War 2 Review : ಹೇಗಿದೆ ಹೃತಿಕ್-ತಾರಕ್ ವಾರ್ 2 ? ಬ್ಲಾಕ್ಬಸ್ಟರಾ? ಡಿಸಾಸ್ಟರಾ? ಇಲ್ಲಿದೆ ವಿಮರ್ಶೆ
ಒಂದು ಚಿತ್ರ ಗೆಲ್ಲಬೇಕು ಅಂದರೆ ಅದರಲ್ಲಿ ಹತ್ತಾರು ಅಂಶಗಳಿರಬೇಕು. ಚೆಂದದ ಕಥೆ ಅದಕ್ಕೆ ಪೂರಕವಾದ ಚಿತ್ರಕಥೆ, ಸಂಭಾಷಣೆ, ಸಂಗೀತ, ತಂತ್ರಜ್ಞರ ಕೈ ಚಳಕ ಎಲ್ಲವೂ ಒಂದಕ್ಕೊಂದು ಕೂಡಿ ಬರಬೇಕು. ಅದಿಲ್ಲದೇ ಕೇವಲ ಸ್ಟಾರ್ ವ್ಯಾಲ್ಯೂ ಮಾತ್ರ ಸಾಕು ಚಿತ್ರ ಗೆಲ್ಲುತ್ತೆ ಎನ್ನುವ ಭ್ರಮೆಯಲ್ಲಿ ಇರುವ ಬರುವ ಸೂಪರ್ ಸ್ಟಾರ್ಗಳನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಆ ಚಿತ್ರವನ್ನು ಪ್ರೇಕ್ಷಕರು ಕಣ್ಣೆತ್ತಿ ಕೂಡ ನೋಡಲಾರರು.
ಅಬ್ಬಬ್ಬಾ ಅಂದರೆ ಸ್ಟಾರ್ಗಳ ಅಭಿಮಾನಿಗಳು ಮೂರು ದಿನ ಚಿತ್ರವನ್ನು ನೋಡಬಹುದಷ್ಟೇ. ಆ ನಂತರ ಎಷ್ಟೇ ತಿಪ್ಪರಲಾಗ ಹಾಕಿದರು ಕೂಡ ಅಷ್ಟೇ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಕಣ್ಮುಂದೆ ಇರುವ ಚಿತ್ರವೇ ''ವಾರ್ 2''. ಹೌದು.. ಹೃತಿಕ್ ರೋಷನ್ ಮತ್ತು ಜ್ಯೂ.ಎನ್.ಟಿ.ಆರ್ ಅಭಿನಯದ ಈ ಚಿತ್ರ ಹುಟ್ಟು ಹಾಕಿದ್ದ ನಿರೀಕ್ಷೆಗಳು ಕಡಿಮೆ ಇರಲಿಲ್ಲ. ಅದರಲ್ಲಿಯೂ ಇದು ಜ್ಯೂ.ಎನ್.ಟಿ.ಆರ್ ಅಭಿನಯದ ಚೊಚ್ಚಲ ಹಿಂದಿ ಚಿತ್ರ ಎನ್ನುವ ಕಾರಣಕ್ಕೆ ದಕ್ಷಿಣ ಭಾರತೀಯ ಚಿತ್ರಪ್ರೇಮಿಗಳಲ್ಲಿ ಈ ಚಿತ್ರದ ಮೇಲೆ ವಿಶೇಷವಾದ ಕುತೂಹಲ ಇತ್ತು.

ಆದರೆ ನಿರ್ದೇಶಕ ಅಯಾನ್ ಮುಖರ್ಜಿ ಮತ್ತು ನಿರ್ಮಾಪಕ ಆದಿತ್ಯ ಚೋಪ್ರಾ ಇಲ್ಲಿ ಪ್ರೇಕ್ಷಕರ ಆಸೆಗೆ ತಣ್ಣೀರೆರಚಿದ್ದಾರೆ. ಅಷ್ಟಕ್ಕೂ ವಾರ್ 2 ಚಿತ್ರದ ಕಥಾಹಂದರವೇನು ? ಚಿತ್ರ ತಂಡ ಎಡವಿದ್ದು ಎಲ್ಲಿ ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದೆ ಓದಿ
ಕಥಾಹಂದರ
ಕಬೀರ್ [ ಹೃತಿಕ್ ರೋಷನ್ ] ದೇಶಭಕ್ತ. ಆದರೆ ಜಗತ್ತಿನ ದೃಷ್ಟಿಯಲ್ಲಿ ಆತ ದೇಶದ್ರೋಹಿ. ಗೂಢಾಚಾರಿ ಆಗಿದ್ದರು ಕೂಡ ಸುಪಾರಿ ಕಿಲ್ಲರ್ ಆಗಿರುವ ಈ ಕಬೀರ್ನ ಭಾರತವನ್ನು ಸರ್ವನಾಶ ಮಾಡಬೇಕೆಂಬ ಆಸೆ ಹೊತ್ತ ಗುಂಪು ಒಂದು ಸಂಪರ್ಕ ಮಾಡುತ್ತೆ. ಆ ಗುಂಪಿನ ಹೆಸರು ಕಾಳಿ.
ಈ ಗುಂಪು ಮೊದಲು ಕಬೀರ್ಗೆ ಈ ಹಿಂದೆ ಅಂದರೆ ವಾರ್ನಲ್ಲಿ ತಂದೆಯಂತೆ ನೋಡಿಕೊಂಡಿದ್ದ ರಾ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಲೂಥ್ರಾನ [ಆಶುತೋಷ್ ರಾಣಾ] ಕೊಲ್ಲಲು ಹೇಳುತ್ತೆ. ಕಾಳಿಯನ್ನು ಹೊಡೆದುರಳಿಸಲು ನನ್ನ ಸಾವು ಅನಿವಾರ್ಯ ಎಂದು ಅರಿತ ಲೂಥ್ರಾ ಮಿಷನ್ನ ಭಾಗವಾಗಿ ತನ್ನನ್ನು ಕೊಲ್ಲುವಂತೆ ಹೇಳುತ್ತಾನೆ. ವಿಧಿ ಇಲ್ಲದೇ ಲೂಥ್ರಾನನ್ನು ಕಬೀರ್ ಗುಂಡಿಕ್ಕಿ ಸಾಯಿಸುತ್ತಾನೆ.
ಇದೇ ಲೂಥ್ರಾನ ಮಗಳು ಕಾವ್ಯಾ [ ಕಿಯಾರಾ ಅಡ್ವಾಣಿ] ಒಂದು ಕಾಲದಲ್ಲಿ ಕಬೀರ್ನ ಮಾಜಿ ಗೆಳತಿಯಾಗಿರುತ್ತಾಳೆ. ತಂದೆಯನ್ನು ಕೊಂದ ಕಬೀರ್ನನ್ನು ಕೊಲ್ಲಲು ನಿರ್ಧಾರ ಮಾಡುತ್ತಾಳೆ. ಲೂಥ್ರಾ ಜಾಗಕ್ಕೆ ಬಂದ ಹೊಸ ಅಧಿಕಾರಿ ವಿಕ್ರಾಂತ್ [ ಅನಿಲ್ ಕಪೂರ್ ] ಉದ್ದೇಶ ಕೂಡ ಇದೇ ಆಗಿರುತ್ತೆ. ಈ ಹಿನ್ನೆಲೆ ವಿಕ್ರಮ್ [ ಜ್ಯೂ ಎನ್.ಟಿ.ಆರ್ ] ರಂಗಪ್ರವೇಶವಾಗುತ್ತೆ.

ಆದರೆ. ರಾ ಅಧಿಕಾರಿಯಾದ ವಿಕ್ರಮ್ ದೇಶಭಕ್ತನಲ್ಲ.ಬದಲಿಗೆ ವ್ಯವಸ್ಥೆಯಲ್ಲಿರುವ ಕುತಂತ್ರಿ. ಹೀಗೆ ಎರಡು ವಿಭಿನ್ನವಾದ ವ್ಯಕ್ತಿತ್ವ ಇರುವ ಈ ಇಬ್ಬರು ಒಂದು ಹಂತದಲ್ಲಿ ಮುಖಾಮುಖಿಯಾಗುತ್ತಾರೆ. ಹಾಡುತ್ತಾರೆ. ಕುಣಿಯುತ್ತಾರೆ. ಇದರ ನಡುವೆ ಒಂದು ಸತ್ಯ ಹೊರ ಬರುತ್ತೆ. ಕಬೀರ್ನ ಬಾಲ್ಯದ ಗಾಯ ಹಸಿರಾಗುತ್ತೆ. ಮುಂದೇನು ? ಕಬೀರ್ನ ವಿಕ್ರಮ್ ಕೊಲ್ತಾನಾ ಅಥವಾ ವಿಕ್ರಮ್ ಜೀವವನ್ನೇ ಕಬೀರ್ ಬಲಿ ತೆಗೆದುಕೊಳ್ಳುತ್ತಾನಾ ? ಕಾಳಿ ಕಥೆ ಏನಾಗುತ್ತೆ ? ನಿಜವಾದ ಖಳನಾಯಕ ಯಾರು ? ನಿಜವಾದ ದೇಶಪ್ರೇಮಿ ಯಾರು ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಚಿತ್ರಮಂದಿರದಲ್ಲಿಯೇ ನೀವು ನೋಡಿ ಪಡೆಯಬೇಕು.
ಅಭಿನಯ ಹೇಗಿದೆ..?
ಹೃತಿಕ್ ರೋಷನ್ ಮತ್ತು ಜ್ಯೂ.ಎನ್.ಟಿ.ಆರ್ ನಡುವೆ ಇಲ್ಲಿ ಕೆಮೆಸ್ಟ್ರೀ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಲವಾರು ವರ್ಷಗಳ ಸ್ನೇಹಿತರು ಎಂಬಂತೆ ಇಬ್ಬರು ಕಾಣಿಸಿಕೊಂಡಿದ್ದಾರೆ. ಇನ್ನು ಅಭಿನಯದ ವಿಚಾರಕ್ಕೆ ಬಂದರೆ ಜ್ಯೂ.ಎನ್.ಟಿ.ಆರ್ ಎದುರು ಹೃತಿಕ್ ರೋಷನ್ ಮಂಕಾದಂತೆ ಕಾಣುತ್ತಾರೆ. ಆದರೆ ಅದೇ ಸಾಹಸ ದೃಶ್ಯಗಳಲ್ಲಿ ಹೃತಿಕ್ ರೋಷನ್ ಎದುರು ಜ್ಯೂ.ಎನ್.ಟಿ.ಆರ್ ಸೋತಂತೆ ಕಾಣುತ್ತಾರೆ.
ಇನ್ನೂ ಟ್ರೇಲರ್ ನೋಡಿ ಕಿಯಾರಾ ಅಡ್ವಾಣಿಯ ಪಾತ್ರ ಹಾಗಿರಬಹುದು ಹೀಗಿರಬಹುದು ಎಂದುಕೊಂಡು ಹೋದರೆ ನಿರಾಸೆಯಾಗುವುದು ಖಚಿತ. ಯಾಕೆಂದರೆ ಕಿಯಾರಾ ಇಲ್ಲಿ ಹಾಡಿಗಷ್ಟೇ ಸೀಮಿತ. ಒಂದೆರಡು ಸಾಹಸ ಸನ್ನಿವೇಶಗಳಿವೆಯಾದರೂ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಆಶುತೋಷ್ ರಾಣಾ ಅಭಿನಯ ಸೊಗಸಾಗಿದೆ. ಆದರೆ ಕಿಯಾರಾ ಮತ್ತು ಆಶುತೋಷ್ ರಾಣಾ ಅವರಿಗೆ ಇನ್ನಷ್ಟು ಸ್ಕ್ರೀನ್ ಸ್ಪೇಸ್ ನೀಡಬೇಕಿತ್ತು. ಅನಿಲ್ ಕಪೂರ್ ಅವರದ್ದು ಅತಿಥಿ ಪಾತ್ರ. ವರುಣ್ ಬಡೋಲಾ ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.
ನಿರ್ದೇಶನ ಹೇಗಿದೆ ?
''ವೇಕ್ ಅಪ್ ಸಿದ್''.. ''ಯೇ ಜವಾನಿ ಹೇ ದಿವಾನಿ''.. ''ಬ್ರಹ್ಮಾಸ್ತ್ರ'' ಅಂತಹ ಒಳ್ಳೆಯ ಚಿತ್ರಗಳನ್ನು ಮಾಡಿರುವ ಅಯಾನ್ ಮುಖರ್ಜಿ, ಇಲ್ಲಿ ಎಡವಿದ್ದಾರೆ. ಹೃತಿಕ್ ರೋಷನ್ ಮತ್ತು ಜ್ಯೂನಿಯರ್ ಎನ್ ಟಿ ಆರ್ ಅವರಂತಹ ಕಲಾವಿದರು ಇದ್ದರೂ ಕೂಡ ಸುವರ್ಣ ಅವಕಾಶವನ್ನು ಕೈ ಚೆಲ್ಲಿರುವ ಅಯಾನ್ ಸಂಪೂರ್ಣ ಜವಾಬ್ಧಾರಿಗಳನ್ನು ಸಾಹಸ ನಿರ್ದೇಶಕರಿಗೆ ಮತ್ತು ಚಿತ್ರದ ತಂತ್ರಜ್ಞರಿಗೆ ಇಲ್ಲಿ ವಹಿಸಿದಂತೆ ಇದೆ. ಕಥೆ ಚಿತ್ರಕಥೆ ಮತ್ತು ನಿರ್ದೇಶನದ ಮೇಲೆ ಗಮನ ಹರಿಸಿದ್ದರೆ ವಾರ್ 2 ಅತ್ಯದ್ಭುತವಾಗಿರುತ್ತಿತ್ತು.

ಪ್ಲಸ್ ಪಾಯಿಂಟ್ ಏನು ?
ಆರಂಭದಲ್ಲಿಯೇ ಹೇಳಿದಂತೆ ಇದು ಕೇವಲ ಆಕ್ಷನ್ ದೃಶ್ಯಗಳನ್ನು ತೋರಿಸಲೆಂದೇ ಮಾಡಲಾದ ಸಿನಿಮಾದಂತೆ ಇದೆ. ಚಿತ್ರದೂದ್ದಕ್ಕೂ ಇರುವ ಸಾಹಸ ದೃಶ್ಯಗಳು ನಿಬ್ಬೇರಗಾಗಿಸುತ್ತವೆ. ಆದರೆ.. ಈ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡಬೇಕೆ ಹೊರತು ಲಾಜಿಕ್ಗಳನ್ನು ಹುಡುಕಲು ಹೋಗಬಾರದು. ಯಾಕೆಂದರೆ.. ಇಲ್ಲಿ ಲಾಜಿಕ್ಗೆ ಕೆಲಸ ಇಲ್ಲ. ಮನರಂಜನೆಯ ರಸದೌತಣ ಬಡಿಸುವ ಉದ್ದೇಶದಿಂದ ಈ ಆಕ್ಷನ್ ಸೀಕ್ವೆನ್ಸ್ಗಳನ್ನು ಕಂಪೋಸ್ ಮಾಡಲಾಗಿದೆ.
ಆಕ್ಷನ್ ಹೊರತು ಪಡಿಸಿದರೆ ಸಂಚಿತ್ ಬಲ್ಹಾರ ಮತ್ತು ಅಂಕಿತ ಬಲ್ಹಾರ ಅವರ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಚಿತ್ರಮಂದಿರದಲ್ಲಿ ಕುಳಿತುಕೊಂಡು ಆಮ್ಸ್ಟರ್ಡ್ಯಾಮ್, ಮನಾಲಿ, ವೇಲೆನ್ಸಿಯಾ, ಯಾಸ್ ದ್ವೀಪ ಮತ್ತು ದಾವೋಸ್ ನ ಸುಂದರ ತಾಣಗಳನ್ನು ನೀವು ನೋಡಬಹುದು.
ಮೈನಸ್ ಪಾಯಿಂಟ್ ಏನು ?
ನಿರ್ದೇಶನ ಮಾತ್ರವಲ್ಲ ಇಲ್ಲಿ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಕಥೆಗೆ ಚಿತ್ರಕಥೆ ಬರೆಯುವಲ್ಲಿ ಶ್ರೀಧರ್ ರಾಘವನ್ ಸೋತಿದ್ದಾರೆ. ''ಬ್ಲಫ್ ಮಾಸ್ಟರ್'' ಮತ್ತು ''ಖಾಕಿ'' ಅಂತಹ ಚಿತ್ರದ ಬರಹಗಾರ ಇವರೇನಾ? ಎನ್ನುವ ಅನುಮಾನ ಚಿತ್ರ ನೋಡುವಾಗ ಮೂಡುತ್ತೆ.
ಇನ್ನು 17 ವರ್ಷಗಳ ಹಿಂದೆ ''ಜಾನೇ ತು ಯಾ ಜಾನೇ ನಾ'' ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದ ಮುನ್ನಾಭಾಯಿ ಎಂಬಿಬಿಎಸ್ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದ ಅಬ್ಬಾಸ್ ಟೈರ್ವಾಲಾ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಆದರೆ.. ಸಂಭಾಷಣೆಗಳಲ್ಲಿ ಮಜಾ ಇಲ್ಲ. ಪಂಚ್ ಇಲ್ಲ. ಕೊನೆ ಪಕ್ಷ ಸಂಗೀತವಾದರೂ ನೆನಪಿನಲ್ಲಿ ಉಳಿಯುತ್ತಾ ಅಂದರೆ ಪ್ರೀತಂ ಸಂಗೀತದಲ್ಲಿ ಯಾವ ಹಾಡು ಕೂಡ ಗುನುಗುವಂತೆ ಇಲ್ಲ. ನೆನಪುಳಿಯುವಂತೆ ಇಲ್ಲ. ಬಹುಮುಖ್ಯವಾಗಿ ಈ ಚಿತ್ರದಲ್ಲಿ ಭಾವನೆಗಳೆ ಇಲ್ಲ. ಭಾವನಾತ್ಮಕವಾಗಿ ಕಾಡುವಂತಹ ಅಂಶಗಳಿಲ್ಲ.

ಕೊನೆ ಮಾತು
ನೀವೇನಾದರೂ ಸಾಹಸ ಪ್ರಧಾನ ಚಿತ್ರಗಳನ್ನು ನೋಡಲು ಬಯಸಿದ್ದರೆ, ಹೃತಿಕ್ ರೋಷನ್ ಮತ್ತು ಜ್ಯೂ ಎನ್ಟಿಆರ್ ಅವರ ಅಭಿಮಾನಿಯಾಗಿದ್ದರೆ 177 ನಿಮಿಷಗಳ ಈ ಸುದಿರ್ಘವಾದ ಚಿತ್ರವನ್ನು ನೋಡಬಹುದು. ಆದರೆ ಕಥೆಯನ್ನು ಇಷ್ಟ ಪಡುವರಾಗಿದ್ದರೆ, ಲಾಜಿಕ್ ಹುಡುಕುವರಾಗಿದ್ದರೆ, ಹೊಸತನ ನಿರೀಕ್ಷೆ ಮಾಡಿದ್ದರೆ ಈ ಚಿತ್ರದಿಂದ ದೂರ ಇರುವುದು ಉತ್ತಮ. ದುಡ್ಡಾದರು ಉಳಿಯುತ್ತೆ.


Click it and Unblock the Notifications










