Upadhyaksha Review ; ಗೆಜ್ಜೆಪುರದಲ್ಲಿ 'ಉಪಾಧ್ಯಕ್ಷ'ನ ಹಾಸ್ಯದ ಹೊನಲು, ನಾಯಕನಾಗಿ ಗೆದ್ದರಾ ಚಿಕ್ಕಣ್ಣ..?
ಹಾಸ್ಯ ನಟನಾಗಿ ಇಲ್ಲಿಯವರೆಗೆ ಚಿಕ್ಕಣ್ಣ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ನಗಿಸಿದ್ದಾರೆ. ಪ್ರೇಕ್ಷಕರ ಹೃದಯವನ್ನೂ ಗೆದ್ದಿದ್ದಾರೆ. ಆದರೆ ಇದೇ ಮೊದಲ ಬಾರಿ ಚಿಕ್ಕಣ್ಣ ಸಂಪೂರ್ಣ ಚಿತ್ರದ ಜವಾಬ್ದಾರಿಯನ್ನ ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಉಪಾಧ್ಯಕ್ಷ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಯನ್ನೂ ಮಾಡಿಕೊಂಡಿದ್ದಾರೆ. ಇನ್ನೂ ಚಿಕ್ಕಣ್ಣ ಕಾಮಿಡಿಯನ್ ನಿಂದ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ ಎಂಬ ಸುದ್ದಿ ಹೊರ ಬಂದ ದಿನದಿಂದ ಉಪಾಧ್ಯಕ್ಷನ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇತ್ತು. ಚಿಕ್ಕಣ್ಣ ಮೇಲೆ ಕೂಡ ಬಹುದೊಡ್ಡ ಜವಾಬ್ದಾರಿ ಇತ್ತು. ಸಮಾಧಾನದ ಸಂಗತಿ ಎಂದರೆ ನಿರೀಕ್ಷೆ ಹುಸಿಯಾಗಲಿಲ್ಲ. ಯಾಕೆಂದರೆ ಚಿಕ್ಕಣ್ಣ ತಮ್ಮ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಸಿನಿಮಾ ಸೂಪರ್ ಹಿಟ್ ಆಗಿತ್ತು. ತಮಿಳಿನ 'ವರುಥಪಡಾದ ವಾಲಿಬರ್ ಸಂಘಂ' ರೀಮೆಕ್ ಆಗಿದ್ದರೂ ಕನ್ನಡ ಸಿನಿರಸಿಕರನ್ನು ಸಿನಿಮಾ ರಂಜಿಸುವಲ್ಲಿ ಗೆದ್ದಿತ್ತು. ಶರಣ್ ಹಾಗೂ ಚಿಕ್ಕಣ್ಣ ಕಾಮಿಡಿ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಹೊಟ್ಟೆ ಹುಣ್ಣಾಗುವಂತೆ ನಕ್ಕು ಸುಸ್ತಾಗಿದ್ದರು. ಈಗ ಉಪಾಧ್ಯಕ್ಷನ ಸರದಿ. ಹಾಗಿದ್ದರೆ ಹೇಗಿದೆ ಉಪಾಧ್ಯಕ್ಷ ಅನ್ನೋದನ್ನ ತಿಳಿಯಲು ಮುಂದೆ ಓದಿ.

ಕಥಾಹಂದರ
ಅಧ್ಯಕ್ಷನಂತೆ ಗೆಜ್ಜೆಪುರದಲ್ಲೇ ಉಪಾಧ್ಯಕ್ಷನ ಕಥೆ ಮುಂದುವರೆಯುತ್ತೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಹಳ್ಳಿಯಲ್ಲಿ ಇರುವ ಚೀ ತೂ ಸಂಘಕ್ಕೆ ನಾರಾಯಣ [ ಚಿಕ್ಕಣ್ಣ ] ಉಪಾಧ್ಯಕ್ಷ. ಅಧ್ಯಕ್ಷನಾಗುವ ಎಲ್ಲ ಅರ್ಹತೆ ಇದ್ದರೂ, ನಾರಾಯಣನಿಗೆ ಪ್ರಸ್ತುತ ಅಧ್ಯಕ್ಷರ ಮೇಲೆ ವಿಪರೀತವಾದ ಪ್ರೀತಿ. ಈ ಕಾರಣಕ್ಕೆ ಉಪಾಧ್ಯಕ್ಷನಾಗಿಯೇ ಮುಂದುವರೆಯಲು ನಿರ್ಧಾರ ಮಾಡುವ ನಾರಾಯಣನ ಬದುಕು ನಾಯಕಿ ಅಂಜಲಿ [ ಮಲೈಕಾ ವಸುಪಾಲ್ ] ಆಗಮನದ ಬಳಿಕ ಸಂಪೂರ್ಣ ಬದಲಾಗುತ್ತೆ. ಅಲ್ಲಿಂದಾಚೆ ಏನಾಗುತ್ತೆ ಅನ್ನುವುದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಬೇಕು
ಮೋಡಿ ಮಾಡ್ತಾರಾ ಚಿಕ್ಕಣ್ಣ..? ಉಳಿದವರ ಅಭಿನಯದ ಹೇಗಿದೆ..?
ಹಾಸ್ಯ ನಟನಿಂದ ನಾಯಕ ನಟನಾಗಿ ಬಡ್ತಿ ಪಡೆದಿರುವ ಚಿಕ್ಕಣ್ಣ ಸಂಪೂರ್ಣ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಇನ್ನೂ ಚಿಕ್ಕಣ್ಣ ಇದ್ದಲ್ಲಿ ನಗುವಿಗೆ ಬರ ಇರಲ್ಲ ಅನ್ನುವುದು ನಿಮಗೆ ಗೊತ್ತು. ಇಲ್ಲಿಯೂ ಕೂಡ ನಗುವಿನ ಅಲೆ ಇದೆ. ಆದರೆ ಚಿಕ್ಕಣ್ಣ ಇಲ್ಲಿ ನಗಿಸುವುದರ ಜೊತೆಯಲ್ಲಿ ಭಾವನಾತ್ಮಕ ಸನ್ನಿವೇಶಗಳಲ್ಲಿಯೂ ಅದ್ಭುತವಾಗಿ ನಟಿಸಿದ್ದಾರೆ. ಇದು ಈ ಚಿತ್ರದ ಪ್ಲಸ್ ಪಾಯಿಂಟ್ ಕೂಡ ಹೌದು. ನಿರ್ದೇಶಕ ಅನಿಲ್ ಕುಮಾರ್ ಅವರ ಚಾಕ್ಯಚಕ್ಯತೆಗೆ ಹಿಡಿದ ಕೈಗನ್ನಡಿಯೂ ಹೌದು. ಇನ್ನೂ ಪಿ.ರವಿಶಂಕರ್, ಸಾಧು ಕೋಕಿಲಾ, ವೀಣಾ ಸುಂದರ್, ಧರ್ಮಣ್ಣ ಕಡೂರ್ ಹಾಗೂ ನಾಯಕಿ ಮಲೈಕಾ ಈ ಚಿತ್ರದ ಇನ್ನುಳಿದ ಪ್ರಮುಖ ಆಧಾರ ಸ್ತಂಭಗಳು. ಅಷ್ಟರ ಮಟ್ಟಿಗೆ ಚಿಕ್ಕಣ್ಣಗೆ ಇವರೆಲ್ಲ ಸಾಥ್ ಕೊಟ್ಟಿದ್ದಾರೆ. ಚಿಕ್ಕಣ್ಣ ಹಾಗೂ ಮಲೈಕಾ ನಡುವಿನ ಕೆಮೆಸ್ಟ್ರೀ ಚಿತ್ರದ ಇನ್ನೊಂದು ಹೈಲೆಟ್

ಅಂದು ಅಧ್ಯಕ್ಷ ಇಂದು ಉಪಾಧ್ಯಕ್ಷ
ಹೊಸ ಕಥೆ ಹಾಗೂ ಹೊಸ ನಾಯಕನ ಜೊತೆ ನಿರ್ದೇಶಕ ಅನಿಲ್ ಕುಮಾರ್ ಪ್ರೇಕ್ಷಕರಿಗೆ ಹೊಸತನದ ಅನುಭವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ ಕೆ.ಜಿ.ಎಫ್ ಚಿತ್ರದ ಸನ್ನಿವೇಶದಲ್ಲಿ ಚಿಕ್ಕಣ್ಣ ಪ್ರತ್ಯಕ್ಷವಾದಾಗ, ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗುವುದರಲ್ಲಿ ಅನುಮಾನ ಇಲ್ಲ
ಉಪಾಧ್ಯಕ್ಷನಿಗೆ ತಂತ್ರಜ್ಞರ ಬೆಂಬಲ
ಶೇಖರ್ ಚಂದ್ರ ಛಾಯಾಗ್ರಹಣದಲ್ಲಿ ಗೆಜ್ಜೆಪೂರ ತುಂಬಾ ಸುಂದರವಾಗಿ ಕಾಣಿಸುತ್ತೆ. ಅರ್ಜುನ್ ಜನ್ಯ ಸಂಗೀತ ಉಪಾಧ್ಯಕ್ಷನಿಗೆ ಸಹಕಾರಿಯಾಗಿದೆ. ಇನ್ನೂ ಚಿತ್ರಕ್ಕೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಎಲ್ಲಿಯೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಕೆ.ಎಲ್.ರಾಜಶೇಖರ್ ಅವರ ಸಂಭಾಷಣೆ ಉಪಾಧ್ಯಕ್ಷನ ಶಕ್ತಿ
ಕೊನೆ ಮಾತು
ಉಪಾಧ್ಯಕ್ಷ ಚಿತ್ರದಲ್ಲಿ ಅಲ್ಲಲ್ಲಿ ತಪ್ಪುಗಳಿವೆ. ಆದರೆ ಆ ಲೋಪ ದೋಷಗಳನ್ನ ಚಿತ್ರತಂಡ ಮರೆಮಾಚಿಸುವಲ್ಲಿ ಯಶಸ್ವಿಯಾಗಿದೆ. ಕಾಮಿಡಿ ಸಿನಿಮಾವನ್ನ ನೀವು ಇಷ್ಟ ಪಡುವರಾಗಿದ್ದರೆ ಸಕುಟುಂಬ ಸಮೇತ ಉಪಾಧ್ಯಕ್ಷ ಚಿತ್ರವನ್ನ ಮುಲಾಜಿಲ್ಲದೇ ನೋಡಬಹುದು.


Click it and Unblock the Notifications











