Gaalipata 2 Review: ಬಗೆಹರಿಯದ ಭಾವನೆಗಳು ಮತ್ತು ಕನ್ನಡ, ಇದು ಭಟ್ಟರು ಬಿಟ್ಟ 2ನೇ 'ಗಾಳಿಪಟ'!
'ಗಾಳಿಪಟ' ಎನ್ನುವ ಟೈಟಲ್ ಕನ್ನಡ ಪ್ರೇಕ್ಷಕರಿಗೆ ಹೊಸದೇನಲ್ಲ. ಈ ಮೊದಲು 'ಗಾಳಿಪಟ' ಸಿನಿಮಾ ಮಾಡಿದ್ದ ನಿರ್ದೇಶಕ ಯೋಗ್ರಾಜ್ ಭಟ್ ಈಗ 'ಗಾಳಿಪಟ 2' ಮಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ಟರನ್ನು ಕನ್ನಡದ ವಿಕಟ ಕವಿ ಅಂತಲೇ ಕರೆಯುತ್ತಾರೆ. ಹಾಗಾಗಿ ಭಟ್ಟರು ಯಾವುದೇ ಸಿನಿಮಾ ಮಾಡುತ್ತಿದ್ದಾರೆ ಅಂದರೂ ಕೂಡ ನಿರೀಕ್ಷೆಗಳು ಹುಟ್ಟಿ ಕೊಳ್ಳುತ್ತವೆ.
ಈಗ 'ಗಾಳಿಪಟ 2' ಚಿತ್ರದ ಸರದಿ. 'ಗಾಳಿಪಟ 2' ಚಿತ್ರದ ಮೇಲೂ ಸಹಜವಾಗಿಯೇ ನಿರೀಕ್ಷೆಗಳು ಮನೆ ಮಾಡಿದ್ದವು. ಯಾಕೆಂದರೆ ಈಗಾಗಲೇ ಇದೆ ಕಾಂಬಿನೇಷನ್ನಲ್ಲಿ ಬಂದ ಗಾಳಿಪಟ ಹಿಟ್ಟ ಲಿಸ್ಟ್ ಸೇರಿದೆ. ಆ ಚಿತ್ರದಲ್ಲಿ ನಟ ಗಣೇಶ್, ದಿಗಂತ್ ಜೋಡಿ ಮೋಡಿ ಮಾಡಿತ್ತು. ಈಗ ಬಂದಿರುವ ಗಾಳಿಪಟದಲ್ಲಿ ಕಥೆ, ಪಾತ್ರಗಳು ಮಾತ್ರ ಕೊಂಚ ಬದಲಾಗಿದೆ.
'ಗಾಳಿಪಟ 2' ಚಿತ್ರದ ಮುಖ್ಯ ತಿರುಳು ಸ್ನೇಹ. ಎಲ್ಲರ ಬದುಕಲ್ಲಿ ಸ್ನೇಹ, ಸ್ನೇಹಿತರ ಬಾಂಧವ್ಯ ಅತಿ ಮುಖ್ಯವಾಗಿರುತ್ತದೆ. ಕೆಲವರಿಗಂತೂ ಸ್ನೇಹಿತರೇ ಸರ್ವಸ್ವ. ಇಲ್ಲಿ ಸ್ನೇಹದ ಆಳ- ಅಗಲ ತೋರಿಸುವುದರ ಜೊತೆಗೆ ಪ್ರೀತಿ, ವ್ಯಥೆ ಮತ್ತು ಕನ್ನಡ ಕಥೆಯನ್ನು ಕಟ್ಟಿಕೊಡಲಾಗಿದೆ.
ಗಣಿ, ದಿಗಿ, ಭೂಷಿ ಅಪ್ಪಟ್ಟ ಸ್ನೇಹಿತರು!
ಸಿನಿಮಾದಲ್ಲಿ ನಟ ಗಣೇಶ್ ಪ್ರಮುಖ ನಾಯಕನ ಸ್ಥಾನದಲ್ಲಿ ಇದ್ದರೂ, ದಿಗಂತ್ ಮತ್ತು ಪವನ್ ಕುಮಾರ್ ಪಾತ್ರಗಳು ಕಥೆಯಲ್ಲಿ ಅತ್ಯಂತ ಪ್ರಮುಖ. ಸಿನಿಮಾ ಶುರುವಾಗುವುದೇ ಈ ಮೂವರು ಸ್ನೇಹಿತರ ಫೋನ್ ಕಾಲ್ ಸಂಭಾಷಣೆಯಿಂದ. ಓದು ಮುಗಿಸಿ ತಮ್ಮದೇ ಬದುಕು ಕಟ್ಟಿಕೊಂಡು ಇರುವ ಸ್ನೇಹಿತರು, ತಮಗೆ ಪಾಠ ಕಲಿಸಿದ ಗುರುವಿಗಾಗಿ ಮತ್ತೆ ಒಂದಾಗಿ ಒಟ್ಟಿಗೆ ಹೊಸ ಪ್ರಯಾಣ ಆರಂಭಿಸುತ್ತಾರೆ. ಇಲ್ಲಿಂದಲೇ ಈ ಗಾಳಿಪಟದ ಜರ್ನಿ ಶುರುವಾಗುತ್ತದೆ. ಇವರ ಜೊತೆಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನೆನ್ ಮತ್ತು ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ.
ಹಳೇ ಕಾಲೇಜು, ಪ್ರೀತಿ, ಮೇಷ್ಟ್ರು!
ಸಿನಿಮಾ ಶುರುವಿನಿಂದ ಯಾವುದೇ ಕಿರಿಕಿರಿ ಇಲ್ಲದೇ, ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಹಾಸ್ಯದ ಜೊತೆಗೆ ಮೂವರೂ ಸ್ನೇಹಿತರ ಪ್ರತ್ಯೇಕ ಲವ್ ಟ್ರ್ಯಾಕ್ಗಳು ಓಪನ್ ಆಗುತ್ತವೆ. ಗಣೇಶ್ ಮತ್ತು ದಿಗಂತ್ಗೆ ಕ್ಲಾಸ್ಮೇಟ್ ಹುಡುಗಿಯರ ಮೇಲೆ ಲವ್ ಆದರೆ ಪವನ್ ಕುಮಾರ್ ಪಾತ್ರಕ್ಕೆ ಟೀಚರ್ ಮೇಲೆಯೇ ಲವ್ ಅಗಿ ಬಿಡುತ್ತದೆ. ಈ ಮೂರು ಲವ್ ಸ್ಟೋರಿಗಳು ಕೂಡ ಒಟ್ಟೊಟ್ಟಿಗೆ ಸಾಗುತ್ತವೆ. ಪ್ರೀತಿ ಇದ್ದಮೇಲೆ ಮುನಿಸು, ವ್ಯಥೆ ಇರಲೇಬೇಕಲ್ಲವೇ. ಹಾಗೇ ಈ 3 ಜೋಡಿಗಳು ಫಸ್ಟ್ ಆಫ್ನಲ್ಲೆ ದೂರಾಗುತ್ತವೆ. ಇಲ್ಲಿಂದ ಅಸಲಿ ಕಥೆ ಶುರು. ಇವರ ಪ್ರೀತಿ ಕಥೆ ಏನು, ಮೇಷ್ಟ್ರ ಕಥೆ ಏನು ಎನ್ನುವುದು ಉಳಿದ ಅರ್ಧದಲ್ಲಿ ಕಾಮಿಡಿಯ ಜೊತೆ ಜೊತೆಗೆ ಸಾಗುತ್ತದೆ.
ಕನ್ನಡದ ಕಂಪು ಹರಡಿದ ಗಾಳಿಪಟ!
ಈ ರೀತಿಯ ಚಿತ್ರದಲ್ಲಿ ಕನ್ನಡದ ಕಂಪನ್ನು ಸಾರಿದ್ದಾರೆ ನಿರ್ದೇಶಕರು. ಕನ್ನಡದ ಮೇಷ್ಟ್ರಾಗಿ ಹಿರಿಯ ನಟ ಅನಂತ್ ನಾಗ್ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ ಮೂಲಕ ಕನ್ನಡದ ಮಹತ್ವವನ್ನು ಹೇಳಿಸಿದ್ದಾರೆ. ಇಂಗ್ಲೀಷ್ ಹಾವಳಿ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಕನ್ನಡವನ್ನು ಕಲಿಯಬೇಕು ಎಂದು ಕಾಲೇಜು ಸೇರುವ ವಿದ್ಯಾರ್ಥಿಗಳು ಮತ್ತು ಮಗನಿಗೆ ಕನ್ನಡ ಕಲಿಸಲೇ ಬೇಕು ಎನ್ನುವ ಪೋಷಕರ ಇಚ್ಛೆಯನ್ನು ಕಟ್ಟಿಕೊಡಲಾಗಿದೆ. ಇನ್ನು ಕನ್ನಡ ಸಾಯುತ್ತೇ, ಎನ್ನುವವರು ಸಾಯುತ್ತಾರೆ ಎನ್ನುವಂತಹ ಡೈಲಾಗ್ಗಳು ಚೆನ್ನಾಗಿವೆ.
ಸುಂದರ ತಾಣಗಳ ಅನಾವರಣ!
ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಲೊಕೇಶನ್ಗಳು ಹೆಚ್ಚಿನ ಗಮನ ಸೆಳೆಯುತ್ತವೆ. ಈ ಚಿತ್ರದಲ್ಲಿ ನೀರುಕೋಟೆ ಎನ್ನುವ ಕರುನಾಡಿನ ಸುಂದರ ತಾಣವನ್ನು ಅದ್ಭುತವಾಗಿ ತೋರಿಸಿದ್ದಾರೆ. ಈ ನೀರು ಕೋಟೆ ಊರಿನಲ್ಲೇ ಮೊದಲಾರ್ಧ ಸಿನಿಮಾ ನಡೆಯುವುದು. ಇನ್ನುಳಿದಂತೆ ಸಿನಿಮಾದ ಛಾಯಾಗ್ರಹಣ, ಸಂಗೀತ ಉತ್ತಮವಾಗಿದೆ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಸೆಂಟಿಮೆಂಟ್. ತಾಯಿ, ಲವ್, ಸ್ನೇಹದ ಸೆಂಟಿಮೆಂಟ್ ಮನಸಲ್ಲಿ ಉಳಿಯುತ್ತದೆ. ಒಟ್ಟಾರೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಸ್ಯ ಪ್ರಮುಖ ಪಾತ್ರವಹಿಸಿದೆ. ಸಿನಿಮಾ ಮಂದಿರದಲ್ಲಿ ಕೂತು ನಗಬೇಕು, ಸಿನಿಮಾ ಎಂಜಾಯ್ ಮಾಡಬೇಕು ಕಿರಿಕಿರಿ ಇಲ್ಲದ ಫೀಲ್ ಗುಡ್ ಸಿನಿಮಾ ನೋಡಬೇಕು ಎನಿಸಿದೆ 'ಗಾಳಿಪಟ 2' ಸಿನಿಮಾ ಟಿಕೆಟ್ ಬುಕ್ ಮಾಡಬಹುದು.


Click it and Unblock the Notifications











