಜನ ಸಾಫ್ಟ್ ವೇರ್ ಎಂಜಿನಿಯರ್ಸ್ ಎದುರಿಸುವ ವಿಚಿತ್ರ ಘಟನೆಗಳು, ಭಯಾನಕ ಸನ್ನಿವೇಶಗಳೇ 'ಕೆಲವು ದಿನಗಳ ನಂತರ' ಚಿತ್ರದ ಹೂರಣ.
ಜಾಸ್ತಿ ಕಥೆ ಹೇಳಲ್ಲ.!
ಟೆಕ್ಕಿಗಳ ತಂಡಕ್ಕೆ ತೊಂದರೆ ಕೊಡುವ ಆತ್ಮ ಯಾವುದು.? ಟೆಕ್ಕಿಗಳಿಗೂ ಆತ್ಮಕ್ಕೂ ಇರುವ ಸಂಬಂಧ ಏನು ಎಂಬುದೇ 'ಕೆಲವು ದಿನಗಳ ನಂತರ' ಚಿತ್ರದ ಸಸ್ಪೆನ್ಸ್. ಅದನ್ನ ನೀವು ಥಿಯೇಟರ್ ನಲ್ಲೇ ನೋಡಿ....
ಎಲ್ಲರ ಪರ್ಫಾಮೆನ್ಸ್ ಹೇಗಿದೆ.?
ನಟಿ ಶುಭ ಪೂಂಜಾ ನಟನೆ ನೈಜವಾಗಿದೆ. 'ಕಾಮಿಡಿ ಕಿಲಾಡಿಗಳು' ಲೋಕೇಶ್ ಹಾಗೂ 'ಮಜಾ ಟಾಕೀಸ್' ಪವನ್ ಕಚಗುಳಿ ಇಡುತ್ತಾರೆ. ದ್ರವ್ಯ ಶೆಟ್ಟಿ, ಜಗದೀಶ್ ಹಾಗೂ ಸೋನು ಪಾಟೀಲ್ ಅಭಿನಯ ಅಚ್ಚುಕಟ್ಟಾಗಿದೆ. 'ಕಾಮಿಡಿ ಕಿಲಾಡಿಗಳು' ನಿರ್ದೇಶಕ ಶರಣಯ್ಯ ಒಂದು ಸೀನ್ ನಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುತ್ತಾರೆ.
ಎದೆ ನಡುಗಿಸುವ ಸನ್ನಿವೇಶಗಳು
'ಕೆಲವು ದಿನಗಳ ನಂತರ' ಚಿತ್ರದಲ್ಲಿ ಎದೆ ನಡುಗಿಸುವ ಸನ್ನಿವೇಶಗಳಿವೆ. ಬ್ಯಾಕ್ ಗ್ರೌಂಡ್ ಸ್ಕೋರ್ ಇನ್ನೂ ಪರಿಣಾಮಕಾರಿ ಆಗಿದಿದ್ರೆ, ಕೆಲ ಸೀನ್ ಗಳು ಇನ್ನೂ ಹೆಚ್ಚು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಿದ್ದವು. ಸಂಕಲನ ಹಾಗೂ ಕ್ಯಾಮರಾ ವರ್ಕ್ ಓಕೆ. ಅಷ್ಟು ಬಿಟ್ಟರೆ, ಸಿನಿಮಾದಲ್ಲಿ ಹೇಳಿಕೊಳ್ಳುವಂಥ ನೆಗೆಟಿವ್ ಅಂಶಗಳು ಇಲ್ಲ.
ಮಾನವೀಯತೆ ಮೆರೆಯಿರಿ...
'ಕೆಲವು ದಿನಗಳ ನಂತರ' ಚಿತ್ರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಇದೆ. ರಸ್ತೆ ಅಪಘಾತ ಆದಾಗ, ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸುವ ಬದಲು 'ನಮಗ್ಯಾಕೆ' ಎಂದು ತಮ್ಮ ದಾರಿ ಹಿಡಿಯುವ ಮನುಷ್ಯರು ತಪ್ಪದೇ ನೋಡಲೇಬೇಕಾದ ಸಿನಿಮಾ 'ಕೆಲವು ದಿನಗಳ ನಂತರ'.
ಫೈನಲ್ ಸ್ಟೇಟ್ಮೆಂಟ್
ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಹಾಗೂ ಮೆಸೇಜ್... ಈ ಎಲ್ಲವೂ ಹದವಾಗಿ ಬೆರೆತಿರುವ 'ಕೆಲವು ದಿನಗಳ ನಂತರ' ಚಿತ್ರವನ್ನ ಆರಾಮಾಗಿ ಒಮ್ಮೆ ನೋಡಬಹುದು.


Click it and Unblock the Notifications











