Mahaan Movie Review: 'ಮಹಾನ್' ಸಿನಿಮಾ ನಿಜಕ್ಕೂ ಮಹಾನ್ ಆಗಿದೆಯಾ?
ತಮಿಳಿನ ಜನಪ್ರಿಯ ನಟ ಚಿಯಾನ್ ವಿಕ್ರಂ ಹಾಗೂ ಅವರ ಪುತ್ರ ಧ್ರುವ ವಿಕ್ರಂ ಒಟ್ಟಿಗೆ ನಟಿಸಿರುವ 'ಮಹಾನ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಇಂದಷ್ಟೆ ಬಿಡುಗಡೆ ಆಗಿದೆ. ಅಪ್ಪ-ಮಗ ಒಟ್ಟಿಗೆ ನಟಿಸಿರುವ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿತ್ತು .
ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಚಿಯಾನ್ ವಿಕ್ರಂ, ಧನು ವಿಕ್ರಂ, ಸಿಮ್ರನ್, ವಾಣಿ ಭೋಜನ್, ಸನತ್, ದೀಪಿಕಾ, ಪರಮೇಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಸಂತೋಶ್ ನಾರಾಯಣ್, ನಿರ್ಮಾಣ ಎಸ್ಎಸ್ ಲಲಿತ್ ಕುಮಾರ್. ಹುಟ್ಟಿಸಿದ್ದ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇದೆಯೇ? ನೋಡೋಣ ಬನ್ನಿ.
'ಮನುಷ್ಯನಿಗೆ ತಪ್ಪು ಮಾಡುವ ಸ್ವಾತಂತ್ರ್ಯ ಸಿಗದೇ ಹೋದರೆ ಸ್ವಾತಂತ್ರ್ಯ ವ್ಯರ್ಥ' ಎಂಬ ಮಹಾತ್ಮಾ ಗಾಂಧಿಯ ಸಾಲುಗಳೊಟ್ಟಿಗೆ ಸಿನಿಮಾ ಪ್ರಾರಂಭವಾಗುತ್ತದೆ ಹಾಗೂ ಅಂತ್ಯವಾಗುವುದು ಇದೇ ಸಾಲುಗಳೊಟ್ಟಿಗೆ.
ತನ್ನ ಮಗ ಗಾಂಧಿಯಂತೆ ದೇಶಕ್ಕಾಗಿ ಜೀವ ಅರ್ಪಿಸಲಿ, ಸತ್ಯ ದಾರಿಯಲ್ಲಿ ನಡೆಯಲೆಂದು ಅಪ್ಪ, ಮಗನಿಗೆ ಗಾಂಧಿ ಮಹಾನ್ ಎಂದು ಹೆಸರಿಡುತ್ತಾನೆ. ಸಿನಿಮಾದಲ್ಲಿ ಗಾಂಧಿ ಮಹಾನ್ ಪಾತ್ರವನ್ನು ಚಿಯಾನ್ ವಿಕ್ರಂ ನಿರ್ವಹಿಸಿದ್ದಾರೆ. ಗಾಂಧಿ ಮಹಾನ್ರ ತಾತ ಸಾರಾಯಿ ನಿಷೇಧ ಹೋರಾಟದಲ್ಲಿ ಪಾಲ್ಗೊಂಡವರು, ಸತ್ಯ ನಿಷ್ಠೆಯ ದಾರಿಯಲ್ಲಿದ್ದು ದೇಶಕ್ಕಾಗಿ ಜೀವ ಅರ್ಪಿಸಿದವರು. ಗಾಂಧಿ ಮಹಾನ್ ಸಹ ತಂದೆಯ ಆಶಯದಂತೆ ಸರಳ ಜೀವನ ನಡೆಸುತ್ತಿರುತ್ತಾರೆ. ಕಾಲೇಜೊಂದರಲ್ಲಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕ. ಮದುವೆ, ಒಂದು ಮಗು ಎಲ್ಲವೂ ಆಗಿರುತ್ತದೆ. ಆದರೆ ಒಳಗೆ ಮಾತ್ರ ರಾಜನಂತೆ ಬದುಕುವ ಆಸೆ ಹಾಗೆಯೇ ಇರುತ್ತದೆ.
ಪತ್ನಿ ಊರಿಗೆ ಹೋದಾಗ ನಿಜ ಬಣ್ಣ ಬಯಲು
ಒಮ್ಮೆ ತನ್ನ ಪತ್ನಿ ಹಾಗೂ ಮಗ ಬೇರೆ ತಿರುಪತಿಗೆ ಪ್ರವಾಸ ಹೋದಾಗ ಒಂದು ದಿನಕ್ಕಾದರೂ ರಾಜನಂತೆ ಬದುಕಬೇಕೆಂದುಕೊಂಡು ಹೊರಡುತ್ತಾನೆ. ಬಾರೊಂದರಲ್ಲಿ ಗಾಂಧಿ ಮಹಾನ್ನ ಒಬ್ಬ ಮಾಜಿ ವಿದ್ಯಾರ್ಥಿ ಹಾಗೂ ಅವನ ತಂದೆ ಸಿಗುತ್ತಾರೆ. ಆ ರಾತ್ರಿ ನಡೆವ ಕೆಲವು ಘಟನೆಗಳು ನಡೆಯುತ್ತವೆ. ಬೆಳಗ್ಗೆ ಗಾಂಧಿ ಮಹಾನ್ನ ಪತ್ನಿ, ಮಗ ಮನೆಗೆ ವಾಪಸ್ಸಾದಾಗ ಗಾಂಧಿ ಮಹಾನ್ ಕೆಟ್ಟ ಸ್ಥಿತಿಯಲ್ಲಿ ಇರುತ್ತಾನೆ ಅವನ ಬಳಿ ಬ್ಯಾಗ್ ತುಂಬ ಹಣ ಸಹ ಇರುತ್ತದೆ. ಇದನ್ನು ಕಂಡು ಆಕೆ ಆತನನ್ನು ತ್ಯಜಿಸುತ್ತಾಳೆ.
ಸಾರಾಯಿ ಉದ್ದಿಮೆ ಪ್ರಾರಂಭಿಸುವ ಗಾಂಧಿ ಮಹಾನ್
ನಂತರ ಗಾಂಧಿ ಮಹಾನ್ ತನ್ನ ವಿದ್ಯಾರ್ಥಿಯ ತಂದೆ, ತನ್ನ ಬಾಲ್ಯ ಮಿತ್ರ ಸತ್ಯವಾನ್ ಜೊತೆ ಪಾಲುದಾರಿಕೆಯಲ್ಲಿ ಸಾರಾಯಿ ವ್ಯಾಪಾರ ಶುರು ಮಾಡುತ್ತಾನೆ. ಆ ವ್ಯಾಪಾರ ಕೆಲವೇ ತಿಂಗಳಲ್ಲಿ ದೊಡ್ಡದಾಗಿ ಬೆಳೆದು ಗಾಂಧಿ ಮಹಾನ್ ದೊಡ್ಡ ಉದ್ಯಮಿ, ಗ್ಯಾಂಗ್ಸ್ಟರ್ ಆಗಿಬಿಡುತ್ತಾನೆ. ಬಹುವರ್ಷಗಳ ಬಳಿಕ ಗಾಂಧಿ ಮಹಾನ್ ಪುತ್ರ ದಾದಾಬಾಯಿ ನೌರೋಜಿ ಪೊಲೀಸ್ ಅಧಿಕಾರಿಯಾಗಿ ಬಂದು ಸಾರಾಯಿ ದಂಧೆಯನ್ನು ಕಿತ್ತೊಗೆಯುವ ಕೆಲಸದಲ್ಲಿ ತೊಡಗುತ್ತಾನೆ. ಈ ಹೋರಾಟದಲ್ಲಿ ಅಪ್ಪ-ಮಗ ಎದುರು ಬದುರಾಗುತ್ತಾರೆ. ಇಲ್ಲಿ ಜಯ ಯಾರಿಗೆ ಸಿಗುತ್ತದೆ. ಗಾಂಧಿ ಮಹಾನ್ ತನ್ನ ತಪ್ಪು ಒಪ್ಪಿಕೊಂಡು ಮತ್ತೆ ಹಳೆಯ ಜೀವನಕ್ಕೆ ಮರಳುತ್ತಾನಾ ಇಲ್ಲವಾ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ಧನಾತ್ಮಕ, ಋಣಾತ್ಮಕ ಅಂಶಗಳು
ಸಿನಿಮಾದಲ್ಲಿ ಹೊಸ ರೀತಿಯ ಯೋಚನೆ, ತೀರ ಸಾಮಾನ್ಯವಲ್ಲದ ಕತೆ ಇದೆ. ಕತೆಯಲ್ಲಿ ಒಳ್ಳೆಯ ತಿರುವುಗಳಿವೆ. ಥ್ರಿಲ್ಲರ್ ಅಂಶಗಳಿವೆ. ಆಕ್ಷನ್ ದೃಶ್ಯಗಳು, ಹೊಸ ಪರಿಸರದ ಪ್ರದರ್ಶನ ಸಿನಿಮಾದಲ್ಲಿ ಮಾಡಲಾಗಿದೆ. ಜೊತೆಗೆ ವಿಕ್ರಂ, ಧ್ರುವ, ಸಿಮ್ರನ್, ಬಾಬಿ ಸಿಂಹ ಅವರ ನಟನೆ ಸೂಪರ್ ಆಗಿದೆ. ಇವು ಸಿನಿಮಾದ ಧನಾತ್ಮಕ ಅಂಶ ಸಿನಿಮಾದ ಕತೆಯನ್ನು ಮೊದಲೇ ಊಹಿಸಬಹುದು, ಕೆಲವು ಕಡೆಗಳಲ್ಲಿ ದೃಶ್ಯಗಳು ತುಸು ಪೇಲವ ಎನಿಸುತ್ತದೆ ಇದು ಸಿನಿಮಾದ ಋಣಾತ್ಮಕ ಅಂಶ.
ನಿರ್ದೇಶಕ ಹೇಗಿದೆ?
ಕಾರ್ತಿಕ್ ಸುಬ್ಬರಾಜು ತಮ್ಮ ಭಿನ್ನ ಮಾದರಿಯ ಬರವಣಿಗೆ, ನಿರ್ದೇಶನ, ಸ್ಟೋರಿ ಪ್ರೆಸೆಂಟೇಶನ್ನಿಂದ ಜನಪ್ರಿಯರು. ಕತೆಯಲ್ಲಿ ಸಾಕಷ್ಟು ಟ್ವಿಸ್ಟ್ಗಳನ್ನು ತಂದು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಯತ್ನವನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಮಾಡಿದ್ದಾರೆ. ಆದರೆ ಇದರಲ್ಲಿ ಅವರು ಪೂರ್ಣವಾಗಿ ಸಫಲರಾಗಿಲ್ಲವೆಂದೇ ಹೇಳಬೇಕು. ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ. ಹಾಗಿದ್ದರೂ ಕಾರ್ತಿಕ್ ಸುಬ್ಬರಾಜು, ವಿಕ್ರಂ ಹಾಗೂ ಧ್ರುವ ಇಬ್ಬರ ಪಾತ್ರಗಳಿಗೂ ಸಮಾನ ಅವಕಾಶ, ಮಹತ್ವ ನೀಡಿದ್ದಾರೆ. ಎರಡು ಪಾತ್ರಗಳು ಮಾತ್ರವಲ್ಲ ಇತರೆ ಪೋಷಕ ಪಾತ್ರಗಳಿಗೂ ಸಾಕಷ್ಟು ಸ್ಕ್ರೀನ್ ಸ್ಪೇಸ್ ಅನ್ನು ಕಾರ್ತಿಕ್ ಸುಬ್ಬರಾಜು ನೀಡಿದ್ದಾರೆ. ಸುಲಭವಾಗಿ ಊಹಿಸಬಹುದಾದ ಕೆಲವು ಪೇಲವ ಟ್ವಿಸ್ಟ್ಗಳನ್ನು ಹೊರತುಪಡಿಸಿದರೆ ಕಾರ್ತಿಕ್ ಸುಬ್ಬರಾಜ್ ಚೆನ್ನಾಗಿಯೇ ಕತೆಯನ್ನು ಕಟ್ಟಿದ್ದಾರೆ ಮತ್ತು ಅದನ್ನು ತೆರೆಯ ಮೇಲೆ ತಂದಿದ್ದಾರೆ.
ನಟನೆ ಹೇಗಿದೆ?
ವಿಕ್ರಂ ನಟನೆ ಸಿನಿಮಾದ ಹೈಲೈಟ್. ನಟರಾಕ್ಷಸ ವಿಕ್ರಂ ಎಂಥ ಪಾತ್ರಗಳನ್ನೂ ಲೀಲಾಜಾಲವಾಗಿ ಅಭಿನಯಿಸಬಲ್ಲರು. ಗಾಂಧಿ ಮಹಾನ್ ಪಾತ್ರದಲ್ಲಿ ಅವರ ನಟನೆ ಹೇಗಿದೆಯೆಂದರೆ ಹಲವು ಕಡೆ ಪ್ರೇಕ್ಷಕನಿಗೆ ಅನುಮಾನ ಬರುತ್ತದೆ ಈತ ನಾಯಕನಾ ಅಥವಾ ಖಳನಾಯಕನಾ ಎಂದು. ಎರಡು ವ್ಯಕ್ತಿತ್ವಗಳ ನಡುವೆ ಅದ್ಭುತವಾದ ಬ್ಯಾಲೆನ್ಸ್ ಅನ್ನು ಚಿಯಾನ್ ವಿಕ್ರಂ ತಮ್ಮ ನಟನೆಯಿಂದ ತಂದಿದ್ದಾರೆ. ಚಿಯಾನ್ ವಿಕ್ರಂ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರೆನ್ನುವುದಕ್ಕೆ ಈ ಸಿನಿಮಾ ಮೂಲಕ ಮತ್ತೊಮ್ಮೆ ಸಾಕ್ಷಿ ದೊರಕಿದೆ.
ಧ್ರುವ ನಟನೆ ಹೇಗಿದೆ?
ಚಿಯಾನ್ ವಿಕ್ರಂ ಪುತ್ರ ಧ್ರುವ ಸಿನಿಮಾದಲ್ಲಿಯೂ ಅವರ ಮಗನ ಪಾತ್ರದಲ್ಲಿ ನಟಿಸಿದ್ದು ಅಪ್ಪನ ಎದುರು ಬಹಳ ಆತ್ಮವಿಶ್ವಾಸದಿಂದ ನಟಿಸಿದ್ದಾರೆ. ಎರಡನೇ ಅರ್ಧದ ನಂತರವೇ ಧ್ರುವರ ಎಂಟ್ರಿ ಆಗುತ್ತದೆ ಆದರೆ ಅವರ ಎಂಟ್ರಿ ಆದ ಬಳಿಕ ಇಡೀ ಸಿನಿಮಾವನ್ನು ತಮ್ಮತ್ತ ತಿರುಗಿಸಿಕೊಳ್ಳುತ್ತಾರೆ ಧ್ರುವ. ದ್ವಿತೀಯಾರ್ಧ ಸಂಪೂರ್ಣ ಧ್ರುವ ಆವರಿಸಿಕೊಂಡಿದ್ದಾರೆ. ಅಪ್ಪನಿಗೆ ಸರಿಸಮನಾಗಿ ಅಭಿನಯಿಸಿದ್ದಾರೆ ಧ್ರುವ. ಧ್ರುವ ಮೂಲಕ ಒಬ್ಬ ಒಳ್ಳೆಯ ನಟ ಉದಯಿಸಿದ್ದಾರೆ ಎಂದು ಅನುಮಾನವಿಲ್ಲದೆ ಹೇಳಬಹುದಾದಷ್ಟು ಚೆನ್ನಾಗಿ ಧ್ರುವ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ತಾಂತ್ರಿಕ ಅಂಶಗಳು?
ಕಾರ್ತಿಕ್ ಸುಬ್ಬರಾಜು ಸಿನಿಮಾಗಳ ಪ್ರೆಸೆಂಟೇಶನ್ ಬಹಳ ಭಿನ್ನವಾಗಿರುತ್ತದೆ. ಈ ಸಿನಿಮಾ ಸಹ ಭಿನ್ನವಾಗಿಯೇ ಇದೆ. ಇದಕ್ಕೆ ಮುಖ್ಯ ಕಾರಣ ಕ್ಯಾಮೆರಾಮನ್ ಶ್ರೆಯಾ ಕೃಷ್ಣನ್. ಅದ್ಭುತವಾಗಿ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಕಪ್ಪು ಬಿಳುಪು ಕಾಲವಾಗಲಿ, ಭೂಗತ ಜಗತ್ತಿನ ಚಿತ್ರಣವಾಗಲಿ ಎಲ್ಲವನ್ನೂ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಸಂತೋಶ್ ನಾರಾಯಣ್ ಸಂಗೀತ ಸಹ ಪ್ರೇಕ್ಷಕನನ್ನು ಹಿಡಿದಿಡುತ್ತದೆ.
ಒಟ್ಟಾರೆ ಸಿನಿಮಾ ಹೇಗಿದೆ?
ನಟ ವಿಕ್ರಂ ಸಿನಿಮಾಗಳು ಎಂದಿಗೂ ನಿರಾಸೆ ಮೂಡಿಸುವುದಿಲ್ಲ. ಅವರ ಕತೆಯ ಆಯ್ಕೆಯೇ ಹಾಗಿರುತ್ತದೆ. ಈ ಸಿನಿಮಾ ಸಹ ನಿರಾಸೆ ಮೂಡಿಸುವುದಿಲ್ಲ. ಈ ಸಿನಿಮಾದಲ್ಲಿ ವಿಕ್ರಂ ಜೊತೆಗೆ ಧ್ರುವ ನಟನೆಯೂ ಸೆಳೆಯುವ ಅಂಶ. ಕಾರ್ತಿಕ್ ಸುಬ್ಬರಾಜು ಅವರ ಈ ಸಿನಿಮಾ ಭಾವನೆಗಳು, ಆಕ್ಷನ್ ಜೊತೆಗೆ ಮನುಷ್ಯ ವ್ಯಕ್ತಿತ್ವವನ್ನು ಒಟ್ಟಿಗೆ ಹಿಡಿದಿಡುತ್ತದೆ. ಒಂದು ರೀತಿಯ ಹೊಸ ಅನುಭವವನ್ನೂ ನೀಡುತ್ತದೆ ಹಾಗಾಗಿ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.


Click it and Unblock the Notifications











