Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ : ಮೆಜೆಸ್ಟಿಕ್ ಎನ್ನುವ ಪಾಪಿ ದುನಿಯಾದಲ್ಲಿ ಪ್ರೀತಿ ಹುಡುಕುವ ವೇಶ್ಯೆ
''ಮನುಷ್ಯನಿಗೆ ಒಂದು ಚಟ ಇದ್ದರೆ ಅದು ಅವನನ್ನು ಚಟ್ಟಕ್ಕೆ ಕರೆದುಕೊಂಡು ಹೋಗುತ್ತದೆ'' ಎನ್ನುವುದು 'ಯೋಗಿ ದುನಿಯಾ' ಸಿನಿಮಾದ ಒನ್ ಲೈನ್ ಸಂದೇಶ. ಜೂಜು, ಕುಡಿತ, ರೇಸ್, ಡೈಸ್, ಇಸ್ಪಿಟ್, ಬೆಟ್ಟಿಂಗ್ ಹೀಗೆ ಒಂದಲ್ಲ ಒಂದು ಚಟವನ್ನು ಮೈತುಂಬಿಕೊಂಡಿರುವ ವ್ಯಕ್ತಿಯನ್ನು ಅದೇ ಚಟ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಸಿನಿಮಾದ ಮೂಲಕ ತೋರಿಸಿದ್ದಾರೆ. ಈ ಇಡೀ ಸಿನಿಮಾ ಮೆಜೆಸ್ಟಿಕ್ ನಲ್ಲಿ ರಾತ್ರಿಯಲ್ಲಿ ನಡೆಯುವ ಘಟನೆಗಳಿಂದ ತುಂಬಿದೆ.
ಚಿತ್ರ: ಯೋಗಿ ದುನಿಯಾ
ನಿರ್ಮಾಣ: ಎನ್.ವೆಂಕಟೇಶ್ ಬಾಬು, ಮಹೇಶ್ ಸಿದ್ಧರಾಜು
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ಹರಿ
ಸಂಗೀತ ನಿರ್ದೇಶನ: ಬಿ.ಜೆ.ಭರತ್
ಛಾಯಾಗ್ರಹಣ : ಮಂಜುನಾಥ್ ಬಿ ನಾಯಕ್
ಸಂಕಲನ: ಅಕ್ಷಯ್.ಪಿ.ರಾವ್
ತಾರಾಗಣ: ಲೂಸ್ ಮಾದ ಯೋಗೀಶ್, ಹಿತಾ ಚಂದ್ರಶೇಖರ್, ವಸಿಷ್ಟ ಸಿಂಹ, ಮಹೇಶ್ ಮತ್ತು ಇತರರು
ಬಿಡುಗಡೆ: ಮಾರ್ಚ್ 23, 2018
ಹೇಗಿದೆ ಸಿನಿಮಾ?
'ಯೋಗಿ ದುನಿಯಾ' ಒಂದು ಉತ್ತಮ ಸಂದೇಶದ ಸಿನಿಮಾ. ಒಂದು ಒಳ್ಳೆಯ ವಿಷಯ ಇಟ್ಟುಕೊಂಡು ಅದನ್ನು ಜನರಿಗೆ ಅರ್ಥವಾಗುವ ಶೈಲಿಯಲ್ಲಿ ಸಿನಿಮಾದಲ್ಲಿ ಹೇಳಲಾಗಿದೆ. ಹೇಳಿರುವ ವಿಷಯ ತುಂಬ ಚೆನ್ನಾಗಿದ್ದರೂ ಸಿನಿಮಾ ಯಾಕೋ ಸ್ವಲ್ಪ ಬೋರ್ ಎನಿಸುತ್ತದೆ. ಇದೊಂದು ಅರ್ಥಹೀನ ಕಮರ್ಶಿಯಲ್ ಸಿನಿಮಾ ಅಲ್ಲ. ಈ ದುನಿಯಾದಲ್ಲಿ ಒಂದು ಕಡೆ, ಒಬ್ಬ ವೇಶ್ಯೆಯನ್ನು ಪ್ರೀತಿಸುವ ಒಳ್ಳೆಯ ಮನಸಿನ ಹುಡುಗ ಇದ್ದಾನೆ. ಜೂಜು ಆಡಲು ಹೆಂಡತಿಯ ತಾಳಿ ಮಾರುವವನು ಇದ್ದಾನೆ. ಸ್ವಲ್ಪ ಸುಧಾರಿಸಿಕೊಂಡು ನೋಡಿದರೆ ಚಿತ್ರದ ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶ ಸಿಗುತ್ತದೆ.
ಮೆಚ್ಚಿಕೊಳ್ಳುವ ಅಂಶಗಳು
ಕಥೆ
ಹಿತಾ ಚಂದ್ರಶೇಖರ್ ನಟನೆ
ಯೋಗಿ ಸಾಹಸ ದೃಶ್ಯಗಳು
ಸಿನಿಮಾದ ಸಂದೇಶ
ಗಮನ ಹರಿಸಬೇಕಿದ್ದ ಅಂಶಗಳು
ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಇರಬೇಕಿತ್ತು
ನಿರೂಪಣೆಯಲ್ಲಿ ಚುರುಕುತನ ಅಗತ್ಯವಿತ್ತು
ಕೆಲ ದೃಶ್ಯಗಳು ನೋಡುವರಿಗೆ ಕೊಂಚ ಬೋರ್ ಎನಿಸುತ್ತದೆ
ಕಥೆ
'ಯೋಗಿ ದುನಿಯಾ' ಸಿನಿಮಾದ ಬಹುತೇಕ ಕಥೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಡೆಯುತ್ತದೆ. ಮೆಜಿಸ್ಟಿಕ್ ನಲ್ಲಿ ಒಂದು ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುವ ನಾಯಕ ಯೋಗಿ (ಪಾತ್ರದ ಹೆಸರು ಸಹ ಯೋಗಿ) ಆಕಸ್ಮಿಕವಾಗಿ ನಾಯಕಿ ಶೀಲಾ (ಹಿತಾ ಚಂದ್ರಶೇಖರ್) ಅನ್ನು ನೋಡಿ ಇಷ್ಟ ಪಡುತ್ತಾನೆ. ಆ ನಂತರ ತಾನು ಪ್ರೀತಿಸಿದ ಹುಡುಗಿ ಮೆಜಿಸ್ಟಿಕ್ ನಲ್ಲಿರುವ ಒಬ್ಬ ವೇಶ್ಯೆ ಎಂಬ ಸತ್ಯ ತಿಳಿಯುತ್ತದೆ. ವೇಶ್ಯೆಯ ವೃತ್ತಿಗೆ ಬರುವವರ ಹಿಂದೆ ಒಂದು ಬಲವಾದ ಕಾರಣ, ಒಂದು ನೋವು ಇರುತ್ತದೆ ಎಂದು ನಂಬಿರುವ ನಾಯಕ ಆಕೆಯನ್ನು ಮದುವೆಯಾಗುವ ನಿರ್ಧಾರ ಮಾಡುತ್ತಾನೆ. ಒಂದು ಕಡೆ ಈ ರೀತಿಯ ಕಥೆ ಆದರೆ, ಇನ್ನೊಂದು ಕಡೆ ನಾಯಕನಿಗೆ ಜೂಜು ಆಡುವ ಚಟ ಇರುತ್ತದೆ. ಐ ಪಿ ಎಲ್ ಬೆಟ್ಟಿಂಗ್ ನಿಂದ ಬರುವ ದುಡ್ಡಿನಿಂದ ಹೇಗೋ ಜೀವನ ಸಾಗಿಸುತ್ತಿರುತ್ತಾನೆ. ಕಥೆಯ ಕೊನೆಗೆ ತಾನು ಪ್ರೀತಿಸಿದ ಹುಡುಗಿಯನ್ನು ಆ ಪಾಪಕೂಪದಿಂದ ನಾಯಕ ಹೊರತರುತ್ತಾನ. ಆಗ ಈ ಇಬ್ಬರು ಪ್ರೇಮಿಗಳ ಜೀವನದಲ್ಲಿ ಏನಾಗುತ್ತದೆ ಎನ್ನುವುದು ಸಿನಿಮಾ ಕಥೆ.
ಚಿತ್ರದ ತುಂಬ ಉತ್ತಮ ಸಂದೇಶಗಳು
ಒಬ್ಬ ವೇಶ್ಯೆಯ ಜೀವನ, ಜೂಜು ಆಡುವ ಹುಡುಗರ ಕೊನೆಯ ಪರಿಸ್ಥಿತಿ, ಚಟಕ್ಕೆ ಬಿದ್ದ ವ್ಯಕ್ತಿಯಿಂದ ಆತನ ಕುಟುಂಬದವರು ಅನುಭವಿಸುವ ನೋವು, ಮೋಸದ ಪ್ರೀತಿ, ಹಣಕ್ಕಾಗಿ ದಂದೆ ನಡೆಸುವ ವ್ಯಕ್ತಿ, ಚಟ ಇದ್ದರೆ ಚಟ್ಟ ಏರಬೇಕಾಗುತ್ತದೆ ಸೇರಿದಂತೆ ಅನೇಕ ಉತ್ತಮ ಸಂದೇಶಗಳನ್ನು ಸಿನಿಮಾದ ತುಂಬ ಹೇಳಲಾಗಿದೆ. ಚಿತ್ರದ ಘನತೆಯನ್ನು ಈ ಅಂಶಗಳು ಹೆಚ್ಚಿಸಿವೆ.
ನಟನೆ
ಸಿನಿಮಾದಲ್ಲಿ ಪ್ರಮುಖವಾಗಿ ಇರುವುದು ನಾಯಕ ಮತ್ತು ನಾಯಕಿಯ ಎರಡು ಪಾತ್ರಗಳು. ಚಿತ್ರದಲ್ಲಿಯೂ ಯೋಗಿ ಎಂಬ ಒಬ್ಬ ಹುಡುಗನ ಪಾತ್ರ ಮಾಡಿರುವ ಲೂಸ್ ಮಾದ ತಮ್ಮ ಮ್ಯಾನರಿಸಂ, ನಟನೆ ಮೂಲಕ ಇಷ್ಟ ಆಗುತ್ತಾರೆ. ಆ ಪಾತ್ರ ಯೋಗಿಗೆ ತುಂಬ ಚೆನ್ನಾಗಿ ಸೂಟ್ ಆಗಿದೆ. ಸಾಹಸ ದೃಶ್ಯದಲ್ಲಿ ಯೋಗಿ ಹೆಚ್ಚು ಇಷ್ಟ ಆಗುತ್ತಾರೆ. ಶೀಲ ಎಂಬ ಒಬ್ಬ ವೇಶ್ಯೆಯ ಪಾತ್ರ ಮಾಡಿರುವ ಹಿತಾ ಚಂದಶೇಖರ್ ಆ ಪಾತ್ರವನ್ನು ಒಪ್ಪಿಕೊಂಡಿದಕ್ಕೆ ಬೇಷ್ ಎನ್ನಬೇಕು. ಚಿತ್ರದಲ್ಲಿ ಹಿತಾ ಪಾತ್ರ ತುಂಬ ಪರಿಣಾಮಕಾರಿ ಆಗಿದೆ. ತೆರೆ ಮೇಲೆ ಅವರ ಪ್ರಬುದ್ಧ ನಟನೆ ಇದೆ. ಎಲ್ಲ ನೋವುಗಳನ್ನು ಬಾಯಿ ಬಿಟ್ಟು ಹೇಳದ ಈಕೆ ತಮ್ಮ ಕಣ್ಣಿನಲ್ಲಿಯೇ ಅದನ್ನು ವ್ಯಕ್ತಪಡಿಸಿದ್ದಾಳೆ. ಉಳಿದಂತೆ, ಯೋಗಿ ಸಹೋದರ ಮಹೇಶ್ ಸ್ನೇಹಿತನ ಪಾತ್ರ ಮಾಡಿದ್ದಾರೆ. ವಸಿಷ್ಟ ಎಂದಿನಂತೆ ವಿಲನ್ ಆಗಿ ತಮ್ಮ ಕಂಠದ ಮೂಲಕ ಖದರ ಪ್ರದರ್ಶಿಸಿದ್ದಾರೆ.
ಮ್ಯೂಸಿಕ್, ಕ್ಯಾಮರಾ, ಡೈಲಾಗ್
ಬಿ.ಜೆ.ಭರತ್ ಸಂಗೀತದ ಹಾಡುಗಳು ಬೇರೆಯದ್ದೆ ಫೀಲ್ ನೀಡುತ್ತದೆ. ಮುಖ್ಯವಾಗಿ 'ಜನನ.. ಮರಣ..' ಹಾಡು ಚಿತ್ರದ ತೂಕವನ್ನು ಹೆಚ್ಚಿಸಿದೆ. ಮಂಜುನಾಥ್ ಬಿ ನಾಯಕ್ ತಮ್ಮ ಕ್ಯಾಮರಾ ಮೂಲಕ ರಾತ್ರಿಯ ಮೆಜಿಸ್ಟಿಕ್ ವಾತಾವರಣವನ್ನು ಅಂದವಾಗಿ ತೋರಿಸಿದ್ದಾರೆ. ನಿರ್ದೇಶಕರೇ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಹರಿ ಬರೆದಿರುವ ಡೈಲಾಗ್ ಸಖತ್ ಪಂಚಿಂಗ್ ಆಗಿದೆ.
ಚಿತ್ರಕಥೆ ಮತ್ತು ನಿರ್ದೇಶನ
ನಿರ್ದೇಶಕ ಹರಿ ಒಂದು ದೊಡ್ಡ ವಿಷಯವನ್ನು ಸಿನಿಮಾದಲ್ಲಿ ಹೇಳಿದ್ದಾರೆ. ಒಳ್ಳೆಯ ಕಥೆ ಮಾಡಿಕೊಂಡಿರುವ ಅವರು ಚಿತ್ರಕಥೆಯನ್ನು ಇನ್ನುಷ್ಟು ಚೆನ್ನಾಗಿ ಮಾಡಿಕೊಳ್ಳಬೇಕಿತ್ತು. ಕೆಲ ದೃಶ್ಯಗಳನ್ನು ಇನ್ನು ಪರಿಣಾಮಕಾರಿಗಾಗಿ ನೋಡುಗರಿಗೆ ಮುಟ್ಟುವ ರೀತಿಯಲ್ಲಿ ಹರಿ ಚಿತ್ರೀಕರಿಸಬೇಕಿತ್ತು. ಒಟ್ಟಾರೆಯಾಗಿ ಹರಿ ಒಳ್ಳೆಯ ಪ್ರಯತ್ನ ಮಾಡಿದ್ದಾರೆ.
ಸಂದೇಶಕ್ಕಾಗಿ ನೋಡಿ
'ಯೋಗಿ ದುನಿಯಾ' ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶ ಇದೆ. ಮನರಂಜನೆ ಜೊತೆಗೊಂದು ಸಂದೇಶ ಹೊತ್ತು ಬಂದಿರುವ ಈ ಸಿನಿಮಾವನ್ನು ಒಮ್ಮೆ ನೋಡಬಹುದಷ್ಟೆ. ಈ ವಾರಾಂತ್ಯ ಸಿನಿಮಾ ನೋಡುವ ಪ್ಲಾನ್ ಇದ್ದರೆ ಖಂಡಿತ ನೋಡಬಹುದು.