ತಮಿಳು ಚಿತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ
ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇಷ್ಟು ದಿನ ರಾಜಕೀಯದಲ್ಲಿ ಬಣ್ಣದ ಓಕುಳಿಯಾಡಿ ಅವರು ಸುಸ್ತಾದಂತಿದೆ. ಈಗ ಕೊಂಚ ರಿಲ್ಯಾಕ್ಸ್ ಆಗಿರುವ ಅವರಿಗೆ ಬಣ್ಣ ಹಚ್ಚಿಕೊಳ್ಳಲು ಸಮಯ ಸಿಕ್ಕಂತಿದೆ.
ಇಷ್ಟಕ್ಕೂ ಅವರು ಬಣ್ಣ ಹಚ್ಚಿಕೊಳ್ಳುತ್ತಿರುವುದು ಕನ್ನಡ ಚಿತ್ರಕ್ಕಲ್ಲ ತಮಿಳು ಸಿನಿಮಾಗೆ! ಈಗಾಗಲೆ ಕರ್ನಾಟಕದ ರಾಜಕೀಯ ಪ್ರಹಸನಕ್ಕೆ ಮಧ್ಯಂತರ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಚಿತ್ರರಂಗಕ್ಕೆ ತಮ್ಮ ಅಳಿಲು ಸೇವೆ ಮಾಡಲು ಮುಂದಾಗಿದ್ದಾರೆ.
ಯಡಿಯೂರಪ್ಪ ಚಿತ್ರವೊಂದರಲ್ಲಿ ಅಭಿನಯಿಸುತ್ತಾರಂತೆ ಎಂಬ ಸುದ್ದಿ ನಾಲ್ಕು ತಿಂಗಳ ಹಿಂದೆಯೇ ಸ್ಫೋಟಿಸಿತ್ತು. ಈ ಚಿತ್ರ ಒಟ್ಟು 33 ಭಾಷೆಗಳಲ್ಲಿ (ಕನ್ನಡವೂ ಸೇರಿ)ನಿರ್ಮಾಣವಾಗಲಿದ್ದು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಎಂಬ ಮಾತುಗಳು ತೇಲಿಬಂದಿದ್ದವು.
ಆ ಬಳಿಕ ಈ ಚಿತ್ರ ಏನಾಯಿತು. ಚಿತ್ರೀಕರಣ ಎಲ್ಲಿಗೆ ಬಂತು ಎಂಬ ಮಾಹಿತಿಗಳು ನಿಗೂಢವಾಗಿ ಉಳಿದವು. ಕರ್ನಾಟಕದ ರಾಜಕೀಯದಲ್ಲಿ ಎದ್ದ ಭಿನ್ನಮತದ ಬಿರುಗಾಳಿ ಚಿತ್ರೀಕರಣಕ್ಕೆ ಅಡ್ಡಿಯಾಯಿತು ಎಂಬುದು ಮೇಲ್ಮೋಟಕ್ಕೆ ಗೋಚರಿಸುವ ಸಂಗತಿ. ತಾಜಾ ಸಮಾಚಾರದ ಪ್ರಕಾರ, ಈ ಚಿತ್ರ ಮೊದಲು ತಮಿಳಿನಲ್ಲಿ ಸೆಟ್ಟೇರುತ್ತಿದೆ.
ತಮಿಳು ಭಾಷೆಯಲ್ಲಿ ಬಂದ ಬಳಿಕ ಈ ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆಯೇ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಸ್ವತಃ ಯಡಿಯೂರಪ್ಪನವರೂ ಕೂಡ ಈ ಚಿತ್ರದ ಬಗ್ಗೆ ಎಲ್ಲೂ ಬಾಯಿಬಿಡದಿರುವುದು ಅತ್ತ ರಾಜಕೀಯ ಹಾಗೂ ಇತ್ತ ಚಿತ್ರರಂಗದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕಾಕತಾಳೀಯವೆಂಬಂತೆ ಈ ಚಿತ್ರದಲ್ಲಿ ಶಬರಿಮಲೈ ದೇವಾಲಯದ ಧರ್ಮಾಧಿಕಾರಿ ಪುತ್ರರಾದ ಬ್ರಹ್ಮದತ್ತನ್ ಸಹ ಅಭಿನಯಿಸಲಿದ್ದಾರೆ. ಸ್ವಾಮಿಯೇ ಶರಣಂ ಅಯ್ಯಪ್ಪ ಹಾಗೂ ಪ್ರಚಲಿತ ವಿದ್ಯಮಾನಗಳೇ ಚಿತ್ರದ ಕಥಾವಸ್ತು ಎನ್ನಲಾಗಿದೆ. ಚಿತ್ರದಲ್ಲಿ ಕೇವಲ ಯಡಿಯೂರಪ್ಪನವರಷ್ಟೆ ಅಲ್ಲ ಮದ್ಯದ ದೊರೆ ವಿಜಯ್ ಮಲ್ಯ ಕೂಡ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.
ತಮಿಳಿನಲ್ಲಿ ಈ ಚಿತ್ರಕ್ಕೆ 'ಭೂಲೋಕ ರಕ್ಷಕನ್' ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ 'ಭೂಲೋಕ ರಕ್ಷಕ' ಎನ್ನಬಹುದು. ಒಟ್ಟು 200 ಮಂದಿ ಹಿನ್ನೆಲೆ ಗಾಯಕರು, 50ಕ್ಕೂ ಹೆಚ್ಚು ಮಂದಿ ಗೀತಸಾಹಿತಿಗಳು ಈ ಚಿತ್ರಕ್ಕೆ ಸಾಹಿತ್ಯ ಬರೆದುಕೊಡುತ್ತಿದ್ದಾರೆ. ಒಟ್ಟಿನಲ್ಲಿ ಈ ಚಿತ್ರ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ.


Click it and Unblock the Notifications











