Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Act-1978 Review: ಹಲವು ಭಾವಗಳ ಹೋರಾಟದ ಕಥನ
ಒಂದು ವಿಚಾರವನ್ನು ಹಲವು ಬಗೆಗಳಲ್ಲಿ ಪ್ರೇಕ್ಷಕರ ಮುಂದಿಡುವ ಶಕ್ತಿ ಸಿನಿಮಾಕ್ಕಿದೆ. ಅದರಲ್ಲಿಯೂ ಗಂಭೀರ ಸಂಗತಿಯೊಂದನ್ನು ಹೇಳುವಾಗ ಸಿನಿಮಾ ಕಲಾತ್ಮಕ ಸ್ವರೂಪವನ್ನು ಪಡೆದುಕೊಳ್ಳಬಹುದು ಅಥವಾ ಅದು ಆಕ್ರಮಣಕಾರಿ ರೂಪವನ್ನೂ ಪಡೆದುಕೊಳ್ಳಬಹುದು. ಈ ಎರಡರ ನಡುವೆ ಮೂಲ ಆಶಯವನ್ನು ಉಳಿಸಿಕೊಂಡು ಮನರಂಜನೆ ಮತ್ತು ಸಂದೇಶ ಎರಡನ್ನೂ ನೀಡುವುದು ಸುಲಭದ ಮಾತಲ್ಲ. ಅಂತಹ ಪ್ರಯತ್ನದಲ್ಲಿ 'ಆಕ್ಟ್-1978' ಯಶಸ್ವಿಯಾಗಿದೆ.
'ಆಕ್ಟ್-1978' ಬಗ್ಗೆ ನಿರೀಕ್ಷೆ, ಕುತೂಹಲಗಳು ಹೆಚ್ಚಲು ಹಲವು ಕಾರಣಗಳಿವೆ. ಸುಮಾರು ಏಳು ತಿಂಗಳು ಚಿತ್ರಮಂದಿರಗಳು ತೆರೆಯದೆ ಬೇಸರಗೊಂಡಿದ್ದ ಸಿನಿಮಾ ಅಭಿಮಾನಿಗಳನ್ನು ಎದುರುಗೊಳ್ಳುತ್ತಿರುವ ಮೊದಲ ಹೊಸ ಚಿತ್ರ ಇದು. 'ಹರಿವು', 'ನಾತಿಚರಾಮಿ'ಯಂತಹ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮಂಸೋರೆ ನಿರ್ದೇಶನದ ಮೂರನೇ ಸಿನಿಮಾ. 'ಆಕ್ಟ್ 1978' ಪ್ರತಿದಿನವೂ ಜನರು ದೂರುವ ವ್ಯವಸ್ಥೆಯನ್ನು, ಅದರ ಹುಳುಕುಗಳನ್ನು ತೋರಿಸುವ ನಮ್ಮದೇ ನಡುವಿನ ಕಥೆ. ಮುಂದೆ ಓದಿ.....
'ಆಕ್ಟ್-1978' ಕಥಾಹಂದರ
'ಆಕ್ಟ್-1978' ಸಿನಿಮಾ ಗಮನ ಸೆಳೆಯುವುದು ಅದರ ಕಥಾ ವಸ್ತು ಮತ್ತು ಎಲ್ಲಿಯೂ ಅದನ್ನು ಹಿಂಜದೆ ಏರಿಳಿತಗಳಿಲ್ಲದೆ ಹದವಾಗಿ ನಿರೂಪಿಸಿರುವ ಅಚ್ಚುಕಟ್ಟುತನದಿಂದ. ಮಂಸೋರೆ ಅವರ ಹಿಂದಿನ ಎರಡೂ ಸಿನಿಮಾಗಳಿಗಿಂತ ಈ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ವ್ಯವಸ್ಥೆಯ ವಿರುದ್ಧದ ಹೋರಾಟದ ಕುರಿತಾದ ಕಥೆಯುಳ್ಳ ಅನೇಕ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಹೋರಾಟಗಳಲ್ಲಿ ಸೋತು ಬಸವಳಿಯುವ ಜನರ ನೋವು-ಸಂಕಟಗಳ ಕಥೆ ಒಂದಾದರೆ, ಸಿಡಿದೆದ್ದು ಹಿಂಸೆಯ ಹಾದಿ ಹಿಡಿಯುವ ಮತ್ತೊಂದು ವರ್ಗದ ಪ್ರೇಕ್ಷಕ ಕಥೆಗಳಿವೆ. ಇವರೆಡನ್ನೂ ಮಂಸೋರೆ ಇಲ್ಲಿ ಬೆರೆಸಿದ್ದಾರೆ.
'ಆಕ್ಟ್ 1978' ಸಿನಿಮಾ ನೋಡಿದ ಕಿಚ್ಚ ಸುದೀಪ್ ಏನಂದ್ರು?
ಪ್ರೇಕ್ಷಕನ ಮನಸ್ಸನ್ನು ಹೊರಳಿಸುವ ಕಥೆ
ಮರದಿಂದ ಬಿದ್ದು ಸತ್ತ ರೈತ ತಂದೆಗೆ ಬರಬೇಕಾದ ಪರಿಹಾರದ ಹಣ ಸಿಕ್ಕರೆ ತನ್ನ ಗಂಡನ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಸರ್ಕಾರಿ ಕಚೇರಿ ಅಲೆದು ಹೈರಾಣಾದ ಗರ್ಭಿಣಿ, ಕೊನೆಗೆ ತನ್ನ ಗುರಿ ಈಡೇರಿಸಿಕೊಳ್ಳಲು ತೆಗೆದುಕೊಳ್ಳುವ ನಿರ್ಧಾರ ಪ್ರಶ್ನೆಗಳನ್ನು ಮೂಡಿಸದೆ ಇರದು. ಆದರೆ ಅದು ಹಿಂಸಾತ್ಮಕ ಮಾರ್ಗ ಎಂಬ ಭಾವನೆ ಮೂಡದಂತೆ ಮತ್ತೊಂದು ಆಲೋಚನಾ ದಿಕ್ಕಿನೆಡೆಗೆ ಪ್ರೇಕ್ಷಕನ ಮನಸ್ಸನ್ನು ಹೊರಳಿಸುವಷ್ಟು ಸಶಕ್ತವಾಗಿದೆ.
ವ್ಯವಸ್ಥೆಯನ್ನು ಪ್ರಶ್ನಿಸುವ ಮಹಿಳೆ
ವ್ಯವಸ್ಥೆ ಎಂದಾಗ ಅಲ್ಲಿ ಸರ್ಕಾರ, ರಾಜಕಾರಣಿಗಳು ಮತ್ತು ಸರ್ಕಾರಿ ಕಚೇರಿಗಳು ಮಾತ್ರವಲ್ಲ ಖಾಸಗಿ ಮಾಧ್ಯಮಗಳೂ ಅದರ ಭಾಗ. ಈ ಸಿನಿಮಾ, ಮಾಧ್ಯಮದ ಮುಖಗಳನ್ನು ವ್ಯಂಗ್ಯಾತ್ಮಕವಾಗಿ ಚಿತ್ರಿಸುತ್ತದೆ. ಅದು ಅಣಕ ಎಂದು ತೋರಿದರೂ ವಾಸ್ತವದಿಂದ ಹೊರತಲ್ಲ. ವ್ಯವಸ್ಥೆಯ ವಿರುದ್ಧದ ಹೋರಾಡಲು ಗರ್ಭಿಣಿಯೊಬ್ಬಳು ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಚೇರಿಯಲ್ಲಿ ಕುಳಿತು ಬೆದರಿಸಬಹುದೇ? ಇದು ತಪ್ಪು ಸಂದೇಶ ನೀಡುತ್ತದೆಯಲ್ಲವೇ? ಎಂಬ ತಕರಾರುಗಳಿಗೂ ಸಿನಿಮಾದಲ್ಲಿಯೇ ಉತ್ತರವಿದೆ. ಒಂದು ಸಿನಿಮಾ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲು ಬೇಕಾದ ಎಲ್ಲ ಅಂಶಗಳೂ ಚಿತ್ರದಲ್ಲಿದೆ. ಮುಂದೇನಾಗುತ್ತದೆ ಎಂಬ ಕುತೂಹಲ, ಇದು ನಾವೇ ನೋಡಿದ ಸ್ಥಿತಿ ಎನ್ನುವ ಅನುಭವದ ಮೆಲುಕು ಹಾಕಿಸುವ ದೃಶ್ಯಗಳು, ಕಾನೂನಿನ ಸಣ್ಣ ಪರಿಚಯ, ಗಂಭೀರ ಕಥನದ ನಡುವೆ ಹಗುರಾಗಿಸುವ ತಿಳಿಹಾಸ್ಯವನ್ನು ಒಳಗೊಂಡ ಅಚ್ಚುಕಟ್ಟಾದ ಕೃತಿ.
ಆಕ್ಟ್ 1978: ಕೇವಲ ಮನರಂಜನೆಯಲ್ಲ, ಕಾನೂನಿನ ತಿಳುವಳಿಕೆ
ಕಥೆಯಲ್ಲಿದೆ ಕ್ರಾಂತಿಕಾರಿ ನಿರೂಪಣೆ
ಥ್ರಿಲ್ಲರ್ ಎನಿಸುವ ಕಥೆ, ಕೊನೆಗೆ ನಾಟಕೀಯ ತಿರುವು ಪಡೆದುಕೊಳ್ಳುತ್ತದೆ. ಆ ನಾಟಕೀಯತೆ ಸನ್ನಿವೇಶಗಳ ನಡುವೆಯೂ ಕಾಣಿಸುತ್ತದೆ. ಅಂತ್ಯದಲ್ಲಿ ಪ್ರೇಕ್ಷಕರಲ್ಲಿ ಭಾವತೀವ್ರತೆ ಉಳಿಸುವ ಬಯಕೆ ನಿರ್ದೇಶಕರಲ್ಲಿ ಇದ್ದಂತಿದೆ. ಅದರ ಜತೆಗೆ ಸಿನಿಮಾದ ಮನರಂಜನೆಯ ಮಂತ್ರದೊಂದಿಗೆ ಸೂಕ್ಷ್ಮ ಸಂಗತಿಯನ್ನು ಹಿಂಸೆಯ ವೈಭವೀಕರಣದ ನಡುವೆ ಮುಳುಗಿಸದೆ ಜವಾಬ್ದಾರಿಯುತ ನಿರ್ದೇಶಕನೊಬ್ಬ ನಿಭಾಯಿಸಬೇಕಾದ ಪಾತ್ರವನ್ನು ಮಂಸೋರೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ. 'ತಬರನ ಕಥೆ'ಯಂತಹ ವ್ಯವಸ್ಥೆಯೊಂದಿಗಿನ ಸಂಘರ್ಷದ ಸಂಯಮದ ನಿರೂಪಣೆಯಾಗಿದ್ದರೆ, ಅದೇ ರೀತಿಯ ಕಥೆಗೆ ಕ್ರಾಂತಿಕಾರಿ ನಿರೂಪಣೆ 'ಆಕ್ಟ್-1978' ನಲ್ಲಿದೆ.
ನಿರ್ದೇಶಕನಿಗೆ ಕಲಾವಿದರು ಉತ್ತಮ ಸಾಥ್
ಕಥೆ (ಮಂಸೋರೆ) ಚಿತ್ರಕಥೆ ಮತ್ತು ಸಂಭಾಷಣೆ (ಟಿಕೆ ದಯಾನಂದ್, ವೀರೇಂದ್ರ ಮಲ್ಲಣ್ಣ) ಇಡೀ ಸಿನಿಮಾವನ್ನು ಸಶಕ್ತಗೊಳಿಸಿದ್ದರೆ, ಅದನ್ನು ತೆರೆಯ ಮೇಲೆ ಅಷ್ಟೇ ಗಟ್ಟಿಯಾಗಿ ಮೂಡಿಸಿರುವುದು ಕಲಾವಿದರ ತಂಡ. ಪ್ರತಿ ಪಾತ್ರಕ್ಕೂ ಹೇಳಿ ಮಾಡಿಸಿದಂತಹ ಕಲಾವಿದರು ಇಲ್ಲಿದ್ದಾರೆ. ಮುಖ್ಯಪಾತ್ರದಲ್ಲಿರುವ ಯಜ್ಞಾ ಶೆಟ್ಟಿ ಮನೋಜ್ಞ ಅಭಿನಯ ಇಡೀ ಚಿತ್ರವನ್ನು ಅವರು ತಮ್ಮೊಂದಿಗೆ ಕೊಂಡೊಯ್ದಂತೆ ಕಾಡುತ್ತದೆ. ಅವರ ಜತೆಗೆ ಮೌನಿ ಅಜ್ಜನಾಗಿ ಬಿ. ಸುರೇಶ್, ಪೊಲೀಸ್ ಅಧಿಕಾರಿ ಪ್ರಮೋದ್ ಶೆಟ್ಟಿ ಗಮನ ಸೆಳೆಯುತ್ತಾರೆ.
Act-1978 ಟ್ರೇಲರ್: ಸಾಮಾನ್ಯ ಜನರ ಅಸಾಮಾನ್ಯ ಕತೆ! ನಿರೀಕ್ಷೆ ದ್ವಿಗುಣ
ತಾಂತ್ರಿಕವಾಗಿ ಸಿನಿಮಾ ಹೇಗಿದೆ?
ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರದ ಮತ್ತೊಂದು ಶಕ್ತಿಗಳಲ್ಲಿ ಒಂದು. ಜಯಂತ ಕಾಯ್ಕಿಣಿ ಸಾಹಿತ್ಯದಲ್ಲಿನ ಆರಂಭ ಹಾಡು ಮನದಲ್ಲಿ ಉಳಿಯುತ್ತದೆ. ಸಿನಿಮಾ ಕೊಂಚ ನಿಧಾನಗತಿಯಲ್ಲಿ ಸಾಗುತ್ತದೆ. ಅದನ್ನು ಮಂಸೋರೆ ಅವರ ಹಿಂದಿನ ಸಿನಿಮಾಗಳಲ್ಲಿಯೂ ಕಾಣಬಹುದು. ಆದರೆ ಸಿನಿಮಾ ಸಾಗುವ ಬಗೆಯಲ್ಲಿ ಒಂದೇ ಬಗೆಯ ಹರಿವು ಇದೆ. ಗಾಂಧಿ ವೇಷಧಾರಿಯ ಅಹಿಂಸಾತ್ಮಕ ಹೋರಾಟದ ಸೋಲು ಮತ್ತು ಮಹಿಳೆಯ ತೀವ್ರಗಾಮಿತನ ಹೋರಾಟದ ಗೆಲುವು ಎರಡೂ ಚರ್ಚಾಸ್ಪದ.