ಕನ್ನಡ ಸಿನಿಮಾಗಳಿಲ್ಲದ ದೀಪಾವಳಿ ಕನ್ನಡಿಗರ ಪಾಲಿಗೆ
ಸಾಮಾನ್ಯವಾಗಿ ಯಾವುದೇ ಹಬ್ಬಗಳಂದು ಕನ್ನಡ ಸಿನಿಮಾಗಳು ಮುಹೂರ್ತ ಅಥವಾ ಬಿಡುಗಡೆ ಕಾಣುವುದು ಎಷ್ಟೋ ವರ್ಷಗಳಿಂದ ಚಿತ್ರರಂಗದಲ್ಲಿ ನಡೆದು ಬಂದಿರುವ ಅಲಿಖಿತ ನಿಯಮ. ಹಬ್ಬದಂದು ಹೊಸ ಸಿನಿಮಾಗಳನ್ನು ನೋಡಿ ಡಬಲ್ ಖುಷಿ ಅನುಭವಿಸುವುದು ಪ್ರೇಕ್ಷಕರ ಜಾಯಮಾನ. ಆದರೆ ಈ ಬಾರಿ ಆಗಿದ್ದು ಬೇರೆಯದೇ ಅನುಭವ.
ಕನ್ನಡದ ಯಾವುದೇ ಸಿನಿಮಾ ದೀಪಾವಳಿಗೆ ಈ ವರ್ಷ ಪ್ರೇಕ್ಷಕರ ಪಾಲಿಗೆ ಇರಲಿಲ್ಲ. ಬಿಗ್ ಬಜೆಟ್ ಚಿತ್ರಗಳು, ಹಿಂದಿ ಹಾಗೂ ತಮಿಳು ಘಟಾನುಘಟಿಗಳ ಚಿತ್ರಗಳು ದೀಪಾವಳಿಯಂದು ಪ್ರದರ್ಶನ ಕಂಡು ಖುಷಿ ಕೊಟ್ಟವು(?). ದೀಪಾವಳಿ ಮುಗಿದ ಮೇಲೆ ಎಂದಿನಂತೆ ಶುಕ್ರವಾರ ಬಿಡುಗಡೆಯಾಗಿವೆ ಎರಡೇ ಎರಡು ಕನ್ನಡ ಚಿತ್ರಗಳು. ಅವು ಕಾಂಚಾಣ ಹಾಗೂ ಓಬವ್ವ. ಇದನ್ನೇ ದೀಪಾವಳಿ ಕಾಣಿಕೆ ಅಂದುಕೊಳ್ಳಿ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ "ಮದುವೆ ಮನೆ" ಈ ದೀಪಾವಳಿಯಂದೇ ಬಿಡುಗಡೆ ಆಗಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ಒಂದು ವಾರ ಮುಂದೂಡಲಾಯಿತು. ಇದಕ್ಕೆ ಕಾರಣ ಅಂದು ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಹಾಗೂ ಖ್ಯಾತನಾಮರ ಪರಭಾಷಾ ಚಿತ್ರ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಹಾಗಾದರೆ ಕನ್ನಡ ಚಿತ್ರಗಳ ಗತಿ?
ಕರ್ನಾಟಕದಲ್ಲಿರುವ ಪರಭಾಷಿಗರೇನೋ ಅವರವರ ಭಾಷೆಗಳ ಚಿತ್ರಗಳನ್ನು ದೀಪಾವಳಿಯಂದು ನೋಡಿ ಖುಷಿಯಾಗಿದ್ದಾರೆ. ಆದರೆ ಕನ್ನಡ ಅಭಿಮಾನಿಗಳು, ಕನ್ನಡ ಚಿತ್ರವನ್ನೇ ವೀಕ್ಷಿಸಲಿದ್ದವರು ಹಬ್ಬದಂದು ಜೋಲುಮೋರೆ ಹಾಕಿಕೊಂಡಿದ್ದು ಹೌದು. ಕನ್ನಡ ಭಾಷೆ, ಕನ್ನಡಚಿತ್ರಗಳ ಉದ್ಧಾರದ ಬಗ್ಗೆ ಗಂಟೆಗಟ್ಟಲೆ ಮಾತಾಡುವವರು ಈ ವಿಷಯದಲ್ಲಿ ಮೌನವಾಗಿದ್ದು ಏಕೆ? ಉತ್ತರ ಗೊತ್ತಿರುವವರು ಬಾಯಿ ಬಿಟ್ಟಿಲ್ಲ ಯಾಕೆ? (ಒನ್ ಇಂಡಿಯಾ ಕನ್ನಡ)


Click it and Unblock the Notifications











