Sugar Factory Movie Review: 'ಶುಗರ್ ಫ್ಯಾಕ್ಟರಿ'ಯಲ್ಲಿ ಸಿಹಿ ಅಂದ್ರೆ ಸಿಹಿ.. ಕಹಿ ಅಂದ್ರೆ ಕಹಿ
'ಕೆಜಿಎಫ್', 'ಕಾಂತಾರ' ಬಂದ್ಮೇಲೆ ಸ್ಯಾಂಡಲ್ವುಡ್ ಫಿಲ್ಮ್ ಮೇಕರ್ಸ್ ಬೇರೆ ಬೇರೆ ದಾರಿಯನ್ನು ಹಿಡಿದಿದ್ದರು. ಹೊಸ ಹೊಸ ಆಲೋಚನೆಗಳನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದರು. ಪ್ಯಾನ್ ಇಂಡಿಯಾ ಅಲ್ಲದಿದ್ದರೂ ಹೊಸ ಕಥೆಯನ್ನು ತೆರೆಮೇಲೆ ತರದೇ ಹೋದರೆ ಉಳಿಗಾಲವಿಲ್ಲ ಅನ್ನೋದು ಮನವರಿಕೆ ಆಗಿತ್ತು. ಈ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.
ಎಲ್ಲರೂ ಇದೇ ಗೊಂದಲದಲ್ಲಿ ಇರುವಾಗಲೇ ನಿರ್ದೇಶಕ ದೀಪಕ್ ಅರಸ್ ಕನ್ನಡದ ಯೂತ್ಸ್ಗಾಗಿ ಯೂತ್ಫುಲ್ ಸಿನಿಮಾವನ್ನು ತೋರಿಸೋ ಪ್ರಯತ್ನ ಮಾಡಿದ್ದಾರೆ. ಇಂದಿನ ಯುವಕರಿಗೆ ಯಾವುದು ಇಷ್ಟ ಇದೆಯೋ ಅದರ ಸುತ್ತಮುತ್ತಲೇ ಕಥೆ ಹಣೆದು ಸಿನಿಮಾ ಮಾಡಿದ್ದಾರೆ. ಆದರೆ, ಈ ಪ್ರಯತ್ನ ಯುವಕರಿಗೆ ಹಿಡಿಸುತ್ತಾ? ಸಿನಿಮಾದಲ್ಲಿ ಅಂತಹದ್ದೇನಿದೆ? ಅನ್ನೋದನ್ನು ತಿಳಿಯೋಕೆ ಮುಂದೆ ಓದಿ..

'ಶುಗರ್ ಫ್ಯಾಕ್ಟರಿ' ಝಲಕ್ ಏನು?
ಯೂಟ್ಯೂಬರ್ ಅಮುಲು (ರುಹಾನಿ ಶೆಟ್ಟಿ) ಗೋವಾಗೆ ಹೋಗಿ ರೀಲ್ಸ್ ಮಾಡೋಕೆ ಮುಂದಾಗುತ್ತಾಳೆ. ಗೋವಾದ ಪಬ್, ಅಲ್ಲಿಗೆ ಬರೋ ಯುವಕರನ್ನು ಪರಿಚಯಿಸುವುದಕ್ಕೆ ಅಲ್ಲಿನ 'ಶುಗರ್ ಫ್ಯಾಕ್ಟರಿ'ಗೆ ಎಂಟ್ರಿ ಕೊಡುತ್ತಾಳೆ. ಯೂತ್ಸ್ ಬಗ್ಗೆ ರೀಲ್ ಮಾಡೋಕೆ ಹೋದ ಯೂಟ್ಯೂಬರ್ಗೆ ಆರ್ಯ (ಡಾರ್ಲಿಂಗ್ ಕೃಷ್ಣ) ಕಣ್ಣಿಗೆ ಬೀಳುತ್ತಾನೆ. ಮದುವೆ, ಪ್ರೀತಿ, ಹುಡುಗಿ ಅಂದರೇನೆ ಆಗದ ಆರ್ಯನ ಕಥೆಯ ಹಿಂದೆ ಬೀಳು ಅಮುಲುಗೆ ಆರ್ಯ ಲೈಫ್ನಲ್ಲಿ ಬಂದ ಇಬ್ಬರು ಹುಡುಗಿಯರ ಕಥೆ ಗೊತ್ತಾಗುತ್ತೆ. ಇಲ್ಲಿಂದ 'ಶುಗರ್ ಫ್ಯಾಕ್ಟರಿ' ಲವ್ ಸ್ಟೋರಿ ಶುರು.
ಶುಗರ್ ಫ್ಯಾಕ್ಟರಿ ಕಥೆ ಏನು?
ಅಮುಲುಗೆ ಆರ್ಯ ಹೇಳುವ ಕಥೆಯಿಂದ 'ಶುಗರ್ ಫ್ಯಾಕ್ಟರಿ' ಅಸಲಿ ಸ್ಟೋರಿ ಶುರುವಾಗುತ್ತೆ. ಹೊಸ ವರ್ಷವನ್ನು ಎಂಜಾಯ್ ಮಾಡೋಕೆ ಅಂತ ಗೋವಾಗೆ ಬಂದ ಅದಿತಿ ಬೋಪಣ್ಣ (ಸೋನಾಲ್ ಮಾಂಟೇರೊ) ಆರ್ಯನನ್ನು ಇಷ್ಟ ಪಡುತ್ತಾಳೆ. ಪಾರ್ಟಿ ಫ್ರೀಕ್ ಆಗಿರೋ ಅದಿತಿ ಅಷ್ಟೇ ಆರಾಮಾಗಿ ಬ್ರೇಕಪ್ ಮಾಡಿಕೊಳ್ತಾಳೆ. ಇದೊಂದು ಕಥೆಯಾದರೆ, ಇನ್ನೊಂದು ಕಡೆ ಆರ್ಯ ಮೈಸೂರಿಗೆ ಹೋದಾಗ ಅಲ್ಲಿ ನಂದಿನಿ (ಅದ್ವಿತಿ ಶೆಟ್ಟಿ) ಆರ್ಯನನ್ನು ಪ್ರೀತಿಸುತ್ತಾಳೆ. ಈ ಎರಡು ಲವ್ ಸ್ಟೋರಿಗಳು ಏನಾದವು? ಅನ್ನೋದೇ 'ಶುಗರ್ ಫ್ಯಾಕ್ಟರಿ'.

ಹೇಗಿದೆ ಪರ್ಫಾಮೆನ್ಸ್?
ಡಾರ್ಲಿಂಗ್ ಕೃಷ್ಣ ಎಂದಿನಂತೆ ಲವರ್ ಬಾಯ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕೃಷ್ಣ ವೆಡ್ಡಿಂಗ್ ಪ್ಲ್ಯಾನರ್. ಇನ್ನು ಸೋನಾಲ್ ಇಂದಿನ ಕಾಲದ ಪಾರ್ಟಿ ಕಲ್ಚರ್ ಬೇಬ್. ಅದ್ವಿತಿ ಶೆಟ್ಟಿ ಪ್ರೀತಿಯಲ್ಲಿ ನಂಬಿಕೆ ಇಟ್ಟುಕೊಂಡಿರೋ ಹುಡುಗಿ. ರೊಹಾನಿ ಶೆಟ್ಟಿ ಯೂಟ್ಯೂಬರ್ ಆಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣಗೆ ಈ ಮೂವರೂ ನಟಿಯರೂ ಪರ್ಫೆಕ್ಟ್ ಆಗಿ ಸೂಟ್ ಆಗಿದ್ದಾರೆ. 'ಶುಗರ್ ಫ್ಯಾಕ್ಟರಿ' ಮಾಲೀಕರಾಗಿ ರಂಗಾಯಣ ರಘು ಗಮನ ಸೆಳೆಯುತ್ತಾರೆ.
ಪ್ಲಸ್ ಏನು?
ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ನೋವಿನ ಕಹಾನಿಯನ್ನು ನೋಡಿ ಕಣ್ಣೀರು ಹಾಕಿದವರಿಗೆ ಕಲರ್ಫುಲ್ ದುನಿಯಾ ಕಾಣಿಸುತ್ತೆ. ಗೋವಾ, ಪಬ್, ಪಾರ್ಟಿ ಮೂಡ್ನಲ್ಲಿ ಇರೋರನ್ನು ಒಂದು ಕ್ಷಣ ಅಲ್ಲಿಗೆ ಕರ್ಕೊಂಡು ಹೋಗುತ್ತೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಗೋವಾ ವೈಬ್ಸ್ ಅನ್ನು ಚೆನ್ನಾಗಿ ಸೆರೆಹಿಡಿದಿದೆ. ಈಯರ್ ಎಂಡ್ನಲ್ಲಿ ಜಾಲಿ ಗೋಯಿಂಗ್ ಸಿನಿಮಾ ಬೇಕು ಅನ್ನೋರಿಗೆ ಇಷ್ಟ ಆಗುತ್ತೆ.
ಮೈನಸ್ ಏನು?
ದೀಪಕ್ ಅರಸ್ ಸಿನಿಮಾದ ಕಥೆಯನ್ನು ಚೆನ್ನಾಗಿ ಹೆಣೆದಿದ್ದಾರೆ. ಆದರೆ, ಚಿತ್ರಕಥೆಯಲ್ಲಿ ಎಡವಿದ್ದಾರೆ. ಪ್ರೇಕ್ಷಕರಿಗೆ ಟ್ವಿಸ್ಟ್ ಅಂಡ್ ಟರ್ನ್ಸ್ ಕೊಡುವ ಭರಾಟೆಯಲ್ಲಿ ಸ್ಕ್ರೀನ್ ಪ್ಲೇ ಕೈ ತಪ್ಪಿಹೋಗಿದೆ. ಮ್ಯೂಸಿಕ್ ಇನ್ನೂ ಕ್ಯಾಚಿಯಾಗಿರಬೇಕಿತ್ತು. ಬಾಲಿವುಡ್ ಶೈಲಿಯಲ್ಲಿ ಸಿನಿಮಾ ಮಾಡುವ ಪ್ರಯತ್ನ ಸ್ವಲ್ಪ ಎಡವಿದ್ದಾರೆ ಎಂದೆನಿಸುತ್ತೆ. ಇವೆಲ್ಲ ಮರೆತು ಸಿನಿಮಾ ನೋಡಿದರೆ ಯುವಕರಿಗೆ ಖಂಡಿತಾ ಇಷ್ಟ ಆಗುತ್ತೆ.


Click it and Unblock the Notifications











