ಕೇವಲ ಒಂದೇ ವಾರ ; ಹತ್ತು ವರ್ಷದ ನಂತರ ಧನುಷ್ ಬಳಿ 20 ಕೋಟಿ ಕೇಳಿದ ನಿರ್ಮಾಪಕ-ಇಲ್ಲ ಅನ್ನಂಗಿಲ್ಲ
ಕಳೆದು ಹೋದ ಹೊತ್ತು, ಒಡೆದು ಹೋದ ಮುತ್ತು ಮರಳಿ ಬರಲಾರದು. ಈ ಹಿನ್ನೆಲೆ ಸಮಯ ತುಂಬ ಅಮೂಲ್ಯವಾದುದು. ಕಳೆದು ಹೋದ ಒಂದೇ ಒಂದು ಕ್ಷಣವನ್ನೂ ನಾವು ಮತ್ತೆ ಎಷ್ಟೆಲ್ಲ ಸಾಹಸ ಪಟ್ಟರೂ, ಎಷ್ಟೆಲ್ಲ ಖರ್ಚು ಮಾಡಿದರೂ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಆದರೂ ಕೂಡ ಕೆಲವರು ಕಾಲಹರಣ ಮಾಡುತ್ತಾರೆ.
ಇನ್ನು ಚಿತ್ರರಂಗದಲ್ಲಿ ಭರವಸೆಯೇ ಬಂಡವಾಳ. ಇಲ್ಲಿ ಮಾತು ಮುಖ್ಯ. ಪ್ರಾಣ ಹೋದರೂ ಸರಿ, ಕೊಟ್ಟ ಮಾತು ತಪ್ಪಲಾರೆ ಎಂದು ಹೇಳುತ್ತಲೇ ಇಲ್ಲಿ ಹಲವರು ಹಲವರನ್ನು ಮನೆಗೆ ಕಳುಹಿಸಿದ್ದಾರೆ. ಮಾತಿನಲ್ಲೇ ಮಂಟಪ ಕಟ್ಟಿ ಸಮಯದ ಜೊತೆ ಸಂಪನ್ಮೂಲವನ್ನು ಕೂಡ ಹಾಳು ಮಾಡಿದವರಿದ್ದಾರೆ. ಈ ಸಾಲಿನಲ್ಲಿ ರಜಿನಿಕಾಂತ್ ಅವರ ಮಾಜಿ ಅಳಿಯ ಧನುಷ್ ಕೂಡ ಇದ್ದಾರೆ ಎನ್ನುವುದೇ ಸದ್ಯದ ಆರೋಪ.

ಹೌದು, ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದವರು ಧನುಷ್. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನು ಕೂಡ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದವರು. ರಾಷ್ಟ್ರ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡವರು.
ಇಂಥಾ ಧನುಷ್ 2016ರಲ್ಲಿ ಚಿತ್ರವೊಂದನ್ನು ಒಪ್ಪಿಕೊಂಡಿದ್ದರು. ಆ ಚಿತ್ರದ ಹೆಸರು ''ನಾನ್ ರುದ್ರನ್''. ಥೆಂಡಾಲ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಧನುಷ್ ಈ ಚಿತ್ರದಲ್ಲಿ ಅಭಿನಯಿಸುವುದಲ್ಲದೇ ಈ ಚಿತ್ರದ ನಿರ್ದೇಶನವನ್ನು ಕೂಡ ಮಾಡಬೇಕಿತ್ತು.
ಆದರೆ, ಧನುಷ್ ಮಾತ್ರ ಈ ಚಿತ್ರವನ್ನು ಶುರು ಮಾಡಲಿಲ್ಲ. ಧನುಷ್ ಹೇಳಿದ ಕಥೆಯಲ್ಲಿನ ಬದಲಾವಣೆಗಳನ್ನು ಸಂಸ್ಥೆ ಒಪ್ಪಿಕೊಂಡರು ಕೂಡ ಧನುಷ್ ತಮ್ಮ ಚಿತ್ರದ ಚಿತ್ರಕಥೆಯನ್ನು ನೀಡಲಿಲ್ಲ. 10 ವರ್ಷ ಆಯ್ತು. ಸಿನಿಮಾ ಕೊನೆಗೂ ಶುರುವಾಗಲೇ ಇಲ್ಲ.
ಈ ಹಿನ್ನೆಲೆ ಈಗ ಥೆಂಡಾಲ್ ಫಿಲ್ಮ್ಸ್ ಸಂಸ್ಥೆ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. ಧನುಷ್ ಅವರ ಈ ನಡೆಯಿಂದ ನಮಗೆ ಆರ್ಥಿಕ ನಷ್ಟವಾಗಿದೆ ಎಂದು ಸಂಸ್ಥೆ ಹೇಳಿದೆ. ನಾಗಾರ್ಜುನ, ಎಸ್ ಜೆ ಸೂರ್ಯ ಅಂತಹ ಕಲಾವಿದರಿಗೆಲ್ಲ ಮುಂಗಡ ಹಣವನ್ನು ನಮ್ಮ ಸಂಸ್ಥೆ ನೀಡಿತ್ತು. ಆದರೆ ಧನುಷ್ ಮಾತ್ರ ಚಿತ್ರ ಶುರು ಮಾಡಲೇ ಇಲ್ಲ. ಈ ಹಿನ್ನೆಲೆ 20 ಕೋಟಿ ಹಣವನ್ನು ಧನುಷ್ ನಮಗೆ ಪರಿಹಾರದ ರೂಪದಲ್ಲಿ ಕೊಡಬೇಕೆಂದು ಸಂಸ್ಥೆ ತನ್ನ ನೋಟಿಸ್ನಲ್ಲಿ ಉಲ್ಲೇಖಿಸಿದೆ.

ಇನ್ನು ಇದೇ ಸಮಯದಲ್ಲಿ ಎಚ್ಚರಿಕೆಯನ್ನು ಕೂಡ ನೀಡಿರುವ ಥೆಂಡಾಲ್ ನಿರ್ಮಾಣ ಸಂಸ್ಥೆ ಧನುಷ್ಗೆ ಎರಡು ಆಯ್ಕೆಗಳನ್ನು ನೀಡಿದೆ. ಆ ಪೈಕಿ 20 ಕೋಟಿ ಹಣವನ್ನು ಪರಿಹಾರವನ್ನಾಗಿ ನೀಡಿ ಧನುಷ್ ಈ ಚಿತ್ರ ಮತ್ತು ಈ ವಿವಾದದಿಂದ ಕೈ ತೊಳೆದುಕೊಳ್ಳಬಹುದು ಎನ್ನುವುದು ಒಂದಾದರೆ, ಧನುಷ್ ತಮ್ಮ ಮಾತಿಗೆ ಬದ್ದರಾಗಿ ನಿಂತು ಹೋಗಿರುವ ಚಿತ್ರಕ್ಕೆ ಮರುಜೀವ ನೀಡಬೇಕು, ಚಿತ್ರವನ್ನು ಈ ವರ್ಷಾಂತ್ಯದಲ್ಲಿ ಮುಗಿಸಿ ಕೊಡಬೇಕು ಎನ್ನುವ ಆಯ್ಕೆ ಮತ್ತೊಂದು.
ಕಳುಹಿಸಿರುವ ನೋಟಿಸ್ನಲ್ಲಿರುವ ಈ ಎರಡು ಆಯ್ಕೆಗಳಿಗೆ ಇಲ್ಲ ಎಂದು ಧನುಷ್ ಹೇಳುವಂತೆ ಇಲ್ಲ. ಯಾಕೆಂದರೆ ಅಪ್ಪಿ ತಪ್ಪಿ ಧನುಷ್ ಇಲ್ಲ ಎಂದರೆ ಥೆಂಡಾಲ್ ನಿರ್ಮಾಣ ಸಂಸ್ಥೆ ಕಾನೂನು ಸಮರ ಸಾರುವ ಎಚ್ಚರಿಕೆ ನೀಡಿದೆ. ನೋಟಿಸ್ಗೆ ಉತ್ತರ ನೀಡಲು 7 ದಿನಗಳ ಗಡುವು ಕೂಡ ಧನುಷ್ಗೆ ನೀಡಿದೆ.
ಅಂದ್ಹಾಗೇ ನಿರ್ಮಾಪಕರ ಜೊತೆ ಧನುಷ್ ಅವರ ಈ ವಿವಾದ ಹೊಸದಲ್ಲ. ನಿರ್ಮಾಣ ಸಂಸ್ಥೆ ಮತ್ತು ಧನುಷ್ ಜಟಾಪಟಿ ಇಂದು ನಿನ್ನೆಯದ್ದೂ ಅಲ್ಲ. ನಿರ್ಮಾಪಕರಿಂದ ಅಡ್ವಾನ್ಸ್ ಹಣವನ್ನು ಪಡೆಯುತ್ತಾರೆ. ಆದರೆ ಆ ನಂತರ ಕೊಡುವುದಕ್ಕೆ ಸತಾಯಿಸುತ್ತಿದ್ದಾರೆಂದು ಧನುಷ್ ವಿರುದ್ಧ ತಮಿಳು ನಿರ್ಮಾಪಕರು
ಈ ಹಿಂದಿನಿಂದಲೂ ಆರೋಪ ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗ ಥೆಂಡಾಲ್ ಸಂಸ್ಥೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಧನುಷ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











