Second Case of Seetharam Review; ಹೊಸ ಕೇಸ್ ಹಿಂದೆ ಬಿದ್ದ 'ಸೀತಾರಾಮ್' ಹಾವು ಏಣಿ ಆಟ
ಇತ್ತೀಚೆಗೆ ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ನಿಧಾನವಾಗಿ ಕಾಪ್ ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ನಾಲ್ಕೈದು ವರ್ಷಗಳ ಹಿಂದೆ ಬಂದಿದ್ದ 'ಸೀತಾರಾಮ್ ಬಿನೊಯ್ ಕೇಸ್ ನಂ. 18' ಚಿತ್ರದ ಸೀಕ್ವೆಲ್ ಇದೀಗ ಪ್ರೇಕ್ಷಕರ ಮುಂದೆ ಬಂದಿದೆ. ದಕ್ಷ ಪೊಲೀಸ್ ಅಧಿಕಾರಿ ಈ ಬಾರಿ ಸೀತಾರಾಮ್ ಹೊಸ ಕೇಸ್ ಹಿಂದೆ ಬಿದ್ದಿದ್ದಾನೆ.
ದೇವಿ ಪ್ರಸಾದ್ ಶೆಟ್ಟಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿರುವುದು ವಿಶೇಷ. ಮತ್ತೊಮ್ಮೆ ಸೀತಾರಾಮ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಒಂದು ರೂಪಾಯಿಗೆ ಪ್ರೀಮಿಯರ್ ಶೋಗಳನ್ನು ಆಯೋಜಿಸಿ ಚಿತ್ರತಂಡ ವಿಭಿನ್ನ ಪ್ರಯತ್ನ ಮಾಡಿತ್ತು. ಅಷ್ಟಕ್ಕೂ ಸಿನಿಮಾ ಕಥೆ ಏನು? ಸಿನಿಮಾ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.

ಸಿನಿಮಾ ಕಥೆ
ಹಳೇ ಪ್ರಕರಣದ ಭೇದಿಸಿದ ಬಳಿಕ ಪೊಲೀಸ್ ಅಧಿಕಾರಿ ಸೀತಾರಾಮ್ ಬಿನೋಯ್ (ವಿಜಯ್ ರಾಘವೇಂದ್ರ) ಈಗ ಆನೆಗುಡ್ಡ ಠಾಣೆಯಲ್ಲಿ ಕರ್ತವ್ಯ ಮುಂದುವರೆಸುತ್ತಿರುತ್ತಾನೆ. ಆದರೆ ದರೋಡೆ, ಹತ್ಯೆಗಳಿಂದ ಊರು ತಣ್ಣಗಾಯಿತು ಎಂದುಕೊಳ್ಳುವ ವೇಳೆಗೆ ಮತ್ತೆ ಸರಣಿ ಹತ್ಯೆಗಳು ಆರಂಭವಾಗುತ್ತದೆ. ಪೋಸ್ಟ್ಮಾರ್ಟಂ ರಿಪೋರ್ಟ್ನಲ್ಲಿ ಇದು ಸೈಕೋ ಕಿಲ್ಲರ್ ಕೆಲಸ ಎನ್ನುವುದು ಗೊತ್ತಾಗುತ್ತದೆ. ಅಲ್ಲಿಂದ ಮುಂದೆ ಸೀತಾರಾಮ್ ಪ್ರಕರಣದ ಬೆನ್ನು ಬೀಳುತ್ತಾನೆ. ಅಷ್ಟಕ್ಕೂ ಈ ಹತ್ಯೆಗಳ ಹಿಂದೆ ಯಾರಿದ್ದಾರೆ? ಪ್ರಕರಣದ ತನಿಖೆ ಹೇಗೆ ಸಾಗುತ್ತದೆ? ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ?
ಸಸ್ಪೆನ್ಸ್ ಥ್ರಿಲ್ಲರ್ ಅಂದಾಕ್ಷಣ ಮೋಹಕವಾಗಿ ನೋಡುಗರನ್ನು ಮೋಸಗೊಳಿಸುತ್ತಾ ಸಾಗಬೇಕು. ಸಾಕಷ್ಟು ಪಾತ್ರಗಳ ಮೇಲೆ ಅನುಮಾನ ಮೂಡಿಸುತ್ತಾ ಸಿನಿಮಾ ಸಾಗಬೇಕು. ಯಾರೂ ಊಹಿಸಿರದ ವ್ಯಕ್ತಿಯೇ ಅಷ್ಟೆಲ್ಲಾ ಅಪರಾಧಗಳ ಹಿಂದಿನ ರುವಾರಿ ಎನ್ನುವುದು ಗೊತ್ತಾದಾಗ ಪ್ರೇಕ್ಷಕರಿಗೆ ಶಾಕ್ ಆಗಬೇಕು. ಸೆಬಾಸ್ಟಿಯನ್ ಎಂಬ ಪಾತ್ರದಲ್ಲಿ ಗೋಪಾಲ್ ಕೃಷ್ಣ ದೇಶಪಾಂಡೆ ಅವರನ್ನು ಆ ರೀತಿ ತೋರಿಸಲಾಗಿದೆ. ಅದೆಲ್ಲಾ ಸುಳ್ಳು ಎಂದು ಗೊತ್ತಾದಾಗ ನೋಡುಗರಿಗೆ ಮತ್ತಷ್ಟು ಕುತೂಹಲ ಮೂಡುತ್ತದೆ.

ಒಂದು ಹಂತಕ್ಕೆ ಕೇಸ್ ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದಂತೆ ಮತ್ತೊಂದು ಹತ್ಯೆ ನಡೆಯುತ್ತದೆ. ಅಲ್ಲಿಂದ ಮುಂದೆ ಸೀತಾರಾಮ್ ಸಹೋದರಿಯ ಪತಿ ಕಾಣೆಯಾಗಿ ಕಥೆಗೆ ಹೊಸ ಟ್ವಿಸ್ಟ್ ಸಿಗುತ್ತದೆ. ಬಹಳ ಸೂಕ್ಷ್ಮವಾಗಿ ಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ಹಿಂದಿನ ಚಿತ್ರಕ್ಕಿಂತ ಈ ಭಾಗ ಬಹಳ ಕುತೂಹಲಭರಿತವಾಗಿ ಸಾಗುತ್ತದೆ. ಚಿತ್ರಕಥೆ ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿ ಇದ್ದಿದ್ದರೆ ಸಿನಿಮಾ ಮಗದಷ್ಟು ಥ್ರಿಲ್ ಕೊಡುತ್ತಿತ್ತು ಎನಿಸದೇ ಇರದು.
ದೇಶ ವಿದೇಶದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಪ್ರೇಕ್ಷಕರು ಈಗ ನೋಡುತ್ತಿದ್ದಾರೆ. ಓಟಿಟಿಯಲ್ಲಿ ರೋಚಕವಾದ ಸಿನಿಮಾಗಳು ಸಿಗುತ್ತವೆ. ಅಂತಹ ಸಿನಿಮಾಗಳನ್ನು ನೋಡಿದವರಿಗೆ ಸೀತಾರಾಮ್ ಹೊಸ ಕೇಸ್ ವಾಹ್ ಅನ್ನಿಸುವುದಿಲ್ಲ. ಆದರೂ ಸಿನಿಮಾ ಒಂದು ಹಂತಕ್ಕೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
ಕಲಾವಿದರ ನಟನೆ
ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿ ವಿಜಯ್ ರಾಘವೇಂದ್ರ ಇಷ್ಟವಾಗುತ್ತದೆ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳ ರೀತಿ ಹೀರೊಯಿಸಂ ಇಲ್ಲದೇ ಸೀದಾ ಸಾದಾ ಪೊಲೀಸ್ ಆಫೀಸರ್ ರೀತಿಯಲ್ಲೇ ಆ ಪಾತ್ರವನ್ನು ಕಟ್ಟಿಕೊಡಲಾಗಿದೆ. ಆ ಪಾತ್ರದ ಅಬ್ಬರ ಕಮ್ಮಿ. ಶಾಂತವಾಗಿದ್ದರೂ ಭಾವತೀವ್ರತೆ ಹೆಚ್ಚಾಗಿದೆ. ತನಿಖಾಧಿಕಾರಿಯ ಮೇಲಿನ ಒತ್ತಡ, ಅದರ ವಿರುದ್ಧ ಆತನ ಹೋರಾಟವನ್ನು ವಿಜಯ್ ರಾಘವೇಂದ್ರ ತಮ್ಮ ಪಾತ್ರದ ಮೂಲಕ ದಾಟಿಸುವ ಪ್ರಯತ್ನ ಮಾಡಿದ್ದಾರೆ.
ಇನ್ನುಳಿದಂತೆ ನೆನಪಿನಲ್ಲಿ ಉಳಿಯುವುದು ಸೆಬಾಸ್ಟಿಯನ್ ಆಗಿ ಗೋಪಾಲಕೃಷ್ಣ ದೇಶಪಾಂಡೆ ಪಾತ್ರ. ಇತ್ತೀಚಿನ ವರ್ಷಗಳಲ್ಲಿ ತಮ್ಮ ವಿಭಿನ್ನ ನಟನೆಯಿಂದ ಅವರು ಎಲ್ಲಾ ಸಿನಿಮಾಗಳಲ್ಲಿ ಒಳ್ಳೆ ಅಂಕ ಗಿಟ್ಟಿಸುತ್ತಿದ್ದಾರೆ. ಇಲ್ಲಿ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನುಳಿದಂತೆ ಮಲೆನಾಡ ಭಾಗದ ಜನರನ್ನೇ ಚಿತ್ರದಲ್ಲಿ ಹೆಚ್ಚು ಬಳಸಿಕೊಳ್ಳಲಾಗಿದೆ.
ತಂತ್ರಜ್ಞರ ಕೈಚಳಕ
ಹಿಂದಿನ ಎರಡೂ ಸಿನಿಮಾಗಳಿಂತ ಈ ಚಿತ್ರದಲ್ಲಿ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಶ್ರಮ ಎದ್ದು ಕಾಣುತ್ತದೆ. 2 ಗಂಟೆಯಲ್ಲಿ ಕಥೆ ಹೇಳಿ ಮುಗಿಸುವ ಪ್ರಯತ್ನ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಲ್ಲಿ ಇದು ಜಾಣ್ಮೆಯ ಪ್ರಯತ್ನವಾಗಿರುತ್ತದೆ. ಆದರೂ ಅಲ್ಲಲ್ಲಿ ಸಿನಿಮಾ ಪ್ರೇಕ್ಷಕರ ತಾಳ್ಮೆ ಬೇಡುತ್ತದೆ. ಹೇಮಂತ್ ಆಚಾರ್ಯ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಕೊನೆ ಮಾತು
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇಷ್ಟಪಡುವವರಿಗೆ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಇಷ್ಟವಾಗುತ್ತದೆ. ಆದರೆ ಅತಿಯಾದ ನಿರೀಕ್ಷೆ ಭ್ರಮನಿರಸನಕ್ಕೆ ಕಾರಣವಾಗಬಹುದು. ಹೆಚ್ಚಿನ ನಿರೀಕ್ಷೆ ಇಲ್ಲೇ ಚಿತ್ರಮಂದಿರಕ್ಕೆ ಹೋದಲು ಥ್ರಿಲ್ ಆಗಬಹುದು.


Click it and Unblock the Notifications











